ತುಮಕೂರು: ನಗರ ರೈಲು ನಿಲ್ದಾಣವನ್ನು ₹ 5.5 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲಾಗುವುದು ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಸೆಕ್ಸೇನಾ ತಿಳಿಸಿದರು.
ರೈಲು ನಿಲ್ದಾಣದ ಗೋದಾಮು ಸ್ಥಳಾಂತರ, ಹೆಚ್ಚುವರಿ ಮಾರ್ಗ, ಫುಟ್ಪಾತ್ ವ್ಯವಸ್ಥೆ, ತಂಗುದಾಣ, ಪಾದಚಾರಿ ಮೇಲ್ಸೇತುವೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಕರ್ಯ ಒಳಗೊಂಡ ಸುಸಜ್ಜಿತವಾದ ಆಧುನಿಕ ನಿಲ್ದಾಣ ಮಾಡಲಾಗುವುದು ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ತುಮಕೂರು–ಅರಸೀಕೆರೆ(96 ಕಿ.ಮೀ)ಮಾರ್ಗವನ್ನು ಜೀವ ವಿಮಾ ನಿಗಮದ ಸಹಯೋಗದಲ್ಲಿ ದ್ವಿಪಥವನ್ನಾಗಿ ಪರಿವರ್ತಿಸಲಾಗುವುದು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ರೈಲು ಪ್ರಯಾಣಿಕರ ಅಹವಾಲು ಆಲಿಸಲಾಗಿದೆ. ಬಹುತೇಕ ಪ್ರಯಾಣಿಕರು ರೈಲಿನಲ್ಲಿ ಶುಚಿತ್ವ ಕಾಪಾಡುವ ಬಗ್ಗೆ ಸಲಹೆ ಮಾಡಿದ್ದಾರೆ. ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಹೇಳಿದರು.
ಸಂಚಾರ ಸಾಮರ್ಥ್ಯ ಹೆಚ್ಚಳ : ಪ್ರಯಾಣಿಕರಿಗೆ ಹೆಚ್ಚುವರಿ ಸೇವೆ ಒದಗಿಸುವ ದೃಷ್ಟಿಯಿಂದ ತಾತ್ಕಾಲಿಕವಾಗಿ 100795 ಕೋಚ್ಗಳನ್ನು ಸೇರಿಸಲಾಗಿದೆ. ಆಯ್ದ ಮಾರ್ಗಗಳಲ್ಲಿ 594 ಕೋಚ್ಗಳು ಕಾಯಂ ಸೇರ್ಪಡೆ ಮಾಡಲಾಗಿದೆ.
30190 ವಿಶೇಷ ರೈಲು, 119 ಹೊಸ ರೈಲು, 24 ಕೋಚ್ಗಳಿರುವ 250 ರೈಲುಗಳನ್ನು ಗುರುತಿಸಲಾಗಿದೆ. 26 ಕೋಚ್ಗಳಿರುವ ರೈಲಿನ ಪರೀಕ್ಷಾರ್ಥ ಸಂಚಾರ ಕೈಗೊಳ್ಳಲಾಗಿದೆ. ರೈಲುಗಳ ಹೆಚ್ಚುವರಿ ಸೇವೆಯಿ 11.85 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅವರು ಸೆಕ್ಸೇನಾ ತಿಳಿಸಿದರು.