ನವದೆಹಲಿ: ರೈತರ ರ್ಯಾಲಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಮಾತನಾಡಿ, ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು 2013ರಲ್ಲಿ ಜಾರಿಗೆ ತಂದಿದ್ದ ಭೂಸ್ವಾಧೀನ ಕಾಯ್ದೆಯನ್ನು ದುರ್ಬಲಗೊಳಿಸಲು ಎನ್ಡಿಎ ಸರ್ಕಾರ ಯತ್ನಿಸುತ್ತಿದೆ ಎಂದು ಆಪಾದಿಸಿದರು.
ಮೋದಿ ಚುನಾವಣೆ ಗೆಲ್ಲಲು ರೈತರು ಹಾಗೂ ಯುವಕರಿಗೆ ಕನಸುಗಳನ್ನು ಮಾರಿದರು. ಆದರೆ, ರೈತರಿಗೆ ಈಗ ಎನ್ಡಿಎ ಸರ್ಕಾರದ ರೈತ ವಿರೋಧಿ ನೀತಿ ಕುರಿತು ಮನವರಿಕೆ ಆಗಿದೆ ಎಂದು ವಿಶ್ಲೇಷಿಸಿದರು. ರಾಹುಲ್ ಯುವ ಪೀಳಿಗೆ ಕಣ್ಮಣಿ. ಅವರು ಭೂಸ್ವಾಧೀನ ಮಸೂದೆ ವಿರುದ್ಧ ನಿರ್ಣಾಯಕ ಹೋರಾಟ ನಡೆಸುತ್ತಾರೆಂದು ಸಿಂಗ್ ತಿಳಿಸಿದರು.
ರೈತರು ಹಾಗೂ ಕೃಷಿ ಕಾರ್ಮಿಕರ ಹಿತಾಸಕ್ತಿಗಳನ್ನು ಬಲಿ ಕೊಡಲು ನಾವು ಅವಕಾಶ ಕೊಡುವುದಿಲ್ಲ. ಅಕಾಲಿಕ ಮಳೆಯಿಂದ ತೊಂದರೆಗೊಳಗಾದ ರೈತರಿಗೆ ಸರಿಯಾದ ಪ್ರಮಾಣದಲ್ಲಿ ಪರಿಹಾರ ನೀಡಿಲ್ಲ. ಉತ್ತಮ ಬೆಲೆ ಕೊಟ್ಟು ಗೋಧಿ ಖರೀದಿ ಮಾಡುತ್ತಿಲ್ಲ. ಹತ್ತಿ ಹಾಗೂ ಆಲೂಗೆಡ್ಡೆ ಬೆಲೆ ಕುಸಿದಿದೆ. ಯೂರಿಯಾ ಗೊಬ್ಬರ ರೈತರಿಗೆ ಸಿಗುತ್ತಿಲ್ಲ ಎಂದು ಸೋನಿಯಾ ದೂರಿದರು.