ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭವಿಷ್ಯಕ್ಕೆ ನಿಧಿ ಇಟ್ಕೊಂಡು ಈಗೇನು ಮಾಡೋಣ?’

ಗಾರ್ಮೆಂಟ್‌ ಕಾರ್ಮಿಕರ ಪಾಲಿಗೆ ಸಾಲ ತೀರಿಸುವ ಮೂಲವಾದ ಪಿಎಫ್‌
Last Updated 19 ಏಪ್ರಿಲ್ 2016, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಟ್ಟೆಗೆ ಹಿಟ್ಟು ಸಿಕ್ಕರೆ ತಾನೆ, ನಾವು 58 ವರ್ಷ ಬದುಕೋದು? ನಮ್ಮನ್ನು ಈಗಲೇ ಉಪವಾಸ ಕೆಡವಿದರೆ ಇನ್ನೂ ಹಲವು ವರ್ಷಗಳ ಬಳಿಕ ಬರುವ ಕಾಸಿಗಾಗಿ ನಾವೆಲ್ಲ ಹೇಗೆ ಜೀವ ಹಿಡಿಯೋಣ?’
–ಬೊಮ್ಮನಹಳ್ಳಿಯ ಸಿದ್ಧ ಉಡುಪು (ಗಾರ್ಮೆಂಟ್ಸ್‌) ಕಾರ್ಖಾನೆಯಲ್ಲಿ ಕೆಲಸ ಮಾಡುವ ಆರ್‌.ಜಯಮ್ಮ ಅವರ ಪ್ರಶ್ನೆ ಇದು. ‘ಸದ್ಯದ ಗಂಜಿ ಕಾಯಿಸೋಕೇ ಕಾಸು ಇಲ್ಲದಿರುವಾಗ ಭವಿಷ್ಯದ ನಿಧಿ ಕಟ್ಕೊಂಡು ಏನು ಮಾಡೋಣ’ ಎಂದು ಆಕ್ರೋಶದಿಂದ ಕೇಳುತ್ತಾರೆ.

ಭವಿಷ್ಯ ನಿಧಿ (ಪಿಎಫ್‌) ಕಾಯ್ದೆಗೆ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ತಿದ್ದುಪಡಿ ಎಲ್ಲ ಕಾರ್ಮಿಕ ವರ್ಗಗಳ ಮೇಲೂ ಪರಿಣಾಮ ಬೀರಲಿದೆ. ಆದರೆ, ಸಿದ್ಧ ಉಡುಪು ಕಾರ್ಖಾನೆಗಳ ಕಾರ್ಮಿಕರಿಂದಷ್ಟೇ ಈ ಮಟ್ಟದ ಆಕ್ರೋಶ ವ್ಯಕ್ತವಾಗಿದೆ ಏಕೆ ಎಂದು ಕೆದಕುತ್ತಾ ಹೋದರೆ ಈ ವರ್ಗದ ಕಾರ್ಮಿಕರ ಸಾಮಾಜಿಕ–ಆರ್ಥಿಕ ಸ್ಥಿತಿಗತಿ ಅನಾವರಣಗೊಳ್ಳುತ್ತಾ ಸಾಗುತ್ತದೆ.

ನಗರದ ಬೊಮ್ಮನಹಳ್ಳಿ, ಪೀಣ್ಯ, ಹುಳಿಮಾವು, ಅರಕೆರೆ, ಬೊಮ್ಮಸಂದ್ರ, ಅತ್ತಿಬೆಲೆ, ಹೆಬ್ಬಗೋಡಿ, ಸಿಂಗಸಂದ್ರ, ಕೆಂಗೇರಿ ಮತ್ತಿತರ ಭಾಗಗಳಲ್ಲಿ ತುಂಬಿಕೊಂಡಿರುವ ಸಿದ್ಧ ಉಡುಪು ಕಾರ್ಖಾನೆಗಳ ಕಾರ್ಮಿಕರಲ್ಲಿ ಶೇ 90ರಷ್ಟು ಮಹಿಳೆಯರೇ ಇದ್ದು, ಅವರ ಸಂಬಳ ತಿಂಗಳಿಗೆ ಸರಾಸರಿ ₹ 6 ಸಾವಿರದಿಂದ ₹ 8 ಸಾವಿರದಷ್ಟಿದೆ.

ಹೆಚ್ಚುವರಿ ಅವಧಿಗೆ ದುಡಿದರೂ ತುತ್ತಿನ ಚೀಲ ತುಂಬಿಸಲು ವರಮಾನ ಸಾಕಾಗದು. ಹೀಗಾಗಿ ಕೈಸಾಲ ಪಡೆಯುವ ಪರಿಪಾಠ ಈ ವರ್ಗದಲ್ಲಿ ಹೆಚ್ಚಾಗಿದೆ. ಕಾರ್ಮಿಕರು ಒಂದು ಕಾರ್ಖಾನೆಯಿಂದ ಮತ್ತೊಂದು ಕಾರ್ಖಾನೆಗೆ ವಲಸೆ ಹೋಗುವುದು ಮಾಮೂಲಾಗಿದೆ. ಪ್ರತಿಯೊಬ್ಬ ಉದ್ಯೋಗಿಯಿಂದ 12 ವರ್ಷಗಳಲ್ಲಿ ಕನಿಷ್ಠ ನಾಲ್ಕು ಕಾರ್ಖಾನೆಗಳ ಬದಲಾವಣೆ ಆಗಿರುತ್ತದೆ.

ಮೂರ್‌್ನಾಲ್ಕು ವರ್ಷ ಒಂದು ಸಂಸ್ಥೆಯಲ್ಲಿ ಕೆಲಸ ಮಾಡಿ, ರಾಜೀನಾಮೆ ನೀಡುವುದು, ಪಿಎಫ್‌ ಹಣ ಹಿಂಪಡೆದು ಕೈಸಾಲ ತೀರಿಸುವುದು, ಮತ್ತೆ ಹೊಸ ಸಂಸ್ಥೆ ಹುಡುಕಿಕೊಂಡು ಹೋಗುವುದು ಈ ಕಾರ್ಮಿಕರಲ್ಲಿ ಸಂಪ್ರದಾಯವಾಗಿ ಬೆಳೆದಿದೆ. ಹೌದು, ಸಾಲ ತೀರಿಸುವ ಉದ್ದೇಶದಿಂದಲೇ ಕೆಲಸಕ್ಕೆ ರಾಜೀನಾಮೆ ನೀಡಲಾಗುತ್ತದೆ!

ಪಿಎಫ್‌ ಎನ್ನುವುದು ಇವರ ಪಾಲಿಗೆ ಭವಿಷ್ಯದ ನಿಧಿಯಲ್ಲ; ಸದ್ಯದ ಅಗತ್ಯ ಪೂರೈಸುವ ವರಮಾನದ ಮೂಲ. ಅದರ ಬಳಕೆ ಮೇಲೆ ನಿರ್ಬಂಧ ಬೀಳಲಿದೆ ಎಂಬ ವದಂತಿಯೇ ಕಾರ್ಮಿಕರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.

ತಿಂಗಳಿಗೆ ₹ 250ರಿಂದ ₹ 300ವರೆಗೆ ಪಿಎಫ್‌ ಕಡಿತ ಮಾಡಲಾಗುತ್ತದೆ. ಅಷ್ಟೇ ಮೊತ್ತದ ಕಾರ್ಖಾನೆ ಪಾಲು ಹಾಗೂ ಅದರ ಮೇಲಿನ ಬಡ್ಡಿ ಸೇರಿಸಿದಾಗ ಮೂರು ವರ್ಷದಲ್ಲಿ ಸರಾಸರಿ ₹ 25 ಸಾವಿರದಷ್ಟು ಪಿಎಫ್‌ ಹಣ ಸಿಗುತ್ತದೆ. ಆ ಹಣಕ್ಕಾಗಿಯೇ ಈಗ ಕಾರ್ಮಿಕ ವರ್ಗ ಪರಿತಪಿಸುತ್ತಿದೆ.

ಮದುವೆಯಾಗುವ ಯುವತಿಯರು ಕಾರ್ಖಾನೆಗಳಿಂದ ಕೆಲಸ ತೊರೆದು ಹೋಗುವುದರಿಂದ ಅಲ್ಪ ಪ್ರಮಾಣದ ಪಿಎಫ್‌ ಮೊತ್ತಕ್ಕಾಗಿ 58 ವರ್ಷ ಆಗುವವರೆಗೆ ಏಕೆ ಕಾಯಬೇಕು ಎಂಬ ಪ್ರಶ್ನೆಯೂ ಎದ್ದಿದೆ.

‘ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಯುವತಿಯರೇ ಹೆಚ್ಚಾಗಿ ಕೆಲಸ ಮಾಡುತ್ತಾರೆ. 3–4 ವರ್ಷ ದುಡಿದು ಮದುವೆಗೆ ಹಣ ಹೊಂಚುವುದು ಅವರ ಉದ್ದೇಶ. ಕೆಲಸ ಬಿಟ್ಟಾಗ ಉಳಿತಾಯ ರೂಪದಲ್ಲಿರುವ ಪಿಎಫ್‌ ಹಣ ಸಿಗದಿದ್ದರೆ ಸಹಜವಾಗಿಯೇ ಅವರಿಗೆ ಸಿಟ್ಟು ಬರುತ್ತದೆ’ ಎಂದು ಹೇಳುತ್ತಾರೆ ಕಾರ್ಮಿಕ ಮುಖಂಡ ವಿಜೆಕೆ ನಾಯರ್‌.

‘ಐದು ವರ್ಷ ಕೆಲಸ ಮಾಡಿದ ಕಾರ್ಮಿಕರಿಗೆ ಗ್ರ್ಯಾಚುಟಿ ಕೊಡಬೇಕು ಎನ್ನುವ ಕಾರಣದಿಂದ ಕಾರ್ಖಾನೆಗಳು ಯಾರನ್ನೂ ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಉಳಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೂ ವಲಸೆ ಹೆಚ್ಚಿದೆ. ಕಾರ್ಖಾನೆ ಬದಲಾಯಿಸುವ ಮುನ್ನ ಅವರ ಸಾಲದ ವ್ಯವಹಾರ ಚುಕ್ತಾ ಮಾಡಲು ಪಿಎಫ್‌ ಹಣ ಬೇಕೇಬೇಕು’ ಎಂದು ಅವರು ಹೇಳುತ್ತಾರೆ.

‘ಕಾರ್ಖಾನೆಗಳು ಕೊಡುವ ಸಂಬಳ ನಿತ್ಯದ ಖರ್ಚಿಗೆ ಸಾಕಾಗಲ್ಲ. ಇನ್ನು ಮದುವೆ, ಶಿಕ್ಷಣ, ಆರೋಗ್ಯ, ಮರಣದಂತಹ ಸಂದರ್ಭಗಳಲ್ಲಿ ಹಣ ಎಲ್ಲಿಂದ ತರಬೇಕು? ಇಂತಹ ಸಂದರ್ಭದಲ್ಲಿ ಕಾರ್ಮಿಕರಿಗೆ ಪಿಎಫ್‌ ಹಣ ನೆರವಿಗೆ ಬರುತ್ತಿತ್ತು. ಈಗ ಆ ಮೂಲವನ್ನು ಬಂದ್‌ ಮಾಡಲು ಸರ್ಕಾರ ಹೊರಟಿದೆ’ ಎಂದು ಸಿದ್ಧ ಉಡುಪು ಕಾರ್ಮಿಕರ ಒಕ್ಕೂಟದ ಅಧ್ಯಕ್ಷೆ ರುಕ್ಮಿಣಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಕಾರ್ಮಿಕರ ಭವಿಷ್ಯದ ಕುರಿತು ಅಷ್ಟೊಂದು ಕಾಳಜಿ ಸರ್ಕಾರಕ್ಕೆ ಇದ್ದರೆ ಮೊದಲು ಬದುಕು ಸಾಗಿಸಲು ಬೇಕಾದಷ್ಟು ಕನಿಷ್ಠ ವೇತನ ನಿಗದಿ ಮಾಡಬೇಕು. ನಂತರ ಪಿಎಫ್‌ ಹಣ ಉಳಿಸಿಕೊಳ್ಳುವ ಕುರಿತು ಯೋಚನೆ ಮಾಡಬೇಕು’ ಎಂದು ಹೇಳುತ್ತಾರೆ.

‘ಸಾರಿಗೆ ವ್ಯವಸ್ಥೆ ಇಲ್ಲ, ದುಡಿಮೆ ಅವಧಿ ನಿಗದಿಯಿಲ್ಲ, ಮೂಲಸೌಕರ್ಯದ ಸುಳಿವಿಲ್ಲ, ಭದ್ರತೆ ಇಲ್ಲ, ಕ್ಯಾಂಟಿನ್‌ ಸೌಲಭ್ಯವಿಲ್ಲ. ಹೀಗೆ ‘ಇಲ್ಲ’ಗಳ ಮಧ್ಯೆ ದುಡಿಯುವ ಜನ ಚೂರು–ಪಾರು ಉಳಿದ ಮೊತ್ತದಿಂದ ತಮ್ಮ ಹೊಣೆಗಾರಿಕೆ ನಿಭಾಯಿಸಲು ಹೆಣಗಾಡುತ್ತಾರೆ. ಅದಕ್ಕೂ ಸರ್ಕಾರ ಕಲ್ಲು ಹಾಕಿದರೆ ಹೇಗೆ’ ಎಂದು ಇಎಸ್‌ಜಿ ಇಂಡಿಯಾದ ಸಮನ್ವಯ ಅಧಿಕಾರಿ ಲಿಯೊ ಸಲ್ಡಾನಾ ಪ್ರಶ್ನಿಸುತ್ತಾರೆ.
*
15 ದಿನಗಳಿಂದ ಮಡುಗಟ್ಟಿದ್ದ ಆಕ್ರೋಶ
ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 15 ದಿನಗಳಿಂದ ಸುಳಿದಾಡುತ್ತಿರುವ ವದಂತಿಯಿಂದ ಕಾರ್ಮಿಕರ ಆಕ್ರೋಶ ಸ್ಫೋಟಗೊಂಡಿದೆ. ಹೊಸ ನಿಯಮಾವಳಿ ಪ್ರಕಾರ ಏಪ್ರಿಲ್‌ 15ರ ನಂತರ ಪೂರ್ಣಪ್ರಮಾಣದಲ್ಲಿ ಪಿಎಫ್‌ ಹಣ ಹಿಂಪಡೆಯಲು ಆಗುವುದಿಲ್ಲ ಎಂಬುದೇ ಆ ವದಂತಿ.

ಏಪ್ರಿಲ್‌ 15ರೊಳಗೆ ಪಿಎಫ್‌ ಹಣ ಪಡೆಯಬೇಕು ಎಂಬ ಉದ್ದೇಶದಿಂದ ಸಾವಿರಾರು ಕಾರ್ಮಿಕರು ರಾಜೀನಾಮೆ ನೀಡಲು ಮುಂದಾಗಿದ್ದರು. ಆಗ ಕಾರ್ಖಾನೆ ಅಧಿಕಾರಿಗಳು, ‘ನೀವು ಈಗ ರಾಜೀನಾಮೆ ಕೊಟ್ಟರೂ ಪಿಎಫ್‌ ಹಣ ಪಡೆಯಲು ಎರಡು ತಿಂಗಳು ಕಾಯಬೇಕಾಗುತ್ತದೆ. ಅಷ್ಟರಲ್ಲಿ ಹೊಸ ನಿಯಮ ಜಾರಿಗೆ ಬಂದಿರುತ್ತದೆ. ಆಗ ಪೂರ್ಣ ಹಣ ಪಡೆಯುವುದು ಸಾಧ್ಯವಿಲ್ಲ’ ಎಂಬ ಮಾಹಿತಿ ನೀಡಿದ್ದಾರೆ. ಇದರಿಂದ ಹತಾಶಗೊಂಡ ಕಾರ್ಮಿಕರು ಬೀದಿಗೆ ಇಳಿದಿದ್ದಾರೆ ಎಂದು ಸಿದ್ಧ ಉಡುಪು ಕಾರ್ಮಿಕರ ಒಕ್ಕೂಟದ ಅಧ್ಯಕ್ಷೆ ರುಕ್ಮಿಣಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT