ರಾಮನಗರ: ‘ನಾಗೇಗೌಡ ಅವರು ಕನ್ನಡ ನಾಡು ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ’ ಎಂದು ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ತಿಳಿಸಿದರು.
ಜಾನಪದ ಲೋಕದಲ್ಲಿ ಅಕ್ಷರ ಧಾಮ ಟ್ರಸ್ಟ್, ಮಾಯ್ಕಾರ ರಂಗತಂಡ, ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದಲ್ಲಿ ಶನಿವಾರ ನಡೆದ ಮಕ್ಕಳ ಶಿಬಿರದಲ್ಲಿ ‘ನಾಡೋಜ ಎಚ್.ಎಲ್.ನಾಗೇಗೌಡ ಹಾಗೂ ಅವರ ಸಾಧನೆ’ ಕುರಿತು ಅವರು ಮಾತನಾಡಿದರು. ‘ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಅವರು ಅಪಾರ ಆಸಕ್ತಿ ಹೊಂದಿದ್ದರು’ ಎಂದರು.
ಶಿಬಿರದ ನಿರ್ದೇಶಕ ನರೇಶ್್ ಮಯ್ಯ ನಾಗೇಗೌಡ ಮಾತನಾಡಿ, ‘ನಾಗೇಗೌಡ ಅವರು ನಿರ್ಮಿಸಿರುವ ಜಾನಪದ ಲೋಕ ದೇಶದ ಅತ್ಯಂತ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಿ ಇದು ರೂಪುಗೊಂಡಿದೆ’ ಎಂದರು. ಶಿಬಿರದ ನಿರ್ದೇಶಕ ಶಿವಣ್ಣ ಕನಕಪುರ, ರಂಗನಿರ್ದೇಶಕ ಎಂ.ಸಿ.ನಾಗರಾಜು, ಸಂಪನ್ಮೂಲ ವ್ಯಕ್ತಿಗಳಾದ ನೀನಾಸಂ ರತ್ನಾ, ಮಂಜುಳಾ, ಗಾಯಕರಾದ ಸರ್ವೋತ್ತಮ್, ಬ್ಯಾಡರಹಳ್ಳಿ ಶಿವಕುಮಾರ್ ಇದ್ದರು.
‘ಕಲೆಗೆ ಪ್ರೋತ್ಸಾಹ ಅಗತ್ಯ’
ಕನಕಪುರ: ‘ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕಲೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು’ ಎಂದು ನೀನಾಸಂ ರಂಗ ನಿರ್ದೇಶಕ ಎಂ.ಸಿ.ನಾಗರಾಜು ತಿಳಿಸಿದರು.
ಪಟ್ಟಣದ ಕೋಟೆ ಶ್ರೀರಾಮ ಮಂದಿರದಲ್ಲಿ ವಿನಾಯಕ ನೃತ್ಯ ಶಾಲೆಯ ವತಿಯಿಂದ ಆಯೋಜಿಸಿದ್ದ ಒಂಬತ್ತನೇ ವಾರ್ಷಿ ಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.