ಸರ್ಕಾರ ಹಳ್ಳಿ, -ಪಟ್ಟಣ ಎಂಬ ಭೇದ ಮಾಡದೇ ಗುಣಮಟ್ಟದ ವಿದ್ಯುತ್ ಪೂರೈಸಬೇಕೆಂಬುದು ರೈತ ಸಂಘದ ಬಹು ಮುಖ್ಯವಾದ ಹಕ್ಕೊತ್ತಾಯ. ಆದರೆ ಯಾವ ಸರ್ಕಾರವೂ ಈ ವಿಚಾರವಾಗಿ ಗಂಭೀರವಾದ ಚಿಂತನೆ ಮಾಡಿಲ್ಲ. ಸಂಘದ 35 ವರ್ಷಗಳ ಇತಿಹಾಸದಲ್ಲಿ ಮೂರು ಪ್ರಮುಖ ಪಕ್ಷಗಳು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿವೆ. ಆದರೆ ಅವೆಲ್ಲವೂ ರೈತರಿಗೆ ವಿದ್ಯುತ್ ನೀಡುವ ಬದಲು, ಶಾಕ್ ಹೊಡೆಸುವುದಕ್ಕೇ ಸೀಮಿತವಾಗಿವೆ.
ಎಂತಹ ಮಳೆ ಬಂದರೂ, ಅಣೆಕಟ್ಟೆ ತುಂಬಿದ್ದರೂ ಮಾರ್ಚ್, -ಏಪ್ರಿಲ್ನಲ್ಲಿ ಬೆಳೆ ಒಣಗುವುದು ತಪ್ಪಿಲ್ಲ. ನಾಲ್ಕೈದು ವರ್ಷಕ್ಕೊಮ್ಮೆ ಆವರಿಸಿಕೊಳ್ಳುವ ಬರವಂತೂ ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ಹೀಗಾಗಿ ರೈತರ ಬದುಕಿನ ಆಸರೆಗೆ ಪಂಪ್ಸೆಟ್ಗಳ ಅಗತ್ಯ ಇದ್ದೇ ಇದೆ.
ಗುಣಮಟ್ಟ ಇಲ್ಲ: ಸರ್ಕಾರ ಹಳ್ಳಿಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡದೇ ಇರುವುದರಿಂದ ಪ್ರತಿ ವರ್ಷ ಲಕ್ಷಾಂತರ ವಿದ್ಯುತ್ ಮೀಟರ್ಗಳು ಸುಟ್ಟು ಹೋಗುತ್ತಿವೆ. ಇದರಿಂದ ರೈತ ಸಮುದಾಯ ನೂರಾರು ಕೋಟಿ ನಷ್ಟವನ್ನು ಅನುಭವಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ.
ರಾತ್ರಿ ವೇಳೆ ಸಹ 3 ಫೇಸ್ ಅಥವಾ 2 ಫೇಸ್ ವಿದ್ಯುತ್ ಅನ್ನು ಸರಿಯಾಗಿ ಸರಬರಾಜು ಮಾಡುತ್ತಿಲ್ಲ (ಹಗಲು 4 ಗಂಟೆ ಮತ್ತು ರಾತ್ರಿ 2 ಗಂಟೆ) ಇದರಿಂದ ಬಹಳ ಸಮಸ್ಯೆಯಾಗಿದೆ. ರಾತ್ರಿ ನಿದ್ರೆಗೆಟ್ಟು ಜಮೀನಿಗೆ ನೀರು ಹಾಯಿಸಲು ಹೋಗುವ ರೈತರು ಹಲವು ಬಗೆಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ವೋಲ್ಟೇಜ್ ಇಲ್ಲದ ವಿದ್ಯುತ್ ಸರಬರಾಜಿನಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸವೂ ಕುಂಠಿತವಾಗುತ್ತಿದೆ. ರಾಜ್ಯದ ಒಟ್ಟಾರೆ ವಿದ್ಯುತ್ನಲ್ಲಿ ಬಹುಪಾಲನ್ನು ರೈತರ ಪಂಪ್ಸೆಟ್ಗಳಿಗೇ ಸರಬರಾಜು ಮಾಡ ಲಾಗುತ್ತಿದೆ. ಇದಕ್ಕಾಗಿ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಕೊಟ್ಟು ವಿದ್ಯುತ್ ಖರೀದಿಸಲಾಗುತ್ತಿದೆ, ಹೀಗಾಗಿ ವಿದ್ಯುತ್ ಇಲಾಖೆ ನಷ್ಟದಲ್ಲಿದೆ ಎಂದು ಹೇಳುವುದನ್ನು ಸರ್ಕಾರ ಮೊದಲು ಬಿಡಬೇಕು. ಸರಿಯಾದ ಅಂಕಿಸಂಖ್ಯೆಯನ್ನು ಜನರ ಮುಂದೆ ಇಡಬೇಕು.
ನಮ್ಮ ಗ್ರಾಮ ಪಂಚಾಯಿತಿಗಳು ವಿದ್ಯುತ್ ಬಿಲ್ ಕಟ್ಟಲಿಲ್ಲವೆಂದು ಸಂಪರ್ಕ ಕಡಿತಗೊಳಿಸಿ, ಪಂಪ್ಸೆಟ್ ಕಾರ್ಯ ನಿರ್ವಹಿಸಲು ಸಾಧ್ಯವಾಗದೇ ಇರುವ ಸ್ಥಿತಿ ನಮ್ಮಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಆಗಿಲ್ಲ. ಆದರೆ ಪಂಚಾಯಿತಿ ಅನುದಾನದಲ್ಲಿ ಗಣನೀಯ ಪ್ರಮಾಣದ ಹಣ ಈ ಕಾರಣಕ್ಕೆ ಮತ್ತು ಬೀದಿ ದೀಪಗಳ ಬಾಬ್ತಿಗೇ ಹೋಗುತ್ತಿದೆ ಎಂಬುದೂ ನಿಜ. ಈ ರೀತಿ ವಿದ್ಯುತ್ ಹಳ್ಳಿಗರ ಬದುಕನ್ನು ಹಲವು ರೀತಿಯಲ್ಲಿ ಹಿಂಡುತ್ತಿದೆ.
ಸರ್ಕಾರಕ್ಕೆ ಅಭಿವೃದ್ಧಿ ವಿಷಯದಲ್ಲಿ ಬದ್ಧತೆ ಇದ್ದರೆ ಕಡ್ಡಾಯವಾಗಿ ರೈತರಿಗೆ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಪಂಪ್ಸೆಟ್ಗಳನ್ನೂ ಹನಿ ನೀರಾವರಿಗೆ ಒಳಪಡಿಸಬೇಕು. ತಮಿಳುನಾಡು ಸರ್ಕಾರ ಹನಿ ನೀರಾವರಿ ಪದ್ಧತಿಗೆ ನೂರಕ್ಕೆ ನೂರರಷ್ಟು ಸಹಾಯಧನ ನೀಡುತ್ತಿದೆ. ಅದರಂತೆ ಇಲ್ಲೂ ಸಹಾಯಧನ ನೀಡಿ ಇದರ ನಿರ್ವಹಣೆ ಸರ್ಕಾರ ಮತ್ತು ರೈತರ ಸಹಯೋಗದಲ್ಲಿ ನಡೆಯುವಂತೆ ಮಾಡಬೇಕು. ಎಲ್ಲ ಪಂಪ್ಸೆಟ್ಗಳಿಗೂ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದೇ ಆದರೆ, ದಿನಕ್ಕೆ ನಾಲ್ಕೈದು ಗಂಟೆ ಗುಣಮಟ್ಟದ ವಿದ್ಯುತ್ ವಿತರಿಸಿದರೂ ಸಾಕಾಗುತ್ತದೆ.
(ಲೇಖಕರು ರೈತ ಸಂಘದ ಮಂಡ್ಯ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.