ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ಬಣ್ಣ ಎನ್ನುವ ಕಥೆಗಾರ ಮಂಜಣ್ಣ

Last Updated 7 ನವೆಂಬರ್ 2015, 19:32 IST
ಅಕ್ಷರ ಗಾತ್ರ

ಮತ್ತೂರು ಸುಬ್ಬಣ್ಣ (ಹೊಸಹಳ್ಳಿ ಬಾಲಸುಬ್ರಹ್ಮಣ್ಯ) ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದವರು. ನಿವೃತ್ತಿಯಾಗುತ್ತಿದ್ದಂತೆಯೇ ಮಕ್ಕಳೊಡನೆಯ ನಂಟನ್ನು ಇನ್ನೂ ಹೆಚ್ಚೇ ಅನ್ನುವ ಹಾಗೆ ಹಲವಾರು ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಹಿರಿಯ ಅಭಿನಯ ಪಟುವೂ ಆದ ಅವರು ‘ಕಥಾಭಿನಯ’ ಮಾಧ್ಯಮವನ್ನ ಹುಟ್ಟು ಹಾಕಿಕೊಂಡು ಈಗ ನಿಗದಿತವಾಗಿ ಮಕ್ಕಳ ನಡುವೆ ಕತೆ ಹೇಳುತ್ತ ಸಮಯ ಅರ್ಥಪೂರ್ಣ ಆಗಿಸಿಕೊಳ್ಳುತ್ತಿದ್ದಾರೆ.

* ‘ಕಥಾಭಿನಯ’ ಕಾರ್ಯಕ್ರಮಗಳು ನಿಮ್ಮ ನಿವೃತ್ತಿಯ ನಂತರ ಬಲು ಚುರುಕುಗೊಂಡಿವೆ. ಇದಕ್ಕೆ ಏನು ಕಾರಣ ಇರಬಹುದು? ಈಗ ಫ್ರೀ ಬರ್ಡ್ ಅಂತಾನಾ?
‘ಕಥಾಭಿನಯ’ ಕಾರ್ಯಕ್ರಮಗಳು ನೀವು ಭಾವಿಸಿರುವಂತೆ, ನನ್ನ ನಿವೃತ್ತಿಯ ನಂತರ ಚುರುಕುಗೊಂಡಿರುವುದು ವೇದ್ಯ. 2014ರಲ್ಲಿ ನಾನು ನಿವೃತ್ತಿಯಾದಾಗ, ಶಾಲಾ ಮಕ್ಕಳಿಗಾಗಿ ಬೇಸಿಗೆಯಲ್ಲಿ ಎರಡೆರಡು ಶಿಬಿರಗಳನ್ನು ಎರಡೆರಡು ಕಡೆ ನಡೆಸಲು ಉತ್ಸಾಹದಿಂದ ಅನುವಾದೆ. 5 ರಿಂದ 10 ವರ್ಷದ ಮಕ್ಕಳಿಗೆ ‘ಕಥಾಸಮಯ’ವೆಂಬ 20 ಗಂಟೆಗಳ 15 ದಿನಗಳ ಶಿಬಿರ ಹಾಗೂ ‘ರಂಗಸಮಯ’ವೆಂಬ, 10 ರಿಂದ 18 ವರ್ಷದ ಮಕ್ಕಳಿಗೆ ನಾಟಕ ಕಲೆಯ ಬಗ್ಗೆ 60 ಗಂಟೆಗಳ 30 ದಿನಗಳ ಶಿಬಿರ ನಡೆಸಿದೆ.

ಆಶ್ಚರ್ಯವೆಂಬಂತೆ ಕಥೆ ಕೇಳಲು ಬಂದ ಮಕ್ಕಳು ನಾಟಕದಲ್ಲೂ ಆಸಕ್ತಿ ತೋರಿಸಿದರು. ರಂಗಶಿಬಿರದ ಮಕ್ಕಳು ಕಥೆಯಲ್ಲೂ ಆಸಕ್ತಿ ತೋರಿಸಿದರು. ಹಾಗಾಗಿ ಮರು ವರ್ಷ ಎಲ್ಲ ಮಕ್ಕಳನ್ನೂ ಸೇರಿಸಿ ‘ಕಥಾಭಿನಯ’ವೆಂಬ ಶಿಬಿರವನ್ನು 8 ರಿಂದ 18 ವರ್ಷದ ಮಕ್ಕಳಿಗೆ ನಡೆಸಿದೆ. ಮಕ್ಕಳಿಂದ ಹಾಗೂ ಪೋಷಕರಿಂದ ಪ್ರತಿಕ್ರಿಯೆ ಚೆನ್ನಾಗಿ ಬಂದಿತು. ಅಂದಿನಿಂದ ಶಾಲಾ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ಭಾಗವಹಿಸುಕೆ ಹಾಗು ಪ್ರತಿಕ್ರಿಯೆ ಚೆನ್ನಾಗಿಯೇ ಇದೆ.

* ಮಕ್ಕಳು ಕತೆಯಲ್ಲಿ ಹೇಗೆ ಒಂದಾಗುತ್ತಿದ್ದಾರೆ? ಅವರಿಗೆ ಹೇಗೆಲ್ಲ ಮುಟ್ಟುತ್ತಿವೆ ಕತೆಗಳು?
ನಾನಾಗಿಯೇ ಕಂಡುಕೊಂಡಿರುವ ‘ಕಥಾಭಿನಯ’ ಮಾಧ್ಯಮದಲ್ಲಿ ಕಥೆಗೆ ಎಷ್ಟು ಪ್ರಾಮುಖ್ಯತೆಯೋ ಅಷ್ಟೇ ಪ್ರಾಮುಖ್ಯತೆ ಅಭಿನಯಕ್ಕೂ ಇದೆ. ಕಥೆಯನ್ನು ಕೇಳುವುದರ ಜೊತೆಗೆ ವೀಕ್ಷಕರು ಪಾತ್ರಗಳು ತಮ್ಮ ಮುಂದೆ ಅವತರಿಸುವುದನ್ನು ಕಾಣುತ್ತಾರೆ. ಅಭಿನಯದ ಎಲ್ಲ ಆಯಾಮಗಳನ್ನೂ ಇಲ್ಲಿ ಅಳವಡಿಸಿಕೊಳ್ಳಲಾಗುವುದು. ಧ್ವನಿಯ ಏರಿಳಿತ, ಪಾತ್ರಗಳಲ್ಲಿ ಪರಕಾಯ ಪ್ರವೇಶ, ಮಕ್ಕಳ ಮಟ್ಟವನ್ನು ಮೀರದ ಭಾಷೆ, ಪದಗಳ ಆಯ್ಕೆ, ಆಂಗಿಕ ಭಾಷೆ, ವೇದಿಕೆಯನ್ನೆಲ್ಲ ಅಗತ್ಯಕ್ಕೆ ತಕ್ಕಹಾಗೆ ಬಳಸಿಕೊಳ್ಳುವುದು, ಕಥೆಯ ಕುತೂಹಲವನ್ನು ಕಾಯ್ದಿಡುವುದು, ಸಂಭಾಷಣೆಗಳ ನಡುವಿನ ಮೌನ– ಈ ಎಲ್ಲ ಸೂಕ್ಷ್ಮಗಳನ್ನು ಗ್ರಹಿಸಿ ‘ಕಥಾಭಿನಯ’ವನ್ನು ಪ್ರಸ್ತುತಪಡಿಸಲಾಗುವುದು.

ಮಕ್ಕಳೊಡನೆ ನೇರ ಸಂಪರ್ಕವಿರುವುದರಿಂದ ಅವರು ಸಹಜವಾಗಿ ಕಥೆಯಲ್ಲಿ ಮಗ್ನರಾಗಿರುತ್ತಾರೆ. ಮುಂದೇನು? ಮುಂದೇನು? ಎನ್ನುವ ಕುತೂಹಲದಿಂದ ಕಣ್ಣರಳಿಸಿ ಕೇಳುತ್ತಾರೆ. ಕೆಲವೊಮ್ಮೆ ಕಥೆಯ ಪಾತ್ರಗಳು ಯೋಚಿಸುವಂತೆ ಕೇಳುಗ ಮಕ್ಕಳೂ ಯೋಚಿಸಿ ಭಾಗವಹಿಸುತ್ತಾರೆ. ಕಥೆಯ ಪರಿಣಾಮವನ್ನು ಅರಿಯಲು ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮಕ್ಕಳಿಂದ ಬಂದ ಪ್ರಶ್ನೆಗಳಿಗೆ ಮಕ್ಕಳೇ ಉತ್ತರಿಸುವಂತೆ ನೋಡಿಕೊಳ್ಳಲಾಗುತ್ತದೆ.

* ಕತೆಯನ್ನು ಮಕ್ಕಳಿಗೆ ಮುಟ್ಟಿಸಲು ಇದು ಒಳ್ಳೆಯ ಸಹಕಾರಿ ತಂತ್ರ ಅನಿಸಿದೆಯೆ?
ಕಥೆಗಳನ್ನು ಮಕ್ಕಳಿಗೆ ಮುಟ್ಟಿಸಲು ‘ಕಥಾಭಿನಯ’ ಅತ್ಯುತ್ತಮ ತಂತ್ರ ಮಾಧ್ಯಮವೆಂದೇ ನನ್ನ ಅಭಿಪ್ರಾಯ. ಕೇವಲ ಶಾಲಾ ಮಕ್ಕಳಿಗಲ್ಲದೆ ‘ಕಥಾಭಿನಯ’ ಕಾರ್ಯಕ್ರಮವನ್ನು ನಾನು ಶೈಕ್ಷಣಿಕ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿರುವ ಶಾಲೆಗಳಲ್ಲಿ ವಾಹನ ಚಾಲಕ ಸಿಬ್ಬಂದಿಗೆ, ಸಹಾಯಕರಿಗೆ ಹಾಗೂ ಆಯಮ್ಮರಿಗೂ ಕೂಡ ವಿಸ್ತರಿಸಿದ್ದೇನೆ.

ಶಾಲಾ ಶಿಕ್ಷಣದಿಂದ ವಂಚಿತರಾಗಿರಬಹುದಾದ ಇಂತಹ ವರ್ಗಕ್ಕೆ ‘ಕಥಾಭಿನಯ’ ಒಳ್ಳೆಯ ಪರಿಣಾಮ ಬೀರಿದೆ ಎನ್ನಲಡ್ಡಿಯಿಲ್ಲ. ಇದೊಂದು ಒಳ್ಳೆಯ ತಂತ್ರ ಏಕೆಂದರೆ ಮಕ್ಕಳಿಗೆ ಬೋರ್ ಎನಿಸಬಹುದಾದ ಪಠ್ಯವಸ್ತು ಇಲ್ಲಿಲ್ಲ. ಅಭಿನಯದ ಮೂಲಕ ಅಂತರಂಗದ ಸೂಕ್ಷ್ಮಾತಿಸೂಕ್ಷ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಸಾಧ್ಯ. ತಮ್ಮೆದುರಲ್ಲೇ ಪಾತ್ರಗಳು ಮೈದಳೆಯುವುದರಿಂದ ಮಕ್ಕಳು ಬಹಳ ಬೇಗನೆ ಪಾತ್ರಗಳೊಂದಿಗೆ ತಮ್ಮನ್ನು ಸಮೀಕರಿಸಿಕೊಳ್ಳುತ್ತಾರೆ.

* ಈ ಬಗೆಯ ಕಥೆ ಹೇಳುವುದಕ್ಕೆ ಕತೆಗಳಲ್ಲಿ ಇಂಥಿಂಥ ಬಗೆಯವೇ ಹೆಚ್ಚು ಅನುಕೂಲ ಅಂತ ಅನಿಸಿದೆಯೆ?
ಎಲ್ಲ ಬಗೆಯ ಕಥೆಗಳನ್ನೂ ‘ಕಥಾಭಿನಯ’ದ ಮೂಲಕ ಪ್ರಯತ್ನಿಸಿದ್ದೇನೆ. ಭಾವನೆಗಳು ಪ್ರಧಾನವಾಗಿರುವ ಕಥಾವಸ್ತು ಮಕ್ಕಳಿಗೆ ಇಷ್ಟವಾಗುತ್ತದೆ. ಇನ್ನುಳಿದಂತೆ ಸಾಹಸ, ಕುತೂಹಲ, ಹಾಸ್ಯ, ರೋಮಾಂಚನ, ಇಂದ್ರಜಾಲ, ಅದ್ಭುತ, ಆಶ್ಚರ್ಯ– ಮುಂತಾದ ವಸ್ತುಗಳೂ ಮಕ್ಕಳನ್ನು ರಂಜಿಸುತ್ತವೆ.

* ನಿಮ್ಮ ಕಾರ್ಯಕ್ರಮಗಳು ಈಗೆಲ್ಲ ಶಹರಗಳ ಮಕ್ಕಳ ನಡುವೆಯೇ ನಡೆದಿದೆ. ಈ ಮಕ್ಕಳಿಗೆ ಇಂಟರ್‌ನೆಟ್‌ನಂಥ ಮಾಧ್ಯಮಗಳು ಸುಲಭದಲ್ಲಿ ಲಭ್ಯವಾಗುವುದುಂಟು. ನಿಮ್ಮ ಕಥೆ ಕೇಳುವಿಕೆಗೆ ಅವರು ಹೇಗೆಲ್ಲ ಸ್ಪಂದಿಸುತ್ತಾರೆ? ಅಪ್ಪ ಅಮ್ಮಂದಿರ ಸ್ಪಂದನ ಹೇಗಿದೆ?
ನಿಮ್ಮ ಪ್ರಶ್ನೆ ಈಗಿನ ಸಂದರ್ಭಕ್ಕೆ ಅತಿ ಪ್ರಸ್ತುತ ಮತ್ತು ಗಮನೀಯ. ಈಗಿನ ಮಕ್ಕಳಿಗೆ ಇಂಟರ್‌ನೆಟ್ ಸೌಲಭ್ಯ ಬೆರಳಂಚಿನಲ್ಲಿ ಲಭ್ಯ. ಹೊಸ ಮಾಧ್ಯಮಗಳು ಮಕ್ಕಳನ್ನು ಸಹಜವಾಗಿ ಆಕರ್ಷಿಸುತ್ತವೆ. ಆದರೆ ಕೇವಲ ಆಕರ್ಷಣೆಯಿಂದ ಮಕ್ಕಳಿಗೆ ಅನುಕೂಲವಾಗುವುದಿಲ್ಲ. ಮಕ್ಕಳ ವ್ಯಕ್ತಿತ್ವ ನಿರ್ಮಾಣವಾಗಬೇಕಾದರೆ ಅವರು ತಮ್ಮ ಕಣ್ಣು ಕಿವಿಗಳನ್ನು ಅರಳಿಸಿ ಪ್ರತ್ಯಕ್ಷವಾಗಿ ಕೇಳಿ ಅನುಭವಿಸುವ ವಾತಾವರಣ ನಿರ್ಮಾಣವಾಗಬೇಕು.

‘ಕಥಾಭಿನಯ’ದಲ್ಲಿ ಅಸಂಖ್ಯ ಸಾಧ್ಯತೆಗಳು ಗೋಚರಿಸುತ್ತಿವೆ. ಮಕ್ಕಳ ಅಗತ್ಯಕ್ಕೆ ತಕ್ಕಂತೆ ಕಥೆಗಳನ್ನು ಆರಿಸಿಕೊಳ್ಳಬಹುದು. ಮಕ್ಕಳ ಆಸಕ್ತಿಯನ್ನು ಗಮನಿಸುತ್ತಲೇ ಕಥೆಯ ಅವಧಿಯನ್ನು ಹ್ರಸ್ವ ಅಥವಾ  ದೀರ್ಘಗೊಳಿಸಬಹುದು. ಕಥೆಯ ಕೊನೆಯಲ್ಲಿ ಪ್ರಶ್ನೆಗಳನ್ನು ಕೇಳಿ, ಅವರಿಂದಲೇ ಉತ್ತರ ಹೇಳಿಸಿ, ಮಕ್ಕಳು ಅರ್ಥಮಾಡಿಕೊಂಡಿದ್ದಾರೆ ಎಂದು ಖಾತರಿಪಡಿಸಿಕೊಳ್ಳಬಹುದು. ನೀತಿಯಂತೂ ಸಹಜವಾಗಿ ಎಂಬಂತೆ ಮಕ್ಕಳ ಅರಿವಿನಾಳಕ್ಕೆ ಇಳಿಯುತ್ತದೆ. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಅತಿ ಮುಖ್ಯ. ಅವರು ತಮ್ಮ ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯುವಂತಾದರೆ ಒಳ್ಳೆಯದು.

‘ಕಥಾಭಿನಯ’ದಂತಹ ಕಾರ್ಯಕ್ರಮದಲ್ಲಿ ಪೋಷಕರೂ ಉಪಸ್ಥಿತರಿದ್ದರೆ ಅದರ ಪರಿಣಾಮ ಕೂಡ ಹೆಚ್ಚು. ಇಂಟರ್‌ನೆಟ್, ಮೊಬೈಲ್, ಟ್ಯಾಬ್ಲೆಟ್‌ನಂತಹ ಇ–ಮಾಧ್ಯಮಗಳ ಪರಿಣಾಮಗಳ ನಡುವೆಯೂ, ‘ಕಥಾಭಿನಯ’ದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಧನಾತ್ಮಕವಾಗಿ ವರ್ತಿಸುತ್ತಾರೆಂಬ ಅಂಶ ನನ್ನ ಗಮನಕ್ಕೆ ಬಂದಿದೆ. ಇದಕ್ಕಿಂತ ಬೇರೆ ಪ್ರಶಸ್ತಿ ಬೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT