ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣೀಕರಣದ ಭ್ರಮೆಯೊಡೆಯುವ ‘ಹಳಗನ್ನಡ’

Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

‘ಚಪಡೇನ ಲಿಖಿತೇ-–ಲಿಪಿಕರೇಣ’. 2,300 ವರ್ಷಗಳ ಹಿಂದೆ ರಾಜಾ­ಶೋಕನ ಆದೇಶದ ಮೇರೆಗೆ ಕನ್ನಡ ನಾಡಿನಲ್ಲಿ ಬಂಡೆಗಲ್ಲಿನ ಮೇಲೆ ಶಾಸನವನ್ನು ಬರೆದ ಲಿಪಿ­ಕಾರ ಚಪಡ. ಗಾಂಧಾರ ನಾಡಿನಿಂದ ಬಂದ ಈತ­ನಿಗೆ ಈ ನಾಡಿನಲ್ಲಿ ಲಿಪಿ ಮೂಡಿಸಿದ ಮೊದಲ ಲಿಪಿಕಾರನೆಂಬ ಹೆಗ್ಗಳಿಕೆ  ಸಲ್ಲುತ್ತದೆ. ಹಾಗೆಂದು ತಿಳಿಸಿಕೊಟ್ಟವರು ಷ.ಶೆಟ್ಟರ್. 

ಇವರು ಕನ್ನಡ­ನಾಡಿನ ಮೊದಲ ಸಹಸ್ರಮಾನದ ಎರಡೂವರೆ ಸಾವಿರ ಶಾಸನಗಳನ್ನು ಜಾಲಾಡಿ ತೆಗೆದು ಕಟ್ಟಿದ ಚರಿತ್ರೆಯ ಬೃಹತ್ ಗ್ರಂಥ: ‘ಹಳಗನ್ನಡ-– ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’ ಇಂದು ನಮ್ಮ ಮುಂದಿದೆ. ಮತ್ತೆ ಮತ್ತೆ ಚರಿತ್ರೆಯ ಸಂಶೋಧನೆ ನಡೆಯಬೇಕೆಂಬ ಮಾತನ್ನು ಈ ಕೃತಿ ಅನು­ಮೋದಿಸಿ­ದಂತಿದೆ. ಈವರೆಗೆ ನಂಬಿದ್ದ ಹಲವು ‘ಮಿಥ್‌’ಗಳನ್ನು ಇದು ಒಡೆದುಹಾಕುತ್ತದೆ. ಅದ­ರಲ್ಲೂ ಸಂಸ್ಕೃತೀಕರಣ ಮತ್ತು ಬ್ರಾಹ್ಮಣೀಕರಣ­ವೆಂಬ ಭ್ರಮೆಗಳು ಇಲ್ಲಿ ಕುಸಿದು ಬೀಳುತ್ತವೆ.

ಲಿಪಿಯ ವಿಕಾಸದಲ್ಲೂ ಎಷ್ಟೊಂದು ಕಥೆ­ಗಳು: ಯಾರು ಬರೆದರು? ಯಾಕೆ ಬರೆದರು? ಯಾರು ಬರೆಸಿದರು? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ. ಮೌರ್ಯ ದೊರೆ ಅಶೋಕನ ಶಾಸನ ಬರೆಸುವ ವಿಶೇಷವಾದ ಆಸ್ಥೆ ದೇಶದಾ­ದ್ಯಂತ ಬರವಣಿಗೆಯ ಸಂಸ್ಕೃತಿಯನ್ನು ಹರಡಿತು. ‘ಬರೆದರೆ ಅನರ್ಹರೊಡನೆ ಅರಿವನ್ನು ಹಂಚಿ­ಕೊಳ್ಳ­ಬೇಕಾಗುವುದೆಂಬ ಆತಂಕದಲ್ಲಿ ಅಂದಿನ ಒಂದು ವರ್ಗವು ಅರಿವಿನ ಕೀಲಿಯನ್ನು ಕಂಠ­ಸರಳು­ಗಳ ಹಿಂದೆ ಅಡಗಿಸಿಟ್ಟಿತ್ತು.

ಇದನ್ನು ಬಿಡು­ಗಡೆ ಮಾಡಿ ಬರೆಯುತ್ತಾ ಬೆಳೆಯುವ ಮಾರ್ಗ­ವನ್ನು ತಿಳಿಸಿಕೊಟ್ಟವರಲ್ಲಿ ಬೌದ್ಧರು ಮೊದಲಿ­ಗರು’. ಈ ವಾದವನ್ನು ಕನ್ನಡದ ನೆಲಕ್ಕೂ ಅನ್ವ­ಯಿಸಿ ವಿಚಾರವನ್ನು ಮಂಡಿಸಿದ್ದಾರೆ. ಇಂತಹ ಹಲವು ಬೆಚ್ಚಿಬೀಳಿಸುವ ಸಂಗತಿಗಳು ಇಲ್ಲಿ ಕಂಡು­ಬರುತ್ತವೆ. ಲಿಪಿಬರವಣಿಗೆ ಬ್ರಾಹ್ಮಣರ ಆಸಕ್ತಿಯಾಗಿರ­ಲಿಲ್ಲ. ವೈದಿಕ ವ್ಯವಹಾರದ ಬಗೆಗೆ ಹೆಚ್ಚು ತೊಡಗಿಕೊಂಡಿದ್ದರಿಂದ ಮೊದಲ ಸಹಸ್ರಮಾನ­ದಲ್ಲಿ ಈ ನಾಡಿನಲ್ಲಿ  ‘ಕವಿಗಳಾಗಿ, ಸಾಹಿತಿ­ಗ­ಳಾಗಿ, ವೈಚಾರಿಕರಾಗಿ ವೈದಿಕರಾರೂ ಹೆಸರು ಮಾಡ­ಲಿಲ್ಲ.’

ಸಂಸ್ಕೃತ ಭಾಷೆಯಲ್ಲಿ  ಲಿಪಿ ಮೂಡಿಸಿ­ದವರು ವೈದಿಕೇತರರಾದ ವಿಶ್ವ­ಕರ್ಮರು. ಎಂಟನೇ ಶತಮಾನದಲ್ಲಿ ವೈದಿಕ­ವ್ಯವಸ್ಥೆ ಬಹು­ತೇಕ ಕುಸಿದು ಬಿದ್ದಾಗ ಆ ಸ್ಥಾನ­ವನ್ನು ತುಂಬಲು ಮುಂದೆ ಬಂದವರು ಪೌರಾಣಿ­ಕರು ಮತ್ತು ಶೂದ್ರರು. ಹಾಗಾಗಿ ಎಂಟನೇ ಶತಮಾನದ ನಂತರ ಬ್ರಾಹ್ಮಣೇತರರು ಹೆಚ್ಚಾಗಿ  ದಾನದತ್ತಿ­ಗಳನ್ನು ಪಡೆದರು. ಸಂಸ್ಕೃತ ಭಾಷೆಯ ವ್ಯವಹಾರ ಬಹುತೇಕ ಬ್ರಾಹ್ಮಣ ಸಮುದಾಯ­ದಲ್ಲಿ ನಡೆದು­ದ­ರಿಂದ ಉಳಿದ ಸಮುದಾಯ­ಗಳು ಅದರ ಲಾಭ ಪಡೆಯುವುದಕ್ಕಿಂತ, ಶೂದ್ರ ಸಮುದಾಯಗಳ ಭಾಷೆ ಮತ್ತು ಸಂಸ್ಕೃತಿಯಲ್ಲಿ ಕೊಡುಕೊಳೆ ಹೆಚ್ಚಾಗಿ ನಡೆದಿದೆ ಎಂಬುದನ್ನು ಸಾಬೀತು ಮಾಡಲು ಈ ಶಾಸನಗಳ ನೆರವು ಪಡೆದಿದ್ದಾರೆ.

ಪ್ರಾಚೀನ ಲಿಪಿ ಅಧ್ಯಯನ ಈ ನಾಡಿನಲ್ಲಿ ನಡೆದೇ ಇದೆ. ಆದರೆ ಷ.ಶೆಟ್ಟರ್‌ ಆಸಕ್ತಿ ಭಿನ್ನ­ವಾದುದು. ಲಿಪಿಯ ತಜ್ಞರು ಮಾತ್ರವಾಗದೆ ಚರಿತ್ರೆಕಾರರು, ಭಾಷಾತಜ್ಞರು, ಕವಿಚರಿತ್ರೆ­ಕಾರರು, ವೈಯ್ಯಾಕರಣಿಗಳು ಎಲ್ಲವೂ ಆಗಿ ಈ ಕೃತಿಯಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಈ ಕೃತಿಯ  ಮೂಲ ಪ್ರಶ್ನೆ ಏಳುವುದು ಲಿಪಿಕಾರರ ಹಿನ್ನೆಲೆಯಲ್ಲಿ. ಕಲ್ಲಿನ ಮೇಲೆ ತಾಮ್ರಪಟಗಳ ಮೇಲೆ ಲಿಪಿಯನ್ನು ಕೊರೆದವನ ಬದುಕು ಏನು? ಎಂಬುದು ತಿಳಿಯುತ್ತದೆ. ಮೂಲಕರ್ತೃವನ್ನೇ ಬಿಟ್ಟು ಶಾಸನ ಅಧ್ಯಯನದ ಫಲವನ್ನು ಮಾತ್ರ ಮೆಲ್ಲುತ್ತಿದ್ದ ನಮಗೆ ಹೊಸ ಕಣ್ನೋಟವನ್ನು ಇದು ಕೊಡುತ್ತದೆ.

ಶೆಟ್ಟರ್‌ ಅವರು ಈ ಹಿಂದೆಯೂ ಶಿಲ್ಪವನ್ನು ಬಿಟ್ಟು ಶಿಲ್ಪಿಗಳ ಬಗೆಗೆ ಒಲವು ತೋರಿದ್ದರು.  ಶಿಲ್ಪಿಗಳ ಹೆಜ್ಜೆಗುರುತಿನ ಅವರ ಶೋಧನೆ ವಿದ್ವತ್‌­ಲೋಕದ ಗಮನವನ್ನು ಸೆಳೆದಿತ್ತು. ಮೂಲತಃ ಕಲೆಯ ಇತಿಹಾಸದಲ್ಲಿ ಅವರಿಗೆ ಆಸಕ್ತಿ. ಹೀಗಾಗಿ ಅವರ ಹೊಯ್ಸಳ ವಾಸ್ತು­ಶಿಲ್ಪದ ಅಧ್ಯಯನವು ಎರಡು ಸಂಪುಟಗಳಲ್ಲಿ   ಪ್ರಕಟಗೊಂಡಿವೆ. ಜಾಗತಿಕ ಮಟ್ಟದಲ್ಲಿ ಅವರಿಗೆ ಹೆಸರು ತಂದುಕೊಟ್ಟ ಸಂಶೋಧನೆಗಳೆಂದರೆ ‘ಸಾವನ್ನು ಅರಸಿ’ ಮತ್ತು ‘ಸಾವಿಗೆ ಆಹ್ವಾನ’.

ಕನ್ನಡ–ಇಂಗ್ಲಿಷ್ ಭಾಷೆಗಳೆರಡರಲ್ಲೂ ಇರುವ ಈ ಕೃತಿಗಳು ಜೈನರ ಸಲ್ಲೇಖನದ ಆಚರಣೆಯ ಕುತೂಹಲದಿಂದ ರೂಪು ಪಡೆದವು. ಈ ಕೃತಿ­ಗಳು ಮೊದಲು ಇಂಗ್ಲಿಷ್‌ನಲ್ಲಿ ಬಂದ ಕಾರಣ­ದಿಂದ ಅಷ್ಟಾಗಿ  ಕನ್ನಡ ಓದುಗರ ಗಮನ ಸೆಳೆಯ­ಲಿಲ್ಲ. ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದ ಈ ಚರಿತ್ರೆಕಾರರು ಕನ್ನಡಿಗರ ಕೈಗೆಟಕುವಂತಾ­ದುದು ಅವರ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು–ನುಡಿ’ ಕೃತಿಯಿಂದ. ಈ ಕೃತಿಯು ನೆಲದ ಜನ ಹೊತ್ತು ಮೆರೆದು ಒಬ್ಬ ವಿದ್ವಾಂಸನಿಗೆ ಸಿಗಬೇಕಾದ ಓದುಗರ ಪ್ರೀತಿ­ಯನ್ನು ತಂದುಕೊಟ್ಟಿತು.

ಸಂಶೋಧನೆಗಳು ತಾಯಿನುಡಿಯಲ್ಲಿ ನಡೆಯಬೇಕು, ಅದರ ಸಹಜತೆಯೇ ಅದರ ಸಾಮರ್ಥ್ಯವಾಗಿರುತ್ತ­ದೆಂಬುದಕ್ಕೆ ಹಿಡಿದ ಸೊಡರು ‘ಶಂಗಂ ತಮಿಳಗಂ’. ಈ ಎರಡೂ ಸಂಶೋಧನೆಗಳು ಕನ್ನಡ ನಾಡಿನ ಪ್ರಾಚೀನರ ಬದುಕಿನ ಮೇಲೆ ಬೆಳಕು ಚೆಲ್ಲುತ್ತವೆ. ಕನ್ನಡ ಭಾಷೆ–-ಸಾಹಿತ್ಯವನ್ನು ಸಂಸ್ಕೃತದ ಹಿನ್ನೆಲೆಯಲ್ಲಿ ನೋಡುವುದು ಬೆಳೆದು ಬಂದಿದೆ. ಆದರೆ ‘ಕವಿರಾಜಮಾರ್ಗ’ ಕೃತಿಯನ್ನು ನೆಪವಾಗಿರಿಸಿಕೊಂಡು ದ್ರಾವಿಡ ಮೂಲದ ಅಧ್ಯಯನವನ್ನು  ತೋರಿಸಿಕೊಟ್ಟ ಕೃತಿ ‘ಶಂಗಂ ತಮಿಳಗಂ’.

ಹಾಗೆಯೇ ಕನ್ನಡ ಭಾಷೆ ಹಾಗೂ ಲಿಪಿಯ ಬೆಳವಣಿಗೆಯಲ್ಲಿ  ಪ್ರಾಕೃತದ ಪ್ರಭಾವ­ವನ್ನು  ಗಮನಿಸಬೇಕಾದ ಅಗತ್ಯವನ್ನು ಬೆರಳು ಮಾಡಿ ತೋರುತ್ತಿರುವ ಪುಸ್ತಕ ‘ಹಳಗನ್ನಡ’. ಈ ಎಲ್ಲದರ ಹಿಂದಿರುವ ಬೌದ್ಧಧರ್ಮದ ಮಹತ್ವ ಕರ್ನಾಟಕ ಚರಿತ್ರೆಯನ್ನು ಹೊಸ ಕ್ರಮದಲ್ಲಿ ನೋಡುವಂತೆ ಮಾಡುತ್ತದೆ. ಈ ಎರಡೂ ಸಂಶೋಧನೆಗಳಿಂದ ಕನ್ನಡ ನಾಡಿನಲ್ಲಿ ಆರಂಭ­ವಾದ ರಾಜತ್ವದ ನೆಲೆಗಳನ್ನು ಅರ್ಥಮಾಡಿ­ಕೊಳ್ಳಲು ನೆರವಾಗುತ್ತದೆ. ರಾಜತ್ವ ಬೆಳೆದು­ಬರುವಾಗ ಹಲವು ಅಂಶಗಳು ಅದಕ್ಕೆ ಪೂರಕ­ವಾಗಿ ಕೆಲಸ ಮಾಡಿರುತ್ತವೆ.

ಕರ್ನಾಟಕದ ಕದಂಬರ ಕುಲದ ಹುಟ್ಟಿನ ಬಗ್ಗೆ ಇದ್ದ ಈವರೆಗಿನ ಕಥೆಗಳು ಬ್ರಾಹ್ಮಣ ಮೂಲವನ್ನು ಹೇಳುತ್ತಿದ್ದು ಅದನ್ನು ನಿರಾಕರಿಸುವ ಹಲವು ಪುರಾವೆಗಳನ್ನು ಶೆಟ್ಟರ್ ನಮಗೆ ತೋರಿಸುತ್ತಾರೆ. ಕದಂಬರೂ ಆರಂಭದಲ್ಲಿ ಬೌದ್ಧಧರ್ಮದ ಏಳಿಗೆಯನ್ನು ಬಯಸಿದವರು. ಆನಂತರ ವೈದಿಕರ ನೆರಳಿಗೆ ಹೋಗು­ತ್ತಾರೆ. ಅಲ್ಲಿಯವರೆಗೆ ಅಂದರೆ ಸುಮಾರು 600 ವರ್ಷಗಳ ಕಾಲ ಪ್ರಾಕೃತ ಭಾಷೆ ಈ ನಾಡಿನ ವ್ಯವಹಾರ ಭಾಷೆಯಾಗಿತ್ತು. ಮುಂದೆ ಪ್ರಾಕೃತದೊಂದಿಗೆ ಬೆರೆತ ಕನ್ನಡ–ಪ್ರಾಕೃತ ಮಿಶ್ರಿತ ಸಂಸ್ಕೃತ, ಸಂಸ್ಕೃತಭೂಯಿಷ್ಠ ಕನ್ನಡ  ಹೀಗೆ ಮಾರ್ಪಾಡಾಗುತ್ತಾ ಬಂದಿದೆ.

ದೊಡ್ಡ ಸಂಖ್ಯೆಯಲ್ಲಿ ಸಂಸ್ಕೃತ ಶಾಸನಗಳು ಕದಂಬರ ಕಾಲದಲ್ಲಿ ತಾಮ್ರಪಟದ ಮೇಲೆ ರಚಿತವಾಗಿದ್ದು ಅವು ಧರ್ಮದತ್ತಿಯ ಹೊಸ ವ್ಯಾಖ್ಯಾನ ಮತ್ತು ಹೊಸ ಆರ್ಥಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡಿದವೆನ್ನಬಹುದು. ಗಂಗರ ಕಾಲದ ವಿಶೇಷವೆಂದರೆ ಅವರು ಬ್ರಾಹ್ಮಣೇತರರ ಸೇವೆಯನ್ನು ಗುರುತಿಸಿ ಗೌರವಿಸಿದರು. ಹೋರಾ­ಡಿದ ವೀರರಿಗೆ ಅವರು ಪಟ್ಟ ಕಟ್ಟುತ್ತಿದ್ದರು.
‘ಹಳಗನ್ನಡ’ ಕೃತಿಯ ಸೆಳೆತ ಲಿಪಿಕಾರನ ಕಡೆಗೆ. ಅದರಲ್ಲೂ ವಿಶ್ವಕರ್ಮ, ತ್ವಷ್ಟಾರ– -ತಟಾರ-– ತಟ್ಟಕ, ಕಂಚುಗಾರ, ಬಡಗಿ ಇವರು ನಡೆಸಿದ ಲಿಪಿ ವ್ಯವಸಾಯದ ಬಗೆಗೆ ಕೇಂದ್ರೀಕೃತ­ವಾಗಿದೆ.

ಲಿಪಿಕಾರರಾಗಿದ್ದ ವಿಶ್ವಕರ್ಮರು ವೈದಿಕರಿಗಿಂತ ಹೆಚ್ಚಿನ ದತ್ತಿಗಳನ್ನು ಬ್ರಹ್ಮದೇಯ­ಗಳನ್ನು  ಪಡೆದುಕೊಂಡ ನಿದರ್ಶನಗಳೂ ಇವೆ (ಬ್ರಾಹ್ಮಣರಿಗೆ ನೀಡುತ್ತಿದ್ದ ಭೂಮಿಯನ್ನು ಬ್ರಹ್ಮ ದೇಯಗಳೆನ್ನುತ್ತಿದ್ದರು). ಲಿಪಿಕಾರನೇ ಶಾಸನ ಸಾಹಿತ್ಯವನ್ನು ಬರೆಯುತ್ತಿದ್ದ ರೂಢಿಯೂ ಇತ್ತೆಂಬುದಕ್ಕೂ ಸಾಕಷ್ಟು ಪುರಾವೆಗಳನ್ನು ನೀಡಿದ್ದಾರೆ. ಲಿಪಿ ಜನಸಾಮಾನ್ಯರದಾಗಿರಲಿಲ್ಲವೆಂಬ ಭಾವನೆಯೇ ನಮ್ಮನ್ನು ಶಾಸನಗಳ ಬಗೆಗೆ ಮುಜು­ಗರವನ್ನು  ಮೂಡಿಸಿತ್ತು. ಹಾಗೆ ಭಾವಿ­ಸಲೂ ಕಾರಣಗಳಿವೆ.

ಆಧುನಿಕ ಕಾಲದಲ್ಲಿ ಚರಿತ್ರೆ ಬರೆಯತೊಡಗಿದ ಆರಂಭದ ವಿದ್ವಾಂ­ಸರು ತಪ್ಪಾಗಿ ಗ್ರಹಿಸಿ ಬ್ರಾಹ್ಮಣರು ಮಾತ್ರವೇ ಜ್ಞಾನವನ್ನು, ಧರ್ಮವನ್ನೂ, ವಿಶೇಷ ಚಿಂತನೆ­ಗಳೆಲ್ಲವನ್ನೂ ನೀಡಿದವರೆಂಬಂತೆ ಹೇಳುತ್ತಾ ಬಂದುದರಿಂದ, ಉಳಿದ ಸಮುದಾಯಗಳು ತಮ್ಮ ಮೂಲಗಳನ್ನು ಹುಡುಕಿಕೊಳ್ಳುವಂತೆ ಮಾಡಿವೆ. ಎಂ.ಎನ್. ಶ್ರೀನಿವಾಸ್‌ ಅವರು ಹೇಳುವ ‘ಸಂಸ್ಕೃತೀಕರಣ’ ಅಂದರೆ ಅದರ ಅರ್ಥ ‘ಬ್ರಾಹ್ಮಣೀಕರಣ’ವೇ ಆಗಿದೆ. ಬುಡಕಟ್ಟು ಹಾಗೂ ತಳ ಸಮುದಾಯಗಳು ತಮ್ಮ ಉನ್ನತಿ­ಯನ್ನು ಸಂಸ್ಕೃತಾನುಕರಣೆಯಲ್ಲಿ ಕಾಣುತ್ತ ವೆಂದು ಶ್ರೀನಿವಾಸ್‌ ಹೇಳುತ್ತಾರೆ.

ಅಂದರೆ ಸರಳ ಮಾತಿನಲ್ಲಿ ಬ್ರಾಹ್ಮಣರ ಬದುಕಿನ ಅನುಕರಣೆ ಎಂದಂತಾಗುತ್ತದೆ. ಹೀಗೆ ವಿವರಿಸತೊಡಗಿ ಆ ಜಾಡಿನಲ್ಲೇ ನಂತರದ ಚರಿತ್ರೆ ಕುರಿತ ಸಂಶೋ­ಧನೆ­ಗಳು ನಡೆದಿವೆ. ರಾಜಮನೆತನಗಳು, ಕವಿ­ಗಳು ಮತ್ತಾವುದೇ ಮಹತ್ವದ ವಿಚಾರವನ್ನು ಹೇಳುವಾಗ ಅದರಲ್ಲಿ ಬ್ರಾಹ್ಮಣ್ಯವನ್ನು ಹುಡು­ಕು­ವುದು ಸಹಜವಾಗಿ ನಡೆದುಬಂದಿತ್ತು. ದೇವರು, ಧರ್ಮ ಎಲ್ಲವೂ ಬಾಹ್ಮಣರಿಗೆ ಸೇರಿದ್ದೆಂಬಂತೆ ಭಾವಿಸಲಾಗುತ್ತಿತ್ತು. 

ಭಾರತದಲ್ಲಿ ತಲೆ ಎತ್ತಿದ ದ್ರಾವಿಡ ಐಡೆಂಟಿ­ಟಿಯ ಹೋರಾಟಗಳು, ತಳಸ್ತರದ ಹೋರಾಟ­ಗಳು, ಕಡೆಗೆ ದಲಿತ ಚಳವಳಿ– ಇವು ತಮ್ಮತನದ ಹುಡುಕಾಟದಲ್ಲಿ ಸ್ಥಾಪಿತ ವಿಚಾರಗಳನ್ನು ಮುರಿದು ಕಟ್ಟುವ ಯತ್ನದಲ್ಲಿ ತೊಡಗಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಲಿಪಿಕಾರನೊಬ್ಬ ಬಡಗಿ, ಅಕ್ಕಸಾಲಿ ಅಥವಾ ಕಂಚುಗಾರನಾಗಿದ್ದ ಎನ್ನು­ವುದ­ರಲ್ಲಿ ಹೊಸ ಸಂಭ್ರಮ ಕಾಣುತ್ತದೆ.  ತಳ­ಸ್ತರದ ಚರಿತ್ರೆ ಕಟ್ಟಿಕೊಳ್ಳಲು ಶಾಸನಸಾಹಿತ್ಯದ ಮೊರೆ ಹೋಗಬೇಕೆನಿಸಿತ್ತು.

ಬ್ರಾಹ್ಮಣೀಕರಣದ ಭ್ರಮೆಗಳನ್ನು ಕಳಚುವುದು ಪ್ರಜ್ಞಾಪೂರ್ವಕ­ವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಬ್ರಾಹ್ಮಣೇ­ತರ ಸಮುದಾಯಗಳಲ್ಲಿ ನಡೆದೇ ಇರುತ್ತದೆ. ಸೌಜನ್ಯದಿಂದ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ಬರವಣಿಗೆಗಳು ಹಾಗೂ ಆಕ್ರೋಶ­ದಿಂದ ಹೇಳಿದ ಬರವಣಿಗೆಗಳು ಎರಡೂ ನಮ್ಮ ನಡುವೆ ನಡೆದೇ ಇವೆ. ಇಂತಹ ಸಾಹಿತ್ಯ ರಚಿಸಿದ ಕುವೆಂಪು ನಿಂದನೆಗೆ ಗುರಿ­ಯಾಗಿದ್ದನ್ನೂ ಇಲ್ಲಿ ನೆನೆಯ ಬಹುದು.  ‘ಶೂದ್ರ ತಪಸ್ವಿ’, ‘ಜಲಗಾರ’ ಇವೆಲ್ಲಾ ಶೂದ್ರ ವಿಮೋಚ­ನೆಯ ನೆಲೆಯಲ್ಲಿ ಹುಟ್ಟಿದ ಸಾಹಿತ್ಯವೇ ಆಗಿದೆ. ಲೋಹಿಯಾರ ರಾಮ ಕೃಷ್ಣ ಶಿವನ ಕುರಿತ ವಿಚಾರ, ಡಿ.ಆರ್ ನಾಗರಾಜರ ‘ಅಲ್ಲಮ ಮತ್ತು ಶೈವ ಪ್ರತಿಭೆ’ ಈ ಹುಡುಕಾಟದಲ್ಲಿ ಕಟ್ಟಿಕೊಟ್ಟ ವಿಚಾರಗಳೇ ಆಗಿವೆ.

‘ಹಳಗನ್ನಡ’ ಕೃತಿಯಲ್ಲಿ ‘ವೈದಿಕರಿಂದ ದೂರ ನಿಂತ ರಾಜಮನೆತನಗಳು’ ಎಂದು ಒಂದು ಅಧ್ಯಾಯವನ್ನೇ ಕಾಣಬಹುದು. ಗಂಗರು, ನೊಳಂಬರು, ಅಳುಪರು, ಬಾಣರು, ಚೋಳರು ಮುಂತಾದವರ ಆಳ್ವಿಕೆಯಲ್ಲಿ ಹೇಗೆ ಉಳಿದ ಸಮುದಾಯಗಳು ಮನ್ನಣೆಗೆ ಒಳ­ಗಾಗಿವೆ ಎಂಬುದನ್ನು ವಿವರಿಸುತ್ತಾ ಹೋಗಿ­ದ್ದಾರೆ. ಕಡೆಗೆ ರಾಜಮನೆತನವೊಂದು ತೆರಿಗೆ ಕೊಡದ ವೈದಿಕರ ಕೊಲೆ ಮಾಡಿದ ಶಾಸನದ ಉಲ್ಲೇಖವೂ ಬರುತ್ತದೆ. ಬಹುಶಃ ಆ ಕಾಲ­ದಲ್ಲೂ ಬ್ರಾಹ್ಮಣ ವಿರೋಧದ ನಡೆಯನ್ನು ಪ್ರಕಟಪಡಿಸಿಕೊಳ್ಳಲು ಬಯಸಿದ್ದರೇ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕಾಗುತ್ತದೆ. ಅಧಿ­ಕಾ­ರದ ಸವಲತ್ತುಗಳನ್ನು ಬ್ರಾಹ್ಮಣರು ಪಡೆದಿರು­ತ್ತಾರೆಂಬ ಗುಮಾನಿಯೇ ಇದಕ್ಕೆ ಕಾರಣ­ವಾಗಿರಲೂಬಹುದು. 

ಈ ಎಲ್ಲಾ ರಾಜಕೀಯದೊಳಗೆ ರೂಪಿತ­ವಾದ ಭಾಷೆ, ಸಾಹಿತ್ಯವನ್ನೂ ಹೊಸ ದೃಷ್ಟಿ­ಕೋನದಲ್ಲಿ ಮರುಓದಿಗೆ ಒಳಪಡಿಸಿಕೊಳ್ಳ­ಬೇಕಾಗಿದೆ. ಚರಿತ್ರೆ ಪ್ರಸಕ್ತ ರಾಜಕೀಯದಲ್ಲೇ ರೂಪುಗೊಳ್ಳುತ್ತದೆ. ಮತ್ತೆ ಮತ್ತೆ ಜಾತಿ ಚರ್ಚೆ ನಡೆಯುವ ಕಾರಣವೂ ಇದೇ ಆಗಿದೆ. ಸಂಸ್ಕೃತಕ್ಕೆ ಸಿಕ್ಕ ಗೌರವ ಪ್ರಾಕೃತ ಭಾಷೆಗೆ ಸಿಗದಿರಲೂ ಇದೇ ಕಾರಣವಾಗಿದೆ. ಪ್ರಾಕೃತವನ್ನು ಹೊತ್ತ ಲಿಪಿ­ಯನ್ನು ಬ್ರಾಹ್ಮಿ ಎಂದು ಮುಂದೊಮ್ಮೆ ಕರೆಯ­ಲಾಗಿದೆ, ಅಶೋಕನ ಕಾಲಕ್ಕೆ ಹಾಗೆ ಕರೆದಿರ­ಲಿಲ್ಲ– ಇಂತಹ ಹಲವು ಪ್ರಶ್ನೆಗಳನ್ನೂ ಈ ಕೃತಿ ಹುಟ್ಟುಹಾಕಿದೆ.

ಎಂಬತ್ತರ ಹರಯದಲ್ಲೂ, ಮೂಗಿನ ತುದಿಯಲ್ಲಿ ಕನ್ನಡಕವನ್ನಿರಿಸಿಕೊಂಡು ಪುಸ್ತಕಗಳ ರಾಶಿಯಲ್ಲಿ ಮುಗುಳ್ನಗುವ ಶೆಟ್ಟರರ ಜೊತೆ ಮಾತಿಗೆ ಕೂತರೆ ತಾಸುಗಳು ಕಳೆದು ಹೋಗು­ವುದು ಅರಿವಿಗೆ ಬಾರದು. ಹೆಚ್ಚಾಗಿ ಜನರ ಜೊತೆ ಬೆರೆಯದೆ ಚಿಂತನೆಗೇ ಹೆಚ್ಚು ಸಮಯವನ್ನು ಕೊಟ್ಟುಕೊಂಡವರು  ಅವರು. ಸಣ್ಣ ಪುಟ್ಟ ಆಮಿಷಗಳನ್ನು ಬದಿಗೊತ್ತಿ ಬೃಹತ್ ಯೋಜನೆ­ಗಳಲ್ಲಿ ತೃಪ್ತಿ ಪಡೆದವರು. ಶುಷ್ಕ ವಿಚಾರವಂತ­ರಲ್ಲ. ಕಲೆ, ಸಾಹಿತ್ಯ, ಸಂಗೀತ ಎಲ್ಲವೂ ಆಸಕ್ತಿಯ ಕ್ಷೇತ್ರಗಳು.

ಅಷ್ಟೇ ಅಲ್ಲ, ಅವುಗಳ ಮೇಲೆ ಪ್ರಭುತ್ವ­ವನ್ನು ಸಾಧಿಸಿದವರು. ಇಲ್ಲಿಗೆ ಅವರ ಸಂಶೋಧನೆ ಕೊನೆಗೊಳ್ಳುವುದಿಲ್ಲ. ದಶಕಗಳಿಂದ ಕಲೆಹಾಕಿ ಬರೆದ ‘ಕವಿರಾಜಮಾರ್ಗ’ದ ಪದ­ಪದಕ್ಕೂ ಬರೆದ ವಿವರಣೆಯನ್ನು ನಾವು ಓದ­ಬೇಕಾಗಿದೆ. ಒಂದು ದಿನ ‘ಆದಿಪುರಾಣ’, ‘ಚಾವುಂಡ­ರಾಯ ಪುರಾಣ’ ಈ ಎಲ್ಲಾ ಕೃತಿಗಳಿಗೆ ಅವರು ಅಚ್ಚುಕಟ್ಟಾಗಿ ಕೈಯಲ್ಲಿ ಬರೆದಿಟ್ಟ ಅರ್ಥವಿವರಣೆಯ ಬೃಹತ್ ಗ್ರಂಥ­ಗಳನ್ನು  ನೋಡಿ ಅವಾಕ್ಕಾದೆ. ‘ಶಂಗಂ ತಮಿ­ಳಗಂ’ ಪುಸ್ತಕ ಕೇವಲ ‘ಕವಿರಾಜಮಾರ್ಗ’ ಕೃತಿಗೆ ಬರೆದ ಪ್ರಸ್ತಾವನೆಯಾಗಿತ್ತು. ಕನ್ನಡದ ಹೆಮ್ಮೆಯ ‘ಗುರುಗಳಿಗೆ’ ವಂದಿಸುತ್ತಾ...
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT