ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಣ್ಯ ಪ್ರಸಾದ’ಕ್ಕೆ ನೂಕುನುಗ್ಗಲು

ಕೊಲ್ಲೂರು ಮೂಕಾಂಬಿಕಾ ದೇಗುಲದ ನವರಾತ್ರಿ ಸಂಭ್ರಮ– ಹರಿದು ಬರುತ್ತಿರುವ ಭಕ್ತಸಾಗರ
Last Updated 19 ಅಕ್ಟೋಬರ್ 2015, 10:59 IST
ಅಕ್ಷರ ಗಾತ್ರ

ಕುಂದಾಪುರ: ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಅ.13 ರಿಂದ ಪ್ರಾರಂಭಗೊಂಡಿರುವ ಮಹಾ ನವರಾತ್ರಿ ಉತ್ಸವದ ಆಚರಣೆಗಾಗಿ ದೇಶ-ವಿದೇಶದಿಂದ ಸಾವಿರಾರು ಭಕ್ತರು ದಿನಂಪ್ರತಿ ದೇಗುಲಕ್ಕೆ ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಉತ್ಸವದ ಅಂಗವಾಗಿ ದೇಗುಲಕ್ಕೆ ವಿದ್ಯುತ್ ದೀಪ ಹಾಗೂ ಸಾಂಪ್ರದಾಯಿಕ ಅಲಂಕಾರವನ್ನು ಮಾಡಲಾಗಿದೆ. 5ನೇ ನವರಾತ್ರಿ ನಂತರದ ದಿನಗಳಲ್ಲಿ ಭಕ್ತರಿಗಾಗಿ ಭೋಜನದ ಜತೆಯಲ್ಲಿ ಬೆಳಿಗ್ಗಿನ ಉಪಹಾರಗಳನ್ನು ಪ್ರಸಾದ ರೂಪವಾಗಿ ನೀಡಲಾಗುತ್ತಿದೆ. ದೇಗುಲಕ್ಕೆ ಬರುವ ಗಣ್ಯರು ಹಾಗೂ ಭಕ್ತರಿಗೆ ಸೌಲಭ್ಯ ಕಲ್ಪಿಸಲು, ವಾಹನ ನಿಲುಗಡೆ ಹಾಗೂ ವಸತಿಗೃಹಗಳ ವ್ಯವಸ್ಥೆಯ ಕುರಿತು ಆಡಳಿತ ಮಂಡಳಿ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಹೇಳಿದ್ದಾರೆ.

ಸರಸ್ವತಿ, ಲಕ್ಷ್ಮೀ ಹಾಗೂ ದುರ್ಗಾ ದೇವಿಯ ಶ್ರೀಶಕ್ತಿ ಸ್ವರೂಪಿಣಿಯಾದ ಮೂಕಾಂಬಿಕಾ ದೇವಿಯನ್ನು ನವರಾತ್ರಿ ದಿನಗಳಲ್ಲಿ ದರ್ಶನ ಮಾಡಿದರೆ ಶಕ್ತಿ ಸ್ವರೂಪಿಣಿಯ ಪೂರ್ಣಾನುಗ್ರಹ ದೊರೆ ಯುತ್ತದೆ ಎನ್ನುವ ಅನಾದಿ ಕಾಲದ ನಂಬಿಕೆಯಿಂದಾಗಿ ನವರಾತ್ರಿಯ ದಿನ ಗಳಂದು ದೇಗುಲದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಭಕ್ತರ ದಂಡು ಸೇರುತ್ತದೆ. ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೇರಿ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಕೊಲ್ಲಿ ರಾಷ್ಟ್ರಗಳಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ಆಗಮ ಶಾಸ್ತ್ರದಲ್ಲಿ ನವರಾತ್ರಿಯ ಆಚರಣೆಗಾಗಿ ವಿವಿಧ ತಂತ್ರಾಗಮನ ಪದ್ಧತಿಗಳನ್ನು ಅನುಷ್ಠಾನಗೊಳಿಸಲಾಗು ತ್ತದೆ. ಬೇರೆ ಬೇರೆ ದೇವಸ್ಥಾನಗಳು ಬೇರೆ ಬೇರೆ ಪದ್ಧತಿಗಳನ್ನು ಆಚರಿಸಿಕೊಂಡು ಬರುತ್ತಿವೆ. ಕೊಲ್ಲೂರಿನಲ್ಲಿ ಅನಾದಿ ಕಾಲದಿಂದಲೂ ಢಾಮರಿ ತಂತ್ರಾಗಮ ಪದ್ಧತಿಯಲ್ಲಿ ನವರಾತ್ರಿಯ ಆಚರಣೆಯ ಧಾರ್ಮಿಕ ವಿಧಿಯನ್ನು ಪಾಲನೆ ಮಾಡಿಕೊಂಡು ಬರಲಾಗುತ್ತಿದೆ. ಇದರ ಅನ್ವಯ ಪ್ರತಿ ದಿನವೂ ಶ್ರೀ ದೇವಿಗೆ ಎಲ್ಲ ಕಟ್ಟಕಟ್ಟಳೆ ಪೂಜೆಗಳ ಜತೆಯಲ್ಲಿ ಶತರುದ್ರಾಭಿಷೇಕ, ಕಲ್ಪೋಕ್ತ ಪೂಜೆ ಹಾಗೂ ಸುಹಾಸಿನಿ ಪೂಜೆಗಳು ನಡೆಯುತ್ತವೆ.

ದೇವಸ್ಥಾನದ ಅರ್ಚಕ ಎನ್. ಗೋವಿಂದ ಅಡಿಗ ಮಾಹಿತಿ ನೀಡಿ, ‘ನವರಾತ್ರಿಯ ಒಂಭತ್ತು ದಿನಗಳಲ್ಲಿಯೂ ಶ್ರೀ ದೇವಿಗೆ ಪ್ರತಿ ದಿನ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಮೊದಲ ದಿನ ಯೋಗಾನಿದ್ರಾ ದುರ್ಗಾ, 2ನೇ ದಿನ ದೇವಜಾತಾ ದುರ್ಗಾ, 3ನೇ ದಿನ ಮಹಿಷಾಸುರಮರ್ದಿನಿ ದುರ್ಗಾ, 4ನೇ ದಿನ ಶೈಲಜಾ ದುರ್ಗಾ, 5ನೇ ದಿನ ಧೂಮ್ರಾ: ದುರ್ಗಾ, 6ನೇ ದಿನ ಚಂಡ-–ಮುಂಡ ದುರ್ಗಾ, 7ನೇ ದಿನ ರಕ್ತಬೀಜಾ ದುರ್ಗಾ, 8ನೇ ದಿನ ನಿಶುಂಭಾ: ದುರ್ಗಾ ಹಾಗೂ 9ನೇ ದಿನ ಶುಂಭಾ:ದುರ್ಗಾ ಪೂಜೆಗಳು ನಡೆ ಯುತ್ತದೆ. ಮಹಾನವಮಿ ಆಚ ರಣೆಯ ಅಂಗವಾಗಿ ಅ.21 ರಂದು ಬೆಳಿಗ್ಗೆ ಚಂಡಿಕಾ ಹೋಮ ಹಾಗೂ ರಾತ್ರಿ 9.45 ಕ್ಕೆ ರಥೋತ್ಸವ ನಡೆಯುತ್ತದೆ’ ಎಂದು ಹೇಳುತ್ತಾರೆ.

ನಾಣ್ಯ ಪ್ರಸಾದ: ನವರಾತ್ರಿಯ ಮೊದಲ ದಿನ ಕಲಶ ಸ್ಥಾಪನೆ ಹಾಗೂ ಧ್ವಜ ಗಣಪತಿ ಪೂಜೆಯ ಬಳಿಕ ಪ್ರಾರಂಭ ವಾಗುವ ಉತ್ಸವದ ಆಚರಣೆಯ ಪ್ರತಿ ದಿನವೂ ಪರಂಪರೆಯನ್ನು ಉಳಿಸಿ ಕೊಳ್ಳುವ ಜತೆಯಲ್ಲಿ ವಿಶೇಷತೆಯನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ. ನವ ಮಿಯ ದಿನದಂದು ರಾತ್ರಿ ರಥೋತ್ಸವ ನಡೆಯುವ ಸಂದರ್ಭದಲ್ಲಿ ದೇವಸ್ಥಾನದ ಪೌಳಿಯ ಒಳ ಪ್ರಾಂಗಣದಲ್ಲಿ ಸಾವಿರಾರು ಜನರು ದೇವಿಯ ರಥೋತ್ಸವಕ್ಕಾಗಿ ಕಾಯುತ್ತಾರೆ. ಪುಷ್ಪ ರಥದ ಮೇಲೆ ಬರುವ ಶ್ರೀ ದೇವಿಯ ರಥದಿಂದ ನಾಣ್ಯಗಳನ್ನು ಪ್ರಸಾದ ರೂಪವಾಗಿ ಎಸೆಯಲಾಗುತ್ತದೆ. ಇದನ್ನು ಪಡೆದು ಕೊಳ್ಳಲು ಉಂಟಾಗುವ ನೂಕು ನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಹಾಗೂ ದೇವಸ್ಥಾನದವರು ಹರ ಸಾಹಸ ಮಾಡಬೇಕಾಗುತ್ತದೆ. ಇದಕ್ಕೆ ಕಾರಣ ನವಮಿಯಂದು ಪ್ರಸಾದ ರೂಪವಾಗಿ ದೊರಕುವ ಈ ನಾಣ್ಯ ಭಾಗ್ಯವನ್ನು ದಯಪಾಲಿಸುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಅಚಲವಾಗಿದೆ.
- ರಾಜೇಶ್‌ ಕೆ.ಸಿ ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT