ಬೆಂಗಳೂರು: ‘ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಶಾಲಾ ವಾಹನ ಚಾಲಕರು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಎಂ.ಎನ್.ಬಾಬು ರಾಜೇಂದ್ರ ಪ್ರಸಾದ್ ಹೇಳಿದರು.
ರಾಷ್ಟ್ರೀಯ ರಸ್ತೆ ಸುರಕ್ಷತೆ ಸಂಘಟನೆಯು ನಗರ ಸಂಚಾರ ಪೊಲೀಸರ ಸಹಯೋಗದಲ್ಲಿ ಶಾಲಾ ವಾಹನ ಚಾಲಕರಿಗಾಗಿ ಮಂಗಳವಾರ ಆಯೋಜಿಸಿದ್ದ ಸುರಕ್ಷತಾ ಚಾಲನೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಶಾಲಾ ವಾಹನಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ರೂಪಿಸಲಾಗಿರುವ ಮಾರ್ಗಸೂಚಿಗಳನ್ನು ಚಾಲಕರು ಕಡ್ಡಾಯವಾಗಿ ಪಾಲಿಸಿದರೆ ಅಪಘಾತಗಳನ್ನು ತಡೆಯಬಹುದು. ಈ ಬಗ್ಗೆ ಚಾಲಕರಲ್ಲಿ ಜಾಗೃತಿ ಹೆಚ್ಚಾಗಬೇಕು’ ಎಂದರು.
‘40 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ವಾಹನ ಚಾಲನೆ ಮಾಡಬಾರದು. ವಾಹನದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. ಚಾಲಕರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ವಾಹನದ ಕಿಟಕಿಗೆ ಗ್ರಿಲ್ ಅಳವಡಿಸಿರಬೇಕು’ ಎಂದು ಹೇಳಿದರು.
‘ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದವರು ಹಗಲಿನಲ್ಲಿ ವಾಹನ ಚಲಾಯಿಸಬಾರದು. ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ವಾಹನದಲ್ಲಿ ತುಂಬಬಾರದು. ಮಕ್ಕಳು ನಾಳೆಯ ನಮ್ಮ ಭವಿಷ್ಯ. ಅವರನ್ನು ಎಲ್ಲ ರೀತಿಯ ಅಪಾಯದಿಂದ ಕಾಪಾಡಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಹೇಳಿದರು.
ರಾಷ್ಟ್ರೀಯ ರಸ್ತೆ ಸುರಕ್ಷತೆ ಸಂಘಟನೆಯ ಅಧ್ಯಕ್ಷ ಎಸ್.ಸತ್ಯಪಾಲ, ‘ನಗರದಲ್ಲಿ 11,000 ಕಿ.ಮೀ. ರಸ್ತೆಗಳಿವೆ. 380 ಸಿಗ್ನಲ್ಗಳಿವೆ. ನಗರದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆಯೇ ಹೆಚ್ಚಾಗಿದೆ. 8,000 ಬಿಎಂಟಿಸಿ ಬಸ್ಗಳಿವೆ. ಆದರೆ, ಇವುಗಳನ್ನು ನಿಯಂತ್ರಿಸಲು 3,000 ಸಂಚಾರ ಪೊಲೀಸರಿದ್ದಾರೆ’ ಎಂದರು.
‘ಶಾಲಾ ವಾಹನ ಚಾಲಕರಿಗೆ ಅರಿವು ಮೂಡಿಸುವ ಮೂರನೇ ಕಾರ್ಯಕ್ರಮವಾಗಿದೆ. ನಗರದ ಹೆಚ್ಚಿನ ಶಾಲೆಗಳ ವಾಹನ ಚಾಲಕರಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದರು.