ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಂತನ ಕಾರ್ತಿಕೋತ್ಸವ ಇಂದು

Last Updated 30 ನವೆಂಬರ್ 2015, 11:07 IST
ಅಕ್ಷರ ಗಾತ್ರ

ಕುಕನೂರ: ಸಮೀಪದ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ದೇವಸ್ಥಾನವು ಈ ಭಾಗದ ಸಾವಿರಾರು ಭಕ್ತಾದಿಗಳನ್ನು ಸೆಳೆವ ಪುಣ್ಯ ತಾಣವಾಗಿದೆ. ಇದು ಪುರಾತನ ದೇವಸ್ಥಾನವಾಗಿದ್ದು, ಸುಂದರ ಕೆತ್ತನೆಯ ಕಲಾಕೃತಿಗಳನ್ನು ಹೊಂದಿದೆ.

ಇಟಗಿಗೆ ತೆಗೆದುಕೊಂಡು ಹೋಗುತ್ತಿದ್ದ ಹನುಮಂತನ ಮೂರ್ತಿಯನ್ನು ಕತ್ತಲು ಆದ ಕಾರಣ ಮಸಬಹಂಚಿನಾಳ ಗ್ರಾಮದ ಹೋರವಲಯದಲ್ಲಿ ಇರಿಸಿ ವಸತಿ ಮಾಡಲಾಯಿತು. ಮರುದಿನ ಇಟಗಿಗೆ ತೆಗೆದುಕೊಂಡು ಹೋಗಲು ಎತ್ತಿದಾಗ ಮೂರ್ತಿಯು ಆ ಸ್ಥಳದಿಂದ ಮೇಲಕ್ಕೆ ಸರಿಯಲಿಲ್ಲ ಅಂದಿನಿಂದ ಆ ಮೂರ್ತಿಯನ್ನು ಇಲ್ಲಿಯೇ ಪೂಜೆ ಮಾಡಲಾಗುತ್ತಿದೆ ಎಂಬುದು ಈ ದೇವಾಲಯದ ಕುರಿತಾದ ಐತಿಹ್ಯವಾಗಿದೆ.

ವಾಸ್ತವವಾಗಿ ಹನುಮಂತನ ಮೂರ್ತಿಯು ದಕ್ಷಿಣಾಭಿಮುಖವಾಗಿ ಇರುತ್ತವೆ. ಆದರೆ ಇಲ್ಲಿನ ವೈಶಿಷ್ಟ್ಯವೆಂದರೆ ಮೂರ್ತಿಯು ಪಶ್ಚಿಮಾಭಿಮುಖವಾಗಿ ಇದೆ. ಆದ್ದರಿಂದಲೇ ಶನಿವಾರ ಮತ್ತು ಪ್ರತಿ ಅಮಾವಾಸ್ಯೆಯಂದು ರಾಜ್ಯದ ವಿವಿಧ ಕಡೆಯಿಂದ ಭಕ್ತರು ಇಲ್ಲಿಗೆ ಬರುತ್ತದೆ.

ಅವರಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತದೆ, ಭಕ್ತರು ಅಂದು ರಾತ್ರಿ ಅಲ್ಲಿಯೆ ಮಲಗಿ ಮರುದಿನ ಬೆಳಿಗ್ಗೆ ಮಜ್ಜಲ ಭಾವಿಯಲ್ಲಿ ಸ್ನಾನ ಮಾಡಿಕೊಂಡು ಬಂದು ದೇವರ ದರ್ಶನ ಪಡೆಯುತ್ತಾರೆ. ಇದರಿಂದ  ಅನೇಕ ರೋಗ ರುಜಿನಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಇಲ್ಲಿನ ಗ್ರಾಮಸ್ಥರು ದೇವಸ್ಥಾನದ ಗೋಪುರಕ್ಕಿಂತ ಎತ್ತರಕ್ಕೆ ಮನೆಕಟ್ಟುವುದಿಲ್ಲ.

ಕಾರ್ತಿಕ ಮಾಸದಲ್ಲಿ ಈ ಭಾಗದಲ್ಲಿ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ಜಾತ್ರೆ ನಂತರ ಉಳಿದ ದೇವರ ಕಾರ್ತಿಕಗಳು ಜರಗುತ್ತವೆ. ಕಾರ್ತಿಕ ಮಾಸದ ನ.30ರಂದು ಮಾರುತೇಶ್ವರ ಜಾತ್ರೆ ನಡೆಯಲಿದೆ. ಕುಂಕುಮಾರ್ಚನೆ, ಎಲೆಪೂಜೆ, ದಾಸೋಹ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಪಾದಯತ್ರೆಯ ಮುಖಾಂತರ ಅನೇಕ ಭಕ್ತರು ಸುತ್ತಮುತ್ತಲಿನ ಗ್ರಾಮದಿಂದ ಬಂದು ಲಕ್ಷ ದೀಪೋತ್ಸವ ಆಚರಿಸುವರು. ಹಾಗೂ ಇಟಗಿ ಮಹೇಶ್ವರ ಭಜನಾ ಸಂಘ, ಮಂಡಲಗಿರಿ ವೀರೇಶ್ವರ ಭಜನಾ ಸಂಘದವರಿಂದ ಕಾರ್ಯಕ್ರಮ ಜರುಗಲಿದೆ. ಡಿ.1ರಂದು ಬೆಳಿಗ್ಗೆ 4ಕ್ಕೆ ವಿವಿಧ ಗ್ರಾಮದ ಐದು ಭಜನಾ ಮಂಡಳಿಗಳಿಂದ ಪಲ್ಲಕ್ಕಿ ಸೇವೆ, ಮುಂಗೈಕುಸ್ತಿ, ಕಬಡ್ಡಿ, ರಂಗೋಲಿ, ಹಾಡಿನ ಸ್ಪರ್ಧೆಗಳು ಜರುಗುತ್ತವೆ. ಕಾರ್ತಿಕೋತ್ಸವದಲ್ಲಿ ಗ್ರಾಮದ  ಎಲ್ಲರು ಭಾಗವಹಿಸುತ್ತಾರೆ.

ಬೇಡಿದ ಭಕ್ತರು ದೇವಸ್ಥಾನಕ್ಕೆ ಹಣವನ್ನು ಮತ್ತು ವಸ್ತುಗಳನ್ನು ಕಾಣಿಕೆಯಾಗಿ ಕೊಡುತ್ತಾರೆ. ಯುಗಾದಿ ಪಾಡ್ಯೆಯ ದಿನ ಹುಬ್ಬಳ್ಳಿ, ದಾವಣಗೆರೆ, ಗದಗ, ಬಳ್ಳಾರಿ, ರೋಣ  ಮುಂತಾದ ನಗರಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಅಂದಿನ ರಾತ್ರಿ ಲಘು ರಥೋತ್ಸವ, ಕೊಂಡ ಹಾರುವ ಕಾರ್ಯಕ್ರಮ ನಡೆಯಲಿದೆ.

ಈಗ ದೇವಸ್ಥಾನ ಜೀರ್ಣೋದ್ಧಾರ ಕ್ಷೀಪ್ರವಾಗಿ ನಡೆಯುತ್ತಿದೆ. ದೇವಸ್ಥಾನದ ಕಾರ್ಯಾಲಯದಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗಿತೆ ಪುಸ್ತಕಗಳನ್ನು ಓದುಗರಿಗೆ ಇರಿಸಲಾಗಿದೆ. ‘ನಮ್ಮೂರ ಜಾತ್ರೆ ವಿಶೇಷವಾಗಿರುತ್ತದೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ದೇವಸ್ಥಾನ ಸಮಿತಿ ಅಧ್ಯಕ್ಷ ಮುದ್ದಪ್ಪ ನಾಗರಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT