ಕ್ವಾಲಾಲಂಪುರ (ಪಿಟಿಐ): ಮಲೇಷ್ಯಾದಲ್ಲಿ ಭಾರತ ನಿರ್ಮಿಸಿದ ‘ತೋರಣ ದ್ವಾರ’ವನ್ನು (ಸ್ತೂಪವನ್ನು ಹೋಲುವ ಹೆಬ್ಬಾಗಿಲು) ಪ್ರಧಾನಿ ನರೇಂದ್ರ ಮೋದಿ ಮತ್ತು ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್ ಸೋಮವಾರ ಜತೆಯಾಗಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಪ್ರಧಾನಿ, ‘ಭಾರತ– ಮಲೇಷ್ಯಾ ನಡುವಿನ ಸಂಬಂಧ ಕೇವಲ ಆರ್ಥಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಂಸ್ಕೃತಿಕ ಕ್ಷೇತ್ರದಲ್ಲೂ ಉತ್ತಮ ಸಂಬಂಧ ಹೊಂದಿವೆ ಎಂಬುದನ್ನು ಈ ಸಮಾರಂಭ ಸೂಚಿಸುತ್ತದೆ’ ಎಂದರು.
‘ಈ ದ್ವಾರ ಭಾರತವು ಮಲೇಷ್ಯಾಕ್ಕೆ ನೀಡಿದ ಉಡುಗೊರೆಯಾಗಿದೆ. ಇದೊಂದು ಪ್ರೀತಿಯ ದ್ಯೋತಕ’ ಎಂದು ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್ ತಿಳಿಸಿದರು.
‘ತೋರಣ ದ್ವಾರಗಳನ್ನು ಮೌರ್ಯ ಸಾಮ್ರಾಜ್ಯದ ದೊರೆ ಅಶೋಕನ ಕಾಲದಲ್ಲಿ ನಿರ್ಮಿಸಲಾಗುತ್ತಿತ್ತು. ಬೌದ್ಧ ಧರ್ಮದ ಸಂಕೇತಗಳನ್ನು ಇದರಲ್ಲಿ ಚಿತ್ರಿಸಲಾಗುತ್ತಿತ್ತು’ ಎಂದು ತೋರಣ ದ್ವಾರದ ಮುಖ್ಯ ವಿನ್ಯಾಸಕ ಮತ್ತು ವಾಸ್ತುಶಿಲ್ಪಿ ಕ್ಷಿತಿಜ್ ಜೈನ್ ಹೇಳಿದ್ದಾರೆ. ಕ್ವಾಲಾಲಂಪುರದ ‘ಲಿಟ್ಲ್ ಇಂಡಿಯಾ’ ಪ್ರದೇಶದಲ್ಲಿ ಭಾರತ ಈ ದ್ವಾರವನ್ನು ನಿರ್ಮಿಸಿದೆ. ದ್ವಾರ ನಿರ್ಮಾಣಕ್ಕೆ ₹6.70 ಕೋಟಿ ವೆಚ್ಚವಾಗಿದೆ.