ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಚೀನ ಕವಿಮಾರ್ಗದ ಜಿ. ವೆಂಕಟಸುಬ್ಬಯ್ಯ

ವ್ಯಕ್ತಿ
Last Updated 7 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

೧೯೦೦ರ ಆದಿಭಾಗಕ್ಕೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎಂ. ಶ್ರೀಕಂಠಯ್ಯನವರ ನೇರ ಶಿಷ್ಯರಾಗಿದ್ದ ಪ್ರೊ ಜಿ. ವೆಂಕಟಸುಬ್ಬಯ್ಯ ಅವರು ಬೆಂಗಳೂರಿಗೆ ಬಂದು ನೆಲೆಸಿ ನಿಡುಗಾಲ ಬಸವನಗುಡಿಯ ವಿಜಯ ಕಾಲೇಜಿನಲ್ಲಿ ಕನ್ನಡ ಭಾಷೆ-ಸಾಹಿತ್ಯವನ್ನು ಬೋಧಿಸಿದವರು. ನಾವು ಹತ್ತು-–ಹದಿನೈದು ಜನ ಕನ್ನಡ ಐಚ್ಛಿಕ ವಿದ್ಯಾರ್ಥಿಗಳಿಗೆ ಅವರ ಪುಟ್ಟ ಕೋಣೆಯಲ್ಲಿಯೇ ಪಾಠ. ೧೯೬೯ರ ಸುಮಾರಿನಲ್ಲಿ ನಮಗೆ ಪಂಪ, ರನ್ನ, ಕುಮಾರವ್ಯಾಸರ ಹಳಗನ್ನಡ ಪಠ್ಯಗಳನ್ನು ಜೀವಿ ಅವರು ಅಷ್ಟು ಸರಳ, ಸುಲಭ, ಸುಲಲಿತವಾಗಿ ಬೋಧಿಸುತ್ತಿದ್ದರ ಹಿನ್ನೆಲೆಯಾದರೂ ಏನು ಎಂದು ನಾನೊಮ್ಮೆ ಕೇಳಲಾಗಿ ಅವರು ಎಂಟು ದಶಕದ ಹಿಂದಿನ ಸಂಗತಿಯನ್ನು ನೆನಪಿಸಿಕೊಂಡರು.

   ತಂದೆ ತಿಮ್ಮಣ್ಣಯ್ಯ ಮಧುಗಿರಿಯಲ್ಲಿ ಅಧ್ಯಾಪಕರಾಗಿದ್ದು, ಸಂಸ್ಕೃತ ಕನ್ನಡವನ್ನು ಬಲ್ಲವರಾಗಿದ್ದರು. ವೇದಭಾಗದ ರುದ್ರಮಂತ್ರಗಳನ್ನು ಮಗನಿಗೆ ಬಾಲ್ಯದಲ್ಲೇ ಹೇಳಿಕೊಟ್ಟಿದ್ದರಂತೆ. ಒಮ್ಮೆ ಒಣ ಬಯಲು ಪ್ರದೇಶವಾದ ಮಧುಗಿರಿಯ ಸುತ್ತ ಮಳೆಯಾಗಲಿಲ್ಲ. ಊರಜನ ಮಲ್ಲೇಶ್ವರ ದೇವರಿಗೆ ರುದ್ರಾಭಿಷೇಕ ಮಾಡಬೇಕೆಂದುಕೊಂಡರು. ರುದ್ರಮಂತ್ರ ಹೇಳಲು ಊರೊಳಗೆ ಹತ್ತು ಜನರ ಮೇಲೆ ಸಿಗಲಿಲ್ಲ. ಆಗ ತಿಮ್ಮಣ್ಣಯ್ಯನವರು ಗುಡಿಯ ಅರ್ಚಕರಿಗೆ ರುದ್ರಮಂತ್ರ ಹೇಳಲು ಬೇಕಾದರೆ ತಮ್ಮ ಮಗನನ್ನೂ ಸೇರಿಸಿಕೊಳ್ಳಬಹುದೆಂದರಂತೆ. ‘ಮಂತ್ರಕ್ಕೆ ಮಳೆ ಬರುವುದೇ’ ಎಂದದ್ದಕ್ಕೆ ಜೀವಿ, ‘ಇದು ಎಲ್ಲರಂತೆ ನನಗೂ ಬಾಲ್ಯ ಕಾಲಕ್ಕೆ ಇದ್ದ ನಂಬಿಕೆಯಷ್ಟೆ. ಕಾಲೇಜಿ ನಲ್ಲಿ ತರ್ಕಶಾಸ್ತ್ರ ಓದಿದ ಮೇಲೆ ಅನೇಕಾನೇಕ ಮೂಢ ನಂಬಿಕೆಗಳು ದೂರವಾದವು’ ಎಂದರು. ಇದೇನೇ ಇರಲಿ ಬಾಲ್ಯ ಕಾಲದಲ್ಲೇ ಅಭ್ಯಾಸಗೊಂಡ ಮಂತ್ರೋಚ್ಛಾರಣೆಯ ಬಲವೇ ಜೀವಿಯವರ ಅಧ್ಯಾಪನದ ಉದ್ದಕ್ಕೂ ವಿದ್ಯಾರ್ಥಿಗಳನ್ನು ಆಕರ್ಷಿಸುವ ಮಾರ್ಗವಾಯಿತು. ಅವರ ಪಾಂಡಿತ್ಯದ ಮೂಲವೂ ಆಯಿತು.

ನನ್ನ ಬಾಲ್ಯಕಾಲದಲ್ಲಿ ಊರಗುಡಿಯಲ್ಲಿ ರೈತಾಪಿ ಗಮಕಿ ದುಂಡುಮಾದಯ್ಯನವರಿಂದ, ಪ್ರಾಥಮಿಕ ಶಾಲಾ ಉಪಾಧ್ಯಾಯ ಬಿಳಿಗಿರಿರಂಗಶೆಟ್ಟರಿಂದ ಕುಮಾರವ್ಯಾಸನನ್ನು ಕೇಳಿದ್ದುದು ನಿಜ. ಆಮೇಲೆ ಎಸ್ಸೆಸ್ಸೆಲ್ಸಿ ಪಾಸು ಮಾಡಿಕೊಂಡು ಬೆಂಗಳೂರು ವಿಜಯ ಕಾಲೇಜಿಗೆ ಬಂದರೆ ಅಲ್ಲಿ ಸೂಟುಧಾರಿಯಾಗಿ, ನಿತ್ಯವೂ ಪುಟ್ಟ ಕಾರೊಂದರಲ್ಲಿ ಕಾಲೇಜಿಗೆ ಟ್ರಿಮ್ಮಾಗಿ ಬರುತ್ತಿದ್ದ ಜೀವಿ ಅವರ ಧ್ವನಿಯಲ್ಲೂ ಅದೇ ಕುಮಾರವ್ಯಾಸನ ಕಥಾಭಾಗದ ವಿಶ್ಲೇಷಣೆ. ಒಂದು ವರ್ಷದ ಪಿಯುಸಿ ತರಗತಿಯಲ್ಲಿ ಜೀವಿಯವರು ಭಾರತ ಕಥಾ ಮಂಜರಿಯಿಂದ ಆಯ್ದ ಕರ್ಣ-ಕರ್ಣಾಮೃತ ಪಾಠ ಮಾಡುತ್ತಿದ್ದರು. ಅದು ಇಡೀ ತರಗತಿಯ ವಿದ್ಯಾರ್ಥಿಗಳಿಗೆಲ್ಲ ಕರ್ಣಾಮೃತವೇ ಆಗಿದ್ದಿತು. ಎಲ್ಲ ಆದ ಮೇಲೆ ವರ್ಷದ ಕೊನೆಯಲ್ಲಿ ಕನ್ನಡ ಐಚ್ಛಿಕ ಆನರ್‍್ಸ್ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ ಕ್ರಮವೇ ಕುತೂಹಲಕರವಾಗಿತ್ತು.

ಒಂದು ದಿನ ಜೀವಿ ತರಗತಿಗೆ ಬಂದವರೇ ‘ಎಲ್ಲಿ, ನೀವೆಲ್ಲರೂ ನಿಮಗೆ ಅನಿಸಿದ ಮೂರ್ನಾಲ್ಕು ಸಾಲು ಪದ್ಯ ಇಲ್ಲವೇ ಯಾವುದಾದರೂ ಘಟನೆಯ ಒಂದು ಪ್ಯಾರಾ ಬರೆಯಿರಿ’ ಎಂದರು. ತರಗತಿಯ ಎಲ್ಲರ ಬರಹವನ್ನೂ ಪರೀಕ್ಷಿಸಿ ಹತ್ತು ಹದಿನೈದು ವಿದ್ಯಾರ್ಥಿಗಳನ್ನು ತಮ್ಮ ಕೋಣೆಗೆ ಆಹ್ವಾನಿಸಿ ‘ನೀವೇಕೆ ಕನ್ನಡ ಓದಬಾರದು, ಆ ಸಬ್ಜೆಕ್ಟ್ ಚೆನ್ನಾಗಿರುತ್ತದೆ’ ಎಂದರು. ಕನ್ನಡ ಐಚ್ಛಿಕಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪಂಪ, ರನ್ನ, ಕೇಶಿರಾಜಾದಿಗಳನ್ನು ಮನನ ಮಾಡಿಸಿದ್ದಷ್ಟೇ ಅಲ್ಲ, ಕಪ್ಪು ಹಲಗೆಯ ಮೇಲೆ ಶಾಸನದ ಪದ್ಯಗಳನ್ನು ಸಾಲು ಸಾಲಾಗಿ ಬರೆದು, ‘ಈ ಶಾಸನ ವಾಕ್ಯ ಯಾವ ಛಂದಸ್ಸಿನಲ್ಲಿದೆ ಹುಡುಕಿ’ ಎಂದು ವಿದ್ಯಾರ್ಥಿಗಳನ್ನು ಕೇಳುತ್ತಿದ್ದರು. ಆ ಕಾಲದ ಎಲ್ಲರಂತೆ ಜೀವಿಯವರೂ ಮೈಸೂರು ಭಾಗದ ಶ್ರೀರಂಗಪಟ್ಟಣದ ಕಡೆಯ ಗಂಜಾಂನಿಂದ ಬಂದವರು. ಅವರ ತಾತ ಆದಾಯವಿಲ್ಲದ ಆಂಜನೇಯನ ಗುಡಿಯ ಅರ್ಚಕರು. ಆದರೆ ತಂದೆ ತಿಮ್ಮಣ್ಣಯ್ಯನವರು ಓದಿ ಶಾಲಾ ಅಧ್ಯಾಪಕರಾದರು. ತಿಮ್ಮಣ್ಣಯ್ಯನವರು ಹದಿನೆಂಟು ಪುರಾಣಗಳ ಕಥಾ ಸಾರವನ್ನು ಬರೆದು ಪ್ರಕಟಿಸಿ ಜನ ಓದಲೆಂದು ಹಂಚಿದರು. ಅದರಿಂದೇನೂ ದ್ರವ್ಯ ಲಾಭವಾಗಲಿಲ್ಲವಂತೆ.

ಒಮ್ಮೆ ನಾವೆಲ್ಲ ವಿಜಯ ಕಾಲೇಜಿನಲ್ಲಿದ್ದಾಗ ಒಂದು ಅನಿರೀಕ್ಷಿತ ಸಭೆಯಲ್ಲಿ ಜೀವಿಯವರು ಅರ್ಧ ಗಂಟೆ ನಿರರ್ಗಳವಾಗಿ ಇಂಗ್ಲಿಷಿನಲ್ಲಿ ಮಾತನಾಡಿದರು. ನಮಗೆಲ್ಲ ಆಶ್ಚರ್ಯ ಮತ್ತು ಹೆಮ್ಮೆ. ಆ ಕಾಲದ ಕನ್ನಡ ವಿದ್ವಾಂಸರೆಂದರೆ ಅವರಿಗೆ ಕನ್ನಡದಷ್ಟೇ ಸರಾಗವಾಗಿ ಇಂಗ್ಲಿಷ್, ಸಂಸ್ಕೃತ ಬರಬೇಕಿತ್ತಲ್ಲ. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ತೀನಂಶ್ರೀಯವರ ಪಾಂಡಿತ್ಯವಿದ್ದುದು ಹಾಗೇ ತಾನೆ. ಅದಾಗ ಜೀವಿಯವರು ಮಳವಳ್ಳಿ ಕಡೆಯ ಬನ್ನೂರಿನಲ್ಲಿ ಲೋಯರ್ ಸೆಕೆಂಡರಿ ಕನ್ನಡ ತರಗತಿ ಮುಗಿಸಿದರಂತೆ.

ತಂದೆಯವರಿಗೆ ಮಧುಗಿರಿಗೆ ವರ್ಗವಾಗಿ ಅಲ್ಲಿ ಹೈಯರ್ ಸೆಕೆಂಡರಿಗೆ ಸೇರಬೇಕಾದಲ್ಲಿ ಇಂಗ್ಲಿಷ್ ಬರಬೇಕಾಗಿದ್ದಿತು. ಜೀವಿಯವರಿಗೆ ಇಂಗ್ಲಿಷ್ ಬರದೇ ಹೋದ ಕಾರಣ ಶಾಲೆಗೆ ಸೇರದೆ ಒಂದು ವರ್ಷ ಮನೆಯಲ್ಲೇ ಇರಬೇಕಾಯಿತು. ಆ ಒಂದು ವರ್ಷ ಜೀವಿ ಸತತವಾಗಿ ಇಂಗ್ಲಿಷ್ ವ್ಯಾಕರಣ, ಭಾಷೆ ಕಲಿತರಂತೆ. ಮುಂದೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ತಮ್ಮ ಇಂಗ್ಲಿಷ್ ಪರಿಣತಿ ಪ್ರಬುದ್ಧಗೊಂಡದ್ದನ್ನು ಜೀವಿ ನೆನೆಯುವುದುಂಟು.

ವಿಜಯ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಿದ್ದ ಜೀವಿ ಅನೇಕ ಬಾರಿ ಸಹಜವಾಗಿಯೇ ಇಂಗ್ಲಿಷ್ ಭಾಷೆಯನ್ನು ಕನ್ನಡದಂತೆಯೇ ಪ್ರಯೋಗಿಸುತ್ತಿದ್ದರು. ಅವರ ಇಂಗ್ಲಿಷ್, ಕನ್ನಡ ಪಾಂಡಿತ್ಯ, ವಸ್ತ್ರವಿನ್ಯಾಸ ಮತ್ತು ಪುಟ್ಟ ಕಾರು ಇದನ್ನೆಲ್ಲ ಕುರಿತು ಅವರು ಹೇಳುತ್ತಿದ್ದುದೆಂದರೆ ಕನ್ನಡ ಎಂಬುದು ಘನತೆಯ ವಿಷಯವಾಗಬೇಕು. ಅದು ಎಲ್ಲವನ್ನು ಜೀರ್ಣಿಸಿಕೊಳ್ಳಬೇಕು. ಯಾವುದೇ ಬಗೆಯ ಕೀಳರಿಮೆ ಸಲ್ಲದು ಎನ್ನುತ್ತಿದ್ದರು.

ಪ್ರಾಚೀನ ಕನ್ನಡ ಪರಂಪರೆಯ ನಿಘಂಟು ಆಗಿರುವ ಜೀವಿಯವರು ತರಗತಿಗಳಲ್ಲಿ ಪದ್ಯ ಓದುವುದೆಂದರೆ, ವ್ಯಾಖ್ಯಾನ, ವಿಶ್ಲೇಷಣೆ ಎಂದರೆ ಆಪ್ಯಾಯಮಾನ ಅನುಭವ. ಅದೇ ಪಾಂಡಿತ್ಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೂ ಬಳಕೆಯಾಯಿತು. ಸಾವಿರಾರು ವಿದ್ಯಾರ್ಥಿಗಳು ಅವರಿಂದ ಹಳಗನ್ನಡದ ಸ್ವಾರಸ್ಯವನ್ನು ಕೇಳಿಸಿಕೊಂಡರು. ಇದೀಗ ಅವರಿಗೆ ಮಹಾಕವಿ ಪಂಪನ ಹೆಸರಿನ ಪ್ರಶಸ್ತಿ ಸಂದಾಯವಾಗಿದೆ. ತನ್ನ ಕಾಲದ ಕನ್ನಡವನ್ನು ಅಸಂಖ್ಯಾತ ವಿದ್ಯಾರ್ಥಿಗಳಿಗೆ ತಲುಪಿಸಿದ ಸಂಗತಿಯಿಂದ ತನ್ನ ಹೆಸರಿನ ಪ್ರಶಸ್ತಿ ಸಂದದ್ದರಿಂದ ಪಂಪನಿಗೂ ಸಂತೋಷವಾಗಿದ್ದಿರಬೇಕು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT