ಹೊಸಪೇಟೆ: ‘ಹುಳುಗಳಿಗೆ ಆಹಾರವಾಗಿದ್ದ ಹಸ್ತಪ್ರತಿಗಳನ್ನು ರಕ್ಷಿಸದೆ ಹೋಗಿದ್ದರೆ ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ತಿಳಿಯುತ್ತಿರಲಿಲ್ಲ. ಈಗಲೂ ಕತ್ತಲಲ್ಲಿ ಇರುವ ಇಂಥ ಐತಿಹಾಸಿಕ ಪುರಾವೆಗಳ ರಕ್ಷಣೆಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು’ ಎಂದು ಹಿರಿಯ ಸಾಹಿತಿ ಡಾ.ದೇ.ಜವರೇಗೌಡ ಗುರುವಾರ ಒತ್ತಾಯಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಆರಂಭವಾದ ಎರಡು ದಿನಗಳ ಅಖಿಲ ಕರ್ನಾಟಕ 11ನೇ ಹಸ್ತಪ್ರತಿ ಸಮ್ಮೇಳನಾಧ್ಯಕ್ಷ ಭಾಷಣ ಮಾಡಿದ ಅವರು, ‘ಸರ್ಕಾರಿ ಅಧಿಕಾರಿಗಳಿಗೆ ತಾವು ಕಾರ್ಯ ನಿರ್ವಹಿಸುವ ಪ್ರದೇಶಗಳ ಸಂಪೂರ್ಣ ಪರಿಚಯ ಹಾಗೂ ಅಲ್ಲಿನ ಜನರ ಒಡನಾಟ ಇರುತ್ತದೆ. ಇಂಥ ಒಡನಾಟದ ಮೂಲಕ ಅಲ್ಲಿರುವ ಹಸ್ತಪ್ರತಿ`ಗಳನ್ನು ಸಂಗ್ರಹಿಸಿ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗಕ್ಕೆ ನೀಡುವ ಮೂಲಕ ಸಂರಕ್ಷಣೆಗೆ ಮುಂದಾಗಬೇಕು’ ಎಂದರು.
‘ಬಸವೇಶ್ವರಾದಿಯಾಗಿ ಶಿವಶರಣರ ಸಂದೇಶ ಇಂದಿನ ಎಲ್ಲ ಸಾಮಾಜಿಕ ರೋಗಗಳಿಗೆ ಸಿದ್ಧೌಷಧ. ಈಗ ಲಭ್ಯವಿಲ್ಲದ ಅನೇಕ ಕೃತಿಗಳಲ್ಲಿ ಇನ್ನೂ ಎಂತಹ ಮೌಲಿಕ ಸಂಗತಿಗಳು ಅಡಗಿವೆಯೋ ಗೊತ್ತಿಲ್ಲ. ಹಸ್ತಪ್ರತಿಗಳು ಸಮಾಜ ಹಾಗೂ ಸರ್ಕಾರದ ಆಸ್ತಿಯಾಗಿದ್ದು, ನಾಡಿನ ಸಂಸ್ಕೃತಿ ಮತ್ತು ಇತಿಹಾಸದ ಸಂಪುಟಗಳು ಸಂಪೂರ್ಣವಾಗಿ ಕನ್ನಡಿಗರಿಗೆ ಪರಿಚಯವಾಗಬೇಕಾದರೆ, ಕತ್ತಲೆಯಲ್ಲಿ ಹುದುಗಿರುವ ಇಂಥ ಹಸ್ತಪ್ರತಿಗಳು ಬೆಳಕಿಗೆ ಬರಬೇಕು’ ಎಂದು ಪ್ರತಿಪಾದಿಸಿದರು.
ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಸಮ್ಮೇಳನ ಉದ್ಘಾಟಿಸಿದರು. ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಸಂಪಾದಿಸಿರುವ ‘ಹಸ್ತಪ್ರತಿ ವ್ಯಾಸಂಗ–13’ ಕೃತಿಯನ್ನು ಹಿರಿಯ ವಿದ್ವಾಂಸ ಡಾ.ಬಿ.ಕೆ. ಹಿರೇಮಠ ಬಿಡುಗಡೆ ಮಾಡಿದರು. ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.