ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಂಚೆ ಮೂಡಿಸಿದ ಸಂಚಲನ

Last Updated 8 ಡಿಸೆಂಬರ್ 2015, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ವೈಟ್‌ಫೀಲ್ಡ್‌ನಲ್ಲಿ ಕಟ್ಟಡವೊಂದರ ನಿರ್ಮಾಣಕ್ಕಾಗಿ ದೊಡ್ಡ ಮರ ಕಡಿಯಲು ತಯಾರಿ ನಡೆದಿದೆ. ಅದನ್ನು ಉಳಿಸಲು ನಿಮ್ಮಿಂದ ಏನಾದರೂ ಸಹಾಯ ಆಗಬಹುದೇ?’

‘ನಾನು ಆ ಮರವನ್ನು ಉಳಿಸಲು ಪ್ರಯತ್ನವನ್ನೇನೋ ಮಾಡಬಹುದು. ಆದರೆ, ಉಳಿದ ಮರಗಳ ಬಗೆಗೆ ಯೋಚಿಸಿದ್ದೀರಾ? ಇಂತಹ ಚಟುವಟಿಕೆಗಳ ವಿರುದ್ಧ ನಾಗರಿಕರು ಸಂಘಟಿತರಾಗಿ ಎದ್ದು ನಿಲ್ಲುವುದೊಂದೇ ಉತ್ತಮ ಮಾರ್ಗ’

– ನಗರದ ಬಹುದೊಡ್ಡ ನಾಗರಿಕ ಚಳವಳಿಯಾಗಿ ಬೆಳೆದಿರುವ ‘ವೈಟ್‌ಫೀಲ್ಡ್‌ ರೈಸಿಂಗ್‌’ ಸಂಘಟನೆ ಜನ್ಮತಾಳಲು ಕಾರಣವಾದ ಎರಡು ಇ–ಮೇಲ್‌ (ಮಿಂಚಂಚೆ)ಗಳ ಸಾರವಿದು. ಮೊದಲ ಇ–ಮೇಲ್‌ ಕಳುಹಿಸಿದವರು ನಿತ್ಯಾ ರಾಮಕೃಷ್ಣನ್‌; ಅದಕ್ಕೆ ಎರಡನೇ ಇ–ಮೇಲ್‌ ರೂಪದಲ್ಲಿ ಉತ್ತರ ನೀಡಿದವರು ನಗರ ಯೋಜನೆ ತಜ್ಞ ಆರ್‌.ಕೆ. ಮಿಶ್ರಾ. 2013ರ ಫೆಬ್ರುವರಿಯಲ್ಲಿ ಈ ಇ–ಮೇಲ್‌ಗಳು ವಿನಿಮಯ ಆಗಿದ್ದವು.

ಮಿಶ್ರಾ ಅವರ ಸಲಹೆಗೆ ಓಗೊಟ್ಟ ವೈಟ್‌ಫೀಲ್ಡ್‌ನ ಸುಮಾರು 50 ಜನ ಸಮಾನಮನಸ್ಕರು ಒಂದು ತಿಂಗಳಲ್ಲೇ ಹುಟ್ಟುಹಾಕಿದ ಸಂಘಟನೆ ‘ವೈಟ್‌ಫೀಲ್ಡ್‌ ರೈಸಿಂಗ್‌’. 2013ರ ಮಾರ್ಚ್‌ 10ರಂದು ಆ ಸಂಘಟನೆಯ ಮೊದಲ ಸಭೆ ನಡೆಯಿತು. ವೈಟ್‌ಫೀಲ್ಡ್‌ ಎದುರಿಸುತ್ತಿದ್ದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಮಾಡಲು ಪ್ರತ್ಯೇಕ ಗುಂಪುಗಳನ್ನು ಆ ಸಭೆಯಲ್ಲೇ ರಚಿಸಲಾಯಿತು.

‘ಆರ್‌.ಕೆ. (ಮಿಶ್ರಾ) ಹೇಳಿದ್ದು ಅಕ್ಷರಶಃ ನಿಜ. ನಗರದ ನಿವಾಸಿಗಳಾದ ನಾವು ಮಾಡುವುದಾದರೂ ಏನು? ರಸ್ತೆ ಗುಂಡಿಗಳ ಪಕ್ಕದಲ್ಲೇ ನಡೆದು ಹೋಗುತ್ತೇವೆ. ಮರ ಕತ್ತರಿಸುವುದನ್ನು ಮೂಕವಾಗಿ ನೋಡುತ್ತೇವೆ. ಭ್ರಷ್ಟಾಚಾರದ ಕುರಿತ ಚರ್ಚೆಯಲ್ಲಿ ಜಾಣ್ಮೆ ಮೆರೆಯುತ್ತೇವೆ. ಆದರೆ, ಅಂತಹ ಸನ್ನಿವೇಶದಲ್ಲಿ ನಾವೇನು ಮಾಡಬಹುದು ಎನ್ನುವುದನ್ನೇ ಯೋಚಿಸಲ್ಲ’ ಎಂದು ವಿಷಾದ ವ್ಯಕ್ತಪಡಿಸುತ್ತಾರೆ ನಿತ್ಯಾ.

‘ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆ ಆರಂಭಿಸಿದ ಮೇಲೆ ನಾವು ಮೊದಲು ಗಮನಹರಿಸಿದ್ದು ತ್ಯಾಜ್ಯ ವಿಲೇವಾರಿ ಸಮಸ್ಯೆ ಕಡೆಗೆ. ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳನ್ನೂ ಸಭೆಗೆ ಆಹ್ವಾನಿಸಿದ್ದೆವು. ಆ ಸಭೆಯಲ್ಲಿ ಟಿಪ್ಪಣಿ ಮಾಡಿಕೊಂಡವರು ಕಾಲಮಿತಿಯಲ್ಲಿ ಕೆಲಸ ಮಾಡುವ ವಾಗ್ದಾನ ನೀಡಿದರು. ಆದರೆ, ಏನೂ ಬದಲಾವಣೆ ಆಗಲಿಲ್ಲ. ಅದರಿಂದ ನಮಗೆ ಬೇಸರವಾಗಲಿಲ್ಲ. ಏಕೆಂದರೆ, ಆ ಪ್ರಕ್ರಿಯೆಯಲ್ಲಿ ಹಲವು ಪಾಠ ಕಲಿತಿದ್ದೆವು’ ಎಂದು ವಿವರಿಸುತ್ತಾರೆ ರಿತು ಜಾರ್ಜ್‌.

ಸರ್ಕಾರ ಹಾಗೂ ಬಿಬಿಎಂಪಿ ಮಟ್ಟದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ನಡೆಸಿದ ಯತ್ನ ವಿಫಲವಾದ ಸಂದರ್ಭದಲ್ಲೆಲ್ಲ ‘ವೈಟ್‌ಫೀಲ್ಡ್‌ ರೈಸಿಂಗ್‌’ ಸಂಘಟನೆ ಮತ್ತಷ್ಟು ಉತ್ಸಾಹದಿಂದ ಪುಟಿದೆದ್ದಿದೆ. ದಿನದಿಂದ ದಿನಕ್ಕೆ ಬಲಗೊಳ್ಳುತ್ತಲೇ ಸಾಗಿದೆ. ಹೊಸ ಸದಸ್ಯರು ಸೇರ್ಪಡೆ ಆಗುತ್ತಲೇ ಇದ್ದಾರೆ. ಹಾಗೆ ಬಂದವರು ತಮ್ಮ ಆಸಕ್ತಿ ಕ್ಷೇತ್ರಗಳ ಮೂಲಕ ಬಡಾವಣೆಗೆ ನೆರವಾಗಲು ಹೊರಟರೆ ಅವರಿಗೆ ಅಗತ್ಯವಾದ ಬೆಂಬಲವನ್ನೂ ಸಂಘಟನೆ ನೀಡುತ್ತಲೇ ಇದೆ.

ಒಬ್ಬ ವ್ಯಕ್ತಿ ರಸ್ತೆ ಪಕ್ಕದಲ್ಲಿ ಸಸಿ ನೆಡಲು ಅಪೇಕ್ಷಿಸಿದರೆ ಇನ್ನೊಬ್ಬ ಸದಸ್ಯ ನರ್ಸರಿಯಿಂದ ಸಸಿಗಳನ್ನು ತಂದುಕೊಡುತ್ತಾನೆ. ಕಾರ್ಯಕರ್ತರ ತಂಡವೊಂದು ಆ ಸಸಿಗಳಿಗೆ ನೀರುಣಿಸಲು ಸಿದ್ಧವಾಗುತ್ತದೆ. ನೆರವಿನ ಸರಪಳಿ ಹೀಗೇ ಮುಂದುವರಿಯುತ್ತದೆ.
ಪ್ರವೀರ್‌ ಬಗ್ರೋಡಿಯಾ ಅವರಂತಹ ಕಾರ್ಯಕರ್ತರು, ವೈಟ್‌ಫೀಲ್ಡ್‌ನ ಇತಿಹಾಸ ದಾಖಲಿಸುವ, ವರ್ತಮಾನದ ಹೋರಾಟದ ಹೆಜ್ಜೆ ಗುರುತುಗಳು ಅಳಿಯದಂತೆ ನೋಡಿಕೊಳ್ಳುವ ಹೊಣೆಹೊತ್ತರು.

ಸಂಘಟನೆಯು ಬೆಳೆಯುತ್ತಾ ಹೊರಟಂತೆ ವಾಟ್ಸ್‌ ಆ್ಯಪ್‌ ಸಂದೇಶಗಳು ಭರದಿಂದ ವಿನಿಮಯ ಆಗತೊಡಗಿವೆ. ಟೆಕ್ಕಿಗಳೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಸಂವಹನ ತಂತ್ರಜ್ಞಾನದ ಬಳಕೆಗೆ ಮಿತಿಯೇ ಇಲ್ಲ. ಒಂದಿಷ್ಟು ಕನಸುಗಳೂ ಅದರಲ್ಲಿ ತೇಲಿಬಂದಿವೆ:
ನಮ್ಮ ನಿತ್ಯದ ತ್ಯಾಜ್ಯವನ್ನು ವಿಂಗಡಿಸಿಕೊಟ್ಟರೆ ಬಿಬಿಎಂಪಿಗೆ ಶೇ 70ರಷ್ಟು ಹೊರೆ ಕಡಿಮೆ ಆಗುತ್ತದೆ ಎಂಬುದು ಒಂದು ಸಂದೇಶ. ಕುರೂಪವಾದ ತಾಣಗಳನ್ನು ನಾವೇ ಶ್ರಮದಾನದ ಮೂಲಕ ಏಕೆ ಸ್ವಚ್ಛ ಮಾಡಬಾರದು ಎಂಬುದು ಮತ್ತೊಂದು ಆಹ್ವಾನ.

‘ಉತ್ತಮ ರಸ್ತೆ ಹೊಂದುವುದು ನಮ್ಮ ಹಕ್ಕಲ್ಲವೆ? ವಾಹನ ಚಾಲನೆ ಹಾಗೂ ನಿಲುಗಡೆ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡರೆ ಸಂಚಾರ ದಟ್ಟಣೆಗೆ ಒಂದಿಷ್ಟು ಪರಿಹಾರ ಸಿಗಬಹುದೆ? ನೀರಿನ ಸದ್ಬಳಕೆಗೆ ಏನು ಮಾಡಬಹುದು? ಪ್ಲಾಸ್ಟಿಕ್‌ ಬ್ಯಾಗ್‌ಗಳಿಗೆ ‘ಬೇಡ’ ಎನ್ನೋಣವೆ...?’ – ಹರಿದುಬಂದ ಪ್ರಶ್ನೆಗಳಿಗೂ ಲೆಕ್ಕವಿಲ್ಲ.

ಅಗ್ಲಿ ಇಂಡಿಯನ್‌ ಪಾಠ: ಬಿಬಿಎಂಪಿ ನೆರವಿಲ್ಲದೆ ಬಡಾವಣೆ ಸ್ವಚ್ಛಗೊಳಿಸಿ ಅದಕ್ಕೆ ಅಂದದ ರೂಪ ಕೊಡುತ್ತಿದ್ದ ‘ದಿ ಅಗ್ಲಿ ಇಂಡಿಯನ್‌’ ಎಂಬ ಯುವ ಸಂಘಟನೆ ಒಮ್ಮೆ ರಾಮಗೊಂಡನಹಳ್ಳಿಯಲ್ಲಿ ಕಸದ ಕೊಳೆಯನ್ನು ತೆಗೆದು ಹೊಸರೂಪ ನೀಡಿತು. ಆ ಸಂಘಟನೆಯ ಕೆಲಸ ‘ವೈಟ್‌ಫೀಲ್ಡ್‌ ರೈಸಿಂಗ್‌’ ಸದಸ್ಯರಿಗೂ ದೊಡ್ಡ ಉತ್ತೇಜನ ಕೊಟ್ಟಿತು.

‘ಕಡಿಮೆ ಮಾತು, ಹೆಚ್ಚು ಕೆಲಸ’ ಎಂಬ ಪಾಠವನ್ನು ನಾವು ಆ ಸಂಘಟನೆಯಿಂದಲೇ ಕಲಿತೆವು. ಇ–ಮೇಲ್‌ ಮಾಡುವುದು, ಸಭೆ ನಡೆಸುವುದಕ್ಕಿಂತ ಕೆಲಸದಲ್ಲಿ ಹೆಚ್ಚಿನ ಸಮಯ ಕಳೆಯಬೇಕು ಎಂದು ನಿರ್ಧರಿಸಿದೆವು. ಅದರ ಪರಿಣಾಮ ವೈಟ್‌ಫೀಲ್ಡ್‌ನ ಹಲವು ಬಡಾವಣೆಗಳು ಸ್ವಚ್ಛಗೊಂಡವು’ ಎನ್ನುತ್ತಾರೆ ಜಿಬಿ ಜಮಾಲ್‌.

‘ವೈಟ್‌ಫೀಲ್ಡ್‌ನಲ್ಲಿ ಹೆಚ್ಚುತ್ತಿರುವ ಅಪಾರ್ಟ್‌ಮೆಂಟ್‌ಗಳು ಹಾಗೂ ಕಚೇರಿಗಳು, ಅದರಿಂದ ವಾಹನ ಸಂಖ್ಯೆಯಲ್ಲಿ ಆಗುತ್ತಿರುವ ಏರಿಕೆಯಿಂದ ಇಲ್ಲಿನ ಜೀವನದ ಗುಣಮಟ್ಟದ ಮೇಲೆ ಪ್ರತಿಕೂಲ ಪ್ರಭಾವವನ್ನು ಬೀರುತ್ತಿವೆ’ ಎನ್ನುವುದು ಬಹುತೇಕ ಕಾರ್ಯಕರ್ತರ ನೋವಿನ ಮಾತು.

ನಿಲುಗಡೆ ಸ್ಥಳ ಬಿಟ್ಟು ಇಂಟರ್‌ಸೆಕ್ಷನ್‌ನಲ್ಲೇ ಬಿಎಂಟಿಸಿ ಬಸ್‌ಗಳು ನಿಲ್ಲುತ್ತಿದ್ದರಿಂದ ಪ್ರಯಾಣಿಕರು ಸಹ ಅಲ್ಲಿಯೇ ಕಾಯುತ್ತಿದ್ದರು. ಇದರಿಂದ ದಟ್ಟಣೆ ಮತ್ತಷ್ಟು ಹೆಚ್ಚುತ್ತಿತ್ತು. ಅದನ್ನು ಗುರುತಿಸಿದ ‘ವೈಟ್‌ಫೀಲ್ಡ್‌ ರೈಸಿಂಗ್‌’ ತಂಡದ ‘ಸಂಚಾರ ಪೊಲೀಸರು’ ಬಸ್‌ಗಳನ್ನು ನಿಗದಿತ ಸ್ಥಳದಲ್ಲೇ ನಿಲ್ಲಿಸುವಂತೆ ಆಂದೋಲನ ಶುರುಮಾಡಿದರು.

‘ಇಲ್ಲೇ ನಿಲ್ಲಿಸಿ’ ಎಂಬ ಫಲಕ ಹಿಡಿದ ಏಳು ನಿಮಿಷಗಳಲ್ಲಿಯೇ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಬಸ್‌ಗಳು ನಿಲುಗಡೆ ತಾಣದಲ್ಲಿ ನಿಂತವು. ಅದರಿಂದ ದಟ್ಟಣೆ ಸಹ ತಗ್ಗಿತು. ಆದರೆ, ಕಾರ್ಯಕರ್ತರು ಅಲ್ಲಿಂದ ಹೊರಟೊಡನೆ ಬಸ್‌ಗಳ ನಿಲುಗಡೆ ತಾಣವೂ ಬದಲಾಗತೊಡಗಿತು. ಪ್ರಮುಖ ತಾಣಗಳಲ್ಲಿ ಬಸ್‌ ನಿಲುಗಡೆ ಮೇಲೆ ನಿಗಾ ಇಡಲು ಈಗ ಸ್ವಯಂಸೇವಕರ ಪಡೆಯನ್ನು ಸನ್ನದ್ಧಗೊಳಿಸುತ್ತಿದೆ ‘ವೈಟ್‌ಫೀಲ್ಡ್‌ ರೈಸಿಂಗ್‌’.

ವೈಟ್‌ಫೀಲ್ಡ್‌ನಲ್ಲಿ ಪುಟ್ಟ ರಸ್ತೆಗಳಲ್ಲೂ ಸದಾ ದಟ್ಟಣೆ. ಅದನ್ನು ತಹಬದಿಗೆ ತರಲು ರಸ್ತೆ, ರಸ್ತೆಯಲ್ಲೂ  ಸ್ವಯಂಸೇವಕರ ಪಡೆಯಿದೆ. ರಸ್ತೆಗಳ ಸ್ಥಿತಿ ಹೇಗಿದೆ, ಕಾಮಗಾರಿ ಎಲ್ಲಿ ನಡೆದಿದೆ, ಅದರ ಗುಣಮಟ್ಟದ ಕಥೆ ಏನು ಎಂಬ ವಿಷಯವಾಗಿ ಟೆಕ್ಕಿಗಳಿಂದ ತಾಜಾ ಮಾಹಿತಿ ಸಂಘಟನೆಯ ವೆಬ್‌ಸೈಟ್‌ಗೆ ಬರುತ್ತಲೇ ಇರುತ್ತದೆ.

ಆಸ್ಪತ್ರೆ, ಬ್ಲಡ್‌ಬ್ಯಾಂಕ್‌, ಫಾರ್ಮಸಿ, ಬೆಸ್ಕಾಂ, ಬಿಬಿಎಂಪಿ, ಪೊಲೀಸ್‌, ಜಲಮಂಡಳಿ ಮೊದಲಾದ ಸೇವಾ ಸಂಸ್ಥೆಗಳ ಸಂಪರ್ಕಕ್ಕೆ ‘ವೈಟ್‌ಫೀಲ್ಡ್‌ ರೈಸಿಂಗ್‌’ ವೆಬ್‌ಸೈಟ್‌ನಲ್ಲಿ ಲಿಂಕ್‌ ನೀಡಲಾಗಿದೆ. ಜೇನ್ನೊಣದ ಹಾವಳಿ ತಡೆಗಟ್ಟುವ, ಹಾವು ಹಿಡಿಯುವವರ ಮಾಹಿತಿಯನ್ನೂ ಕೊಡಲಾಗಿದೆ.

ಮಳೆನೀರು ಸಂಗ್ರಹ, ನೀರಿನ ಉಳಿತಾಯ ವಿವರವೂ ಅದರಲ್ಲಿದೆ. ಮರ ಕಡಿಯಲೇಬೇಕಾದಂತಹ ಅಪಾಯಕಾರಿ ಸ್ಥಿತಿಯಲ್ಲಿದ್ದರೆ ಏನು ಮಾಡಬೇಕು ಎಂಬ ವಿಷಯವಾಗಿ ಮಾರ್ಗದರ್ಶನವಿದೆ.

ಜಾರಿಯಾದ ತ್ಯಾಜ್ಯ ವಿಂಗಡಣೆ ನಿಯಮ!
ಮಂಡೂರು ತ್ಯಾಜ್ಯ ಭೂಭರ್ತಿ ಕೇಂದ್ರದ ‘ಕಥೆ’ಯನ್ನು ಚೆನ್ನಾಗಿ ಬಲ್ಲ ವೈಟ್‌ಫೀಲ್ಡ್‌ ರೈಸಿಂಗ್‌ ಕಾರ್ಯಕರ್ತರು ತ್ಯಾಜ್ಯ ವಿಂಗಡಣೆ ಜಾಗೃತಿ ಉಂಟು ಮಾಡಿದರು. ಅಲ್ಲಿನ ಅಪಾರ್ಟ್‌ಮೆಂಟ್‌ ನಿವಾಸಿಗಳು ತ್ಯಾಜ್ಯ ವಿಂಗಡಣೆ ಮಾಡುವ ಜತೆಗೆ ನಿರ್ವಹಣೆ ವ್ಯವಸ್ಥೆಗೂ ಮುಂದೆ ಬಂದರು. ಅದರ ಪರಿಣಾಮವೇ 50 ಅಪಾರ್ಟ್‌ಮೆಂಟ್‌ಗಳಲ್ಲಿ ಈಗ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯಾಗಿದೆ. ಬಿಬಿಎಂಪಿಗೆ ಕಸದ ಹೊಣೆಯನ್ನು ಕಡಿಮೆ ಮಾಡಲಾಗಿದೆ.

ವೈಟ್‌ಫೀಲ್ಡ್‌ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಸಂಘಟನೆ ಸದಸ್ಯರು ಸ್ವಯಂಸೇವಕರಾಗಿ ಇಂಗ್ಲಿಷ್‌ ಕಲಿಸುತ್ತಿದ್ದಾರೆ. ಪುಸ್ತಕ ಸಂಗ್ರಹಿಸಿ ದೇಣಿಗೆ ನೀಡುವುದು, ಶೌಚಾಲಯ ನಿರ್ಮಾಣ ಮಾಡುವುದು, ಸ್ವಚ್ಛತೆ ಕಾಪಾಡುವುದು ಮತ್ತಿತರ ಯೋಜನೆಗಳನ್ನೂ ಸಂಘಟನೆ ಹಾಕಿಕೊಂಡಿದೆ.

ಐಟಿ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಗಳಲ್ಲಿ (ಸಿಎಸ್‌ಆರ್‌) ಭಾಗಿಯಾಗುವ ಮೂಲಕ ಬಸ್‌ ತಂಗುದಾಣ, ಫುಟ್‌ಪಾತ್‌ ನಿರ್ಮಾಣ ಹಾಗೂ ಚರಂಡಿ ಹೂಳೆತ್ತುವ ಕಾರ್ಯಗಳಲ್ಲೂ ‘ವೈಟ್‌ಫೀಲ್ಡ್‌ ರೈಸಿಂಗ್‌’ ತೊಡಗಿಸಿಕೊಂಡಿದೆ.

ಎಷ್ಟೆಲ್ಲ ಮಾಧ್ಯಮಗಳು!
ಫೇಸ್‌ಬುಕ್‌, ಟ್ವಿಟರ್‌, ಬ್ಲಾಗ್‌, ವೆಬ್‌ಸೈಟ್‌...ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆ ಸಂವಹನಕ್ಕೆ ಎಷ್ಟೆಲ್ಲ ಮಾಧ್ಯಮಗಳು! ಸ್ಥಳೀಯರಿಂದ ಉತ್ತರ ಭಾರತೀಯರವರೆಗೆ ಈ ಪ್ರದೇಶದಲ್ಲಿ ನೆಲೆಸಿದ ಸಾವಿರಾರು ಮಂದಿ ಈಗ ಈ ಸಂಘಟನೆ ಜತೆ ಗುರುತಿಸಿಕೊಂಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT