ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ನೆನಪಿನಲ್ಲಿ ನಾಲ್ಕು ದಶಕ!

Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕನ್ನಡ ರಂಗಭೂಮಿಯಲ್ಲಿ ಹೊಸ ಚಲನೆ ಉಂಟುಮಾಡುವ ಉದ್ದೇಶದಿಂದ ಆರಂಭವಾದ ಗೆಳೆಯರ ಬಳಗ ‘ಸಮುದಾಯ’. ಜನರಂಜನೆಯ ಜೊತೆಗೆ ಜನಮುಖಿಯಾಗಿಯೂ ಬೆಳೆದ ಈ ರಂಗ ಚಳವಳಿ, ತನ್ನ ನಾಲ್ಕು ದಶಕಗಳ ಹಾದಿಯಲ್ಲಿ ಕನ್ನಡ ಸಾಂಸ್ಕೃತಿಕ ಚಳವಳಿಯೊಂದನ್ನು ರೂಪಿಸಿದ್ದು ಮಹತ್ವದ ಸಂಗತಿ. ಈಗ ನಲವತ್ತು ವರ್ಷ ಪೂರೈಸಿರುವ ‘ಸಮುದಾಯ’ದ ಹೆಜ್ಜೆ ಗುರುತುಗಳನ್ನು ದಾಖಲಿಸುವ ಈ ಬರಹ, ಈ ನಡಿಗೆಯಲ್ಲಿ ರೂಪುಗೊಂಡ ಸಾಂಸ್ಕೃತಿಕ ಚಳವಳಿಯ ಚಹರೆಯನ್ನು ನೆನಪಿಸುತ್ತದೆ.

ನಾಗ ಐದನೆಯ ತರಗತಿಯ ವಿದ್ಯಾರ್ಥಿ. ನಮ್ಮ ಮನೆಗೆ ಪ್ರಸನ್ನ ಅವರು ಬರುತ್ತಿದ್ದರು. ಅವರು ಆಗಿನ್ನೂ ‘ಎನ್ಎಸ್‌ಡಿ’ ವಿದ್ಯಾರ್ಥಿಯಾಗಿದ್ದವರು. ಅವರ ಎರಡನೆಯ ವರ್ಷದ ರಜೆಯ ಕಾಲದಲ್ಲಿ ಬೆಂಗಳೂರಿನಲ್ಲಿ ನಾಟಕ­ವೊಂದನ್ನು ಆಡಿಸುವುದು ಅವರ ಆಲೋಚನೆಯಾಗಿತ್ತು. ನನ್ನ ತಾಯಿಯವರ (ವಿಜಯಮ್ಮ) ಜೊತೆಗೆ ‘ಪ್ಲೇ ಬಾಯ್ ಆಫ್ ದ ವೆಸ್ಟರ್ನ್ ವರ್ಲ್ಡ್’ ನಾಟಕ ಕುರಿತು ಚರ್ಚೆ ನಡೆಸಿದ್ದರು. ನಾನು ಬೆರಗುಗಣ್ಣಿನ ಕೇಳುಗನಾಗಿದ್ದೆ.

ಅದಾಗಿ ಕೆಲವು ವಾರಗಳಲ್ಲಿ ಆ ನಾಟಕವು ‘ಬಯಲು ಸೀಮೆ ಸರದಾರ’ ಎಂಬ ಹೆಸರಲ್ಲಿ ಪ್ರದರ್ಶನವಾಯಿತು. ನನಗೆ ಪರಿಚಿತರಿದ್ದ ಅನೇಕರು ಅಭಿನಯಿಸಿದ್ದ ಈ ನಾಟಕ ಇಂದಿಗೂ ನನ್ನ ಕಣ್ಣೆದುರಿಗೆ ಚಿತ್ರವಾಗಿದೆ. ಆ ನಾಟಕದ ಹಾಡುಗಳು ಇಂದಿಗೂ ನನ್ನ ನೆನಪಲ್ಲಿ ಉಳಿದಿವೆ. ಅಂದು ಯಶಸ್ವಿಯಾಗಿ ಪ್ರದರ್ಶನ ಕಂಡ ನಾಟಕವು ನಂತರದ ದಿನಗಳಲ್ಲಿ ‘ಸಮುದಾಯ’ ಎಂಬ ರಂಗತಂಡದ ಹುಟ್ಟಿಗೂ ಕಾರಣವಾಯಿತು.

ಅದಾಗಿ ಸುಮಾರು ಒಂದು ವರ್ಷದ ನಂತರ ಪ್ರಸನ್ನ ಅವರು ತಮ್ಮ ‘ಎನ್ಎಸ್‌ಡಿ’ ಶಿಕ್ಷಣ ಮುಗಿಸಿ ಬಂದ ಅವಧಿಯಲ್ಲಿಯೇ ಸೆಂಟ್ರಲ್ ಕಾಲೇಜಿನ ಮರಗಳ ನಡುವೆ ಹರಟೆಗೆ ಸೇರುತ್ತಾ ಇದ್ದ ಮಿತ್ರರು (ಕೆ.ವಿ. ನಾರಾಯಣ, ಎಚ್.ಎಸ್. ರಾಘವೇಂದ್ರ ರಾವ್, ಚಿ. ಶ್ರೀನಿವಾಸ ರಾಜು, ಕಿ.ರಂ. ನಾಗರಾಜ್, ಸಿ. ವೀರಣ್ಣ, ಎ.ಎಸ್. ಮೂರ್ತಿ, ವಿಜಯಮ್ಮ, ಮುಂತಾದವರು) ಸಮಕಾಲೀನ ರಂಗಭೂಮಿ ಚಳವಳಿಯು ಹೇಗೆ ಜನರಂಜನೆಯನ್ನೇ ಪ್ರಧಾನವಾಗಿಸಿ ಕೊಂಡಿದೆ ಎಂಬ ಮಾತಾಡುತ್ತಾ ಹೊಸದೊಂದು ರಂಗ ಚಳವಳಿ ಕಟ್ಟುವ ಮಾತಾಡಿದ್ದರು. ಆಗ ಪ್ರಸನ್ನ ಆರಂಭಿಸಿದ ಹೊಸ ರಂಗ ತಂಡಕ್ಕೆ ಕಿ.ರಂ. ನಾಗರಾಜ್ ಅವರು ನೀಡಿದ ಹೆಸರು ‘ಸಮುದಾಯ’. ಈ ಸಂಘಟನೆಗೆ ಮೊದಲ ದೇಣಿಗೆಯನ್ನು ನನ್ನ ತಾಯಿಯವರು ನನ್ನ ಕೈಯಲ್ಲಿಯೇ ಕೊಡಿಸಿದ್ದರು ಎಂಬುದು ನನಗಿನ್ನೂ ಹಸಿರಾಗಿರುವ ನೆನಪು. 

ಜನರಿಗಾಗಿ ಕಲೆ
‘ಮನರಂಜನೆಗಾಗಿ ಕಲೆ ಅಲ್ಲ, ಜನರಿಗಾಗಿ ಕಲೆ’. ‘ಸಮುದಾಯ’ ರಂಗತಂಡ ಆರಂಭವಾದಾಗ ಕಟ್ಟಿಕೊಂಡ ಘೋಷ ವಾಕ್ಯವಿದು. ದೇಶದಲ್ಲಿ ತುರ್ತುಪರಿಸ್ಥಿತಿ (1975) ಹೇರಲಾಗಿತ್ತು. ಅದಕ್ಕೆ ಸಾಂಸ್ಕೃತಿಕ ವಲಯವೂ ತಾತ್ವಿಕ ವಿರೋಧ ವ್ಯಕ್ತಪಡಿಸಲು ಮಾರ್ಗಗಳನ್ನು ಹುಡುಕುತ್ತಿತ್ತು. ‘ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಶನ್’ (ಇಪ್ಟಾ) ಅನೇಕ ವ್ಯವಸ್ಥೆಯನ್ನು ಟೀಕಿಸುವ ನಾಟಕಗಳನ್ನು ಜನರ ಮುಂದಿಟ್ಟಿತ್ತು. ಈ ಹಿನ್ನೆಲೆಯಲ್ಲಿಯೇ ಸಂಸರ ‘ವಿಗಡ ವಿಕ್ರಮರಾಯ’ ಹಾಗೂ ಇನ್ನೊಂದು ನಾಟಕ ಸಂಯೋಜಿಸಿ ಕೆ.ವಿ. ನಾರಾಯಣ ಕಟ್ಟಿದ ‘ಹುತ್ತವ ಬಡಿದರೆ...’ ಮತ್ತು ಮ್ಯಾಕ್ಸಿಂ ಗಾರ್ಕಿಯ ‘ಮದರ್’ ಕಾದಂಬರಿ ಆಧರಿಸಿ ಬರ್‌ಟೋಲ್ಟ್ ಬ್ರೆಕ್ಟ್ ಬರೆದ ನಾಟಕದ ಅನುವಾದ ‘ತಾಯಿ’ (ಅನುವಾದ: ಸಿ. ವೀರಣ್ಣ) ಪ್ರದರ್ಶನ ಕಂಡವು.

ಈ ನಾಟಕಗಳು, ಆವರೆಗೆ ರಂಗಾಸಕ್ತರು ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ನೋಡಿದ್ದ ನಾಟಕಗಳಿಗಿಂತ ಭಿನ್ನವಾಗಿ ‘ಕ್ಯಾಥರ್ಸಿಸ್’ ಎಂಬುದು ಯಾವುದೇ ನಾಟಕಕ್ಕೆ ಅತ್ಯಂತ ಮುಖ್ಯ ಅಂಶ ಎಂಬುದನ್ನು ಪರಿಚಯಿಸಿದ್ದವು. ಈ ನಾಟಕ­ಗಳು ತಮ್ಮೊಳಗಿನ ಹೂರಣದ ಮೂಲಕವೇ ಸಮಕಾಲೀನ ರಾಜಕೀಯ ಸಂಘರ್ಷಗಳಿಗೆ ಪರ್ಯಾಯವಾಗಿ ಹೊಸ ಸಮಾಜ ಕಟ್ಟುವ ನಿಟ್ಟಿನಲ್ಲಿ ಆಲೋಚಿಸುವ ವಿವರಗಳನ್ನು ನೀಡಿದ್ದವು. ಹೀಗಾಗಿಯೇ ‘ಹುತ್ತವ ಬಡಿದರೆ...’ ನಾಟಕದಲ್ಲಿನ ಹಾಡುಗಳಾದ ‘ಮೈಸೂರು ರಾಜ್ಯದ ದೊರೆಯೇ’, ‘ಬಡಿದಾರೋ ಹುತ್ತವ’, ‘ಆಳೋನಿಗಾರು ಕಾಸು ಉಳೋನಿಗೊಂದು ಕಾಸು’ ಮುಂತಾದ ಹಾಡುಗಳು (ಸಿ. ವೀರಣ್ಣ) ಕೇವಲ ಕಿವಿಗೆ ಮಾತ್ರವಲ್ಲ– ಕಣ್ಣೆದುರಿಗಿನ ದೃಶ್ಯವಾಗಿಯೂ ಅನೇಕರ ನೆನಪಲ್ಲಿ ಇಂದಿಗೂ ಇದೆ.

ಆವರೆಗಿನ ರಂಗಾಭಿನಯಕ್ಕಿದ್ದ ಉತ್ಸವದ ಶೈಲಿಯನ್ನು ಬಿಟ್ಟುಕೊಟ್ಟು ಕಲಾವಿದರಿಗೆ ಇರಬೇಕಾದ ಬದ್ಧತೆಯನ್ನು ಈ ನಾಟಕಗಳು ತೆರೆದಿಟ್ಟಿದ್ದವು. ಕಲಾವಿದನೊಬ್ಬ ಕೇವಲ ರಂಜಕನಲ್ಲ, ಸಮಕಾಲೀನ ಸಮಾಜದ ರಾಜಕೀಯ ವಿಶ್ಲೇಷಕ ಎಂಬಂತಹ ವಾತಾವರಣ ‘ಸಮುದಾಯ’ದ ಆರಂಭಿಕ ನಾಟಕಗಳಿಂದ ಸೃಷ್ಟಿಯಾಯಿತು ಎಂಬುದು ಆ ಕಾಲದಲ್ಲಿ ರಂಗಭೂಮಿ ಪ್ರವೇಶಿಸಿದ್ದ ನನ್ನಂತಹ ಅನೇಕರಿಗೆ ದೊರೆತ ದೊಡ್ಡ ಲಾಭ.

‘ತಾಯಿ’ ನಾಟಕದಲ್ಲಿನ ಬಿ. ಜಯಶ್ರೀ ಅವರ ಅಭಿನಯ ಮತ್ತು ನಾಟಕದ ವಿನ್ಯಾಸವು ನೋಡುಗನಿಗೆ ದಾಟಿಸಿದ ಸಂಗತಿಗಳು; ನನ್ನಂತಹವರಿಗೆ ಮ್ಯಾಕ್ಸಿಂ ಗಾರ್ಕಿಯನ್ನು ಮಾತ್ರವಲ್ಲ ರಷ್ಯದ ಕ್ರಾಂತಿಯ ಎಲ್ಲಾ ವಿವರಗಳನ್ನೂ ಓದಲು ಪ್ರೇರೇಪಿಸಿದ್ದವು ಎಂಬುದು ‘ಸಮುದಾಯ’ ತಂಡದ ಆರಂಭದ ದಿನಗಳ ಬಹುತೇಕ ನಾಟಕಗಳ ಕೊಡುಗೆ. ಗುಬ್ಬಿ ವೀರಣ್ಣನವರ ಕುಟುಂಬದ ಸ್ವರ್ಣಮ್ಮ, ಮಾಲತಮ್ಮ, ಬಿ.ಚಂದ್ರಶೇಖರ್, ಮುಖ್ಯಮಂತ್ರಿ ಚಂದ್ರು ‘ತಾಯಿ’ ನಾಟಕವನ್ನು ಪ್ರೇಕ್ಷಕರಿಗೆ ಅದ್ಭುತವಾಗಿ ತಲುಪಿಸಿದರು. ಇದೇ ನಾಟಕ ಮೈಸೂರಿನಲ್ಲಿ ಪ್ರದರ್ಶನ ಕಂಡಾಗ, ರಾಮೇಶ್ವರಿ ವರ್ಮ, ಎಸ್. ಮಾಲತಿ ಪಾಲ್ಗೊಂಡಿದ್ದರು.

ನಂತರ ಪ್ರಸನ್ನ ನಿರ್ದೇಶಿಸಿದ ‘ಗೆಲಿಲಿಯೋ’ ತರಹದ ನಾಟಕಗಳು ರವೀಂದ್ರ ಕಲಾಕ್ಷೇತ್ರದ ವಿಶ್ರಾಂತಿಗೃಹದಲ್ಲಿ ಪ್ರದರ್ಶನವಾಯಿತು. ರಂಗಭೂಮಿಯೆಂದರೆ ಪ್ರೋಸಿನಿಯಂ ಆವರಣ ಮಾತ್ರವಲ್ಲ, ಅದು ಆಪ್ತತೆಯನ್ನು ತರಬಹುದಾದ ಆವರಣದಲ್ಲಿಯೂ ಆಗಬಹುದು ಎಂಬ ತಿಳಿವಳಿಕೆ ಜೊತೆಗೆ ‘ಗೆಲಿಲಿಯೋ’ ನಾಟಕ ಹೇಳುತ್ತಾ ಇದ್ದ, ‘ಧರ್ಮಾಂಧರು ಹೇಗೆ ತರ್ಕ ಶುದ್ಧಿಯನ್ನು ಕೊಲ್ಲುತ್ತಾರೆ’ ಎಂಬ ವಿವರವೂ ನನ್ನಂತಹ ರಂಗಾಸಕ್ತರಿಗೆ ಹೊಸ ಲೋಕವನ್ನು ತೆರೆದಿಟ್ಟಿತ್ತು.

ಹೀಗೆ ‘ಜನರಿಗಾಗಿ ಕಲೆ’ ಎಂಬ ಉದ್ದಿಶ್ಯದಿಂದ ಆರಂಭವಾದ ರಂಗತಂಡವೊಂದು ಆವರೆಗೆ ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿದ್ದ ರಂಗತಂಡಗಳ ಆಲೋಚನಾ ಕ್ರಮವನ್ನೂ ಸಹ ಪರೋಕ್ಷವಾಗಿ ಬದಲಿಸಿತ್ತು. ಕೆಲವು ರಂಗತಂಡಗಳು ಹೊಸ ಮಾದರಿಯ ನಾಟಕಗಳನ್ನು ಆರಿಸಿಕೊಂಡು ಪ್ರದರ್ಶಿಸಲಾ­ರಂಭಿಸಿದ್ದು ಸಹ ಕಂಡು ಬಂತು. ರಂಗತಂಡವೊಂದು ಮಾಡಬೇಕಾದ ಪ್ರಧಾನ ಕೆಲಸವಿದು, ತಾನು ಸೃಷ್ಟಿಸುವ ಮಾದರಿಗಳಿಂದಲೇ ತನ್ನ ಸುತ್ತಲ ಇತರರ ಆಲೋಚನಾ ಕ್ರಮಗಳನ್ನು ತಿದ್ದುವುದು. ಆ ಕೆಲಸವನ್ನು ‘ಸಮುದಾಯ’ ರಂಗತಂಡ ಯಶಸ್ವಿಯಾಗಿ ಮಾಡಿತು.

ಈ ಹಾದಿಯಲ್ಲಿ ‘ಸಮುದಾಯ’ ತಂಡವು ಬೆಂಗಳೂರಿಗೆ ಬಾದಲ್ ಸರ್ಕಾರ್ ಅವರನ್ನು ಕರೆಸಿದ್ದು, ಅವರಿಂದ ವೃತ್ತ ರಂಗಭೂಮಿಯ ಪ್ರದರ್ಶನ ಹಾಗೂ ರಂಗಶಿಬಿರಗಳನ್ನು ಮಾಡಿಸಿದ್ದು ನಮ್ಮ ರಂಗಭೂಮಿಗೆ ದೊಡ್ಡ ಕೊಡುಗೆಯನ್ನು ನೀಡಿತು. ಅದಾಗಲೇ ಬೀದಿ ನಾಟಕಗಳನ್ನು ಮಾಡುತ್ತಾ ಇದ್ದ ತಂಡಗಳು ಸಹ ಬಾದಲ್ ಸರ್ಕಾರ್ ಅವರ ಮಾದರಿಯನ್ನು ಬಳಸಿ ವಿಶಿಷ್ಟ ನಾಟಕಗಳನ್ನು ಪ್ರದರ್ಶಿಸಿದರು. ಸ್ವತಃ ‘ಸಮುದಾಯ’ ತಂಡದವರು ಮಾಡಿದ ‘ಮೆರವಣಿಗೆ’ ಮುಂತಾದ ನಾಟಕಗಳು ಕಡಿಮೆ ಪರಿಕರ ಮತ್ತು ರಂಗ ಸಜ್ಜಿಕೆಯಿಂದ ನೋಡುಗನಿಗೆ ಅಪರೂಪದ ಅನುಭೂತಿ ನೀಡಲು ಸಾಧ್ಯವೆಂದು ಸಾಬೀತುಪಡಿಸಿದ್ದವು. ಈ ಪ್ರಯೋಗ­ಗಳ ಪರಿಣಾಮ ಅನೇಕ ಹೊಸಬರು ಕನ್ನಡ ರಂಗ ಭೂಮಿಯಲ್ಲಿ ಬದ್ಧತೆಯಿಂದ ದುಡಿಯಲಾ­ರಂಭಿಸಿದ್ದಲ್ಲದೆ ‘ಸಮುದಾಯ’ ಸ್ವತಃ ಸಾಂಸ್ಕೃತಿಕ ಜಾಥಾಗಳನ್ನು ನಡೆಸಲು ವೇದಿಕೆ ಸಿದ್ಧವಾಯಿತು.  

ಜಾಥಾ ಎಂಬ ಮರೆಯಲಾಗದ ಗಾಥ 
ರಂಗಭೂಮಿಯು ಕಾಲಾಂತರದಲ್ಲಿ ಅನೇಕಾನೇಕ ಬದಲುಗಳನ್ನು ಕಂಡಿದೆ. ಆದರೆ ಎಪ್ಪತ್ತರ ದಶಕದ ಆದಿ ಭಾಗದಲ್ಲಿ ಕನ್ನಡ ಹವ್ಯಾಸೀ ರಂಗಭೂಮಿಯು ಬಿ.ವಿ. ಕಾರಂತರ ಆಗಮನದಿಂದ ಹೊಳೆದದ್ದು ಈಗ ಇತಿಹಾಸ. ಬಿ.ವಿ. ಕಾರಂತರ ರಂಗ ಚಳವಳಿಯು ವೃತ್ತಿ ರಂಗಭೂಮಿಯ ಸಂಗೀತವನ್ನು ಹವ್ಯಾಸೀ ರಂಗಭೂಮಿಯ ಹುಮ್ಮಸ್ಸನ್ನು ಒಳಗೊಂಡು ಅರಳಿತ್ತು. ಕಾಲಾಂತರದಲ್ಲಿ ಈ ಮಾದರಿಯು ಸಂಗೀತ ಮತ್ತು ರಂಜನೆಯನ್ನು ಪ್ರಧಾನವಾಗಿಸಿ ಬೆಳೆದಿತ್ತು. ಇಂದಿಗೂ, ಈ ಕಾಲಘಟ್ಟದಲ್ಲಿ ಆದ ಅನೇಕ ನಾಟಕಗಳು ತಮ್ಮೊಳಗಿದ್ದ ಹಾಡುಗಳಿಂದಾಗಿ ಮಾತ್ರ ನೆನಪಲ್ಲಿವೆ.

ಇಂತಹ ರಂಜನೀಯ ನಾಟಕಗಳ ನಡುವೆ ‘ಜನರಿಗಾಗಿ ಕಲೆ’ ಎಂದು ಆರಂಭವಾದ ‘ಸಮುದಾಯ’ವು ತನ್ನೊಡಲಲ್ಲಿ ಎಡಪಂಥೀಯ ಆಲೋಚನೆಗಳನ್ನು ಇಟ್ಟುಕೊಂಡಿತ್ತು. ಈ ದೇಶದ ಬಡವರ ಕತೆಯನ್ನು ರಂಗಮುಖೇನ ದಾಟಿಸುವ ಮೂಲಕ ನಮ್ಮ ಆಳುವ ವರ್ಗವನ್ನು ಎಬ್ಬಿಸಲು ಹೊರಟಿತ್ತು. ಹಾಗಾಗಿಯೇ ‘ಸಮುದಾಯ’ ನಡೆಸಿದ ಸಾಂಸ್ಕೃತಿಕ ಜಾಥಾಗಳು ಮತ್ತು ಆ ಜಾಥಾಗಳಲ್ಲಿ ಪ್ರದರ್ಶನವಾದ ನಾಟಕಗಳು ಇಂದಿಗೂ ನಮ್ಮನ್ನು ಕಾಡುವ ನಾಟಕಗಳಾಗಿವೆ.

ಕರ್ನಾಟಕದಾದ್ಯಂತ ಮೂರು ಬಾರಿ ಬೀದಿ ನಾಟಕಗಳ ಜಾಥಾಗಳನ್ನು (1978ರಲ್ಲಿ ಮಹತ್ವದ ಸಾಂಸ್ಕೃತಿಕ ಜಾಥಾ, 1981ರಲ್ಲಿ ರೈತರೆಡೆಗೆ ಸಾಂಸ್ಕೃತಿಕ ಜಾಥಾ, 1985ರಲ್ಲಿ ಬರಗಾಲದೆದುರು ಸಮುದಾಯದ ಜಾಥಾ) ‘ಸಮುದಾಯ’ ನಡೆಸಿತು. ಮೊದಲ ಬಾರಿಯಂತೂ ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿಯವರು ಚುನಾವಣೆ ಎದುರಿಸುವಾಗಲೇ, ತುರ್ತು ಪರಿಸ್ಥಿತಿಯ ಕರಾಳ ವಿವರಗಳನ್ನುಳ್ಳ ‘ಇಂದಿರಾಗಾಂಧಿಯ ಸುಳ್ಳು ಪ್ರಮಾಣಪತ್ರ’ ಎಂಬ ನಾಟಕವನ್ನು ಚಿಕ್ಕಮಗಳೂರಿನ ಬೀದಿ ಬೀದಿಗಳಲ್ಲಿ ಪ್ರದರ್ಶನ ಮಾಡಿತ್ತು. ಇವೆಲ್ಲವೂ ಆ ಕಾಲಕ್ಕೆ ಕ್ರಾಂತಿಕಾರಿಯಾದ ನಾಟಕಗಳಾಗಿದ್ದವು.

ಯಾವುದೋ ಶಾಲಾ ಆವರಣದಲ್ಲಿಯೋ, ಸಣ್ಣ ಬಯಲಿನಲ್ಲಿಯೋ ಪ್ರದರ್ಶನವಾಗುತ್ತಿದ್ದ ಈ ನಾಟಕಗಳು ನೋಡುಗನಿಗೆ ಅವನದೇ ಕತೆಯನ್ನು ಬಿಚ್ಚಿಡುತ್ತಾ ಇದ್ದವು. ಹೀಗಾಗಿಯೇ ಆಯಾ ಊರಿನ ಜನ ಈ ರಂಗತಂಡಕ್ಕೆ ತಿನ್ನಲು ಊಟ ನೀಡಿ, ಮಲಗಲು ಜಾಗವನ್ನು ನೀಡಿ ಪ್ರೀತಿಯಿಂದ ಪೊರೆದರು. ಸಮುದಾಯವು ಬೀದಿ ನಾಟಕ ಚಳವಳಿಯನ್ನು ಆರಂಭಿಸುವ ಮೊದಲೇ ‘ಚಿತ್ರಾ’ ತಂಡದ ಮೂಲಕ ಎ.ಎಸ್. ಮೂರ್ತಿಯವರು ಬೀದಿ ನಾಟಕಗಳನ್ನು 1974ರ ಆಸುಪಾಸಲ್ಲಿ ಆರಂಭಿಸಿದ್ದರು. ಆದರೂ ‘ಸಮುದಾಯ’ದ ಬೀದಿ ನಾಟಕ ಚಳವಳಿಗೆ ಇದ್ದ ರಾಜಕೀಯ ಬದ್ಧತೆ ಮತ್ತು ಚಳವಳಿಯನ್ನು ಕಟ್ಟುವ ಶಿಸ್ತು ಈ ಬೀದಿ ನಾಟಕಗಳ ಜಾಥಾಗಳನ್ನು ಚಾರಿತ್ರಿಕವಾಗಿಸಿತು.

ಈ ಜಾಥಾಗಳಲ್ಲಿ ಸಿಜಿಕೆ ಅವರ ನಿರ್ದೇಶನದ ‘ಬೆಲ್ಚಿ’, ಪ್ರಸನ್ನ ನಿರ್ದೇಶನದ ‘ಪತ್ರೆಸಂಗಪ್ಪನ ಪ್ರಕರಣ’ ಮರೆಯಲಾಗದ ನಾಟಕಗಳಾಗಿದ್ದವು. ಈ ನಾಟಕಗಳು ದಲಿತರ ಮೇಲೆ ಆಗುವ ದೌರ್ಜನ್ಯವನ್ನು ಬಿಚ್ಚಿಡುತ್ತಾ ಆಳುವವರನ್ನು ಪ್ರಶ್ನಿಸುವ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಪ್ರೇರೇಪಿಸಿದ್ದವು. ಈ ನಾಟಕಗಳು ಸಾಮಾಜಿಕವಾಗಿ ಮೂಡಿಸಿದ ಅರಿವಿಗೂ ಮೀರಿ ಅನೇಕ ಹೊಸ ರಂಗಕರ್ಮಿಗಳನ್ನು ನಾಡಿನಾದ್ಯಂತ ಸೃಷ್ಟಿಸಿತು. ಬೆಂಗಳೂರು ಕೇಂದ್ರಿತವಾಗಿದ್ದ ‘ಸಮುದಾಯ’ವು ಪ್ರತೀ ಊರಿನಲ್ಲೂ ತನ್ನ ಇರವನ್ನು ಸ್ಥಾಪಿಸಿತು. ಇದರಿಂದಾಗಿ ಗುಲ್ಬರ್ಗ, ರಾಯಚೂರು, ಮಾನ್ವಿಯಂತಹ ಅನೇಕ ಊರುಗಳಲ್ಲಿ ಹೊಸ ನಾಟಕಕಾರರು ಹಾಗು ಕಲಾವಿದರು ಹುಟ್ಟಿಕೊಂಡದ್ದು ಕನ್ನಡ ರಂಗಭೂಮಿಯ ವಿಕೇಂದ್ರೀಕರಣದ ಮೊದಲ ಹೆಜ್ಜೆ ಎಂದು ಭಾವಿಸಬಹುದಾಗಿದೆ.

ಬರೀ ರಂಗಭೂಮಿ ಅಲ್ಲ...
ಒಂದು ತಲೆಮಾರಿನ ರಂಗಚಿಂತನೆಯನ್ನು ಕಟ್ಟಿಕೊಟ್ಟ ರಂಗತಂಡವೊಂದಕ್ಕೆ ಈಗ ನಾಲ್ಕನೆಯ ದಶಕದ ರಂಗಪಯಣ. ನಾಲ್ಕು ದಶಕಗಳ ಈ ಹಾದಿಯಲ್ಲಿ ‘ಸಮುದಾಯ’ ಕೇವಲ ರಂಗಭೂಮಿಯ ಕೆಲಸವನ್ನು ಮಾತ್ರವಲ್ಲ, ವಿಚಾರಸಂಕಿರಣಗಳನ್ನು ನಡೆಸಿದೆ, ಪತ್ರಿಕೆಯನ್ನು ಹೊರತಂದಿದೆ, ಸಿನಿಮಾ ಸಂಸ್ಕೃತಿಯನ್ನು ಕಟ್ಟುವ ನಿಟ್ಟಿನಲ್ಲಿ ದುಡಿದಿದೆ. ‘ಸಮುದಾಯ ವಾರ್ತಾ ಪತ್ರ’ ಎಂಬ ಬಹುಕಾಲ ಹೊರಬಂದ ಪತ್ರಿಕೆ ರಂಗಚರ್ಚೆಗಳನ್ನಲ್ಲದೆ, ಸಾಹಿತ್ಯಕ ಹಾಗೂ ರಾಜಕೀಯ ಚರ್ಚೆಗಳನ್ನೂ ಸಹ ನಡೆಸುತ್ತಾ ಇತ್ತು. ಈ ಪತ್ರಿಕೆಯನ್ನು ಆರಂಭದ ದಿನಗಳಲ್ಲಿ ರಾಮಚಂದ್ರ ದೇವ ಅವರು ಸಂಪಾದಿಸುತ್ತಾ ಇದ್ದರು.

ಮೂರು ನಾಲ್ಕು ವರ್ಷಗಳ ಕಾಲ ನಿಯಮಿತವಾಗಿ ಬಂದ ಈ ಪತ್ರಿಕೆಯು ನಂತರ ಆಗೀಗ ಎಂಬಂತೆ ಮತ್ತೆರಡು ವರ್ಷಗಳ ಕಾಲ ಪ್ರಕಟವಾಗಿ ನಿಧಾನವಾಗಿ ಮರೆಗೆ ಸರಿಯಿತು. ‘ಸಮುದಾಯ’ ಸಿನಿಮಾ ಸಹ ನಂತರದ ದಿನಗಳಲ್ಲಿ ಅಸ್ತಿತ್ವಕ್ಕೆ ಬಂದು ಅನೇಕ ಸದಭಿರುಚಿಯ ಸಿನಿಮಾಗಳ ಪ್ರದರ್ಶನ ಮತ್ತು ಚರ್ಚೆಗೆ ಕಾರಣವಾಯಿತು. ಸಮುದಾಯ ರಂಗ ಚಳವಳಿ ಕನ್ನಡ ಚಿತ್ರರಂಗಕ್ಕೆ ಮುಖ್ಯಮಂತ್ರಿ ಚಂದ್ರು, ಶ್ರೀನಿವಾಸಮೂರ್ತಿ ಮುಂತಾದವರನ್ನು ಕೊಡುಗೆಯಾಗಿ ನೀಡಿತು. ಹೀಗೆ ಹಲವು ಬಗೆಯಲ್ಲಿ ಸಾಂಸ್ಕೃತಿಕ ಲೋಕವನ್ನು ಕಟ್ಟಲು ಶ್ರಮಿಸಿದ ಕನ್ನಡದ ಇತಿಹಾಸದಲ್ಲಿ ಮರೆಯಲಾಗದ ಸಂಘಟನೆಯಾಗಿ ಇಂದಿಗೂ ಜೀವಂತವಾಗಿದೆ.

ಏಳು ಬೀಳುಗಳು...
ನಿರಂತರವಾಗಿ ನಾಲ್ಕು ದಶಕದ ಕಳೆದ ಹಾದಿಯಲ್ಲಿ ಅಲ್ಲಲ್ಲಿ ಈ ತಂಡವು ಎಡರು ತೊಡರುಗಳಿಗೆ ಸಿಲುಕಿರುವುದೂ ಉಂಟು. ಸಿಜಿಕೆ ಅಂಥವರು ಈ ತಂಡದ ಎರಡನೆಯ ಜಾಥಾದ ಹೊತ್ತಿಗೆ ಸಿಡಿದು ಹೊರಬಂದ ಬೆನ್ನಲ್ಲೇ ‘ಸಮುದಾಯ’ದ ಚಟುವಟಿಕೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿತ್ತು. ಅದಾಗಿ ಕೆಲವೇ ವರ್ಷಗಳಲ್ಲಿ ಪ್ರಸನ್ನ ಸಹ ತಂಡದಿಂದ ದೂರ ನಡೆದರು. ಹೀಗಾಗಿ ಸುಮಾರು ವರ್ಷ ಚಟುವಟಿಕೆಯಿಲ್ಲದೆ ಇದ್ದ ತಂಡವನ್ನು ಮತ್ತೆ ಗುಂಡಣ್ಣ, ಶಶಿಧರ್ ಬಾರಿಘಾಟ್ ಅವರು ಜೀವಂತವಾಗಿಸಿದರು. ಈ ಹೊಸಬರು ನಡೆಸಿದ ಮೂರನೇ ಜಾಥಾ ಇದಕ್ಕೆ ಸಾಕ್ಷಿಯಾಯಿತು.

ಬೆಂಗಳೂರು ‘ಸಮುದಾಯ’ವು ತಣ್ಣಗಿದ್ದ ಕಾಲದಲ್ಲಿ ಕೆಜಿಎಫ್, ಮೈಸೂರು, ಹಾವೇರಿ ಮತ್ತು ಗುಲ್ಬರ್ಗಾ ‘ಸಮುದಾಯ’ಗಳು ಬೀದಿ ನಾಟಕ ಚಳವಳಿಯನ್ನು ಜೀವಂತ ವಾಗಿರಿಸಿದ್ದವು ಎಂಬುದನ್ನೂ ಮರೆಯಲಾಗದು. ಆದರೆ ದಾರ್ಶನಿಕ ನಾಯಕರುಗಳಿಲ್ಲದ ಕೊರತೆಯಿಂದ ಕೆಲಕಾಲ ತಣ್ಣಗಿದ್ದ ‘ಸಮುದಾಯ’ ಈಗ ಮತ್ತೆ ಗರಿಗೆದರಿದೆ. ಈಚೆಗೆ ಅನೇಕ ಹೊಸ ನಾಟಕಗಳನ್ನು ‘ಪ್ರೊಸಿನೀಯಂ’ ರಂಗಭೂಮಿಗಾಗಿ ಸಿದ್ಧಪಡಿಸಿದೆ. ಈಗ ಮೂರನೆಯ ತಲೆಮಾರು ‘ಸಮುದಾಯ’ ಹಸಿರಾಗಿಡಲು ಶ್ರಮಿಸುತ್ತಿದೆ. ‘ಕಲೆಗಾಗಿ ಕಲೆ ಅಲ್ಲ, ಜನರಿಗಾಗಿ ಕಲೆ’ ಎಂದು 1975ರಲ್ಲಿ ಆರಂಭವಾದ ರಂಗತಂಡವು ಸಮಾಜದ ಎಲ್ಲಾ ವಿಭಾಗಗಳನ್ನೂ ಒಳಗೊಳ್ಳುತ್ತಾ ನಾಲ್ಕು ದಶಕದ ಪಯಣವನ್ನು ನಡೆಸಿರುವುದು ಕನ್ನಡ ರಂಗಭೂಮಿಯ ನೆನಪಿನ ಪುಟಗಳಲ್ಲಿ ಸದಾ ಉಳಿಯಬೇಕಾದ ಸಂಗತಿಯಾಗಿದೆ.
*
ಪ್ರಸನ್ನ - ಸಿಜಿಕೆಯಿಂದ ಗುಂಡಣ್ಣ - ವೆಂಕಿಯವರೆಗೆ
‘ಸಮುದಾಯ’ ಸಂಘಟನೆಯು ಮಹತ್ತರ ಉದ್ದೇಶಗಳೊಡನೆ ಆರಂಭವಾದ ನಂತರ ಆ ಸಂಘಟನೆಯಿಂದ ಅರಳಿದ ಪ್ರತಿಭೆಗಳು ಅನೇಕ. ಪ್ರಸನ್ನ ಮತ್ತು ಸಿಜಿಕೆ ಅವರ ನಾಯಕತ್ವದ ಆರಂಭದ ದಿನಗಳಲ್ಲಿ ‘ಸಮುದಾಯ’ ತಂಡದಿಂದ ಹೊರಬಂದ ರಂಗಪ್ರತಿಭೆಗಳು ಇಂದಿಗೂ ನಾಡಿನೆಲ್ಲೆಡೆ ರಂಗಭೂಮಿಯಲ್ಲಿ ತೊಡಗಿದ್ದಾರೆ. ಮಂಗಳೂರಿನ ಚಂದ್ರಹಾಸ ಉಲ್ಲಾಳ, ವಾಲ್ಟೇರ್ ಡಿಸೋಜಾ, ಉಚ್ಚಿಲರು, ಕಾರಂತರು ಇರಬಹುದು, ಗುಲ್ಬರ್ಗಾದ ಶಂಕರಯ್ಯ ಘಂಟಿ, ಆರ್.ಕೆ. ಹುಡುಗಿ ಅವರಿರಬಹುದು, ರಾಣೆಬೆನ್ನೂರು ಭಾಗದಿಂದ ಬೆಳೆದು ಬಂದ ಮಂಜುನಾಥ ಬೆಳಕೆರೆ ಅವರಂತವರಿರಬಹುದು, ಹರಪನಹಳ್ಳಿ ಸಮುದಾಯದಿಂದ ಬಂದ ಹಾಡುಗಾರ್ತಿ ಶಾಂತ ಇರಬಹುದು, ಬೆಂಗಳೂರು ಸಮುದಾಯದ ಭಾಗವಾಗಿದ್ದ ಸಿ. ಬಸವಲಿಂಗಯ್ಯ, ಜನಾರ್ದನ್ ಇರಬಹುದು, ಮೈಸೂರು ಭಾಗದಿಂದ ಬಂದ ಶಶಿಧರ್ ಭಾರಿಘಾಟ್, ರಮೇಶ್, ವಸುಧಾ ಇರಬಹುದು, ಕೆಜಿಎಫ್ ಸಮುದಾಯದ ಅಚ್ಯುತ್ ಇರಬಹುದು...

ಇವರೆಲ್ಲರ ಪ್ರತಿಭೆಗೆ ನೀರೆರೆದದ್ದು ‘ಸಮುದಾಯ’ದ ಜಾಥಾಗಳು. ನಂತರ ಇದೇ ತಂಡವೂ ಆರಂಭಿಸಿದ ‘ಸಮುದಾಯ’ದ ವಿಭಿನ್ನ ಘಟಕಗಳು ಸಹ ನಿರಂತರವಾಗಿ ರಂಗಚಳವಳಿ ಮತ್ತು ಇನ್ನಿತರ ಚಟುವಟಿಕೆಯಲ್ಲಿ ಇಂದಿಗೂ ತೊಡಗಿಕೊಂಡಿವೆ. ಹೀಗಾಗಿ ಇಂದು ‘ಸಮುದಾಯ’ ತನಗೆ ನಲವತ್ತು ವರ್ಷಗಳ ನಡಿಗೆಯ ಅನುಭವ ಇದೆ ಎಂದರೆ ಈ ಹಾದಿಯಲ್ಲಿ ನಾಡಿನಾದ್ಯಂತ ಅನೇಕಾನೇಕ ಪ್ರತಿಭೆಗಳನ್ನು ಅರಳಿಸಿದ ಹಾಗೂ ಬೆಳೆಸಿದ ವಿವರವಿದೆ. ಈ ಹಿನ್ನೆಲೆಯಲ್ಲಿ ‘ಸಮುದಾಯ’ದ ನಾಲ್ಕು ದಶಕದ ನಡಿಗೆಯನ್ನು ಆಧುನಿಕ ಕನ್ನಡ ರಂಗಭೂಮಿಯ ಮತ್ತು ಕನ್ನಡ ಸಾಂಸ್ಕೃತಿಕ ಲೋಕದ ಜೀವನಾಡಿ ಎಂದೆನ್ನಬಹುದು. ಇಂದು ಈ ಸಂಸ್ಥೆಗೆ ಗುಂಡಣ್ಣ ಅಧ್ಯಕ್ಷರು, ವೆಂಕಟೇಶ್ ಪ್ರಸಾದ್ಕಾ ರ್ಯದರ್ಶಿಗಳಾಗಿದ್ದಾರೆ. ‘ಸಮುದಾಯ’ವು ಪ್ರಜಾಸತ್ತಾತ್ಮಕ ವ್ಯವಸ್ಥೆಯೊಳಗಡೆ ನಡೆದು ಬಂದ ಅಪರೂಪದ ರಂಗ ಸಂಘಟನೆಯಾಗಿದೆ. 

ಲೇಖಕರು ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ, ನಿರ್ಮಾಪಕರು. ರಂಗಭೂಮಿ ಹಾಗೂ ಕಿರುತೆರೆಯಲ್ಲೂ ಪರಿಶ್ರಮ ಹೊಂದಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT