ಬೆಂಗಳೂರು: ‘ಮೇಕೆದಾಟು ಯೋಜನೆ ಬಗ್ಗೆ ನಾನು ಸತ್ಯವನ್ನೇ ನುಡಿದಿದ್ದೇನೆ. ಆದರೆ, ನನ್ನ ಹೇಳಿಕೆಯನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿರುಚುವ ಪ್ರಯತ್ನ ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಶುಕ್ರವಾರ ಇಲ್ಲಿ ದೂರಿದರು.
‘ಮೇಕೆದಾಟು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಗಮವು 1996ರಲ್ಲಿ ಕೇಂದ್ರಕ್ಕೆ ಯೋಜನಾ ವರದಿ ಕೊಟ್ಟಿದೆ. ಇದು ಸುಳ್ಳಾದರೆ ಅದನ್ನು ಸಚಿವರು ಖಚಿತಪಡಿಸಬೇಕು’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಪಡಿಸಿದ್ದಾರೆ.
‘ಈ ವರದಿಯಲ್ಲಿ ಭೌಗೋಳಿಕ ವಿವರಗಳು ಇವೆ. 1934–35ರ ನಂತರ ಮೇಕೆದಾಟು ಮೂಲಕ ಹರಿದ ನೀರಿನ ಪ್ರಮಾಣದ ಮಾಹಿತಿ ಇದೆ. ಯೋಜನೆ ಅನುಷ್ಠಾನಕ್ಕೆ 1996ರಲ್ಲಿ ಎಷ್ಟು ಖರ್ಚಾಗುತ್ತಿತ್ತು ಎಂಬುದರ ಲೆಕ್ಕಾಚಾರದ ವಿವರಗಳು ಇವೆ. ಇವೆಲ್ಲ ಇದ್ದ ಮೇಲೆ ಮತ್ತೆ ಎಂತಹ ಯೋಜನಾ ವರದಿ ಸಿದ್ಧಪಡಿಸಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.
‘ಮೇಕೆದಾಟು ಮತ್ತು ಶಿವನಸಮುದ್ರ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ 2009ರಲ್ಲೇ ಕೇಂದ್ರಕ್ಕೆ ತಿಳಿಸಲಾಗಿತ್ತು. ಈ ವಿಷಯದಲ್ಲಿ ಬಿಜೆಪಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸತ್ಯಕ್ಕೆ ದೂರ’ ಎಂದು ಹೇಳಿದ್ದಾರೆ.