ಕೆಂಗೇರಿ: ‘ಪ್ರಪಂಚದ ಸಾಹಿತ್ಯವನ್ನು ಅಧ್ಯಯನ ಮಾಡಿದ ಮಹಾ ಮೇಧಾವಿ ಕುವೆಂಪು. ಜಾತಿ ಮೌಢ್ಯ ವಿನಾಶ ಪ್ರವರ್ತಕರಾಗಿದ್ದ ಕುವೆಂಪು ಅವರ ಸಾಹಿತ್ಯಗಳು ಅಮೂಲ್ಯ. ದಾರ್ಶನಿಕ ದೂರದರ್ಶಿಗಳಾಗಿದ್ದ ಕುವೆಂಪುರವರ ವೈಚಾರಿಕತೆಗಳೇ ಇಂದಿನ ಪ್ರಧಾನಿಯವರ ಸ್ವಚ್ಛ ಭಾರತಕ್ಕೆ ಪ್ರೇರಣೆ’ ಎಂದು ಕವಿ ಡಾ. ಸಿದ್ದಲಿಂಗಯ್ಯ ಹೇಳಿದರು.
ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಅಧ್ಯಯನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ‘ಕುವೆಂಪು: ಶೂದ್ರ ಮಹಾ ಪ್ರತಿಭೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಲೇಖಕ ಪ್ರೊ. ಕೆ.ಎಸ್. ಭಗವಾನ್, ‘ಕುವೆಂಪು ಅಖಂಡ ಪ್ರತಿಭಾವಂತರಾಗಿದ್ದರು. ಇಂಗ್ಲಿಷ್ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಕುವೆಂಪು ಬಂದದ್ದು, ಇಂಗ್ಲಿಷ್ ಮೂಲಕ ಪ್ರಪಂಚದ ಸಾಹಿತ್ಯ ಓದಿದ್ದ ಅವರು ನಾಟಕದಲ್ಲಿ ಸರಳ ರಗಳೆಯನ್ನು ರಚಿಸಿದ ಮೊದಲಿಗರು’ ಎಂದರು.