‘ವಚನ ಸಂಪುಟ: ವಿಳಂಬ ಬೇಡ’ ಎಂಬ ಎಸ್. ವಿದ್ಯಾಶಂಕರ ಅವರ ಪತ್ರಕ್ಕೆ ಪ್ರತಿಕ್ರಿಯೆ (ವಾ.ವಾ., ಜೂ. 30).
ಕರ್ನಾಟಕ ಸರ್ಕಾರದ, ಕನ್ನಡ ಸಂಸ್ಕೃತಿ ಇಲಾಖೆಯ ೧೫ ಸಂಪುಟಗಳಲ್ಲಿ ಪ್ರಕಟವಾದ ‘ಸಮಗ್ರ ವಚನ ಸಂಪುಟ’ ಒಂದು ಸ್ತುತ್ಯ ಕಾರ್ಯ.
ಅವು ಪುನರ್ ಮುದ್ರಣಗೊಳ್ಳಬೇಕಾದುದು ಅವಶ್ಯಕವೇ. ಆದರೆ ಪುನರ್ಮುದ್ರಣ ಮಾಡುವ ಸಂದರ್ಭದಲ್ಲಿ ಅದರಲ್ಲಿನ ದೋಷಗಳನ್ನು ಸರಿಪಡಿಸುವುದು ಅನಿವಾರ್ಯ. ಮುಖ್ಯವಾಗಿ ಅದರಲ್ಲಿ ಸೇರಿರುವ ‘ಕೂಟ’ (ಸುಳ್ಳು) ವಚನಗಳನ್ನು ತೆಗೆದುಹಾಕಬೇಕು.
ಉದಾ: ೧) ಶಿವಶರಣ ಶಂಕರ ದಾಸಿಮಯ್ಯನನ್ನು ಕುರಿತು ಪಿಎಚ್.ಡಿ ಸಂಶೋಧನಾಧ್ಯಯನ ಮಾಡಿದ ಡಾ. ಅನ್ನಪೂರ್ಣ ಎಂ. ಜಾಲವಾದಿ ಅವರು ತಮ್ಮ ಸಂಶೋಧನಾ ಪ್ರಬಂಧದಲ್ಲಿ ‘ಶಂಕರ ದಾಸಿಮಯ್ಯನ ಹೆಸರಿನಲ್ಲಿ ದೊರೆತ ಐದು ವಚನಗಳನ್ನು ಕೂಡ ಬಹಳಷ್ಟು ವಿದ್ವಾಂಸರು ಪ್ರಕ್ಷಿಪ್ತವಾದವುಗಳೇ (ಅಂದರೆ ಅನಂತರ ಬೇರಾರೋ ಅವನ ಹೆಸರಿನಲ್ಲಿ ಬರೆದು ಸೇರಿಸಿರುವುದು) ಎಂಬ ನಿರ್ಣಯಕ್ಕೆ ಬಂದಿದ್ದಾರೆ’. (ನೋಡಿ: ‘ಶಂಕರ ದಾಸಿಮಯ್ಯ ಪುರಾಣ ಒಂದು ಅಧ್ಯಯನ’; ೧೯೯೯; ಪುಟ : ೩೬)
೨) ಆದ್ಯ ವಚನಕಾರನಾದ ದೇವರ ದಾಸಿಮಯ್ಯನ ಹೆಂಡತಿ ಶಿವಶರಣೆ ‘ದುಗ್ಗಳೆ’ ಬಸವಾದಿ ಪ್ರಮಥರನನ್ನು ಸ್ತುತಿಸಿದ್ದಾಳೆ ಎಂದು ಹೇಳುವ ವಚನ ‘ಕೂಟ ವಚನಗಳಲ್ಲಿ ಒಂದು ಎಂಬುದು ಸ್ಪಷ್ಟ’ ಎಂದು ವಿದ್ವಾಂಸ ಡಾ.ಎಲ್.ಬಸವರಾಜು ಅವರು ಸ್ಪಷ್ಟಪಡಿಸಿದ್ದಾರೆ (ನೋಡಿ: ‘ದೇವರ ದಾಸಿಮಯ್ಯನ ವಚನಗಳು’; ಪುಟ : ೩೮). ಹೀಗಿದ್ದೂ ಈ ವಚನಗಳನ್ನು ಸಮಗ್ರ ವಚನ ಸಂಪುಟಗಳಲ್ಲಿ ಸೇರಿಸಲಾಗಿದೆ. ಇಂಥ ಉದಾಹರಣೆಗಳನ್ನು ಸಾಕಷ್ಟು ಬೆಳೆಸ ಬಹುದಾಗಿದೆ.
ಅಲ್ಲದೆ ಸಂಪಾದನೆಯ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರಗಳು ಕೂಡ ಸಮಂಜಸವೆನಿಸುವುದಿಲ್ಲ ಎಂಬುದು ಅವರ ಮಾತುಗಳಿಂದಲೇ ತಿಳಿದುಬರುತ್ತದೆ. ಉದಾ: ‘ಈ ಮೂರು ಮುದ್ರಿಕೆಯ ವಚನಕಾರರು ಯಾರೂ ಇಲ್ಲದಿರುವುದರಿಂದ, ಇವುಗಳನ್ನು ಹಡಪದ ಅಪ್ಪಣ್ಣನ ವಚನಗಳೆಂದು ಪರಿಗಣಿಸಲಾಗಿದೆ’. (ನೋಡಿ : ‘ಸಮಗ್ರ ವಚನ ಸಂಪುಟ’; ೪; ಪುಟ : xxxiii).
ಇದಲ್ಲದೇ ಸಂಪಾದಕ ಮಂಡಳಿಯಲ್ಲಿ ಸಮನ್ವಯತೆಯ ಕೊರತೆಯೂ ಎದ್ದು ಕಾಣುತ್ತದೆ. ಡಾ. ವೀರಣ್ಣ ರಾಜೂರ ಅವರು ಸಂಪಾದಿಸಿದ ಅಕ್ಕಮಹಾದೇವಿಯ ವಚನವೊಂದನ್ನು ಡಾ. ವಿದ್ಯಾಶಂಕರ ರವರು ಕೋಟಾ ಎನ್ನುತ್ತಾರೆ. ಅದಕ್ಕೆ ರಾಜೂರರವರು ಅದು ಸಾಚಾ ಎಂದು ಸಮರ್ಥಿಸಿಕೊಳ್ಳುತ್ತಾರೆ. ಈ ಕುರಿತು ಪತ್ರಿಕೆಯಲ್ಲಿ ನಡೆದ ಅನೇಕ ವಾದವಿವಾದಗಳನ್ನು ಗಮನಿಸಬಹುದು.
ವಚನ ವಾಙ್ಮಯವನ್ನು ಸಂಪಾದಿಸುವಲ್ಲಿ ಎಷ್ಟು ಜಾಗ್ರತೆಯಿಂದ ಇದ್ದರೂ ಸಾಲದು. ಇದಕ್ಕೆ ಉದಾಹರಣೆಯಾಗಿ ಹಿಂದಿನ ತಲೆಮಾರಿನ ಹಿರಿಯ ವಿದ್ವಾಂಸ ಬಿ. ಶಿವಮೂರ್ತಿ ಶಾಸ್ತ್ರಿ ಹಾಗೂ ಡಾ. ಆರ್.ಸಿ. ಹಿರೇಮಠ ಅವರು ಹೇಳುವ ಈ ಕೆಳಗಿನ ಮಾತುಗಳನ್ನು ಅವಲೋಕಿಸಬಹುದು: ‘ವಚನ ಗ್ರಂಥಗಳಲ್ಲಿಯೂ ಕವಿಗಳ ಕೈವಾಡ ನಡೆದಿದೆ... ವಿಜಯನಗರದ ಕಾಲದ ಲಿಂಗವಂತ ಕವಿಗಳು ಪುರಾಣ ಕಥೆಗಳಲ್ಲಿ ಮಾರ್ಪಾಟು ಮಾಡಿ ಕೊಂಡಿದ್ದಾರೆ... ಈಚಿನ ಶೂನ್ಯ ಸಂಪಾದನೆಕಾರರು ತಮ್ಮ ಮನಬಂದಂತೆ ಬದಲಾವಣೆಯನ್ನು ಕೂಡ ಮಾಡಿದ್ದಾರೆ’! (ನೋಡಿ: ‘ಶಿವಾನುಭವ’; ಅಕ್ಟೋಬರ್ ೧೯೩೭; ಪುಟ: ೨೭–-೨೮).
‘ಎಲ್ಲಕ್ಕೂ ಮೇಲಾಗಿ ಒಂದೇ ಕಟ್ಟಿನಲ್ಲಿ ಒಂದು ವಚನ ಒಂದು ಸನ್ನಿವೇಶದಲ್ಲಿ ಒಬ್ಬರ ಅಂಕಿತದಲ್ಲಿದ್ದು, ಮುಂದೆ ಅದೇ ಕಟ್ಟಿನ ಬೇರೆ ಭಾಗದ ಬೇರೆ ಸನ್ನಿವೇಶದಲ್ಲಿ ಬೇರೊಬ್ಬರ ಅಂಕಿತದಲ್ಲಿ ಬಂದ ವಿಚಿತ್ರ ಉದಾಹರಣೆಯೂ ಉಂಟು. ಆದುದರಿಂದಲೇ ವಚನ ವಾಙ್ಮಯದ ಸಂಸ್ಕರಣ ಕಾರ್ಯದಲ್ಲಿ ಈ ಸಮಸ್ಯೆಯನ್ನು ಬಹು ಜಾಗರೂಕತೆಯಿಂದ ಬಿಡಿಸಬೇಕಾಗುತ್ತದೆ’ (‘ಶ್ರೀ ಸಿದ್ದರಾಮೇಶ್ವರ ವಚನಗಳು’, ೧೯೬೮; ಪುಟ: ೩೪). ಆದರೆ ಈ ಬಗೆಯ ಜಾಗರೂಕತೆ ಇಲ್ಲಿ ಕಾಣದಿರುವುದು ವಿಷಾದನೀಯ.
ಜೊತೆಗೆ ಒಬ್ಬರೇ ಹೆಚ್ಚಿನ ಸಂಖ್ಯೆಯ ಸಂಪುಟಗಳನ್ನು ಸಂಪಾದಿಸಿರುವುದರಿಂದ ಕಾರ್ಯಬಾಹುಳ್ಯದ ಒತ್ತಡದ ಕಾರಣದಿಂದಾಗಿಯೂ ಹೀಗಾಗಿರಬಹುದು. ಉದಾ: ಡಾ. ವೀರಣ್ಣ ರಾಜೂರ ಅವರು ೫ ಸಂಪುಟಗಳನ್ನು ಒಬ್ಬರೇ ಸಂಪಾದಿಸಿದ್ದಾರೆ. ಒಬ್ಬರಿಂದಲೇ ಐದು ಸಂಪುಟಗಳನ್ನು ಸಂಪಾದನೆ ಮಾಡಿಸುವ ಬದಲು, ಬೇರೆಯವರಿಗೂ ಅವಕಾಶ ನೀಡಬಹುದಾಗಿತ್ತಲ್ಲವೇ?
ಅದೇನೇ ಇದ್ದರೂ ಈ ಸಂಪುಟಗಳಲ್ಲಿ ಉಳಿದುಕೊಂಡ ದೋಷಗಳನ್ನು ಪುನಃ ಪರಿಶೀಲಿಸಲು ಒಂದು ತಜ್ಞರ ಸಮಿತಿಯನ್ನು ನೇಮಿಸಬೇಕು. ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಇವುಗಳನ್ನು ಪುನಃ ಮುದ್ರಿಸಬೇಕು. ಇಲ್ಲವಾದಲ್ಲಿ ಈಗಾಗಲೇ ಅನುಮಾನವನ್ನು ಮೂಡಿಸುತ್ತಿರುವ ಈ ಪ್ರಕಟಣೆಗಳು ಮುಂದೊಂದು ದಿನ ಗಂಭೀರವಾದ ಸಂಶೋಧನೆಗೆ ಆಕರ ಗ್ರಂಥಗಳಾಗುವುದು ಸಾಧ್ಯವೇ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.