ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದ ಶ್ರೇಷ್ಠತೆ: ಪಿ.ವಿ.ನಾರಾಯಣ ಟೀಕೆ ಕಾರ್ನಾಡರ ಮಾನದಂಡವೇನು?

Last Updated 28 ಸೆಪ್ಟೆಂಬರ್ 2014, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ತಮ್ಮ ಬರಹ ಮತ್ತು ಬದುಕಿನ ಮೂಲಕ ಎಂದಿಗೂ ಜನ­ಸಾಮಾನ್ಯರ ಜತೆ ಬೆರೆ­ಯದ ಗಿರೀಶ ಕಾರ್ನಾಡ ಅವರನ್ನು ಹೈಟೆಕ್ ಸಾಹಿತಿ ಎನ್ನಬಹುದು’ ಎಂದು ಸಾಹಿತಿ ಪಿ.ವಿ.ನಾರಾಯಣ ಟೀಕಿಸಿದರು.

ನಗರದ ಉದಯಭಾನು ಕಲಾಸಂಘ­ದಲ್ಲಿ ಭಾನು­ವಾರ ಆಯೋಜಿಸಿದ್ದ ತಿಂಗಳ ಚಿಂತನ ಮಾಲೆ­ಯಲ್ಲಿ ಯು.ಆರ್.ಅನಂತಮೂರ್ತಿ ಅವರ ಸ್ಮರಣೆ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ನೈಪಾಲ್‌ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾರ್ನಾಡ ಅವರು, ಇದೀಗ ಅನಂತಮೂರ್ತಿ ಅವರ ‘ಸಂಸ್ಕಾರ’ ಕಾದಂಬರಿ ಬಳಿಕ ಸೃಷ್ಟಿಯಾಗಿದ್ದು ಎರಡನೇ ದರ್ಜೆ ಸಾಹಿತ್ಯ ಎಂದು ಹೇಳಿದ್ದಾರೆ. ಯಾವ ಮಾನದಂಡದ ತಕ್ಕಡಿ ಹಿಡಿದು ಇವರು ಕೃತಿಗಳ ಶ್ರೇಷ್ಠತೆ ಯನ್ನು ಅಳೆಯುತ್ತಾರೆ’ ಎಂದು ನಾರಾಯಣ ಪ್ರಶ್ನಿಸಿದರು.

‘ಪ್ರತಿಯೊಂದು ಕೃತಿಯ ಮೌಲ್ಯ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಕಾರ್ನಾಡರೇ ಬರೆದಿರುವ ನಾಟಕಗಳು ಜನಸಾಮಾನ್ಯರಿಗೆ ಎಷ್ಟರಮಟ್ಟಿಗೆ ತಲುಪಿವೆ ಎಂದು ಅವರು ಪ್ರಶ್ನಿಸಿ­ಕೊಳ್ಳಲಿ. ತುಘಲಕ್‌, ಯಯಾತಿ, ಹಯ­ವದನ ನಾಟಕಗಳ ಪಾತ್ರ, ಸನ್ನಿವೇಶಗಳಲ್ಲಿ ಇರುವುದು ಬೌದ್ಧಿಕ ಚರ್ಚೆ ಮಾತ್ರ. ಅದು ಎಷ್ಟೋ ಬಾರಿ ಸಾಮಾನ್ಯ ಜನರಿಗೆ ಅರ್ಥವಾಗು­ವುದಿಲ್ಲ’ ಎಂದು ಹೇಳಿದರು.

‘ಎಷ್ಟೋ ಬಾರಿ ಅನಂತಮೂರ್ತಿ ಅವರಲ್ಲಿ ಕೂಡ ವಿರೋಧಾಭಾಸವನ್ನು ಕಂಡಿದ್ದೇನೆ. ಅವರಿಗೂ ರಾಜ್ಯಸಭಾ ಸದಸ್ಯರಾಗಬೇಕೆಂಬ ಆಸೆ ಇತ್ತು. ಸಾಮಾನ್ಯ ಮನುಷ್ಯನಲ್ಲಿ ಇರಬಹುದಾದ ಎಲ್ಲ ದೌರ್ಬಲ್ಯಗಳೂ ಅವರಲ್ಲಿ ಇದ್ದವು. ಅನೇಕ ವರ್ಷಗಳ ಕಾಲ ಸಾವನ್ನು ಎದುರಿಸುತ್ತ ಬಂದಿದ್ದ ಅವರು ಕೂಡ, ಎಲ್ಲರಂತೆ ಸಾವಿನ ಭಯದ ತಲ್ಲಣಗಳಿಂದ ಕೊನೆಯ ದಿನಗಳಲ್ಲಿ ಸಾವಿಗೆ ಶರಣಾಗತರಾಗಿ ಗಾಯತ್ರಿ ಮಂತ್ರ ಜಪಿಸಿರ­ಬಹುದು.  ಸತ್ತ ಮೇಲೆ ಅದನ್ನು ಗೇಲಿ ಮಾಡು­ವುದು ಅಷ್ಟು ಸಮಂಜಸವಲ್ಲ. ಯಾರ ನಂಬಿಕೆ­ಯನ್ನು ನಾವು ಲಘುವಾಗಿ ತಿರಸ್ಕರಿಸಬಾರದು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ  ಅವರ ನಿರ್ದೇಶನದ  ‘ಅನಂತಮೂರ್ತಿ, ನಾಟ್‌ ಎ ಬಯೋಗ್ರಫಿ... ಬಟ್‌ ಎ ಹೈಪಾಥೀಸಿಸ್’ ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಕ್ಷುಲ್ಲಕ ಹೇಳಿಕೆ
ಇದೇ ಸಮಾರಂಭದಲ್ಲಿ ಸುದ್ದಿಗಾರ­ರೊಂದಿಗೆ ಗಿರೀಶ್ ಕಾಸರವಳ್ಳಿ ಮಾತ­ನಾಡಿ,‘ಅನಂತಮೂರ್ತಿ ಅವರನ್ನು ಕುರಿತು ನಾನು ನಿರ್ಮಿಸಿರುವ ಸಾಕ್ಷ್ಯಚಿತ್ರ ಸುಳ್ಳಿನಿಂದ ಕೂಡಿದೆ ಎನ್ನುವ ಅರ್ಥದಲ್ಲಿ ಕಾರ್ನಾಡರು ಮಾತನಾಡಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಅವರೊಬ್ಬ ದೊಡ್ಡ ಚಿಂತಕ. ಅವರ ಚಿಂತನೆಗಳ ಮೇಲೆಯೇ ನನ್ನ ಚಿತ್ರವಿದೆ. ನಾನು ಸುಳ್ಳಂತೂ ಹೇಳಿಲ್ಲ. ಉತ್ಪ್ರೇಕ್ಷೆ ಮಾಡಿಲ್ಲ. ನಾನು ಸುಳ್ಳು ಹೇಳಿದ್ದರೆ ಇದನ್ನು ಸವಾಲಾಗಿ ತೆಗೆದುಕೊಂಡು ಕಾರ್ನಾಡರೂ ಒಂದು ಸಿನಿಮಾ ಮಾಡಲಿ. ಅವರೇಕೆ ಬಾಯಿಮುಚ್ಚಿಕೊಂಡು ಕುಳಿತಿರ­ಬೇಕು. ಅವರೂ ನಾಲ್ಕು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿಯೂ ಹೊಗಳಿಕೆ­ಗಳು ಇಲ್ವಾ?’ ಎಂದು ಪ್ರಶ್ನಿಸಿದರು.

‘ರಾಜಕೀಯಕ್ಕಾಗಿ ಈ ರೀತಿಯ ಕ್ಷುಲಕ ಹೇಳಿಕೆ ನೀಡುತ್ತಿರುವ ಕಾರ್ನಾಡರು ಯಾಕೆ ರಾಜಕೀಯಕ್ಕೆ ಬರಬಾರದು. ನನ್ನ ಪ್ರಕಾರ ಚಿಂತಕರು ರಾಜಕೀಯಕ್ಕೆ ಬರದಿರುವುದೇ ದೊಡ್ಡ ದುರಂತ. ವಿವಾದಗಳಿಗೆ ಹೆದರಿ ಇವರು ಮನೆಯಲ್ಲಿ ಕುಳಿತುಕೊಳ್ಳುವುದು ತಪ್ಪು. ಶಿವರಾಮ ಕಾರಂತ, ಅನಂತಮೂರ್ತಿ, ಸುಬ್ಬಣ್ಣ, ಲಂಕೇಶ್‌ ತೆರನಾದ ಸಾಹಿತಿಗಳು ವಿವಾದಗಳಿಗೆ ಹೆದರಿದವರಲ್ಲ.  ನಿರ್ಭಯವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT