ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯ ಪಾಲನೆ-ಲಾಲನೆಯ ‘ಮಗು’

Last Updated 28 ಡಿಸೆಂಬರ್ 2013, 19:49 IST
ಅಕ್ಷರ ಗಾತ್ರ

ಕವಿ, ಅನುವಾದಕ ಮತ್ತು ವಿಮರ್ಶಕ ಕೊಯಂಪರಂಬತ್ ಸಚ್ಚಿದಾನಂದನ್ (ಜ.೧೯೪೬) ಕಳೆದ ವರ್ಷ ಸಾಹಿತ್ಯಕ್ಕಾಗಿ ನೀಡಲಾಗುವ ನೊಬೆಲ್ ಬಹುಮಾನಕ್ಕೆ ನಾಮಾಂಕಿತರಾಗಿದ್ದವರಲ್ಲಿ ಒಬ್ಬರು. ನೊಬೆಲ್‌ ನಾಮಾಂಕನ ಇತ್ತೀಚಿನ ವರ್ಷಗಳಲ್ಲಿ ಬಹಳ ಸರಳ. ತಮ್ಮ ಅಚ್ಚುಮೆಚ್ಚಿನ ಲೇಖಕರ ಹೆಸರನ್ನು ಯಾರು ಬೇಕಾದರೂ ಸ್ವೀಡನ್ನಿನ ನೊಬೆಲ್ ಕಚೇರಿಗೆ ಇ-ಮೇಲ್ ಮೂಲಕ ಕಳಿಸಬಹುದು.

ಅಲ್ಲಿನವರು ನಾಮಾಂಕನಗೊಂಡವರ ಸಾಹಿತ್ಯ ಸಾಧನೆಗಳ ಜೊತೆಗೆ ಅವರ ಪೂರ್ವಾಪರ, ಅವರ ರಾಜಕೀಯ ನಿಲುವು, ಅವರ ಪರಿಸರ ಪ್ರಜ್ಞೆ ಇತ್ಯಾದಿಗಳನ್ನು ರುಜುವಾತುಗೊಳಿಸುವ ಮಾಹಿತಿ ಕಲೆಹಾಕಿ, ಸಂಸ್ಕಾರಗೊಳಿಸಿ ತೀರ್ಪುಗಾರಿಕೆಯ ವಿವಿಧ ಹಂತಗಳಿಗೆ ತಲುಪಿಸುತ್ತಾರೆ. ಈಗಿನ ದಿನಗಳ ಇಂಟರ್ನೆಟ್ ಇತ್ಯಾದಿ ವಿದ್ಯುನ್ಮಾನ ಸಂಪರ್ಕ ಜಾಲದ ಮೂಲಕ ಈ ಪ್ರಕ್ರಿಯೆ ಸರಳ ಮತ್ತು ಸುಲಭ.

ಇಂಥ ವ್ಯವಸ್ಥೆಯಿಲ್ಲದ ಎಂಬತ್ತರ ದಶಕದಲ್ಲಿ ಭಾರತ ಸರ್ಕಾರ ಮೊಟ್ಟಮೊದಲ ಬಾರಿಗೆ ಭಾರತೀಯ ಭಾಷೆಗಳಲ್ಲಿನ ಲೇಖಕರೊಬ್ಬರ ಹೆಸರನ್ನು ಅಧಿಕೃತವಾಗಿ ನೊಬೆಲ್ ಪುರಸ್ಕಾರಕ್ಕಾಗಿ ನಾಮಾಂಕನಗೊಳಿಸಿತ್ತು. ಆ ಹೆಸರು ಮಹಾಕವಿ ಕುವೆಂಪು ಅವರದ್ದಾಗಿತ್ತು. ಅವರ ನೆನಪಿನಲ್ಲಿ ಈಗ ಭಾರತೀಯ ಭಾಷೆಗಳಲ್ಲಿ ಬರೆಯುವ ಲೇಖಕರಿಗಾಗಿ ಒಂದು ರಾಷ್ಟ್ರೀಯ ಪುರಸ್ಕಾರ ಸ್ಥಾಪನೆಯಾಗಿದೆ. ಅದರ ಮೊದಲ ಪುರಸ್ಕಾರ ಮಲಯಾಳಂ ಭಾಷೆಯ ಕವಿ ಕೆ. ಸಚ್ಚಿದಾನಂದನ್ ಅವರಿಗೆ ಸಿಕ್ಕಿದೆ. ಕುವೆಂಪು ಮಲಯಾಳಕ್ಕೆ ಎಷ್ಟು ಸಂದಿರುವರೊ ತಿಳಿಯದು; ಸಚ್ಚಿದಾನಂದನ್ ಕೂಡ ಕನ್ನಡದಲ್ಲಿ ಹಾಗೆಯೇ.

ನನಗೆ ತಿಳಿದಂತೆ ಕೆಲವು ಬಿಡಿ ಕವಿತೆಗಳನ್ನು ಬಿಟ್ಟರೆ ಅವರ ‘ನನ್ನ ಮೈನಗರ’ ಎಂಬ ಕವಿತಾ ಸಂಕಲವೊಂದನ್ನು ಕವಿ ಎಚ್.ಎಸ್. ಶಿವಪ್ರಕಾಶ್ ಅನುವಾದಿಸಿ ಪ್ರಕಟಿಸಿದ್ದರು. ಇರಲಿ. ಕುಪ್ಪಳಿಯ ಕುವೆಂಪು ಪ್ರತಿಷ್ಠಾನವು ಪೊಟ್ಟೆಕ್ಕಾಟ್, ಆಶಾನ್, ವೈಕ್ಕಂ, ತಕಳಿ, ಅಯ್ಯಪ್ಪ ಪಣಿಕ್ಕರ್, ಎಂ.ಟಿ. ವಾಸುದೇವನ್ ನಾಯರ್, ಕಮಲಾದಾಸ್, ಓ.ವಿ. ವಿಜಯನ್ ಇನ್ನೂ ಇಂಥ ನೂರಾರು ಲೇಖಕರನ್ನು ಕೊಟ್ಟ ಮಲಯಾಳಂ ಭಾಷೆಯನ್ನು ಸಚ್ಚಿದಾನಂದನ್ ಅವರ ಮೂಲಕ ಗೌರವಿಸಿದೆ. ಹಾಗೆಯೇ ಈ ಪುರಸ್ಕಾರ ಆಧುನಿಕ ಕನ್ನಡ ಮತ್ತು ಮಲಯಾಳಂ ಸಾಹಿತ್ಯಗಳ ನಡುವೆ ಅನುವಾದಗಳ ಮೂಲಕ ನಡೆದಿರುವ ಕೊಡುಕೊಳುವಿನ ದ್ಯೋತಕವೆಂದರೂ ಸಂದೀತು.

ಕೇರಳದ ಸಾಹಿತ್ಯ ವಲಯದಲ್ಲಿ ಸಚ್ಚಿದಾನಂದನ್ ಅವರನ್ನು ಅವರಿಗಿಂತ ಹಿರಿಯರು ಮತ್ತು ಸಮಕಾಲೀನರು ಪ್ರೀತಿಯಿಂದ ಸಚ್ಚಿ ಎಂದು ಕರೆದರೆ, ಕಿರಿಯರು ಸಚ್ಚಿ ಮಾಸ್ಟರ್ ಅಥವಾ ಸಚ್ಚಿ ಸಾರ್ ಎನ್ನುತ್ತಾರೆ. ಅವರು ಕೇರಳದ ಗಡಿ ದಾಟಿ ದಿಲ್ಲಿಯಲ್ಲಿ ನೆಲೆಸಿದ ನಂತರ ಸಚ್ಚಿದಾನಂದನ್ ಎಂಬ ತಮ್ಮ ಹೆಸರನ್ನು ಹ್ರಸ್ವಗೊಳಿಸಿ ಎಸ್ಸೆಮ್ಮೆಸ್, ಇ-ಮೇಲ್‌ಗಳಲ್ಲಿ ‘ಸಚ್ಚಿದಾ’ ಎಂಬುದನ್ನಷ್ಟೆ ಬಳಸುತ್ತಾರೆ.   ೫ನೇ 

‘ದಾದಾ’ ಎಂಬ ಪದಕ್ಕೆ ಕನ್ನಡದಲ್ಲಿ ಯಾವುದೇ ಅರ್ಥವಿರಲಿ, ಮರಾಠಿ ಮತ್ತು ಬಂಗಾಳಿಯಲ್ಲಿ ‘ದಾದಾ’ ಎಂಬುದು ಹಿರಿಯಣ್ಣ ಎಂಬ ಅರ್ಥದ ಅತ್ಯಂತ ಪ್ರೀತಿ ಮತ್ತು ಗೌರವಸೂಚಕ ಉಪಾಧಿ.  ಬಂಗಾಳಿಯಲ್ಲಂತೂ ಅದು ಇನ್ನೂ ಹ್ರಸ್ವಗೊಂಡು ಕೇವಲ ‘ದಾ’ ಆಗಿ ಉಳಿದಿದೆ. ಹಾಗಾಗಿ ಅವರು ಕೇರಳದ ಗಡಿ ದಾಟಿದ ದಾದಾ! ಇತ್ತೀಚೆಗೆ ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಅವರ ಕಾವ್ಯವಾಚನ ಕೇಳಿದ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದನ್ನು ಕೇಳಿದ ನನಗೆ ಯಾವ ಆಶ್ಚರ್ಯವೂ ಆಗಲಿಲ್ಲ. ದೇಶ ವಿದೇಶದಾದ್ಯಂತ ಅವರ ಕಾವ್ಯಕ್ಕಿರುವ ಇಂಥ ಅಸಂಖ್ಯಾತ ಅಭಿಮಾನಿಗಳೇ ಅವರ ಹೆಸರನ್ನು ನೊಬೆಲ್ ಪುರಸ್ಕಾರಕ್ಕೆ ನಾಮಾಂಕನಗೊಳಿಸುವುದು.

ಇಷ್ಟು ವರ್ಷಗಳಿಂದ –ಸುಮಾರು ಕಾಲು ಶತಮಾನ– ಇವರ ನೂರಾರು ಕವನ ವಾಚನಗಳನ್ನು ಕೇಳಿ, ಓದಿರುವ ಹಾಗೂ ಅವರು ತಮ್ಮ ಕಾವ್ಯದ ಕಾವನ್ನೂ ಕಂಪನ್ನೂ ಕಾಪಿಟ್ಟುಕೊಳ್ಳುವ ಬಗೆಯನ್ನು ಹತ್ತಿರದಿಂದಲೂ, ಮಾನಸಿಕ ದೂರದಿಂದಲೂ ಕಂಡ ನನ್ನ ಮನಸ್ಸಿಗೆ ಒಂದು ಚಿತ್ರ ಮೂಡಿಬರುತ್ತದೆ. ಮನೆಯ ಯಾವುದೋ ಒಂದು ಮೂಲೆಯಲ್ಲಿ ತನ್ನ ಕೈಗೆ ಸಿಕ್ಕ ನಾನಾ ಬಗೆಯ ವಸ್ತುಗಳನ್ನು, ಆಟಿಕೆಗಳನ್ನಿಟ್ಟುಕೊಂಡು ಯಾರ ಪರಿವೆಯೂ ಇಲ್ಲದೆ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಾ, ಹಲವು ಬಗೆಯ ಆಟಗಳನ್ನಾಡುತ್ತಿರುವ ಒಂಟಿ ಮಗು.

ಯಾರಾದರೂ ಬಳಿಸಾರಿದರೆ ಏನಾದರೂ ಮಾತಾಡಿ, ಬರಿಗೈಯಲ್ಲೇ ಅವರಿಗೆ ಏನಾದರೂ ಕೊಟ್ಟೋ ಪಡೆದೋ, ಮುಂದಕ್ಕೆ ಕಳಿಸಿ ತನ್ನ ಆಟದ ಕಾಯಕಕ್ಕೆ ಹೊರಳಿಬಿಡುವ ಮಗು. ಇತರ ಮಕ್ಕಳ್ಯಾರಾದರೂ ಇದನ್ನು ಸೇರಿಸಿಕೊಳ್ಳದಿದ್ದರೆ ತಕರಾರು ಮಾಡದೆ ಅವರ ಆಟವನ್ನು ದೂರದಿಂದಲೇ ನೋಡುತ್ತಲಿರುವ, ಹಾಗೆ ನೋಡುತ್ತಾ ಏನನ್ನೋ ಕಲಿಯುತ್ತಿರುವಂತೆ ಕಾಣುವ ಮಗು.

ತನ್ನ ಜಗತ್ತಿನಲ್ಲೇ ತಲ್ಲೀನಗೊಂಡಿದ್ದರೂ ತನ್ನ ಆಟವನ್ನ ಮನೆಯವರೆಲ್ಲರೂ ನೋಡುತ್ತಿರಬೇಕೆಂಬ ಉತ್ಕಟ ಆಸೆಯುಳ್ಳ ಮಗು. ಅದು ಸ್ವಲ್ಪ ಅತಿಯಾಸೆಯಂತೆಯೂ ಒಮ್ಮೊಮ್ಮೆ ಕಾಣಿಸುವುದುಂಟು. ಅದು ಕವಿಯೊಬ್ಬನಿಗೆ ಇರಬೇಕಾದದ್ದು ಸರಿಯೇ. ಇದು ಅವರ ಮತ್ತು ಅವರ ಕಾವ್ಯಸಂಬಂಧ ಕುರಿತ ನನ್ನ ಕಲ್ಪನೆ. ಉಳಿದ ಅವರ ಲೌಕಿಕದ ವಿಚಾರ ಬೇರೆ.

ಸಚ್ಚಿದಾನಂದನ್ ಬಾಲ್ಯಕಾಲದ ಹಲವು ಪ್ರೇರಣೆ ಪ್ರಭಾವಗಳಿಂದ ಕವಿಯಾದವರು. ಕೇರಳದ ತಮ್ಮ ಹಳ್ಳಿಯಲ್ಲಿ ಬಿಡದೆ ಸುರಿಯುತ್ತಿದ್ದ ಮಳೆಯ ವೈವಿಧ್ಯಮಯ ಲಯವಿನ್ಯಾಸಗಳು, ಯಾವ ಅಡೆತಡೆಗಳಿಲ್ಲದಂತೆ ಸಮಯಕ್ಕೆ ತಕ್ಕ ಶಬ್ದಗಳನ್ನು ಸಮುದ್ರದ ಅಲೆಗಳೋಪಾದಿಯಲ್ಲಿ ನಿರಂತರವಾಗಿ ನೀಡುತ್ತಿರು ಸರಸ್ವತಿಯೆ ಎಂಬ ಮಲಯಾಳಂ ರಾಮಾಯಣದ ಕವಿಯ ಪ್ರಾರ್ಥನೆಯನ್ನು ಅವರು ಶಾಲಾ ಬಾಲಕನಾಗಿದ್ದಾಗಲೇ ಓದಿದ್ದರು. ಕಾಗೆ, ಬೆಕ್ಕು, ಮರಗಳ ಜೊತೆ ಮಾತಾಡುವುದನ್ನು ಅವರ ಅಮ್ಮ ಕಲಿಸಿದರು. ಅಚ್ಚನ್ (ಅಪ್ಪ) ದೇವ ದೇವಿಯರ ಜೊತೆಗೆ ಸಂವಹನ ಮಾಡುವುದನ್ನು ಕಲಿಸಿದರು. ಮತಿಭ್ರಮಣೆಯಾಗಿದ್ದ ಮುತ್ತಶ್ಶಿ (ಅಜ್ಜಿ) ನಿತ್ಯಸಾಮಾನ್ಯ ಜಗದ ಜಂಜಡಗಳಿಂದ ಪಲಾಯನಗೊಳ್ಳಲು ತಮಗಾಗಿ ಮತ್ತೊಂದು ಜಗತ್ತನ್ನೇ ಸೃಷ್ಟಿ ಮಾಡಿಕೊಳ್ಳುವುದನ್ನು ಕಲಿಸಿದರು. 

ಸಚ್ಚಿದಾನಂದನ್ ಅವರ ಆರಂಭದ ಕವಿತೆಯೊಂದರ ಹೆಸರು ‘ಅಜ್ಜಿ’: ‘ನನ್ನ ಅಜ್ಜಿ ಹುಚ್ಚಿ/ ಹಣ್ಣಾಯಿತು ಅವಳ ಹುಚ್ಚು ಸಾವಿನಲ್ಲಿ/ ನನ್ನ ಚಿಕ್ಕಪ್ಪ, ಜಿಪುಣ, ಅವಳನ್ನ ನಮ್ಮ ಉಗ್ರಾಣದಲ್ಲಿಟ್ಟ/ ಹುಲ್ಲಿನಿಂದ ಸುತ್ತಿ/ ಒಣಗಿ ನನ್ನಜ್ಜಿ ಸಿಡಿದು ಹೋದಳು/ ಅವಳ ಬೀಜಗಳು ಕಿಟಕಿಗಳಿಂದ ಹಾರಿ ಹೋದವು/ ಸೂರ್ಯ ಬಂದ ಮಳೆ ಬಂತು/ ಬೀಜವೊಂದು ಬೆಳೆದು ಆಯಿತೊಂದು ಮರವು/ ಅದರ ಆಸೆಯ ಫಲವೆ ನಾನು/ ಚಿನ್ನದ ಹಲ್ಲಿನ ಮಂಗಗಳ ಕುರಿತು/ ಹೇಗೆ ಬರೆಯದಿರಲಿ ಕವಿತೆ?’. ಅಜ್ಜಿಯೊಬ್ಬರಿಗೇ ಅಲ್ಲ, ಅವರ ಕುಟುಂಬದಲ್ಲಿ ಮೂವರು ಸ್ತ್ರೀಯರಿಗೆ ಮತಿಭ್ರಮಣೆಯಾಗಿತ್ತು.  ಈ ಸಂಗತಿ ತಮ್ಮ ಬಹುತೇಕ ಕವಿತೆಗಳಲ್ಲಿರುವ ಮತಿಭ್ರಮಣೆಯ ಆಚರಣೆ ಮತ್ತು ಮನುಷ್ಯತ್ವದ ಬಗ್ಗೆ ಇರುವ ಸಂದೇಹವನ್ನು ವಿವರಿಸುತ್ತದೆ ಎಂದು ಸಚ್ಚಿದಾನಂದನ್ ತಿಳಿಸುತ್ತಾರೆ. ಇದು ಅವರ ಬಾಲ್ಯಕಾಲದ ಅಂತರಂಗದ ಮತ್ತು ಮನೆಯೊಳಗಿನ ಜಗತ್ತು.

ಅವರ ಬಾಲ್ಯಕಾಲದ ಬಾಹ್ಯ ಜಗತ್ತಿನಲ್ಲಿ ಸುತ್ತಲೂ ಹರಡಿದ ಭತ್ತದ ಗದ್ದೆಗಳು, ಹೆಚ್ಚು ಮಳೆಯಾದಾಗ ಗದ್ದೆಗಳ ತುಂಬಾ ಹರಡಿದ ನೀರು, ಸುಗ್ಗಿಯ ನಂತರ ಎಲ್ಲೆಲ್ಲೂ ಬೆಳೆದು ನಿಲ್ಲುವ ನೀಲಿ ಹೂವಿನ ಗಿಡಗಳು, ಬೆಟ್ಟಗುಡ್ಡಗಳು, ಹೆಸರುಳ್ಳ, ಹೆಸರಿಲ್ಲದ ಬಳ್ಳಿಗಳು, ಹೂಗಳು, ಹಿನ್ನೀರು, ಹಿನ್ನೀರಿನ ಮೇಲೆ ಸಾಮಾನು ಸರಂಜಾಮು ಮತ್ತು ಜನರನ್ನು ಹೊತ್ತು ಹರಿದಾಡುವ ದೋಣಿಗಳು, ಸಣ್ಣಪುಟ್ಟ ದೇಗುಲಗಳು, ಮಸೀದಿ ಮತ್ತು ಚರ್ಚುಗಳು, ಅವುಗಳಲ್ಲಿ ಈಗಿರುವಂತಹ ದೆವ್ವಗಳಂತಲ್ಲದ ಹಲವಾರು ನಿಜದೇವರುಗಳು.

ಪುಲ್ಲೂಟ್ ಎಂಬ ಅವರ ದೇಶದ (ಮಲಯಾಳಂನಲ್ಲಿ ಊರು ಅಥವಾ ಹಳ್ಳಿ) ಉತ್ತರ ಭಾಗ ಕಮ್ಯುನಿಸ್ಟರಿಂದಲೂ ದಕ್ಷಿಣ ಭಾಗ ಕಾಂಗ್ರೆಸ್ಸಿಗರಿಂದಲೂ ಕೂಡಿತ್ತು. ಅವರ  ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಉತ್ತರ ಭಾಗದಲ್ಲಿದ್ದುವಾಗಿ, ಅಲ್ಲಿ ಇವರೊಬ್ಬ ಚಿಲ್ಟಾರಿ ಕಮ್ಯುನಿಸ್ಟ್! ಆದರೆ ಮನೆಯಲ್ಲಿ ಎಲ್ಲರೂ ಕಾಂಗ್ರೆಸ್! ದೇವರ ಕೋಣೆಗಳಲ್ಲಿದ್ದ ದೇವರುಗಳು ಕೂಡ ಒಂದಲ್ಲ ಒಂದು ಪಕ್ಷಕ್ಕೆ ಸೇರಿದವುಗಳೇ ಆಗಿದ್ದವು.

ವ್ಯತ್ಯಾಸವೆಂದರೆ ಅವುಗಳು ತಮ್ಮ ಕೊರಳಲ್ಲಿ ಧರಿಸುತ್ತಿದ್ದ ರುಂಡಮಾಲೆಗಳು, ಕೈಯಲ್ಲಿ ಹಿಡಿದಿರುತ್ತಿದ್ದ ಖಡ್ಗ–ಭರ್ಜಿಗಳಿಂದಾಗಿ ಪಾರ್ಟಿ ಜನರಿಗಿಂತ ಸ್ವಲ್ಪ ಹೆಚ್ಚೇ ಉಗ್ರರಾಗಿ ಕಾಣುತ್ತಿದ್ದರೆಂದೂ, ಆಗಿನ ಅನುಭವಗಳು ಮತ್ತು ಆಗ ಮೂರು ತಿಂಗಳ ಕಾಲ ಸತತವಾಗಿ ಕಾಡಿದ ಜ್ವರದಿಂದಲೂ, ಚಿತ್ರ ಕಲಾವಿದ ಡಾಲಿ ಮಾದರಿಯ ದುಃಸ್ವಪ್ನಗಳು ತಮ್ಮ ಆರಂಭಿಕ ಕಾವ್ಯದ ಮೇಲೆ ದಟ್ಟವಾದ ಸರ್ರಿಯಲಿಸಂ ರೀತಿಯ ಪ್ರಭಾವವನ್ನುಂಟು ಮಾಡಿದವು ಎಂದು ಸಚ್ಚಿದಾನಂದನ್ ಬರೆದುಕೊಳ್ಳುತ್ತಾರೆ. ಮಲಯಾಳಂ ಕಾವ್ಯ ಸಂಪ್ರದಾಯ ಮುಖ್ಯವಾಗಿ ಮೌಖಿಕವಾದದ್ದು.

ಕವಿಯೊಬ್ಬ ತಾನು ರಚಿಸಿದ ಎಲ್ಲ ರಚನೆಗಳನ್ನೂ ಮುಖೋದ್ಗತ ಮಾಡಿಕೊಂಡು ಯಾವಾಗ ಬೇಕಾದರೂ ವಾಚಿಸುವ ಸಾಮರ್ಥ್ಯ ಪಡೆದವನಾಗಿರುತ್ತಾನೆ. ಮಲಯಾಳದಲ್ಲಿ ಅಯ್ಯಪ್ಪ ಪಣಿಕ್ಕರ್ ಅವರ ಮೂಲಕ ಪ್ರಾರಂಭವಾದ ನವ್ಯಕಾವ್ಯದ ಕಾಲದಲ್ಲೂ ಅಂಥ ಮುಖೋದ್ಗತ ಕಾವ್ಯ ವಾಚನ ಮತ್ತು ರಚನೆ ಕಡಮನಿಟ್ಟ ರಾಮಕೃಷ್ಣ, ಓ.ಎನ್.ವಿ. ಕುರುಪ್, ವಿನಯಚಂದ್ರನ್ ಮುಂತಾದವರು ಮೂಲಕ ರೂಢಿಯಲ್ಲಿದ್ದೇ ಇತ್ತು.  ಈಗಲೂ ಇದೆ.

ಹಾಗೆ ರಚನೆಗಳನ್ನು ಪಠ್ಯದ ಸಹಾಯವಿಲ್ಲದೆ ಓದದಿದ್ದರೆ ಆತ ಕವಿಯೇ ಅಲ್ಲವೆಂಬ ನಂಬಿಕೆ ಮಲಯಾಳದಲ್ಲಿನ್ನೂ ಮರೆಯಾಗಿಲ್ಲ. ಹಾಗಾಗಿಯೇ ಅಯ್ಯಪ್ಪ ಪಣಿಕ್ಕರ್, ಸಚ್ಚಿದಾನಂದರಂತಹ ನವ್ಯಾತಿನವ್ಯ ಕವಿಗಳೂ ಕೂಡ ತಮ್ಮ ಕೆಲವು ರಚನೆಗಳನ್ನು ಆ ಸಂಪ್ರದಾಯದಲ್ಲಿ ಮಾಡಿದ್ದುಂಟು, ಹಾಡಿದ್ದುಂಟು. ಎಳವೆಯಲ್ಲಿ ಸಚ್ಚಿದಾನಂದನ್ ಇಂಥ ಕಾವ್ಯ ರಚನೆಗಳಲ್ಲಿ ತೊಡಗಿದ್ದು ಅವುಗಳನ್ನು ಶಾಲಾ ಮ್ಯಾಗಜೈನುಗಳಲ್ಲಿ ಪ್ರಕಟಿಸುತ್ತಿದ್ದರು. 

ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಚ್ಚಿದಾನಂದನ್, ಮಲಯಾಳಂ ಮತ್ತು ಇಂಗ್ಲಿಷ್ ಸಾಹಿತ್ಯ, ಅನುವಾದಗಳಲ್ಲಿ ಇತರ ಭಾರತೀಯ ಭಾಷೆಗಳ ಸಾಹಿತ್ಯವನ್ನು ಓದಿಕೊಂಡವರು. ಮಾರ್ಕ್ಸ್ ವಾದ, ನಕ್ಸಲ್ ವಾದ, ಅಸ್ತಿತ್ವವಾದ, ರಾಯ್ ಅವರ ಮಾನವತಾವಾದ ಮುಂತಾದ ರಾಜಕೀಯ ಸಿದ್ಧಾಂತಗಳನ್ನು ಸಹಜವಾಗಿಯೇ ಬೆನ್ನು ಹತ್ತಿದವರು. ಯೇಟ್ಸ್, ಟಿ.ಎಸ್. ಎಲಿಯಟ್, ಜೇಮ್ಸ್ ಜಾಯ್ಸ್ ಮುಂತಾದ ಆಧುನಿಕ ಲೇಖಕರ ಪ್ರಭಾವಕ್ಕೊಳಗಾದವರು. ಅಯ್ಯಪ್ಪ ಪಣಿಕ್ಕರ್ ಸಂಪಾದಿಸುತ್ತಿದ್ದ ಸಾಹಿತ್ಯಕ ಪತ್ರಿಕೆ ‘ಕೇರಳ ಕವಿತ’ ಆಧುನಿಕ ಮಲಯಾಳಂ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾದದ್ದು.

ಆ ಪತ್ರಿಕೆಗಾಗಿ ಸಚ್ಚಿದಾನಂದನ್ ಜಗತ್ತಿನ ಬೇರೆಬೇರೆ ಭಾಷೆಗಳ ಕಾವ್ಯವನ್ನು ಮಲಯಾಳಂ ಭಾಷೆಗೆ ಅನುವಾದಿಸಿದರು. ಆಗ ಅವರ ತಲೆಮಾರಿನ ಎಲ್ಲ ಮಲಯಾಳಂ ಬುದ್ಧಿಜೀವಿಗಳ ಹಾಗೂ ಲೇಖಕರ ಜ್ಞಾನ ದಿಗಂತವನ್ನು ವಿಸ್ತರಿಸಿದವರು ಹಿರಿಯ ಕವಿ ಮತ್ತು ಬುದ್ಧಿಜೀವಿಯಾಗಿದ್ದ ಎಂ. ಗೋವಿಂದನ್. ಅವರು ಮದರಾಸು ಮತ್ತು ಕೇರಳದಲ್ಲಿ ವಾಸಿಸುತ್ತಿದ್ದರು. ಅವರು ಬೆಂಗಳೂರಿಗೂ ಆಗಾಗ ಬಂದುಹೋಗುತ್ತಿದ್ದರು. ಹಾಗೆ ಬಂದಾಗ ಅವರು ಮೆಜೆಸ್ಟಿಕ್‌ನಲ್ಲಿದ್ದ ಅವರ ಸ್ನೇಹಿತರೊಬ್ಬರ ಹೋಟೆಲ್ (ಇಂಡಿಯಾ ಹೋಟೆಲ್)ನಲ್ಲಿ ಉಳಿದುಕೊಳ್ಳುತ್ತಿದ್ದರು. ಎಪ್ಪತ್ತರ ದಶಕದಲ್ಲಿ ಡಿ.ಆರ್. ನಾಗರಾಜ್‌, ಸಿದ್ದಲಿಂಗಯ್ಯ ಮುಂತಾಗಿ ನಾವೆಲ್ಲ ಗೆಳೆಯರು ಅವರನ್ನು ಅಲ್ಲಿ ಭೆಟ್ಟಿಯಾಗುತ್ತಿದ್ದೆವು. 

ಅರವತ್ತರ ದಶಕದಲ್ಲಿ ಕನ್ನಡದಲ್ಲಿನ ಹಾಗೆಯೇ ಮಲಯಾಳಂ ಕಾವ್ಯದಲ್ಲಿ ಕೂಡ ಪರಿವರ್ತನೆಯಾಗುತ್ತಿತ್ತು. ಕಾವ್ಯದ ವಸ್ತು, ರೂಪಗಳಲ್ಲಿ ಸಂಕ್ರಮಣ ಸ್ಥಿತಿ ಕಾಣತೊಡಗಿತು. ಕಾವ್ಯ ಹೊಸ ಭಾಷೆ, ಲಯ, ರೂಪಕಗಳ ಪ್ರಯೋಗಕ್ಕೆ ಸಿದ್ಧಗೊಳ್ಳತೊಡಗಿತು. ಎಪ್ಪತ್ತರ ದಶಕದಲ್ಲಿ ವಿಶೇಷವಾಗಿ ಕೇರಳದಲ್ಲಿ ಎಡಪಂಥೀಯ ವಿಚಾರಧಾರೆಯ ಲೇಖಕರು ಮತ್ತು ರಾಜಕೀಯ ಉತ್ಸಾಹಿಗಳು ಅನೇಕ ರೀತಿಯ ದುರಂತಗಳನ್ನು ಅನುಭವಿಸಿ, ಹುತಾತ್ಮರಾದರು.

ಸಚ್ಚಿದಾನಂದನ್ ಆ ಮಾರ್ಗದಲ್ಲಿ ಎಷ್ಟು ಸಕ್ರಿಯರಾಗಿದ್ದರೋ ಅಷ್ಟೇ ವಿಮರ್ಶಾತ್ಮಕ ದೂರವನ್ನು ಕಾಪಾಡಿಕೊಂಡು ತಮ್ಮ ಕಾವ್ಯದ ಜೀವಸತ್ವವನ್ನುಳಿಸಿಕೊಂಡರು. ‘ಉತ್ತರಮ್’ ಮತ್ತು ‘ಪಚ್ಚಕುದಿರ’ ( ಹಸಿರು ಕುದುರೆ) ಎಂಬ ಸಾಹಿತ್ಯಕ ಪತ್ರಿಕೆಗಳನ್ನು ಪ್ರಾರಂಭಿಸಿ ಸಂಪಾದಿಸತೊಡಗಿದರು. ಅವುಗಳ ಮೂಲಕ ಮಾನವ ಹಕ್ಕುಗಳು, ಮಹಿಳಾಮುಕ್ತಿ, ಪರಿಸರ ಹೋರಾಟ, ಆದಿವಾಸಿ ಮತ್ತು ದಲಿತ ವಿಷಯಗಳನ್ನು ಸಾಹಿತ್ಯ, ಕಲೆ, ಅನುವಾದ ಇತ್ಯಾದಿಗಳ ಜೊತೆಗೆ ಬೆಸೆಯುವ ಕಡೆ ಒತ್ತುಕೊಟ್ಟರು.

ಆನಂತರ ಅಯ್ಯಪ್ಪ ಪಣಿಕ್ಕರ್ ಅವರ ಸಲಹೆ ಮತ್ತು ಸಹಾಯದ ಮೂಲಕ ಸಾಹಿತ್ಯ ಅಕಾದೆಮಿಯ ‘ಇಂಡಿಯನ್ ಲಿಟರೇಚರ್’ ಪತ್ರಿಕೆಯ ಸಂಪಾದಕ ಹುದ್ದೆಯನ್ನು ಪಡೆದು ದಿಲ್ಲಿಯಲ್ಲಿ ನೆಲಸಿದರು. ಕೆಲವರ್ಷಗಳ ನಂತರ ಅಕಾದೆಮಿಯ ಕಾರ್ಯದರ್ಶಿಯೂ ಆಗಿ ನಿವೃತ್ತರಾದರು. ದಿಲ್ಲಿಯ ಬದುಕು ಯಾರಿಗೇ ಆಗಲಿ ಹೊಸ ಅನುಭವಗಳನ್ನೂ, ಹೊಸ ಬದುಕನ್ನೂ ನೀಡುವಂತಹ ವಿರಾಟ್ ನಗರ.

ಅಲ್ಲಿಯ ಗಾಳಿ, ನೀರು ಒಗ್ಗಿದರೆ ಅಲ್ಲಿಗೆ ಹೋದವರು ಹಿಂತಿರುಗದೆ ತಮ್ಮ ಮೂಲ ನೆಲೆಗಳನ್ನು ಮರೆತುಬಿಡುತ್ತಾರೆ. ಆದರೆ ಸಚ್ಚಿ ಮಾಸ್ಟರ್ ಅವರಿಗೆ ಕೇರಳದಲ್ಲಿ ಸದಾ ಬೇಡಿಕೆಯಿದ್ದೇ ಇರುತ್ತದೆ. ಹಾಗಾಗಿ ತಮ್ಮ ನೆಲಜಲದ ಜೊತೆಗೆ ಅವರು ಸಂಪರ್ಕವನ್ನು ಕಡಿದುಕೊಳ್ಳಲಿಲ್ಲ. 

ಅವರು ಮಲಯಾಳಂನಲ್ಲಿ ಬರೆಯುವ ಭಾರತೀಯ ಕವಿಯಾಗಿ ಜಗತ್ತಿನ ಅನೇಕ ದೇಶಗಳಲ್ಲಿ ಪರಿಚಿತರಷ್ಟೆ ಅಲ್ಲ ಪ್ರಸಿದ್ಧರಾಗಿದ್ದಾರೆ. ಅನೇಕ ವಿದೇಶಿ ಭಾಷೆಗಳಲ್ಲಿ ಅವರ ಕಾವ್ಯ ಅನುವಾದಗೊಂಡಿದೆ. ಆಧುನಿಕ ಕಾವ್ಯವನ್ನು ಕುರಿತ ಅವರ ಪುಸ್ತಕ ‘ಕುರುಕ್ಷೇತ್ರಮ್’ ಪ್ರಕಟಗೊಂಡ ನಂತರ ೧೯೭೧ರಲ್ಲಿ ‘ಅಂಜುಸೂರ್ಯನ್’ ಎಂಬ ಮೊದಲ ಕವಿತಾ ಸಂಕಲನ ಪ್ರಕಟವಾಯಿತು.  ಆನಂತರ ಅವರು ಹಿಂತಿರುಗಿ ನೋಡಲಿಲ್ಲ. ಹೆಚ್ಚುಕಡಿಮೆ ಪ್ರತಿ ಎರಡು ವರ್ಷಗಳಿಗೊಂದರಂತೆ ತಮ್ಮ ಕವಿತಾ ಸಂಕಲಗಳನ್ನು ಪ್ರಕಟಿಸುತ್ತಿದ್ದಾರೆ.

ನನಗೆ ತಿಳಿದಂತೆ ಭಾರತೀಯ ಭಾಷೆಗಳಲ್ಲಿ ಬರೆಯುವ ಕವಿಯೊಬ್ಬನ ಮುಖ್ಯ ಕವಿತೆಗಳೆಲ್ಲವೂ ಇಂಗ್ಲಿಷಿನಲ್ಲಿ ಅನುವಾದಗೊಳ್ಳುವುದು ತುಂಬ ಅಪರೂಪ ಹಾಗೂ ಅಸಾಧ್ಯ. ಈ ವಿಷಯದಲ್ಲಿ ಸಚ್ಚಿದಾನಂದನ್ ತುಂಬ ಅದೃಷ್ಟಶಾಲಿ. ಸ್ವತಃ ಅವರೇ ಇಂಗ್ಲಿಷ್ ಭಾಷೆಯನ್ನು ಕರಗತ ಮಾಡಿಕೊಂಡಿರುವವರು. ಹಾಗಾಗಿ ಜಗತ್ತಿನಾದ್ಯಂತ ತಮ್ಮ ಕಾವ್ಯಪ್ರೇಮಿಗಳನ್ನು ಸಂಪಾದಿಸಿಕೊಂಡಿದ್ದಾರೆ.

‘ನಾಯಿ ಮೂತ್ರ ಮಾಡುತ್ತಾ ತನ್ನ ದಾರಿ/ ಗುರುತು ಮಾಡುವಂತೆ ನಾನು/ ಬದುಕಿನ ವಾಸನೆ ಇರುವ ಶಬ್ದಗಳಿಂದ/ ನನ್ನ ದಾರಿ ಗುರುತು ಮಾಡುತಿರುವೆ/ ಅಷ್ಟೇ.../ ತಾಯಿಬೆಕ್ಕು ಬಾಯಲ್ಲಿ ತನ್ನ ಮರಿಗಳ/ ಕಚ್ಚಿಕೊಂಡು ಬೇರೆ ಮನೆಗಳಿಗೆ/ ಒಯ್ಯುವಂತೆ ನಾನು ನನ್ನ/ ಕವಿತೆಗಳನ್ನ ಬೇರೆ ನುಡಿಗಳಿಗೆ ಒಯ್ಯುತಿರುವೆ/ ಅಷ್ಟೇ..../’. ಸಚ್ಚಿದಾನಂದನ್ ಕೇವಲ ತಮ್ಮ ಕಾವ್ಯವನ್ನು ಮಾತ್ರ ಅನುವಾದಿಸಿದವರಲ್ಲ. ಪಾಬ್ಲೋ ನರೂಡ ಮತ್ತು ಸೀಜರ್ ವಲ್ಲೆಜೊ ಮುಂತಾದ ಲ್ಯಾಟಿನ್ ಅಮೆರಿಕಾದ ಕವಿಗಳ, ಸೆಂಘೊರ್ ಮತ್ತು ಡೇವಿಡ್ ಡಿಯೊರಂಥ ಕಪ್ಪು ಕವಿಗಳ ಹಾಗೂ ಯುರೋಪಿನ ಕವಿಗಳ ಕಾವ್ಯವನ್ನು ಅನುವಾದಿಸಿ ಮಲಯಾಳಂ ಭಾಷೆಯನ್ನು ಸಮೃದ್ಧಗೊಳಿಸಿದ್ದಾರೆ. 

ಸಚ್ಚಿದಾನಂದನ್ ಅವರ ಕಾವ್ಯದ ವಸ್ತು ವೈವಿಧ್ಯಮಯವಾದುದು. ಅದರ ಬಗ್ಗೆ ಅವರನ್ನೇ ಒತ್ತಾಯಿಸಿ ಕೇಳಿದರೆ, ‘ತಮ್ಮ ಕಾವ್ಯದ ವಸ್ತು ನ್ಯಾಯ, ಸ್ವಾತಂತ್ರ್ಯ, ಪ್ರೇಮ, ನಿಸರ್ಗ, ಭಾಷೆ ಮತ್ತು ಸಾವು’ ಎನ್ನುತ್ತಾರೆ. ದೇಸಿ ಮತ್ತು ಮಾರ್ಗ ಸಂಪ್ರದಾಯಗಳು, ವಿವಿಧ ಭಾರತೀಯ ಮತ್ತು ಜಾಗತಿಕ ಕಾವ್ಯ ಮಾದರಿಗಳು ಮತ್ತು ಪ್ರವಾಸ, ಚಿತ್ರಕಲೆ, ಸಂಗೀತ, ಸಿನಿಮಾ ಮುಂತಾದ ಇತರ ಕಲಾಪ್ರಕಾರಗಳಿಂದಲೂ ತಮ್ಮ ಕಾವ್ಯವನ್ನು ಸಮೃದ್ಧಿಗೊಳಿಸಿಕೊಳ್ಳುತ್ತಾರೆ.

ಭಾಷೆ ಅವರ ಕಾವ್ಯದ ವಸ್ತುವಾಗಿ ಹಲವಾರು ಕವಿತೆಗಳಲ್ಲಿ ಅಭಿವ್ಯಕ್ತಿ ಪಡೆದಿದೆ. ‘ಉಗ್ಗು’ ಅಂತಹ ಒಂದು ಕವಿತೆ: ‘ಉಗ್ಗುವಿಕೆ ವಿಕಲತೆಯಲ್ಲ/ ಅದೂ ಮಾತಿನೊಂದು ಬಗೆ/ ಶಬ್ದ ಮತ್ತು ಅದರರ್ಥ ನಡುವಿನ/ ನಿಶಬ್ದವೆ ಉಗ್ಗು/ ಶಬ್ದ ಮತ್ತು ಅದರ ಕೆಲಸದ/ ನಡುವಿನ ಕುಂಟುತನವಿದ್ದ ಹಾಗೆ/ಭಾಷೆ ಮೊದಲೋ, ಉಗ್ಗು ಮೊದಲೋ ?/ ಅದೇ ಒಂದು ಭಾಷೆಯೊ ಅಥವಾ/ ಅದೊಂದು ಕೇವಲ ಉಪಭಾಷೆಯೋ?/ ಈ ಪ್ರಶ್ನೆಗಳು ಮಾಡುವವು/ ಭಾಷಾಶಾಸ್ತ್ರಿಗಳು ಉಗ್ಗುವಂತೆ/ ಪ್ರತಿ ಬಾರಿ ನಾವು ಉಗ್ಗಿದಾಗಲೂ/ ಅದು ಅರ್ಥದ ದೇವರಿಗೆ ನಾವು/ ಅರ್ಪಿಸುವ ತ್ಯಾಗ/ ಇರುವ ಜನರೆಲ್ಲರೂ ಉಗ್ಗಿದರೆ/ ಈಗ ನಮಗಿರುವಂತೆ/ ಉಗ್ಗೇ ಆಗುವುದವರ ಮಾತೃಭಾಷೆ/ ಉಗ್ಗಿದ್ದಿರಬೇಕು ದೇವರೂ/ ಅವನು ಮನುಷ್ಯನನ್ನು ಸೃಷ್ಟಿಸುವಾಗ/ ಅದಕ್ಕೇ ಇರಬೇಕು ಮನುಷ್ಯನಾಡುವ ಪ್ರತಿಯೊಂದು/ ಶಬ್ದವೂ ಕೊಡುವುದು ಬೇರೆಬೇರೆ ಅರ್ಥ/ ಅದಕ್ಕೇ ಅವನ ಪ್ರಾರ್ಥನೆಗಳೂ, ಅವನ ಆಜ್ಞೆಗಳೂ/ ಅವನಾಡಿದ್ದೆಲ್ಲವೂ ಉಗ್ಗುವಿಕೆಯೇ/ ಕಾವ್ಯ ಇದ್ದ ಹಾಗೆ’.

ಲೇಖನದ ಮೊದಲಲ್ಲಿ ಆಟದಲ್ಲಿ ಮಗ್ನವಾದ ಮಗುವಿನ ಚಿತ್ರ ಕೊಟ್ಟೆ. ‘ಅವರ ಬಗ್ಗೆ ಬರೆಯಿರಿ’ ಎಂದು ಕೇಳಿದ ತಕ್ಷಣ ನನ್ನ ಮನಸ್ಸಿನಲ್ಲಿ ಮೂಡಿದ ಭಾವನೆ ಅದು. ಸದಾ ಕಾವ್ಯಲೋಕದಲ್ಲೆ ವಿಹರಿಸುತ್ತಾ ತಮ್ಮ ಕವಿತೆಗಳನ್ನ ಎಲ್ಲ ರೀತಿಯಲ್ಲೂ ಪಾಲನೆ ಪೋಷಣೆ ಮಾಡುವ, ಎಲ್ಲರ ಮನೆಗಳಿಗೂ ಒಯ್ಯುವ, ಮಲಯಾಳಿಗಳೂ ಒಳಗೊಂಡಂತೆ ಕೆಲವರು, ‘ತುಂಬಾ ಬರೆಯುತ್ತಾರೆ’ (ಕುವೆಂಪು ಬಗೆಗೂ ಜನರಾಡಿದ್ದುಂಟು! ) ಎಂದು ಕೊಂಕಿದರೂ ತಮ್ಮ ಕವಿತೆಗಳನ್ನ ಕಾವ್ಯರಸಿಕರಿಗೆ ಮುಟ್ಟಿಸುವ ಎಲ್ಲ ಮಾರ್ಗಗಳನ್ನೂ ಬಿಡದೆ, ಹಟಮಾರಿಯ ರೀತಿಯಲ್ಲಿ ಹಿಡಿದಿರುವ ಅವರನ್ನು ಕಂಡಿರುವ ನನಗೆ ಅನಿಸಿದ ಭಾವನೆ.

ಸಚ್ಚಿದಾನಂದನ್, ಕಾವ್ಯವೆಂಬುದು ಕೇವಲ ಸಂಯೋಜನೆಗೊಳಿಸುವ ಆಟವಲ್ಲ, ಅದು ದನಿಯಿಲ್ಲದವರಿಗೆ ದನಿ ನೀಡುವ, ಹೆಸರಿಲ್ಲದವರಿಗೆ ಹೆಸರಿಡುವ, ಹೇಳಲಾರದ ಆಳ ಕಡಲಿನಿಂದ ಮೇಲೆದ್ದು ಬರುವಂಥದು. ಅದು ಕೇವಲ ಈಗಾಗಲೇ ನೆಲೆಗೊಂಡ ಮೌಲ್ಯಗಳ ಮತ್ತು ಒಪ್ಪಿತ ಸತ್ಯಗಳ ಪುನರುಚ್ಛಾರವಲ್ಲವೆನ್ನುತ್ತಾರೆ. ಕವಿಗೆ ಕಾವ್ಯವೇ ಧರ್ಮ, ಅನ್ಯಧರ್ಮಗಳು ಬೇಕಾಗಿಲ್ಲ, ‘ಆತ್ಮ ಮಾತನಾಡಲಾಗದ, ಜಲಧಾರೆಗಳ ಮತ್ತು ಎಲೆಗಳ ಭಾಷೆಯನ್ನು ಅರಿಯಲಾಗದ ಮನುಷ್ಯನ ಉಸಿರುಗಟ್ಟಿಸುವ ಮೌನ ಜಗತ್ತಿಗೆ ಮಾತ್ರ ನಾನು ಭಯಪಡುತ್ತೇನೆ.

ಜಗತ್ತು ತನ್ನ ಪಾವಿತ್ರ್ಯತೆಯಿಂದ ವಂಚಿತವಾಗಿ, ಕೆಡುಕು ಪ್ರಶ್ನಾತೀತವಾಗಿ ಬೆಳೆದುನಿಲ್ಲುವ ದಿನವನ್ನು ಕಾಣಲು ನಾನು ಬದುಕಿ ಉಳಿಯುವುದಿಲ್ಲ’– ಎಂದು ಕಾವ್ಯಧರ್ಮದ ಬಗೆಗೆ ತಮ್ಮ ಗಾಢ ನಂಬಿಕೆಯನ್ನು ಪ್ರಕಟಿಸುತ್ತಾರೆ. 
ಅವರು ನೂರಾರು ಪುಸ್ತಕಗಳನ್ನು ರಚಿಸಿದ್ದಾರೆ. ಅವರಿಗೆ ನೂರಾರು ಪುರಸ್ಕಾರಗಳು ಸಿಕ್ಕಿವೆ. ತ್ರಿಲೋಕ ಸಂಚಾರಿ ಕವಿಯೊಬ್ಬನಿಗೆ ಕುಳಿತಲ್ಲಿಂದ ಕದಲದೆಯೇ ಅಮರ ಕಾವ್ಯ ರಚಿಸಿದ ಕವಿಯೊಬ್ಬನ ನೆನೆಪಿನಲ್ಲಿರುವ ಪುರಸ್ಕಾರ ಸಿಕ್ಕಿರುವಾಗ ನಾವೆಲ್ಲ ಕನ್ನಡಿಗರು ಸಂತಸ ಪಡಬೇಕಾಗಿದೆ.

‘ದಾದಾ’ ಎಂಬ ಪದಕ್ಕೆ ಕನ್ನಡದಲ್ಲಿ ಯಾವುದೇ ಅರ್ಥವಿರಲಿ, ಮರಾಠಿ ಮತ್ತು ಬಂಗಾಳಿಯಲ್ಲಿ ‘ದಾದಾ’ ಎಂಬುದು ಹಿರಿಯಣ್ಣ ಎಂಬ ಅರ್ಥದ ಅತ್ಯಂತ ಪ್ರೀತಿ ಮತ್ತು ಗೌರವಸೂಚಕ ಉಪಾಧಿ.  ಬಂಗಾಳಿಯಲ್ಲಂತೂ ಅದು ಇನ್ನೂ ಹ್ರಸ್ವಗೊಂಡು ಕೇವಲ ‘ದಾ’ ಆಗಿ ಉಳಿದಿದೆ. ಹಾಗಾಗಿ ಅವರು ಕೇರಳದ ಗಡಿ ದಾಟಿದ ದಾದಾ! ಇತ್ತೀಚೆಗೆ ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಅವರ ಕಾವ್ಯವಾಚನ ಕೇಳಿದ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದನ್ನು ಕೇಳಿದ ನನಗೆ ಯಾವ ಆಶ್ಚರ್ಯವೂ ಆಗಲಿಲ್ಲ. ದೇಶ ವಿದೇಶದಾದ್ಯಂತ ಅವರ ಕಾವ್ಯಕ್ಕಿರುವ ಇಂಥ ಅಸಂಖ್ಯಾತ ಅಭಿಮಾನಿಗಳೇ ಅವರ ಹೆಸರನ್ನು ನೊಬೆಲ್ ಪುರಸ್ಕಾರಕ್ಕೆ ನಾಮಾಂಕನಗೊಳಿಸುವುದು.

ಇಷ್ಟು ವರ್ಷಗಳಿಂದ –ಸುಮಾರು ಕಾಲು ಶತಮಾನ– ಇವರ ನೂರಾರು ಕವನ ವಾಚನಗಳನ್ನು ಕೇಳಿ, ಓದಿರುವ ಹಾಗೂ ಅವರು ತಮ್ಮ ಕಾವ್ಯದ ಕಾವನ್ನೂ ಕಂಪನ್ನೂ ಕಾಪಿಟ್ಟುಕೊಳ್ಳುವ ಬಗೆಯನ್ನು ಹತ್ತಿರದಿಂದಲೂ, ಮಾನಸಿಕ ದೂರದಿಂದಲೂ ಕಂಡ ನನ್ನ ಮನಸ್ಸಿಗೆ ಒಂದು ಚಿತ್ರ ಮೂಡಿಬರುತ್ತದೆ. ಮನೆಯ ಯಾವುದೋ ಒಂದು ಮೂಲೆಯಲ್ಲಿ ತನ್ನ ಕೈಗೆ ಸಿಕ್ಕ ನಾನಾ ಬಗೆಯ ವಸ್ತುಗಳನ್ನು, ಆಟಿಕೆಗಳನ್ನಿಟ್ಟುಕೊಂಡು ಯಾರ ಪರಿವೆಯೂ ಇಲ್ಲದೆ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಾ, ಹಲವು ಬಗೆಯ ಆಟಗಳನ್ನಾಡುತ್ತಿರುವ ಒಂಟಿ ಮಗು. ಯಾರಾದರೂ ಬಳಿಸಾರಿದರೆ ಏನಾದರೂ ಮಾತಾಡಿ, ಬರಿಗೈಯಲ್ಲೇ ಅವರಿಗೆ ಏನಾದರೂ ಕೊಟ್ಟೋ ಪಡೆದೋ, ಮುಂದಕ್ಕೆ ಕಳಿಸಿ ತನ್ನ ಆಟದ ಕಾಯಕಕ್ಕೆ ಹೊರಳಿಬಿಡುವ ಮಗು.

ಇತರ ಮಕ್ಕಳ್ಯಾರಾದರೂ ಇದನ್ನು ಸೇರಿಸಿಕೊಳ್ಳದಿದ್ದರೆ ತಕರಾರು ಮಾಡದೆ ಅವರ ಆಟವನ್ನು ದೂರದಿಂದಲೇ ನೋಡುತ್ತಲಿರುವ, ಹಾಗೆ ನೋಡುತ್ತಾ ಏನನ್ನೋ ಕಲಿಯುತ್ತಿರುವಂತೆ ಕಾಣುವ ಮಗು. ತನ್ನ ಜಗತ್ತಿನಲ್ಲೇ ತಲ್ಲೀನಗೊಂಡಿದ್ದರೂ ತನ್ನ ಆಟವನ್ನ ಮನೆಯವರೆಲ್ಲರೂ ನೋಡುತ್ತಿರಬೇಕೆಂಬ ಉತ್ಕಟ ಆಸೆಯುಳ್ಳ ಮಗು. ಅದು ಸ್ವಲ್ಪ ಅತಿಯಾಸೆಯಂತೆಯೂ ಒಮ್ಮೊಮ್ಮೆ ಕಾಣಿಸುವುದುಂಟು. ಅದು ಕವಿಯೊಬ್ಬನಿಗೆ ಇರಬೇಕಾದದ್ದು ಸರಿಯೇ. ಇದು ಅವರ ಮತ್ತು ಅವರ ಕಾವ್ಯಸಂಬಂಧ ಕುರಿತ ನನ್ನ ಕಲ್ಪನೆ. ಉಳಿದ ಅವರ ಲೌಕಿಕದ ವಿಚಾರ ಬೇರೆ.

ಸಚ್ಚಿದಾನಂದನ್ ಬಾಲ್ಯಕಾಲದ ಹಲವು ಪ್ರೇರಣೆ ಪ್ರಭಾವಗಳಿಂದ ಕವಿಯಾದವರು. ಕೇರಳದ ತಮ್ಮ ಹಳ್ಳಿಯಲ್ಲಿ ಬಿಡದೆ ಸುರಿಯುತ್ತಿದ್ದ ಮಳೆಯ ವೈವಿಧ್ಯಮಯ ಲಯವಿನ್ಯಾಸಗಳು, ಯಾವ ಅಡೆತಡೆಗಳಿಲ್ಲದಂತೆ ಸಮಯಕ್ಕೆ ತಕ್ಕ ಶಬ್ದಗಳನ್ನು ಸಮುದ್ರದ ಅಲೆಗಳೋಪಾದಿಯಲ್ಲಿ ನಿರಂತರವಾಗಿ ನೀಡುತ್ತಿರು ಸರಸ್ವತಿಯೆ ಎಂಬ ಮಲಯಾಳಂ ರಾಮಾಯಣದ ಕವಿಯ ಪ್ರಾರ್ಥನೆಯನ್ನು ಅವರು ಶಾಲಾ ಬಾಲಕನಾಗಿದ್ದಾಗಲೇ ಓದಿದ್ದರು. ಕಾಗೆ, ಬೆಕ್ಕು, ಮರಗಳ ಜೊತೆ ಮಾತಾಡುವುದನ್ನು ಅವರ ಅಮ್ಮ ಕಲಿಸಿದರು. ಅಚ್ಚನ್ (ಅಪ್ಪ) ದೇವ ದೇವಿಯರ ಜೊತೆಗೆ ಸಂವಹನ ಮಾಡುವುದನ್ನು ಕಲಿಸಿದರು. ಮತಿಭ್ರಮಣೆಯಾಗಿದ್ದ ಮುತ್ತಶ್ಶಿ (ಅಜ್ಜಿ) ನಿತ್ಯಸಾಮಾನ್ಯ ಜಗದ ಜಂಜಡಗಳಿಂದ ಪಲಾಯನಗೊಳ್ಳಲು ತಮಗಾಗಿ ಮತ್ತೊಂದು ಜಗತ್ತನ್ನೇ ಸೃಷ್ಟಿ ಮಾಡಿಕೊಳ್ಳುವುದನ್ನು ಕಲಿಸಿದರು. 

ಸಚ್ಚಿದಾನಂದನ್ ಅವರ ಆರಂಭದ ಕವಿತೆಯೊಂದರ ಹೆಸರು ‘ಅಜ್ಜಿ’: ‘ನನ್ನ ಅಜ್ಜಿ ಹುಚ್ಚಿ/ ಹಣ್ಣಾಯಿತು ಅವಳ ಹುಚ್ಚು ಸಾವಿನಲ್ಲಿ/ ನನ್ನ ಚಿಕ್ಕಪ್ಪ, ಜಿಪುಣ, ಅವಳನ್ನ ನಮ್ಮ ಉಗ್ರಾಣದಲ್ಲಿಟ್ಟ/ ಹುಲ್ಲಿನಿಂದ ಸುತ್ತಿ/ ಒಣಗಿ ನನ್ನಜ್ಜಿ ಸಿಡಿದು ಹೋದಳು/ ಅವಳ ಬೀಜಗಳು ಕಿಟಕಿಗಳಿಂದ ಹಾರಿ ಹೋದವು/ ಸೂರ್ಯ ಬಂದ ಮಳೆ ಬಂತು/ ಬೀಜವೊಂದು ಬೆಳೆದು ಆಯಿತೊಂದು ಮರವು/ ಅದರ ಆಸೆಯ ಫಲವೆ ನಾನು/ ಚಿನ್ನದ ಹಲ್ಲಿನ ಮಂಗಗಳ ಕುರಿತು/ ಹೇಗೆ ಬರೆಯದಿರಲಿ ಕವಿತೆ?’. ಅಜ್ಜಿಯೊಬ್ಬರಿಗೇ ಅಲ್ಲ, ಅವರ ಕುಟುಂಬದಲ್ಲಿ ಮೂವರು ಸ್ತ್ರೀಯರಿಗೆ ಮತಿಭ್ರಮಣೆಯಾಗಿತ್ತು.  ಈ ಸಂಗತಿ ತಮ್ಮ ಬಹುತೇಕ ಕವಿತೆಗಳಲ್ಲಿರುವ ಮತಿಭ್ರಮಣೆಯ ಆಚರಣೆ ಮತ್ತು ಮನುಷ್ಯತ್ವದ ಬಗ್ಗೆ ಇರುವ ಸಂದೇಹವನ್ನು ವಿವರಿಸುತ್ತದೆ ಎಂದು ಸಚ್ಚಿದಾನಂದನ್ ತಿಳಿಸುತ್ತಾರೆ. ಇದು ಅವರ ಬಾಲ್ಯಕಾಲದ ಅಂತರಂಗದ ಮತ್ತು ಮನೆಯೊಳಗಿನ ಜಗತ್ತು.

ಅವರ ಬಾಲ್ಯಕಾಲದ ಬಾಹ್ಯ ಜಗತ್ತಿನಲ್ಲಿ ಸುತ್ತಲೂ ಹರಡಿದ ಭತ್ತದ ಗದ್ದೆಗಳು, ಹೆಚ್ಚು ಮಳೆಯಾದಾಗ ಗದ್ದೆಗಳ ತುಂಬಾ ಹರಡಿದ ನೀರು, ಸುಗ್ಗಿಯ ನಂತರ ಎಲ್ಲೆಲ್ಲೂ ಬೆಳೆದು ನಿಲ್ಲುವ ನೀಲಿ ಹೂವಿನ ಗಿಡಗಳು, ಬೆಟ್ಟಗುಡ್ಡಗಳು, ಹೆಸರುಳ್ಳ, ಹೆಸರಿಲ್ಲದ ಬಳ್ಳಿಗಳು, ಹೂಗಳು, ಹಿನ್ನೀರು, ಹಿನ್ನೀರಿನ ಮೇಲೆ ಸಾಮಾನು ಸರಂಜಾಮು ಮತ್ತು ಜನರನ್ನು ಹೊತ್ತು ಹರಿದಾಡುವ ದೋಣಿಗಳು, ಸಣ್ಣಪುಟ್ಟ ದೇಗುಲಗಳು, ಮಸೀದಿ ಮತ್ತು ಚರ್ಚುಗಳು, ಅವುಗಳಲ್ಲಿ ಈಗಿರುವಂತಹ ದೆವ್ವಗಳಂತಲ್ಲದ ಹಲವಾರು ನಿಜದೇವರುಗಳು. ಪುಲ್ಲೂಟ್ ಎಂಬ ಅವರ ದೇಶದ (ಮಲಯಾಳಂನಲ್ಲಿ ಊರು ಅಥವಾ ಹಳ್ಳಿ) ಉತ್ತರ ಭಾಗ ಕಮ್ಯುನಿಸ್ಟರಿಂದಲೂ ದಕ್ಷಿಣ ಭಾಗ ಕಾಂಗ್ರೆಸ್ಸಿಗರಿಂದಲೂ ಕೂಡಿತ್ತು.

ಅವರ  ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಉತ್ತರ ಭಾಗದಲ್ಲಿದ್ದುವಾಗಿ, ಅಲ್ಲಿ ಇವರೊಬ್ಬ ಚಿಲ್ಟಾರಿ ಕಮ್ಯುನಿಸ್ಟ್! ಆದರೆ ಮನೆಯಲ್ಲಿ ಎಲ್ಲರೂ ಕಾಂಗ್ರೆಸ್! ದೇವರ ಕೋಣೆಗಳಲ್ಲಿದ್ದ ದೇವರುಗಳು ಕೂಡ ಒಂದಲ್ಲ ಒಂದು ಪಕ್ಷಕ್ಕೆ ಸೇರಿದವುಗಳೇ ಆಗಿದ್ದವು. ವ್ಯತ್ಯಾಸವೆಂದರೆ ಅವುಗಳು ತಮ್ಮ ಕೊರಳಲ್ಲಿ ಧರಿಸುತ್ತಿದ್ದ ರುಂಡಮಾಲೆಗಳು, ಕೈಯಲ್ಲಿ ಹಿಡಿದಿರುತ್ತಿದ್ದ ಖಡ್ಗ–ಭರ್ಜಿಗಳಿಂದಾಗಿ ಪಾರ್ಟಿ ಜನರಿಗಿಂತ ಸ್ವಲ್ಪ ಹೆಚ್ಚೇ ಉಗ್ರರಾಗಿ ಕಾಣುತ್ತಿದ್ದರೆಂದೂ, ಆಗಿನ ಅನುಭವಗಳು ಮತ್ತು ಆಗ ಮೂರು ತಿಂಗಳ ಕಾಲ ಸತತವಾಗಿ ಕಾಡಿದ ಜ್ವರದಿಂದಲೂ, ಚಿತ್ರ ಕಲಾವಿದ ಡಾಲಿ ಮಾದರಿಯ ದುಃಸ್ವಪ್ನಗಳು ತಮ್ಮ ಆರಂಭಿಕ ಕಾವ್ಯದ ಮೇಲೆ ದಟ್ಟವಾದ ಸರ್ರಿಯಲಿಸಂ ರೀತಿಯ ಪ್ರಭಾವವನ್ನುಂಟು ಮಾಡಿದವು ಎಂದು ಸಚ್ಚಿದಾನಂದನ್ ಬರೆದುಕೊಳ್ಳುತ್ತಾರೆ.

ಮಲಯಾಳಂ ಕಾವ್ಯ ಸಂಪ್ರದಾಯ ಮುಖ್ಯವಾಗಿ ಮೌಖಿಕವಾದದ್ದು. ಕವಿಯೊಬ್ಬ ತಾನು ರಚಿಸಿದ ಎಲ್ಲ ರಚನೆಗಳನ್ನೂ ಮುಖೋದ್ಗತ ಮಾಡಿಕೊಂಡು ಯಾವಾಗ ಬೇಕಾದರೂ ವಾಚಿಸುವ ಸಾಮರ್ಥ್ಯ ಪಡೆದವನಾಗಿರುತ್ತಾನೆ. ಮಲಯಾಳದಲ್ಲಿ ಅಯ್ಯಪ್ಪ ಪಣಿಕ್ಕರ್ ಅವರ ಮೂಲಕ ಪ್ರಾರಂಭವಾದ ನವ್ಯಕಾವ್ಯದ ಕಾಲದಲ್ಲೂ ಅಂಥ ಮುಖೋದ್ಗತ ಕಾವ್ಯ ವಾಚನ ಮತ್ತು ರಚನೆ ಕಡಮನಿಟ್ಟ ರಾಮಕೃಷ್ಣ, ಓ.ಎನ್.ವಿ. ಕುರುಪ್, ವಿನಯಚಂದ್ರನ್ ಮುಂತಾದವರು ಮೂಲಕ ರೂಢಿಯಲ್ಲಿದ್ದೇ ಇತ್ತು.  ಈಗಲೂ ಇದೆ.

ಹಾಗೆ ರಚನೆಗಳನ್ನು ಪಠ್ಯದ ಸಹಾಯವಿಲ್ಲದೆ ಓದದಿದ್ದರೆ ಆತ ಕವಿಯೇ ಅಲ್ಲವೆಂಬ ನಂಬಿಕೆ ಮಲಯಾಳದಲ್ಲಿನ್ನೂ ಮರೆಯಾಗಿಲ್ಲ. ಹಾಗಾಗಿಯೇ ಅಯ್ಯಪ್ಪ ಪಣಿಕ್ಕರ್, ಸಚ್ಚಿದಾನಂದರಂತಹ ನವ್ಯಾತಿನವ್ಯ ಕವಿಗಳೂ ಕೂಡ ತಮ್ಮ ಕೆಲವು ರಚನೆಗಳನ್ನು ಆ ಸಂಪ್ರದಾಯದಲ್ಲಿ ಮಾಡಿದ್ದುಂಟು, ಹಾಡಿದ್ದುಂಟು. ಎಳವೆಯಲ್ಲಿ ಸಚ್ಚಿದಾನಂದನ್ ಇಂಥ ಕಾವ್ಯ ರಚನೆಗಳಲ್ಲಿ ತೊಡಗಿದ್ದು ಅವುಗಳನ್ನು ಶಾಲಾ ಮ್ಯಾಗಜೈನುಗಳಲ್ಲಿ ಪ್ರಕಟಿಸುತ್ತಿದ್ದರು. 

ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಚ್ಚಿದಾನಂದನ್, ಮಲಯಾಳಂ ಮತ್ತು ಇಂಗ್ಲಿಷ್ ಸಾಹಿತ್ಯ, ಅನುವಾದಗಳಲ್ಲಿ ಇತರ ಭಾರತೀಯ ಭಾಷೆಗಳ ಸಾಹಿತ್ಯವನ್ನು ಓದಿಕೊಂಡವರು. ಮಾರ್ಕ್ಸ್ ವಾದ, ನಕ್ಸಲ್ ವಾದ, ಅಸ್ತಿತ್ವವಾದ, ರಾಯ್ ಅವರ ಮಾನವತಾವಾದ ಮುಂತಾದ ರಾಜಕೀಯ ಸಿದ್ಧಾಂತಗಳನ್ನು ಸಹಜವಾಗಿಯೇ ಬೆನ್ನು ಹತ್ತಿದವರು. ಯೇಟ್ಸ್, ಟಿ.ಎಸ್. ಎಲಿಯಟ್, ಜೇಮ್ಸ್ ಜಾಯ್ಸ್ ಮುಂತಾದ ಆಧುನಿಕ ಲೇಖಕರ ಪ್ರಭಾವಕ್ಕೊಳಗಾದವರು. ಅಯ್ಯಪ್ಪ ಪಣಿಕ್ಕರ್ ಸಂಪಾದಿಸುತ್ತಿದ್ದ ಸಾಹಿತ್ಯಕ ಪತ್ರಿಕೆ ‘ಕೇರಳ ಕವಿತ’ ಆಧುನಿಕ ಮಲಯಾಳಂ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾದದ್ದು.

ಆ ಪತ್ರಿಕೆಗಾಗಿ ಸಚ್ಚಿದಾನಂದನ್ ಜಗತ್ತಿನ ಬೇರೆಬೇರೆ ಭಾಷೆಗಳ ಕಾವ್ಯವನ್ನು ಮಲಯಾಳಂ ಭಾಷೆಗೆ ಅನುವಾದಿಸಿದರು. ಆಗ ಅವರ ತಲೆಮಾರಿನ ಎಲ್ಲ ಮಲಯಾಳಂ ಬುದ್ಧಿಜೀವಿಗಳ ಹಾಗೂ ಲೇಖಕರ ಜ್ಞಾನ ದಿಗಂತವನ್ನು ವಿಸ್ತರಿಸಿದವರು ಹಿರಿಯ ಕವಿ ಮತ್ತು ಬುದ್ಧಿಜೀವಿಯಾಗಿದ್ದ ಎಂ. ಗೋವಿಂದನ್. ಅವರು ಮದರಾಸು ಮತ್ತು ಕೇರಳದಲ್ಲಿ ವಾಸಿಸುತ್ತಿದ್ದರು. ಅವರು ಬೆಂಗಳೂರಿಗೂ ಆಗಾಗ ಬಂದುಹೋಗುತ್ತಿದ್ದರು. ಹಾಗೆ ಬಂದಾಗ ಅವರು ಮೆಜೆಸ್ಟಿಕ್‌ನಲ್ಲಿದ್ದ ಅವರ ಸ್ನೇಹಿತರೊಬ್ಬರ ಹೋಟೆಲ್ (ಇಂಡಿಯಾ ಹೋಟೆಲ್)ನಲ್ಲಿ ಉಳಿದುಕೊಳ್ಳುತ್ತಿದ್ದರು. ಎಪ್ಪತ್ತರ ದಶಕದಲ್ಲಿ ಡಿ.ಆರ್. ನಾಗರಾಜ್‌, ಸಿದ್ದಲಿಂಗಯ್ಯ ಮುಂತಾಗಿ ನಾವೆಲ್ಲ ಗೆಳೆಯರು ಅವರನ್ನು ಅಲ್ಲಿ ಭೆಟ್ಟಿಯಾಗುತ್ತಿದ್ದೆವು. 

ಅರವತ್ತರ ದಶಕದಲ್ಲಿ ಕನ್ನಡದಲ್ಲಿನ ಹಾಗೆಯೇ ಮಲಯಾಳಂ ಕಾವ್ಯದಲ್ಲಿ ಕೂಡ ಪರಿವರ್ತನೆಯಾಗುತ್ತಿತ್ತು. ಕಾವ್ಯದ ವಸ್ತು, ರೂಪಗಳಲ್ಲಿ ಸಂಕ್ರಮಣ ಸ್ಥಿತಿ ಕಾಣತೊಡಗಿತು. ಕಾವ್ಯ ಹೊಸ ಭಾಷೆ, ಲಯ, ರೂಪಕಗಳ ಪ್ರಯೋಗಕ್ಕೆ ಸಿದ್ಧಗೊಳ್ಳತೊಡಗಿತು. ಎಪ್ಪತ್ತರ ದಶಕದಲ್ಲಿ ವಿಶೇಷವಾಗಿ ಕೇರಳದಲ್ಲಿ ಎಡಪಂಥೀಯ ವಿಚಾರಧಾರೆಯ ಲೇಖಕರು ಮತ್ತು ರಾಜಕೀಯ ಉತ್ಸಾಹಿಗಳು ಅನೇಕ ರೀತಿಯ ದುರಂತಗಳನ್ನು ಅನುಭವಿಸಿ, ಹುತಾತ್ಮರಾದರು. ಸಚ್ಚಿದಾನಂದನ್ ಆ ಮಾರ್ಗದಲ್ಲಿ ಎಷ್ಟು ಸಕ್ರಿಯರಾಗಿದ್ದರೋ ಅಷ್ಟೇ ವಿಮರ್ಶಾತ್ಮಕ ದೂರವನ್ನು ಕಾಪಾಡಿಕೊಂಡು ತಮ್ಮ ಕಾವ್ಯದ ಜೀವಸತ್ವವನ್ನುಳಿಸಿಕೊಂಡರು.

‘ಉತ್ತರಮ್’ ಮತ್ತು ‘ಪಚ್ಚಕುದಿರ’ ( ಹಸಿರು ಕುದುರೆ) ಎಂಬ ಸಾಹಿತ್ಯಕ ಪತ್ರಿಕೆಗಳನ್ನು ಪ್ರಾರಂಭಿಸಿ ಸಂಪಾದಿಸತೊಡಗಿದರು. ಅವುಗಳ ಮೂಲಕ ಮಾನವ ಹಕ್ಕುಗಳು, ಮಹಿಳಾಮುಕ್ತಿ, ಪರಿಸರ ಹೋರಾಟ, ಆದಿವಾಸಿ ಮತ್ತು ದಲಿತ ವಿಷಯಗಳನ್ನು ಸಾಹಿತ್ಯ, ಕಲೆ, ಅನುವಾದ ಇತ್ಯಾದಿಗಳ ಜೊತೆಗೆ ಬೆಸೆಯುವ ಕಡೆ ಒತ್ತುಕೊಟ್ಟರು. ಆನಂತರ ಅಯ್ಯಪ್ಪ ಪಣಿಕ್ಕರ್ ಅವರ ಸಲಹೆ ಮತ್ತು ಸಹಾಯದ ಮೂಲಕ ಸಾಹಿತ್ಯ ಅಕಾದೆಮಿಯ ‘ಇಂಡಿಯನ್ ಲಿಟರೇಚರ್’ ಪತ್ರಿಕೆಯ ಸಂಪಾದಕ ಹುದ್ದೆಯನ್ನು ಪಡೆದು ದಿಲ್ಲಿಯಲ್ಲಿ ನೆಲಸಿದರು.

ಕೆಲವರ್ಷಗಳ ನಂತರ ಅಕಾದೆಮಿಯ ಕಾರ್ಯದರ್ಶಿಯೂ ಆಗಿ ನಿವೃತ್ತರಾದರು. ದಿಲ್ಲಿಯ ಬದುಕು ಯಾರಿಗೇ ಆಗಲಿ ಹೊಸ ಅನುಭವಗಳನ್ನೂ, ಹೊಸ ಬದುಕನ್ನೂ ನೀಡುವಂತಹ ವಿರಾಟ್ ನಗರ. ಅಲ್ಲಿಯ ಗಾಳಿ, ನೀರು ಒಗ್ಗಿದರೆ ಅಲ್ಲಿಗೆ ಹೋದವರು ಹಿಂತಿರುಗದೆ ತಮ್ಮ ಮೂಲ ನೆಲೆಗಳನ್ನು ಮರೆತುಬಿಡುತ್ತಾರೆ. ಆದರೆ ಸಚ್ಚಿ ಮಾಸ್ಟರ್ ಅವರಿಗೆ ಕೇರಳದಲ್ಲಿ ಸದಾ ಬೇಡಿಕೆಯಿದ್ದೇ ಇರುತ್ತದೆ. ಹಾಗಾಗಿ ತಮ್ಮ ನೆಲಜಲದ ಜೊತೆಗೆ ಅವರು ಸಂಪರ್ಕವನ್ನು ಕಡಿದುಕೊಳ್ಳಲಿಲ್ಲ. 

ಅವರು ಮಲಯಾಳಂನಲ್ಲಿ ಬರೆಯುವ ಭಾರತೀಯ ಕವಿಯಾಗಿ ಜಗತ್ತಿನ ಅನೇಕ ದೇಶಗಳಲ್ಲಿ ಪರಿಚಿತರಷ್ಟೆ ಅಲ್ಲ ಪ್ರಸಿದ್ಧರಾಗಿದ್ದಾರೆ. ಅನೇಕ ವಿದೇಶಿ ಭಾಷೆಗಳಲ್ಲಿ ಅವರ ಕಾವ್ಯ ಅನುವಾದಗೊಂಡಿದೆ. ಆಧುನಿಕ ಕಾವ್ಯವನ್ನು ಕುರಿತ ಅವರ ಪುಸ್ತಕ ‘ಕುರುಕ್ಷೇತ್ರಮ್’ ಪ್ರಕಟಗೊಂಡ ನಂತರ ೧೯೭೧ರಲ್ಲಿ ‘ಅಂಜುಸೂರ್ಯನ್’ ಎಂಬ ಮೊದಲ ಕವಿತಾ ಸಂಕಲನ ಪ್ರಕಟವಾಯಿತು.  ಆನಂತರ ಅವರು ಹಿಂತಿರುಗಿ ನೋಡಲಿಲ್ಲ. ಹೆಚ್ಚುಕಡಿಮೆ ಪ್ರತಿ ಎರಡು ವರ್ಷಗಳಿಗೊಂದರಂತೆ ತಮ್ಮ ಕವಿತಾ ಸಂಕಲಗಳನ್ನು ಪ್ರಕಟಿಸುತ್ತಿದ್ದಾರೆ. ನನಗೆ ತಿಳಿದಂತೆ ಭಾರತೀಯ ಭಾಷೆಗಳಲ್ಲಿ ಬರೆಯುವ ಕವಿಯೊಬ್ಬನ ಮುಖ್ಯ ಕವಿತೆಗಳೆಲ್ಲವೂ ಇಂಗ್ಲಿಷಿನಲ್ಲಿ ಅನುವಾದಗೊಳ್ಳುವುದು ತುಂಬ ಅಪರೂಪ ಹಾಗೂ ಅಸಾಧ್ಯ.

ಈ ವಿಷಯದಲ್ಲಿ ಸಚ್ಚಿದಾನಂದನ್ ತುಂಬ ಅದೃಷ್ಟಶಾಲಿ. ಸ್ವತಃ ಅವರೇ ಇಂಗ್ಲಿಷ್ ಭಾಷೆಯನ್ನು ಕರಗತ ಮಾಡಿಕೊಂಡಿರುವವರು. ಹಾಗಾಗಿ ಜಗತ್ತಿನಾದ್ಯಂತ ತಮ್ಮ ಕಾವ್ಯಪ್ರೇಮಿಗಳನ್ನು ಸಂಪಾದಿಸಿಕೊಂಡಿದ್ದಾರೆ. ‘ನಾಯಿ ಮೂತ್ರ ಮಾಡುತ್ತಾ ತನ್ನ ದಾರಿ/ ಗುರುತು ಮಾಡುವಂತೆ ನಾನು/ ಬದುಕಿನ ವಾಸನೆ ಇರುವ ಶಬ್ದಗಳಿಂದ/ ನನ್ನ ದಾರಿ ಗುರುತು ಮಾಡುತಿರುವೆ/ ಅಷ್ಟೇ.../ ತಾಯಿಬೆಕ್ಕು ಬಾಯಲ್ಲಿ ತನ್ನ ಮರಿಗಳ/ ಕಚ್ಚಿಕೊಂಡು ಬೇರೆ ಮನೆಗಳಿಗೆ/ ಒಯ್ಯುವಂತೆ ನಾನು ನನ್ನ/ ಕವಿತೆಗಳನ್ನ ಬೇರೆ ನುಡಿಗಳಿಗೆ ಒಯ್ಯುತಿರುವೆ/ ಅಷ್ಟೇ..../’. ಸಚ್ಚಿದಾನಂದನ್ ಕೇವಲ ತಮ್ಮ ಕಾವ್ಯವನ್ನು ಮಾತ್ರ ಅನುವಾದಿಸಿದವರಲ್ಲ. ಪಾಬ್ಲೋ ನರೂಡ ಮತ್ತು ಸೀಜರ್ ವಲ್ಲೆಜೊ ಮುಂತಾದ ಲ್ಯಾಟಿನ್ ಅಮೆರಿಕಾದ ಕವಿಗಳ, ಸೆಂಘೊರ್ ಮತ್ತು ಡೇವಿಡ್ ಡಿಯೊರಂಥ ಕಪ್ಪು ಕವಿಗಳ ಹಾಗೂ ಯುರೋಪಿನ ಕವಿಗಳ ಕಾವ್ಯವನ್ನು ಅನುವಾದಿಸಿ ಮಲಯಾಳಂ ಭಾಷೆಯನ್ನು ಸಮೃದ್ಧಗೊಳಿಸಿದ್ದಾರೆ.

ಸಚ್ಚಿದಾನಂದನ್ ಅವರ ಕಾವ್ಯದ ವಸ್ತು ವೈವಿಧ್ಯಮಯವಾದುದು. ಅದರ ಬಗ್ಗೆ ಅವರನ್ನೇ ಒತ್ತಾಯಿಸಿ ಕೇಳಿದರೆ, ‘ನನ್ನ ಕಾವ್ಯದ ವಸ್ತು ನ್ಯಾಯ, ಸ್ವಾತಂತ್ರ್ಯ, ಪ್ರೇಮ, ನಿಸರ್ಗ, ಭಾಷೆ ಮತ್ತು ಸಾವು’ ಎನ್ನುತ್ತಾರೆ. ದೇಸಿ ಮತ್ತು ಮಾರ್ಗ ಸಂಪ್ರದಾಯಗಳು, ವಿವಿಧ ಭಾರತೀಯ ಮತ್ತು ಜಾಗತಿಕ ಕಾವ್ಯ ಮಾದರಿಗಳು ಮತ್ತು ಪ್ರವಾಸ, ಚಿತ್ರಕಲೆ, ಸಂಗೀತ, ಸಿನಿಮಾ ಮುಂತಾದ ಇತರ ಕಲಾಪ್ರಕಾರಗಳಿಂದಲೂ ತಮ್ಮ ಕಾವ್ಯವನ್ನು ಸಮೃದ್ಧಿಗೊಳಿಸಿಕೊಳ್ಳುತ್ತಾರೆ. ಭಾಷೆ ಅವರ ಕಾವ್ಯದ ವಸ್ತುವಾಗಿ ಹಲವಾರು ಕವಿತೆಗಳಲ್ಲಿ ಅಭಿವ್ಯಕ್ತಿ ಪಡೆದಿದೆ

. ‘ಉಗ್ಗು’ ಅಂತಹ ಒಂದು ಕವಿತೆ: ‘ಉಗ್ಗುವಿಕೆ ವಿಕಲತೆಯಲ್ಲ/ ಅದೂ ಮಾತಿನೊಂದು ಬಗೆ/ ಶಬ್ದ ಮತ್ತು ಅದರರ್ಥ ನಡುವಿನ/ ನಿಶಬ್ದವೆ ಉಗ್ಗು/ ಶಬ್ದ ಮತ್ತು ಅದರ ಕೆಲಸದ/ ನಡುವಿನ ಕುಂಟುತನವಿದ್ದ ಹಾಗೆ/ಭಾಷೆ ಮೊದಲೋ, ಉಗ್ಗು ಮೊದಲೋ ?/ ಅದೇ ಒಂದು ಭಾಷೆಯೊ ಅಥವಾ/ ಅದೊಂದು ಕೇವಲ ಉಪಭಾಷೆಯೋ?/ ಈ ಪ್ರಶ್ನೆಗಳು ಮಾಡುವವು/ ಭಾಷಾಶಾಸ್ತ್ರಿಗಳು ಉಗ್ಗುವಂತೆ/ ಪ್ರತಿ ಬಾರಿ ನಾವು ಉಗ್ಗಿದಾಗಲೂ/ ಅದು ಅರ್ಥದ ದೇವರಿಗೆ ನಾವು/ ಅರ್ಪಿಸುವ ತ್ಯಾಗ/ ಇರುವ ಜನರೆಲ್ಲರೂ ಉಗ್ಗಿದರೆ/ ಈಗ ನಮಗಿರುವಂತೆ/ ಉಗ್ಗೇ ಆಗುವುದವರ ಮಾತೃಭಾಷೆ/ ಉಗ್ಗಿದ್ದಿರಬೇಕು ದೇವರೂ/ ಅವನು ಮನುಷ್ಯನನ್ನು ಸೃಷ್ಟಿಸುವಾಗ/ ಅದಕ್ಕೇ ಇರಬೇಕು ಮನುಷ್ಯನಾಡುವ ಪ್ರತಿಯೊಂದು/ ಶಬ್ದವೂ ಕೊಡುವುದು ಬೇರೆಬೇರೆ ಅರ್ಥ/ ಅದಕ್ಕೇ ಅವನ ಪ್ರಾರ್ಥನೆಗಳೂ, ಅವನ ಆಜ್ಞೆಗಳೂ/ ಅವನಾಡಿದ್ದೆಲ್ಲವೂ ಉಗ್ಗುವಿಕೆಯೇ/ ಕಾವ್ಯ ಇದ್ದ ಹಾಗೆ’.

ಲೇಖನದ ಮೊದಲಲ್ಲಿ ಆಟದಲ್ಲಿ ಮಗ್ನವಾದ ಮಗುವಿನ ಚಿತ್ರ ಕೊಟ್ಟೆ. ‘ಅವರ ಬಗ್ಗೆ ಬರೆಯಿರಿ’ ಎಂದು ಕೇಳಿದ ತಕ್ಷಣ ನನ್ನ ಮನಸ್ಸಿನಲ್ಲಿ ಮೂಡಿದ ಭಾವನೆ ಅದು. ಸದಾ ಕಾವ್ಯಲೋಕದಲ್ಲೆ ವಿಹರಿಸುತ್ತಾ ತಮ್ಮ ಕವಿತೆಗಳನ್ನ ಎಲ್ಲ ರೀತಿಯಲ್ಲೂ ಪಾಲನೆ ಪೋಷಣೆ ಮಾಡುವ, ಎಲ್ಲರ ಮನೆಗಳಿಗೂ ಒಯ್ಯುವ, ಮಲಯಾಳಿಗಳೂ ಒಳಗೊಂಡಂತೆ ಕೆಲವರು, ‘ತುಂಬಾ ಬರೆಯುತ್ತಾರೆ’ (ಕುವೆಂಪು ಬಗೆಗೂ ಜನರಾಡಿದ್ದುಂಟು! ) ಎಂದು ಕೊಂಕಿದರೂ ತಮ್ಮ ಕವಿತೆಗಳನ್ನ ಕಾವ್ಯರಸಿಕರಿಗೆ ಮುಟ್ಟಿಸುವ ಎಲ್ಲ ಮಾರ್ಗಗಳನ್ನೂ ಬಿಡದೆ, ಹಟಮಾರಿಯ ರೀತಿಯಲ್ಲಿ ಹಿಡಿದಿರುವ ಅವರನ್ನು ಕಂಡಿರುವ ನನಗೆ ಅನಿಸಿದ ಭಾವನೆ.

ಸಚ್ಚಿದಾನಂದನ್, ಕಾವ್ಯವೆಂಬುದು ಕೇವಲ ಸಂಯೋಜನೆಗೊಳಿಸುವ ಆಟವಲ್ಲ, ಅದು ದನಿಯಿಲ್ಲದವರಿಗೆ ದನಿ ನೀಡುವ, ಹೆಸರಿಲ್ಲದವರಿಗೆ ಹೆಸರಿಡುವ, ಹೇಳಲಾರದ ಆಳ ಕಡಲಿನಿಂದ ಮೇಲೆದ್ದು ಬರುವಂಥದು. ಅದು ಕೇವಲ ಈಗಾಗಲೇ ನೆಲೆಗೊಂಡ ಮೌಲ್ಯಗಳ ಮತ್ತು ಒಪ್ಪಿತ ಸತ್ಯಗಳ ಪುನರುಚ್ಛಾರವಲ್ಲವೆನ್ನುತ್ತಾರೆ.

ಕವಿಗೆ ಕಾವ್ಯವೇ ಧರ್ಮ, ಅನ್ಯಧರ್ಮಗಳು ಬೇಕಾಗಿಲ್ಲ, ‘ಆತ್ಮ ಮಾತನಾಡಲಾಗದ, ಜಲಧಾರೆಗಳ ಮತ್ತು ಎಲೆಗಳ ಭಾಷೆಯನ್ನು ಅರಿಯಲಾಗದ ಮನುಷ್ಯನ ಉಸಿರುಗಟ್ಟಿಸುವ ಮೌನ ಜಗತ್ತಿಗೆ ಮಾತ್ರ ನಾನು ಭಯಪಡುತ್ತೇನೆ. ಜಗತ್ತು ತನ್ನ ಪಾವಿತ್ರ್ಯತೆಯಿಂದ ವಂಚಿತವಾಗಿ, ಕೆಡುಕು ಪ್ರಶ್ನಾತೀತವಾಗಿ ಬೆಳೆದುನಿಲ್ಲುವ ದಿನವನ್ನು ಕಾಣಲು ನಾನು ಬದುಕಿ ಉಳಿಯುವುದಿಲ್ಲ’– ಎಂದು ಕಾವ್ಯಧರ್ಮದ ಬಗೆಗೆ ತಮ್ಮ ಗಾಢ ನಂಬಿಕೆಯನ್ನು ಪ್ರಕಟಿಸುತ್ತಾರೆ. 

ಅವರು ನೂರಾರು ಪುಸ್ತಕಗಳನ್ನು ರಚಿಸಿದ್ದಾರೆ. ಅವರಿಗೆ ನೂರಾರು ಪುರಸ್ಕಾರಗಳು ಸಿಕ್ಕಿವೆ. ತ್ರಿಲೋಕ ಸಂಚಾರಿ ಕವಿಯೊಬ್ಬನಿಗೆ ಕುಳಿತಲ್ಲಿಂದ ಕದಲದೆಯೇ ಅಮರ ಕಾವ್ಯ ರಚಿಸಿದ ಕವಿಯೊಬ್ಬನ ನೆನೆಪಿನಲ್ಲಿರುವ ಪುರಸ್ಕಾರ ಸಿಕ್ಕಿರುವಾಗ ನಾವೆಲ್ಲ ಕನ್ನಡಿಗರು ಸಂತಸ ಪಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT