ಬೆಂಗಳೂರು: ‘ಸಿನಿಮಾ ರಂಗದಲ್ಲಿ ಕನಕದಾಸ, ಕೃಷ್ಣದೇವರಾಯ, ಪುರಂದರದಾಸರ ಪಾತ್ರ ಮಾಡುವ ಮೂಲಕ ಡಾ. ರಾಜ್ಕುಮಾರ್ ಅವರು ಸಾಂಸ್ಕೃತಿಕ ರಂಗದಲ್ಲಿ ಹೊಸ ಚೈತನ್ಯ ಮೂಡಿಸಿದ್ದರು’ ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ನಗರದ ಪ್ರೆಸ್ಕ್ಲಬ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಡಾ.ರಾಜ್ಕುಮಾರ್ ಸಮಗ್ರ ಚರಿತ್ರೆಯ ಪುಸ್ತಕದ ಪರಿಚಯದ ಬಗ್ಗೆ ದಿಗ್ಗಜರ ಅಭಿಪ್ರಾಯಗಳ ಕೈಪಿಡಿ’ ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾದುದು. ಅದೇ ರೀತಿ ಚಿತ್ರರಂಗಕ್ಕೆ ಡಾ.ರಾಜ್ ಕೊಡುಗೆ ಮಹತ್ತರವಾದುದು.
ಅವರ ಪ್ರತಿ ಚಿತ್ರಗಳಲ್ಲೂ ಸಾಮಾಜಿಕ ಕಳಕಳಿ ಕಾಣಬಹುದು. ಅವರು ಕನ್ನಡ ಚಿತ್ರರಂಗದ ಯುಗಪುರುಷ’ ಎಂದು ಅವರು ಬಣ್ಣಿಸಿದರು.
ರಾಜ್ ಅವರ ಸಮಗ್ರ ಚರಿತ್ರೆ ಎರಡು ಸಂಪುಟಗಳಲ್ಲಿ ಬರಲಿದ್ದು, ಡಿಸೆಂಬರ್ನಲ್ಲಿ ಕೃತಿ ಬಿಡುಗಡೆಯಾಗಲಿದೆ. ಈ ಸಂಪುಟಗಳಲ್ಲಿ 2,140 ಪುಟಗಳು ಹಾಗೂ 8,310 ಚಿತ್ರಗಳು ಇರಲಿವೆ ಎಂದು ಸಮಾರಂಭದಲ್ಲಿ ತಿಳಿಸಲಾಯಿತು.