ಬೆಂಗಳೂರು: ‘ಸಂಸ್ಕೃತವು ನಾಗರಿಕತೆ ಯೊಂದಿಗೆ ಬೆಸೆದುಕೊಂಡಿದ್ದು, ಇದರತ್ತ ಯುವಜನತೆಯನ್ನು ಸೆಳೆಯಬೇಕಿದೆ’ ಎಂದು ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ.ವೂಡೆ ಪಿ.ಕೃಷ್ಣ ಹೇಳಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡು ಸಂಸ್ಕೃತವನ್ನು ಉಳಿಸುವ ತುರ್ತು ಅಗತ್ಯ ಎದ್ದು ಕಾಣುತ್ತಿದೆ. ಹೀಗಾಗಿ ಭರದಿಂದ ಸಂಸ್ಕೃತ ಉಳಿಸುವ ಕೆಲಸ ಮಾಡಬೇಕು’ ಎಂದರು.
‘ಕೇವಲ ಹಣ ಗಳಿಕೆಯ ಮಾರ್ಗವಾಗಿ ಶಿಕ್ಷಣವನ್ನು ಪಡೆಯಲಾಗುತ್ತಿದೆ. ವಿವೇಚನೆ ಹಾಗೂ ಮಾನವೀಯತೆ ಯನ್ನು ತಿಳಿದು ಕೊಳ್ಳುವತ್ತ ಶಿಕ್ಷಣವನ್ನು ರೂಪಿಸಬೇಕಿದ್ದು, ಇದಕ್ಕೆ ಸಂಸ್ಕೃತ ಭಾಷೆಯ ಅಗತ್ಯವಿದೆ’ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕ ಟೇಶ್, ‘ವಿಶ್ವವಿದ್ಯಾಲಯದಲ್ಲಿ ₨ 8 ಕೋಟಿ ಸಂರಕ್ಷಣಾ ನಿಧಿ ಇದ್ದು, ಅದನ್ನು ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಯಲ್ಲಿ ಮಿತವಾಗಿ ಬಳಸಲಾಗುವುದು’ ಎಂದು ಹೇಳಿದರು.
‘ವಿ.ವಿಯು ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನಾ ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಜಿಸಿದ್ದು, ಇದಕ್ಕೆ ಸರ್ಕಾರದ ನೆರವು ದೊರೆಯಬೇಕು’ ಎಂದರು.