ಬೆಂಗಳೂರು: ‘ಅಪರಿಚಿತ ನಗರಕ್ಕೆ ವಲಸೆ ಹೋಗುವುದು ಕೃತಿಯೊಂದನ್ನು ಭಾಷಾಂತರಿಸಿದಂತೆ’ ಎಂದು ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಅಭಿಪ್ರಾಯಪಟ್ಟರು.
ಅಹರ್ನಿಶಿ ಪ್ರಕಾಶನ ಸಂಸ್ಥೆಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ ರೇಣುಕಾ ನಿಡಗುಂದಿ ಅವರ ‘ದಿಲ್ಲಿ ಡೈರಿಯ ಪುಟಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾಷಾಂತರ ಪ್ರಕ್ರಿಯೆಯಲ್ಲಿ ಮೂಲಕೃತಿ ನಮ್ಮದೆ ಎನಿಸುವಂತೆ ದಿನ ಕಳೆದಂತೆ ಅಪರಿಚಿತ ನಗರವೂ ನಮ್ಮದೇ ಆಗಿಬಿಡುತ್ತದೆ. ಇಂಥ ಅನುಭವ ರೇಣುಕಾ ಅವರ ಪುಸ್ತಕದಲ್ಲಿ ದಾಖಲಾಗಿದೆ’ ಎಂದರು.
ಲೇಖಕ ಡಾ.ಪುರುಷೋತ್ತಮ ಬಿಳಿಮಲೆ, ‘ಮೂರು ಸಾವಿರ ವರ್ಷಗಳ ಚರಿತ್ರೆಯನ್ನು ಒಳಗೊಂಡ ದೆಹಲಿಯು ಪರಂಪರೆ ಹಾಗೂ ಆಧುನಿಕತೆಯನ್ನು ಒಟ್ಟಿಗೆ ಬದುಕುತ್ತಿದೆ. ಲೇಖಕಿ ತಮ್ಮ ಪುಸ್ತಕದಲ್ಲಿ ದೆಹಲಿಯ ಜೀವನವನ್ನು ಅನಾವರಣಗೊಳಿಸಿದ್ದಾರೆ’ ಎಂದು ಹೇಳಿದರು.
‘ಆತ್ಮವಿಲ್ಲದ ನಗರ ಎನ್ನಲಾಗುವ ದೆಹಲಿಗೂ ಒಂದು ಆತ್ಮವಿದೆ ಎಂಬುದು ಪುಸ್ತಕದಲ್ಲಿ ದಾಖಲಾಗಿದೆ. ದಕ್ಷಿಣ ಭಾರತದ ಇತರೆ ಭಾಷಿಕರು ತೋರುವ ಸ್ವಾಭಿಮಾನವನ್ನು ಕನ್ನಡಿಗರು ತೋರುವುದಿಲ್ಲ. ದೆಹಲಿಯಲ್ಲಿ ಹೆಚ್ಚಿನ ಕನ್ನಡಿಗರು ಕೀಳರಿಮೆ ಅನುಭವಿಸಿದಂತೆ ಕಾಣುತ್ತಾರೆ’ ಎಂದರು.
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ಮಟ್ಟು, ‘ಅಹಂಕಾರ, ಅಭದ್ರತೆ ಹಾಗೂ ಹಗಲುಗನಸಿನ ನಗರ ಎನಿಸಿಕೊಳ್ಳುವ ದೆಹಲಿಯ ಮತ್ತೊಂದು ಮುಖವನ್ನು ಪುಸ್ತಕ ತೋರುತ್ತದೆ. ದೆಹಲಿಯನ್ನು ಲೇಖಕಿ ತಾಯ್ತನದ ಕಣ್ಣುಗಳಿಂದ ನೋಡಿದ್ದಾರೆ’ ಎಂದರು.
ಅಹರ್ನಿಶಿ ಪ್ರಕಾಶನ ಹೊರತಂದಿರುವ ಪುಸ್ತಕದ ಬೆಲೆ ₨ 140.