ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಕುಸ್ಮಾ ಸಡ್ಡು

ಆರ್‌ಟಿಇ: ‘ಮೊದಲು ಸರ್ಕಾರಿ ಶಾಲೆಗೇ ಮಕ್ಕಳನ್ನು ಸೇರಿಸಿ’
Last Updated 27 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ನೀಡುವ ಶೇ 25ರಷ್ಟು ಪ್ರವೇಶ ಮೀಸಲಾತಿಯಲ್ಲಿ ಮೊದಲು ಸರ್ಕಾರಿ ಶಾಲೆಗಳಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಮಕ್ಕಳನ್ನು ದಾಖಲು ಮಾಡಿಕೊಳ್ಳಿ. ಬಳಿಕವೂ ಅರ್ಹ ಮಕ್ಕಳು ಉಳಿದಿದ್ದರೆ ಖಾಸಗಿ ಅನುದಾನರಹಿತ ಶಾಲೆಗಳಿಗೆ ಕಳುಹಿಸಿ’.

ಹೀಗೆಂದು ಕರ್ನಾಟಕ ಅನುದಾನ­ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘವು (ಕುಸ್ಮಾ) ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದೆ. ಈ ಸಂಬಂಧ  ಕುಸ್ಮಾ ವಕೀಲ ಕೆ.ವಿ.ಧನಂಜಯ ಅವರು ಪ್ರಾಥಮಿಕ ಹಾಗೂ ಪ್ರೌಢ­ಶಿಕ್ಷಣ ಸಚಿವರಿಗೆ ಬುಧವಾರ ಆರು ಪುಟಗಳ ‘ಎಚ್ಚರಿಕೆ’ ಪತ್ರ ಬರೆದಿದ್ದಾರೆ.

ಇಲಾಖೆಯ ಪ್ರಧಾನ ಕಾರ್ಯ­ದರ್ಶಿ ಹಾಗೂ ಆಯುಕ್ತರಿಗೂ ಪತ್ರ ರವಾನಿ­ಸಿದ್ದಾರೆ. ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ಮಾಡುತ್ತಿರುವ ವೆಚ್ಚದ ಬಗ್ಗೆಯೂ ಪತ್ರದಲ್ಲಿ ಬೆಳಕು ಚೆಲ್ಲಿದ್ದಾರೆ. ‘ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಖಾಲಿ ಸೀಟುಗಳು ಖಾಲಿ ಇದ್ದರೂ ಖಾಸಗಿ ಶಾಲೆಗಳ ಕಡೆಗೆ ಯಾಕೆ ಬರುತ್ತೀರಿ’ ಎಂದು ಅವರು ಪ್ರಶ್ನಿಸಿದ್ದಾರೆ.

ಆರ್‌ಟಿಇ ಅಡಿಯಲ್ಲಿ ಶೇ 25 ಮೀಸ­ಲಾತಿಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಫೆ.19ರಂದು ಮುಕ್ತಾ­ಯ­ಗೊಂಡಿದೆ. ಈಗಾಗಲೇ ಬಹುತೇಕ ಶಾಲೆ­ಗಳು ಆಯ್ಕೆ ಪಟ್ಟಿಯನ್ನು ಆಯಾ ಕ್ಷೇತ್ರ ಶಿಕ್ಷಣಾಧಿ­ಕಾರಿಗಳಿಗೆ ಸಲ್ಲಿಸಿವೆ. ಮಾ. 3ರೊಳಗೆ ದಾಖಲಾತಿ ಪಟ್ಟಿ­ಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಾಸಗಿ ಶಾಲೆಗಳಿಗೆ ಕಳುಹಿಸಬೇಕಿದೆ.

ಒಟ್ಟಾರೆ ದಾಖಲಾತಿ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಈ ಹೊತ್ತಿನಲ್ಲೇ 1,800 ಸದಸ್ಯ ಶಾಲೆಗಳನ್ನು ಹೊಂದಿ­ರುವ ಸಂಘಟನೆಯು ಶಿಕ್ಷಣ ಇಲಾ­ಖೆಯ ಜೊತೆಗೆ ಸಂಘರ್ಷದ ಹಾದಿ ತುಳಿದಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ನಡೆ­ಯು­ವುದು ಮೇ ಅಂತ್ಯದಲ್ಲಿ. ಖಾಸಗಿ ಶಾಲೆ­ಗಳಲ್ಲಿ ಬಹುತೇಕ ದಾಖ­ಲಾತಿ ಪ್ರಕ್ರಿಯೆ ಈಗಾಗಲೇ ಪೂರ್ಣ­ಗೊಂಡಿದೆ. ಇಲಾಖೆ ಸೂಚನೆಯ ಹಿನ್ನೆಲೆಯಲ್ಲಿ  ಆರ್‌ಟಿಇ ಅನುಷ್ಠಾನಕ್ಕೆ ಹೆಚ್ಚಿನ ಶಾಲೆ­ಗಳು ಶೇ 25 ಸೀಟು ಮಾತ್ರ ಉಳಿಸಿಕೊಂಡಿವೆ.

‘ರಾಜ್ಯದಲ್ಲಿ 56,305 ಸರ್ಕಾರಿ ಪ್ರಾಥ­ಮಿಕ ಶಾಲೆಗಳು, 3,160 ಖಾಸಗಿ ಅನುದಾನಿತ ಶಾಲೆಗಳು, 11,386 ಖಾಸಗಿ ಅನುದಾನರಹಿತ ಶಾಲೆಗಳು ಇವೆ. ಶೇ 87 ಪ್ರಾಥಮಿಕ ಶಾಲೆಗಳು ಗ್ರಾಮೀಣ ಭಾಗದಲ್ಲಿ ಇವೆ. ಶೇ 89ರಷ್ಟು ಗ್ರಾಮೀಣ ಪ್ರಾಥಮಿಕ ಶಾಲೆಗಳು ಸರ್ಕಾರಿ ಶಾಲೆಗಳು ಆಗಿವೆ. ಸರ್ಕಾರಿ ಶಾಲೆಗಳ 2,28,681 ಶಿಕ್ಷಕರ ವೇತನ ಪಾವತಿಗಾಗಿಯೇ ರಾಜ್ಯ ಸರ್ಕಾರ ವಾರ್ಷಿಕ ₨3,292 ಕೋಟಿ ವೆಚ್ಚ ಮಾಡುತ್ತಿದೆ. ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಭಾರಿ ಖರ್ಚು ಮಾಡುತ್ತಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಶಾಲೆಗಳನ್ನು ಶುಷ್ಕಗೊಳಿಸಲು ಯಾಕೆ ಪ್ರಯತ್ನಿಸುತ್ತಿದ್ದಾರೆ’ ಎಂದು ಧನಂಜಯ್‌ ಕಟುವಾಗಿ ಪ್ರಶ್ನಿಸಿದ್ದಾರೆ.

‘ಸರ್ಕಾರ ಆರ್‌ಟಿಇ ಕಾಯ್ದೆ­ಯಡಿ ನೆರೆಹೊರೆ ಶಾಲೆಗಳನ್ನು ತಪ್ಪಾಗಿ ವ್ಯಾಖ್ಯಾ­ನಿಸಿದೆ. ಅನುದಾನಿತ ಶಾಲೆ­ಗಳನ್ನು ಮಾತ್ರ ನೆರೆಹೊರೆ ಶಾಲೆ­ಗ­ಳೆಂದು ಪರಿಗಣಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಆರ್‌ಟಿಇ ಕಾಯ್ದೆ ಅಡಿ ಮಕ್ಕಳನ್ನು ದಾಖಲು ಮಾಡಿಕೊಳ್ಳದೆ ನಮ್ಮ ಬಳಿಗೆ ಬಂದರೆ ಮರಳಿ ಸರ್ಕಾರಿ ಶಾಲೆಗಳಿಗೆ ಕಳುಹಿಸ­ಲಾ­­ಗುವುದು. ಯಾವ ಸರ್ಕಾರಿ ಶಾಲೆ­ಯಲ್ಲಿ ಸೀಟು­ಗಳು ಇವೆ ಎಂಬುದನ್ನೂ ಸಂಘಟನೆಯ ಸದಸ್ಯರು ತಿಳಿಸಲಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರ್‌ಟಿಇ ಕಾಯ್ದೆ ಅನುಷ್ಠಾನಕ್ಕೆ ‘ಕುಸ್ಮಾ’ ವಿರೋಧ ಇಲ್ಲ. ಬಡ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಹಿಂಜರಿಕೆ ಇಲ್ಲ. ಆದರೆ, ರಾಜ್ಯದಲ್ಲಿ ಸಮರ್ಪಕವಾಗಿ ಕಾಯ್ದೆ ಅನುಷ್ಠಾನ ಆಗುತ್ತಿಲ್ಲ. ಸಮಗ್ರವಾಗಿ ಕಾಯ್ದೆ ಅನುಷ್ಠಾನ ಆಗಬೇಕು. ಜೊತೆಗೆ, ಅನಗತ್ಯವಾಗಿ ಖಾಸಗಿ ಶಾಲೆಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು’ ಎಂದು ಅವರು ವಿನಂತಿಸಿದರು.

‘ಇಲಾಖೆ ತಪ್ಪಾಗಿ ಆರ್‌ಟಿಇ ಕಾಯ್ದೆಯನ್ನು ಅರ್ಥೈಸಿಕೊಂಡಿದೆ. ಈ ಕಾನೂನು ಒಂದು ರೀತಿ ಇದೆ. ಸರ್ಕಾರ ಮತ್ತೊಂದು ರೀತಿ ವ್ಯಾಖ್ಯಾನಿಸುತ್ತಿದೆ. ಇದನ್ನು ಮೊದಲು ಸರಿಪಡಿಸಬೇಕು. ಒಂದು ಪಕ್ಷ ಶಾಲೆಗಳನ್ನು ಮುಚ್ಚುತ್ತೇವೆ ಎಂದು ಹೇಳಿದರೂ ಇದಕ್ಕೆ ಬೆದರು­ವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಹಣ ಮರುಪಾವತಿ ಇಲ್ಲ
ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಸರಿಯಾಗಿ ಆರ್‌ಟಿಇ ಶುಲ್ಕ ಮರು­ಪಾವತಿ ಮಾಡುತ್ತಿಲ್ಲ. ಇದರಿಂದ ಶಾಲೆಗಳು ಸಮಸ್ಯೆ ಎದುರಿಸುತ್ತಿವೆ. ಒಂದೊಂದು ಶಾಲೆಗೆ ಒಂದೊಂದು ರೀತಿಯಲ್ಲಿ ಶುಲ್ಕ ಪಾವತಿ ಮಾಡ­ಲಾಗುತ್ತಿದೆ. ಈ ರೀತಿ ಮಾಡಿದರೆ ಶಾಲೆಗಳನ್ನು ನಡೆಸುವುದು ಕಷ್ಟ. ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಸಮಸ್ಯೆಯನ್ನು ಮನವರಿಕೆ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ.
–ಎ.ಮರಿಯಪ್ಪ, ಕುಸ್ಮಾ  ಕಾರ್ಯದರ್ಶಿ

ಕಾನೂನು ಪ್ರಕಾರ ಕ್ರಮ: ಎಚ್ಚರಿಕೆ
ಬುಧವಾರ ಸಂಜೆ ವರೆಗೂ ನನಗೆ ಪತ್ರ ಬಂದಿಲ್ಲ. ‘ಕುಸ್ಮಾ’ ಸಂಘಟನೆಯ ಸವಾಲಿನ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲ. ಆರ್‌ಟಿಇ ಅಡಿಯಲ್ಲಿ ಕಳೆದೆರಡು ವರ್ಷಗಳಲ್ಲಿ ಮಕ್ಕಳನ್ನು ದಾಖಲು ಮಾಡಿಕೊಂಡ ಮಾದರಿಯಲ್ಲೇ ಈ ವರ್ಷವೂ ಸೇರಿಸಿಕೊಳ್ಳಬೇಕು. ಅದೇ ರೀತಿ ಪ್ರಕ್ರಿಯೆ ನಡೆಯಲಿದೆ. ಮಕ್ಕಳ ದಾಖಲು ಮಾಡಿಕೊಳ್ಳಲು ನಿರಾಕರಿಸಿದ ಶಾಲೆಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು.
–ಮೊಹಮ್ಮದ್‌ ಮೊಹಿಸಿನ್‌,
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT