ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಾವ್ಯಗಳ ಬಹುಮುಖಿ ಜಗತ್ತು

Last Updated 4 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಮಾಣ್ ನಿಷಾದ ಮಾಣ್’. ಹುತ್ತ­ದಿಂದ ಹೊರಬಂದ ವಾಲ್ಮೀಕಿ, ಹಾರುತ್ತಿದ್ದ ಕ್ರೌಂಚ ಪಕ್ಷಿಗಳಿಗೆ ಬೇಡನೊಬ್ಬ ತೊಟ್ಟ ಬಾಣವನ್ನು  ಕಂಡು ಉಚ್ಚರಿಸಿದ ಮೊದಲ ಸಾಲು ಇದೆಂಬ ಪ್ರತೀತಿ.

ಮಹಾಕಾವ್ಯಗಳನ್ನು ವಿವಾದಕ್ಕೆ ಹಚ್ಚುವುದು ಭಾರತದಲ್ಲಿ ಹೊಸ ವಿಚಾರವೇನೂ ಅಲ್ಲ. ‘ಮಹಾ­ಭಾರತ’, ‘ರಾಮಾಯಣ’ಗಳ ಪಾತ್ರಗಳ ಬಗೆಗಾಗಲಿ, ಅದನ್ನು ರಚಿಸಿದ ಕವಿಗಳ ವಿಚಾರ­ವಾಗಿ ಆಗಲಿ ಅಥವಾ ಅದನ್ನು ಕುರಿತು ಬರುವ ಮತ್ತಾವುದೇ ವಿಮರ್ಶೆಗಳನ್ನಾಗಲಿ ತೆರೆದ ಮನಸ್ಸಿ­ನಿಂದ ಸ್ವೀಕರಿಸುವುದು ಸುಲಭದ ವಿಚಾರ­ವಲ್ಲ. ಸಂಸ್ಕೃತಿಯ ಭಾಗವಾದ ಕಾವ್ಯವೊಂದು  ಎಲ್ಲರಿಗೂ ಸೇರಿರುತ್ತದೆ ಎಂದು ಭಾವಿಸಿದರೆ ವಿಮರ್ಶೆಯಾಗಲಿ, ತಪ್ಪು–ಸರಿ ಎಂಬ ಪ್ರಶ್ನೆಯಾ­ಗಲಿ ಏಳುವುದಿಲ್ಲ.

ಈ ಕಾವ್ಯಗಳು ಕೇವಲ ಕಾವ್ಯಗ­ಳಾಗಿ ಉಳಿದಿಲ್ಲ, ಈ ನಾಡಿನ ಬದುಕಿನ ಹಾದಿಗೆ ಹೆಣೆದುಕೊಂಡಿವೆ. ಹಾಗಾಗಿ ಎಲ್ಲರೂ ಅದರ ಮೇಲೆ ತಮ್ಮ ಹಕ್ಕನ್ನು ಚಲಾಯಿಸುತ್ತಾ ಬಂದಿ­ದ್ದಾರೆ. ಕೆಲವರಿಗೆ ಕಾವ್ಯವಾದರೆ, ಮತ್ತೆ ಕೆಲವ­ರಿಗೆ ಅದು ಧರ್ಮ,  ಕಲೆ, ಆದರ್ಶ, ಪುರಾಣ ಎಲ್ಲವೂ ಆಗಿವೆ. ಅಯೋಧ್ಯೆ ವಿವಾದದ ಸಂದ­ರ್ಭದ ಹೊತ್ತಿಗೆ ಕಾವ್ಯವನ್ನು ಚರಿತ್ರೆಯಾಗಿ ನೋಡ­ಲಾ­ಯಿತು. ನಂಬಿಕೆ, ಕಾವ್ಯ, ಧರ್ಮ, ದೇವರು ಎಲ್ಲಾ ಬೆರೆತು ರಾಜಕೀಯಗೊಂಡಿತು. ರಾಜಕೀಯಗೊಂಡ ಧರ್ಮ, ವೈಚಾರಿಕತೆ­ಯನ್ನು ಕಳೆದುಕೊಳ್ಳುತ್ತದೆ. ಮೂಕ ಸಾಕ್ಷಿ­ಯಾದ ದೇವರುಗಳೂ ಅಂದು ಬೆರಗುಗೊಂಡಿರ­ಬೇಕು. ಅದರ ಮೂಲದ ರಚನೆಯನ್ನು ಬಿಟ್ಟು ಮತ್ತೇನೋ ಆಗಿ ನೋಡುವುದೇ ಈ ಕಾವ್ಯಗಳ ಬಗೆಗಿನ ಸಮಸ್ಯೆಯಾಗಿದೆ. ಎ.ಕೆ. ರಾಮಾನು­ಜನ್‌ ಬರೆದ ಮುನ್ನೂರು ರಾಮಾಯಣಗಳನ್ನು ಕುರಿತ ಪ್ರಬಂಧವನ್ನು ಎರಡು ವರ್ಷಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯ ಪಠ್ಯವಾಗಿಸಿತು. ಅದರ ವಿರುದ್ಧ ಪ್ರತಿಭಟನೆ ತಲೆದೋರಿದಾಗಲೂ ರಾಮಾ­ಯಣ ಕಾವ್ಯ ಹೀಗೇ ಇರಬೇಕೆಂದು ಹೇಳುವ ಮೂಲಭೂತವಾದ ಅಲ್ಲಿ ಮನೆ ಮಾಡಿತ್ತು.

ರಾಮಾಯಣ, ಮಹಾಭಾರತಗಳ ವಿಭಿನ್ನ ನೋಟಗಳನ್ನೇ ಅಲ್ಲಿ ಪ್ರಶ್ನೆ ಮಾಡಲಾ­ಯಿತು. ಕರ್ನಾಟಕದಲ್ಲಿ ಪೋಲಂಕಿ ರಾಮ­ಮೂರ್ತಿ ಅವರು ‘ಸೀತಾಯಣ’ವನ್ನು ಬರೆದಾಗ ಬಂದ ವಿರೋಧ ಇದಕ್ಕೆ ಮತ್ತೊಂದು ಉದಾಹ­ರಣೆ. ಕಾವ್ಯದ ವೈವಿಧ್ಯಮಯ ವ್ಯಾಖ್ಯಾನವನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿಯೇ ಸಮಸ್ಯೆಗೆ ಕಾರಣವಾಗಿದೆ. ಮಹಾಕಾವ್ಯದ ಹುಟ್ಟನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮಸ್ಯೆಯಿದೆ ಎನ್ನು­ವುದು ಸ್ಪಷ್ಟವಾಗುತ್ತದೆ.

ಪ್ರಾಚೀನ ಮಹಾಕಾವ್ಯಕ್ಕೆ ಮೂಲಗಳು ಹಲ­ವಾರು. ಅದು ಅದರ ಸೊಬಗೂ ಹೌದು. ಜೀವ­ನಾ­ನುಭ­ವಗಳನ್ನು ಜನರು ಕಥೆ ಕಟ್ಟಿ ಹೇಳ­ತೊಡ­ಗು­ತ್ತಾರೆ. ಅದರಲ್ಲೂ ಸಾಹಸದ ಗಳಿಗೆಗಳು ರೋಚ­­ಕತೆ­ಯನ್ನು ಪಡೆದುಕೊಳ್ಳುತ್ತವೆ. ಕಟ್ಟಿ­ಕೊಂಡ ಆಶಯಗಳು, ಕಂಡ ಕನಸುಗಳು, ಕಂಡುಂಡ ನೋವುಗಳು ಈ ಕಥೆಗಳ ತಿರುಳಾಗಿ­ರು­ತ್ತವೆ. ಹೀಗೆ ಸಮಾಜದಲ್ಲಿ ಜನಜನಿತವಾದ ನೂರಾರು ಕಥೆಗಳು ಜನಪದರ ಬಾಯಲ್ಲಿ ಹರಿ­ದಾ­ಡುತ್ತಿರುತ್ತವೆ. ಅವು ಗಾದೆಗಳಾಗಿ, ಒಗಟುಗ­ಳಾಗಿ ಜನಪದ ಗೀತೆಗಳಾಗಿ ರೂಪು ಪಡೆಯು­ತ್ತವೆ. ‘ಕವಿರಾಜಮಾರ್ಗ’ಕಾರ ‘ಕುರಿತೋದ­ದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್‌’ ಎಂದು ಹೇಳುತ್ತಾ ಜನಪದರ ಈ ಕಾವ್ಯಕಟ್ಟುವ ಗುಣವನ್ನು ಮೆಚ್ಚಿ ನುಡಿಯುತ್ತಾನೆ. ಇಂತಹ ಕಾವ್ಯಕಟ್ಟುವ ಗುಣ ಜಗತ್ತಿನಾದ್ಯಂತ ಜನಪದರಿ­ಗಿತ್ತೆಂಬುದು ಸೋಜಿಗ ವೆನಿಸುತ್ತದೆ. ಅವರು ಹಳ್ಳಿ­ಗ­ರಾಗಿರಲಿ, ಗಿರಿಜನರಾಗಿರಲಿ, ಪಶುಪಾಲಕ­ರಾ­ಗಿರಲಿ ಅವರವರ ಹಿನ್ನೆಲೆಯ ಬದುಕು ಹಾಡಾಗಿ ಹೊರಹೊಮ್ಮಿದೆ.

ಇಂತಹ ಕಥೆಗಳು ಮುಂದೆ ಲಾವಣಿಗಳಾಗಿ ಕಥನ ಕವನಗಳಾಗಿ ಬೆಳೆ­­ಯು­ತ್ತವೆ. ಅದರಲ್ಲೂ ಕಾದಾಟಗಳನ್ನು ಕಂಡ­­ವರು, ತಮ್ಮ ಒಡೆಯನ ರಥಕ್ಕೆ ಸಾರಥಿ­ಗ­ಳಾ­­­ದವರು ಊರಿಗೆ  ಮರಳಿ ಬಂದಾಗ ಕದನ­ವನ್ನು ಸ್ವಾರಸ್ಯಕರವಾಗಿ ವಿವರಿಸು­ತ್ತಿದ್ದರು. ಇಂತಹ ವೀರರ ಕಥೆಗಳು ಬೆಳೆದು ಅದರ ಹುಟ್ಟನ್ನು ಮರೆತು ಸರ್ವವ್ಯಾಪಿಯಾಗ­ತೊಡ­­ಗು­ತ್ತವೆ. ಊರಿಂದ ಊರಿಗೆ ಅಲೆಯುವ ಮಂದಿ ತಮ್ಮ ಜೊತೆ ಕಥೆಗಳನ್ನೂ ತೆಗೆದು­ಕೊಂಡು ಹೋಗು­ತ್ತಾರೆ.   ಪರ ಊರಿನ ಕಥೆ­ಗಳನ್ನು ತಮ್ಮ ಊರಿಗೆ ತಂದು ಅಲ್ಲಿನ ಅನು­ಕೂಲಕ್ಕೆ ತಕ್ಕಂತೆ ನಿರೂ­­ಪಿ­ಸುತ್ತಾರೆ. ಕಾಲಾಂತರ­ದಲ್ಲಿ ಯಾರದೋ ಕಥೆ ಯಾರದೋ ಹೆಸರಿನಲ್ಲಿ ಕೇಳ­ತೊಡಗುತ್ತದೆ. ಅಷ್ಟೇ ಅಲ್ಲದೆ, ತಾವು ಮೆಚ್ಚುವ ನಾಯಕನನ್ನು  ತಮಗೆ ಬೇಕಾದಂತೆ ಚಿತ್ತಾರಗೊಳಿಸುತ್ತಾ ಹೋಗು­ತ್ತಾರೆ.

ಹೀಗೆ ಯಾವುದೋ ಕಾಲದಿಂದ ಹರಿದು ಬಂದ ಕಥೆಗಳು ಮಹಾ ನದಿಯನ್ನು ಸೇರುವ ಉಪನದಿಗಳಂತೆ ಕೂಡಿಕೊಳ್ಳುತ್ತವೆ. ಎಲ್ಲವನ್ನೂ ತಮ್ಮದಾಗಿಸಿಕೊಂಡು  ಕಥೆ ಹೇಳುವ ಕಲೆಗಾರರ ಬಾಯಲ್ಲಿ ಎಲ್ಲವೂ ಆತ್ಮೀಯವಾಗ­ತೊಡ­ಗುತ್ತವೆ. ಆದ್ದರಿಂದಲೇ ಭರತ ಖಂಡದಲ್ಲಿ ಹುಟ್ಟಿದ ಕಥೆಗಳು ಮ್ಯಾನ್ಮಾರ್‌ನಲ್ಲೂ, ಮಲೇ­ಷ್ಯಾ­­ದಲ್ಲೂ ಅವರದೇ ಕಥೆಗಳೆನ್ನುವಂತೆ ಜನಜ­ನಿ­ತ­ವಾಗಿವೆ. ಇಷ್ಟೇ ಅಲ್ಲದೆ, ಅವು ಯಾವುದೋ ಒಂದು ಕಾಲಕ್ಕೆ ಸೇರಿದ ಕಥೆಗಳೂ ಅಲ್ಲ. ನಿರಂತರ­ವಾಗಿ ಬೆಳೆಯುವ ಕಥೆಗಳು. ಇವು ಒಂದು ಹಂತಕ್ಕೆ ನಾವು ಕೇಳುವ ಜನಪದ ಮಹಾಕಾವ್ಯದ ಸ್ವರೂಪ­ವನ್ನು ಪಡೆದುಕೊಳ್ಳುತ್ತವೆ. ಇದರ ಬೆಳ­ವ­ಣಿಗೆ ಅಲ್ಲಿಗೇ ನಿಲ್ಲುವುದಿಲ್ಲ.  ಪ್ರತಿಭಾವಂತ ಕವಿ ಅದನ್ನೊಂದು ಬಿಗಿಯಾದ ಛಂದಸ್ಸಿಗೆ ಒಗ್ಗಿಸಿ ತನ್ನ ನಿಲುವುಗಳ ಜೊತೆಗೆ ಅದಕ್ಕೊಂದು ಚೌಕ­ಟ್ಟನ್ನು ನೀಡುತ್ತಾನೆ.

ಹಾಗಾಗಿ ಮಹಾಕಾವ್ಯದ ಸ್ವರೂಪ ಸಿಕ್ಕಿದಂತಾಗುತ್ತದೆ. ಜನಪದೀಯವಾದ ಹಲವು ಅಂಶಗಳನ್ನು ಉಳಿಸಿಕೊಳ್ಳುತ್ತಾ ಮಹಾ­ಕವಿ­­ಯಿಂದ ಕೆಲವನ್ನು ಪಡೆದುಕೊಳ್ಳುತ್ತಾ ಮಹಾ­ಕಾವ್ಯ ಅರಳುತ್ತದೆ. ಮಹಾಕವಿ ತನ್ನ ಶಿಷ್ಟತೆ­ಯನ್ನು  ತನಗರಿವಿಲ್ಲದಂತೆ ಅಲ್ಲಿಯ ಪಾತ್ರಗಳಿಗೆ ಬರಿಸುತ್ತಾನೆ. ಹೀಗೆ ರೂಪಿತವಾದ ಎರಡು ಸಂಸ್ಕೃತ ಮಹಾಕಾವ್ಯಗಳೆಂದರೆ ‘ಮಹಾಭಾರತ’ ಮತ್ತು ‘ರಾಮಾಯಣ’. ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಕಥೆಗಳು. ಮಹಾ­ಭಾರತ ಉತ್ತರ ಭಾರತದ ಹಲವು ಬುಡಕ­ಟ್ಟು­ಗಳು ನಡೆಸಿದ ಕದನದ ಹಿನ್ನೆಲೆಯಲ್ಲಿ ಬೆಳೆದು ಬಂದ ಕಥೆ. ಆ ಕಥೆಗೆ ಹಿಡಿಂಬೆಯ ಹೆಸರಿನಲ್ಲಿ ಸೇರಿ­ರುವ ಕಥಾ ಭಾಗ ಕನ್ನಡನಾಡಿನ ಚಿತ್ರ­ದುರ್ಗ ಇರಬಹುದಾದರೆ, ವಾಲಿ–ಸುಗ್ರೀವರ ಭಾಗ ಕಿಷ್ಕಿಂದಾ ನಾಡೆನಿಸಿಕೊಂಡ ಇಂದಿನ ಹಂಪಿ ಪ್ರದೇಶದ ಕಥೆ. ಒಟ್ಟು ಮಹಾಕಾವ್ಯದಲ್ಲಿ ಬರುವ ಕಥೆಗಳು ಬೇರೆಬೇರೆ ಕಾಲಘಟ್ಟದಲ್ಲಿ ನಡೆದಿರಬಹುದಾದ ಘಟನೆಗಳು, ಅನುಭವಗಳು ಅವಾಗಿರಬಲ್ಲವು. ಅಷ್ಟೇ ಅಲ್ಲದೆ, ಜನಪದರ ಹಾಗೂ ಮಹಾಕವಿಯ ಕಲ್ಪನೆಗಳು, ಆಶಯ­ಗಳು ಅದರಲ್ಲಿ ಸೇರಿಹೋಗಿರುತ್ತವೆ.

ಮಹಾಕಾವ್ಯದ ಕಥೆಗಳು ಒಂದು ಕಾಲ ಘಟ್ಟ­ದವೂ ಆಗಿರಲಾರವು ಎನ್ನುವುದಕ್ಕೂ ನಮಗೆ ಪ್ರಾಕ್ತನ ಆಧಾರಗಳೇ ದೊರಕುತ್ತವೆ. ಪ್ರಾಕ್ತನ ಶಾಸ್ತ್ರಜ್ಞ­ರಾದ ಎಸ್.ಡಿ. ಸಂಕಾಲಿಯ ಈ ನಿಟ್ಟಿ­ನಲ್ಲಿ ನಡೆಸಿದ ಸಂಶೋಧನೆ ಬಹು ಅಪರೂಪ­ದ್ದೆಂದೇ ಹೇಳಬೇಕಾಗುತ್ತದೆ. ಇವತ್ತು ನಾವು ಕೇಳುತ್ತಿರುವ ರಾಮಾಯಣ, ಮಹಾಭಾರತದ ನಗರಗಳ ವೈಭವ ಸುಮಾರು ಸಾವಿರದ ಐನೂರ­ರಿಂದ ಏಳುನೂರು ವರ್ಷಗಳಷ್ಟು ಹಿಂದಕ್ಕೆ ಹೋಗು­ತ್ತದೆ. ಎಂದರೆ ಬಹುತೇಕ ಗುಪ್ತರ ಕಾಲದ ಆಸ್ಥಾನಗಳನ್ನು ಇಲ್ಲಿ ವರ್ಣಿಸಲಾಗಿದೆ. ಆದ್ದ­ರಿಂದ ರಾಮಾಯಣ, ಮಹಾಭಾರತದ ಕಥೆ­ಗಳಲ್ಲಿ ಕಾಣುವ ವೈದಿಕ ಕಾಲದ ಬೆಳವಣಿಗೆಯ ಹಂತ ಇದಾಗಿಲ್ಲ. ರಾಮಾಯಣ  ಕಾಲದ್ದೆಂದು ನಂಬಿರುವ ಅಯೋಧ್ಯ ಆ ಕಾಲದಲ್ಲಿ ಇರಲಿಲ್ಲ­ವೆಂದು ಈಗಾಗಲೇ ಚರಿತ್ರೆಕಾರರು ಕಂಡುಕೊಂಡಿ­ದ್ದಾರೆ. ಆದ್ದರಿಂದ ಗುಪ್ತರ ಕಾಲದ ಪ್ರಸಿದ್ಧ ನಗರವೊಂದು ಕಾವ್ಯದ ಕೇಂದ್ರಬಿಂದುವಾ­ಯಿತು. ಕಾವ್ಯಗಳು ನಿರಂತರವಾಗಿ ಬೆಳೆಯುತ್ತಿ­ರು­ತ್ತವೆ ಎನ್ನುವುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆಯಾಗಿದೆ.

ಆಯಾ ಕಾಲಘಟ್ಟದಲ್ಲಿ ಬಳಸುತ್ತಿದ್ದ ವಸ್ತುಗ­ಳನ್ನು ಆಧರಿಸಿ ಸಂಕಾಲಿಯ ಅವರು ರಾಮಾ­ಯಣ ಹಾಗೂ ಮಾಹಾಭಾರತದಲ್ಲಿ ಬಂದು ಹೋಗುವ ವಿದ್ಯಮಾನಗಳು ಯಾವ ಕಾಲ­ಘಟ್ಟ­ದವು  ಎನ್ನುವುದರ ಬಗೆಗೆ ಬೆಳಕು ಚೆಲ್ಲುತ್ತಾರೆ. ಮುದ್ರೆಯುಂಗುರ  ದುಷ್ಯಂತ ಹಾಗೂ ಶಕುಂತ­ಲೆ­ಯರ ಕಥೆಗೆ ತಿರುವು ನೀಡುವ ಪ್ರಸಂಗ. ಭಾರತದ ಚರಿತ್ರೆಯಲ್ಲಿ ಮುದ್ರೆಯುಂಗುರ­ವೊಂದು ಕಾಣಿಸಿಕೊಳ್ಳುವುದು ಒಂದನೇ ಶತ­ಮಾನ­ದಲ್ಲಿ. ಅದರ ಅರ್ಥ ಮುದ್ರೆಯುಂಗುರದ ಪ್ರಸಂಗ ಆನಂತರದಲ್ಲಿ ಮಹಾಕಾವ್ಯಕ್ಕೆ ಬಂದು ಸೇರಿದೆ. ರಾಮಾಯಣದಲ್ಲಿ ಹನುಮಂತ, ರಾಮನ ಮುದ್ರೆಯುಂಗುರವನ್ನು ಸೀತೆಗೆ ತೋರಿ­ಸಿ­ದಾಗ ಒಂದನೇ ಶತಮಾನ ಕಳೆದುಹೋಗಿ­ರ­ಬೇಕು. ಇಂತಹ ನೂರಾರು ವಿಚಾರಗಳು ಚರಿ­ತ್ರೆಯ ಸಂಶೋಧನೆಗೆ ಸಿಗುತ್ತವೆ. ಅದೇ ಸಾಮಾ­ಜಿಕ ಹಿನ್ನೆಲೆಯನ್ನು ನೋಡಿದರೆ ಈ ಕಾವ್ಯಗಳಲ್ಲಿ ಬರುವ ರಾಕ್ಷಸರು ಯಾರು? ಕಾವ್ಯಗಳಲ್ಲಿ ವರ್ಣಿ­ಸಿ­ರುವಂತೆ ವಿಕಾರವಾಗಿದ್ದರೇ? ಇಂತಹ ಪ್ರಶ್ನೆಗಳು ಬಹುಶಃ ಕಾವ್ಯದ ಗುಣವನ್ನು ಕಳೆಯುತ್ತವೆ.
 
ಆದರೂ ಮಹಾಕಾವ್ಯಗಳನ್ನು ರಚಿಸಿದ ಹೆಗ್ಗ­ಳಿಕೆ ವಾಲ್ಮೀಕಿ ಹಾಗೂ ವ್ಯಾಸರಿಗೆ ಸಲ್ಲು­ತ್ತದೆ. ಹಾಗೆಂದು ಆ ಕಾವ್ಯಗಳು ಅಲ್ಲಿಗೇ ನಿಲ್ಲುವುದೂ ಇಲ್ಲ. ಮಹತ್ವದ ಬದಲಾವಣೆಗಳನ್ನು ಮುಂದೆ ಬಂದ ಕವಿಗಳು ಅದಕ್ಕೆ ನೀಡಿದ್ದಾರೆ. ಆ ಕಥೆಗಳ ವಿಸ್ತರಣೆಯಲ್ಲಿ ಎಷ್ಟರಮಟ್ಟಿಗೆ ಒಬ್ಬೊಬ್ಬ ಕವಿಯೂ ಕಾರಣನಾಗಿದ್ದಾನೆಂದು ನೋಡು­ವುದು ಕವಿಚರಿತ್ರೆಕಾರರ ಕುತೂಹಲಕ್ಕೆ ಬಿಟ್ಟ ವಿಚಾರವಾಗುತ್ತದೆ. ಅವರಾಡುವ ಭಾಷೆಗೆ ಆ ಕಥೆ­ಗಳನ್ನು ಒಳಗುಮಾಡಿಕೊಳ್ಳುವ ಮೂಲಕ ಹೊಸವಿಸ್ತಾರವನ್ನು ನೀಡುತ್ತಾ ಹೋಗುತ್ತಾರೆ. ಇಲ್ಲಿ ಕಾವ್ಯ ಮೂಲದ ಪ್ರಶ್ನೆ, ಕಾವ್ಯವನ್ನು ಆಸ್ವಾ­ದಿ­ಸುವ ಓದುಗನಿಗೆ ಮುಖ್ಯವಾಗುವುದಿಲ್ಲ. ಅಕಾಡೆ­ಮಿಕ್ ಪ್ರಶ್ನೆಯಾಗಿ ಮಾತ್ರ ಉಳಿಯು­ತ್ತದೆ. ಕಾವ್ಯದ ಜೀವಂತಿಕೆ ಇರುವುದೇ ಅದರ ವಿಕಾಸ ಗುಣದಲ್ಲಿ. ಮೂಲಕಾವ್ಯದಲ್ಲಿ ಕಾಣದ ಹೊಸ­ದಾದ ಸರ್ವೋದಯವೆಂಬ ಆದರ್ಶ ಕಂಡರೆ ಅದು ಕುವೆಂಪು ಅವರ ಕೊಡುಗೆ­ಯಾ­ಗು­ತ್ತದೆ. ಹೀಗೊಂದು ವಿದ್ವತ್ ಮಟ್ಟದ ಸಂವಾ­ದವೂ ಸದಾಕಾಲಕ್ಕೂ  ಸಾಗಿಬರುತ್ತದೆ. ಅದ­ರಲ್ಲಿ ವಿದ್ವತ್ ಪ್ರಪಂಚ ಬೌದ್ಧಿಕ ನೆಲೆಯಲ್ಲಿ ಕಾವ್ಯ­ವ­ನ್ನು ಆಸ್ವಾದಿಸಬಲ್ಲದು.  

ಕಾವ್ಯದ ಮೂಲ ನೆಲೆಯನ್ನು  ಜನಪದರಲ್ಲಿ ಕಂಡುಕೊಂಡಂತೆ ಅವು ಮರಳಿ ಜನಪದರಿಗೆ ಹೋದಾ­ಗಲೂ ಬೇರೊಂದು ಸೊಬಗನ್ನು ಅಲ್ಲಿ ಕಾಣ­ಬಹುದು. ಅದಾವುದೂ ಇಲ್ಲದೆ ತಮ್ಮದೇ ಶೈಲಿ­ಯಲ್ಲಿ ಹಗಲು ವೇಷದವರು ಮುಖಕ್ಕೆ ಬಣ್ಣ ಬಳಿದು ರಾಮ, ಸೀತೆ, ಹನುಮಂತನಾಗಿ ಕುಣಿ­ದರೆ, ಜಗಜಗಿಸುವ ಆಭರಣಗಳನ್ನು ತೊಟ್ಟು, ಬಣ್ಣಬಣ್ಣದ ಸೀರೆಯುಟ್ಟು ಪೌರಾಣಿಕ ನಾಟಕ­ಗಳನ್ನು ಆಡುವ ಕಲಾವಿದರು ಅವರವರ ಕಲ್ಪನೆಗೆ ತಕ್ಕಂತೆ ಸಂಭ್ರಮಿಸುತ್ತಾರೆ. ಅದರ ಹಿಂದಿನ ಕಥೆಯ ಮೂಲ ಆಶಯವನ್ನು ಉಳಿಸಿ­ಕೊಂಡು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮೆರೆಸು­ತ್ತಾರೆ. ಹಾಗೆಂದರೆ ಇವರು ಮೂಲಮಾತೃಕೆಗೆ ಸದಾ ನಿಷ್ಠರಾಗಿರಬೇಕೆಂದೇನೂ ಅಲ್ಲ. ದೂರ ಸರಿಯುವ ಎಲ್ಲಾ ಹಕ್ಕನ್ನೂ ಪಡೆದೇ ಇರುತ್ತಾರೆ.

ಕಾವ್ಯದ ಮೇಲಿನ ಒಡೆತನ ಇಡೀ ಸಮಾಜಕ್ಕೇ ಸೇರಿರುತ್ತದೆ. ಇಂತಹ ಮಾರ್ಪಾಡುಗಳು ಯಕ್ಷ­ಗಾನ­ದಲ್ಲಿ ಹೇರಳವಾಗಿ ಕಾಣುತ್ತವೆ. ಕೃಷ್ಣಸಂ­ಧಾ­ನದ ಸಮಯದಲ್ಲಿ ಬಹುಸಹಜವಾಗಿ ಸಮ­ಕಾಲೀನ ರಾಜಕೀಯ ವಿಡಂಬನೆಗಳು ಸೇರಿರು­ತ್ತವೆ. ಮಹಾಕಾವ್ಯವನ್ನು ತಮ್ಮ ನೆಲೆಗೆ ದಕ್ಕಿಸಿ­ಕೊಳ್ಳುವಲ್ಲಿ ಜನಪದರು ನಿಸ್ಸೀಮರು.

ಉತ್ತರ ಕನ್ನಡ ಜಿಲ್ಲೆಯ ‘ಗಾಮೊಕ್ಕಲ ಭಾರತ’ ಕೃತಿಯಲ್ಲಿ ದ್ರೌಪದಿಯನ್ನು ಈ ಒಕ್ಕಲು ಸಮುದಾ­ಯದ ಹೆಣ್ಣು ಮಗಳಂತೆ ಚಿತ್ರಿಸಿಕೊಳ್ಳು­ತ್ತಾರೆ. ಗುಡಿಸಲಿಗೆ ಸೆಗಣಿ ಹಾಕಿ ಸಾರಿಸುತ್ತಾರೆ. ದ್ರೌಪದಿ­ಯನ್ನು ಪಣಕ್ಕೊಡ್ಡಿ ಪಗಡೆಯಾಟದಲ್ಲಿ ಪಾಂಡ­ವರು ಸೋತಾಗ ಮೈದುನ ದುಶ್ಯಾಸನ ಅವಳನ್ನು  ಸಭೆಗೆ ಕರೆತರುವ ಪ್ರಸಂಗದಲ್ಲಿ, ಅವಳು ಮುಟ್ಟಾಗಿ ಗುಡಿಸಲಿನಲ್ಲಿರುತ್ತಾಳೆ. ಸಭೆಗೆ ಬಂದ ದ್ರೌಪದಿ ತನ್ನ ಗಂಡಂದಿರಿಗೆ ಛೀಮಾರಿ ಹಾಕಿ ಆ ದೊಡ್ಡ ಗುಡಿಸಲಿನಿಂದ ಹೊರ­­ಹೋಗುತ್ತಾಳೆ. ಅಲ್ಲಿ ಅವಳೊಬ್ಬ ಅಸಹಾ­ಯಕ ಮಹಿಳೆಯಲ್ಲ. ಆದರೆ, ಭಾಗವತದ ಪ್ರಭಾವಕ್ಕೆ ಒಳಗಾದ ಕವಿಗಳು ಅವಳ ಸೀರೆ ಅಪ­ರಿ­ಮಿತವಾಗಿ ಹೆಚ್ಚಿ ಅವಳ ಮಾನವನ್ನು ಕೃಷ್ಣ ಕಾಪಾಡುವಂತೆ ಕಲ್ಪಿಸಿ­ದ್ದಾರೆ. ಬಹುಶಃ ಬುಡ­ಕಟ್ಟು ಮಹಿಳೆಗೆ ಆ ಅಸ­ಹಾ­ಯಕತೆಯನ್ನು ತೋರು­ವುದು ವಿಚಿತ್ರವೆನಿಸಿ­ರ­ಬೇಕು. ಅದೇ ರೀತಿ ರಾಮಾಯಣದ ಸೀತೆ ಅಗ್ನಿ­ಪ್ರವೇಶ ಮಾಡು­ವುದು ಯಾರ ಆಶಯ­ವಾಗಿರ­ಬಹುದು ಎಂಬು­ದನ್ನು ನಾವು ಇಂದು ಯೋಚಿಸ­ಬೇಕಾಗುತ್ತದೆ.

ಈ ಕಾವ್ಯದ ಹರವು ಭಾರತಕ್ಕೆ ಮೀಸಲಾಗಿ­ರದೆ ಏಷ್ಯಾದಾದ್ಯಂತ ಪಸರಿಸಿದೆ. ಆ ವೈಶಾಲ್ಯ ಅದನ್ನು ಓದುವವರೂ ಆಚರಿಸುವವರೂ ರೂಢಿ­ಸಿ­ಕೊಳ್ಳಬೇಕಾಗಿದೆ. ಕವಿ, ಆಶಯ, ಅದರ ಹಿಂದಿನ ಚಾರಿತ್ರಿಕ ಸತ್ಯ ಎಲ್ಲವನ್ನೂ ಸಮಕಾಲೀನ­ಗೊಳಿಸಿ ರಾಜಕೀಯ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಕಾವ್ಯವನ್ನು ನಂಬುವಂತೆ ಕವಿಯ ಮೂಲಕ್ಕೂ ಸೊಗಸಾದ ಕಥೆಗಳಿವೆ. ಕಾವ್ಯದ ಒಳಹೊಕ್ಕ ಆ ಕಥೆಗಳೇ ಅದರ ಆಕರ­ಗಳೂ ಆಗಿರುತ್ತವೆ. ಭಾರತದ ಇಂದಿನ ಜಾತಿ ರಾಜ­­ಕಾರಣ ಈ ಎಲ್ಲದರಲ್ಲೂ ತನ್ನ ಹಸ್ತಕ್ಷೇಪ­ವನ್ನು ಮಾಡುತ್ತಿರುತ್ತದೆ. ವೈಚಾರಿಕ ಪ್ರಶ್ನೆ­ಯೊಂದಿಗೆ ಹೊರಟರೆ ಸಿಕ್ಕುವ ಉತ್ತರ ವೈಚಾರಿಕವಾಗಿರುತ್ತದೆ...

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT