ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ವಿಜ್ಞಾನ: ಗಾಳ ನುಂಗಿದ ಮೀನು

Last Updated 26 ಮೇ 2014, 19:30 IST
ಅಕ್ಷರ ಗಾತ್ರ

ಇಂದು ಮಕ್ಕಳನ್ನು ಕಾಲೇಜಿಗೆ ಸೇರಿ­ಸುವ ಹೊತ್ತು. ಹತ್ತನೇ ತರಗತಿ­ಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳೆಲ್ಲಾ ಹಿಂದು­ಮುಂದು ಯೋಚಿಸದೆ ವಿಜ್ಞಾನವನ್ನು ಆಯ್ಕೆ ಮಾಡಿ­ಕೊಳ್ಳುವುದು ಸಹಜ ಮನೋಧರ್ಮ­ವೆನ್ನು­­ವಂತಾಗಿದೆ. ಅದಲ್ಲದೆ ಬೇರೆ ವಿಷಯ­ಗಳನ್ನು ಮನುಷ್ಯಮಾತ್ರದವರು ಓದಲಾರರು ಎಂಬಂತೆ ನಡೆದುಕೊಳ್ಳುವ ತಂದೆತಾಯಂದಿರೂ ಇದ್ದಾರೆ. ಇಲ್ಲವಾದಲ್ಲಿ ಮಕ್ಕಳ ಭವಿಷ್ಯದ ಕಾರಣ­­ವನ್ನು ಮುಂದಿಟ್ಟುಕೊಂಡು ಮಾನವಿಕ ವಿಷಯಗಳ ಮೂದಲಿಕೆ ನಡೆಸೇ ಇರುತ್ತಾರೆ. ಅದರಾಚೆಗೂ ‘ಹೆಚ್ಚು ಅಂಕ ಪಡೆದ ಪ್ರತಿಭಾ­ನ್ವಿ­ತರು’ ಕಲಾ ವಿಭಾಗಕ್ಕೆ ಬರಬೇಕಾದರೆ ಯಾರಾ­ದರೂ ಅವರ ಮೇಲೆ ವಿಶೇಷ ಪ್ರಭಾವ ಬೀರಿರಬೇಕು.

ಕಲೆ, ಮಾನವಿಕ, ಸಮಾಜ ವಿಜ್ಞಾನ ಎಂದು ಕರೆಸಿಕೊಳ್ಳುವ ತತ್ವ ಶಾಸ್ತ್ರ, ಚರಿತ್ರೆ, ರಾಜ್ಯ­ಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರಗಳ ಅಳಿವು ಉಳಿವಿನ ಪ್ರಶ್ನೆ ಇಂದು ಕಾಣಬರುತ್ತಿದೆ. ಈ ಆತಂಕ ಭಾರತದಲ್ಲಿ ಮಾತ್ರವಲ್ಲ ಅಮೆರಿಕದ ವಿದ್ವಾಂಸರು ಆ ದೇಶದ ಭವಿಷ್ಯದ ಬಗೆಗೆ ಚಿಂತಿತರಾಗಿದ್ದಾರೆ. ಮಾರುಕಟ್ಟೆಯ ಬೇಡಿಕೆಯ ತತ್ವದ ಆಧಾರದ ಮೇಲೆ ಇಂದಿನ ವಿಶ್ವವಿದ್ಯಾ­ಲಯಗಳನ್ನು ರೂಪಿಸಲು ಹೊರಟಿ­ರುವ ಪಾಶ್ಚಿಮಾತ್ಯರಿಗೆ ಕಾಣುವ ಪ್ರಶ್ನೆಗಳು ಬೇರೆ­ಯದೇ ಆಗಿರುತ್ತವೆ. ತನ್ನ ಬೆಂಬಲ­ದಲ್ಲಿ ನಡೆ­ಯುವ ವಿಶ್ವವಿದ್ಯಾಲಯಗಳ ಮೂಲಕ ಸರ್ಕಾರ ತನ್ನ ರಾಜಕೀಯ ನೀತಿಯನ್ನು ಪ್ರತಿಪಾದಿ­ಸು­­ತ್ತದೆಂ­ಬುದು ಆ ದೇಶಗಳಲ್ಲಿ ಕೇಳಿಬರುವ ಟೀಕೆ.

ಇಲ್ಲಿ ನಮ್ಮನ್ನು ಕಾಡಿಸುತ್ತಿರುವ ಪ್ರಶ್ನೆಗಳು ಭಿನ್ನವಾಗಿವೆ. ಈ ವಿಷಯಗಳನ್ನು ಭಾರತದಲ್ಲಿ ಪರಿಚಯಿಸುವಾಗ ಅದರ ಹಿಂದೆ ಇರಬಹು­ದಾದ ರಾಜಕಾರಣವನ್ನು ಮರುಪರಿಶೀಲಿಸಿ ಕೊಳ್ಳ­ಬೇಕಾಗಿದೆ. ಪಾಶ್ಚಿಮಾತ್ಯ ಮಾದರಿಯ ಉನ್ನತ ಶಿಕ್ಷಣವನ್ನು ೧೮೫೭ರಲ್ಲಿ ಭಾರತದಲ್ಲಿ ಆರಂಭಿಸಲಾಯಿತು. ಭಾರತದ ಮೂರು ಪ್ರೆಸಿಡೆನ್ಸಿ­ಗಳಾದ ಕಲ್ಕತ್ತ, ಮುಂಬೈ, ಮದ್ರಾಸು­ಗಳಲ್ಲಿ ವಿಶ್ವವಿದ್ಯಾಲಯಗಳು ಆರಂಭವಾದವು.

ಬ್ರಿಟಿಷರು ತಮ್ಮಂತೆ ಆಲೋಚಿಸುವ, ತಮಗೆ ವಿಧೇಯವಾಗಿರುವ  ವರ್ಗವನ್ನು ಹುಟ್ಟು­ಹಾಕುವ ದಿಸೆಯಲ್ಲಿ ಉನ್ನತ ಶಿಕ್ಷಣವನ್ನು ಇಂಗ್ಲಿಷ್ ನಲ್ಲಿ ನೀಡಲು  ನಿರ್ಧರಿಸಿದರು. ಅಂದರೆ ಚರ್ಮ ಕಪ್ಪಾಗಿದ್ದರೂ ಇಂಗ್ಲಿಷ್‌ನಲ್ಲೇ ನಗುವ, ಇಂಗ್ಲಿಷನ್ನೇ ಉಸಿರಾಡುವ ಇಂಗ್ಲಿಷ್‌­ರಂತೆ ವರ್ತಿಸುವ ಜನರು ಅವರಿಗೆ ಬೇಕಾಗಿದ್ದರು. ಅವರನ್ನು ಬೆಂಬಲಿಸುವ ಬೌದ್ಧಿಕವರ್ಗದ ಸೃಷ್ಟಿ ವಿಶ್ವವಿದ್ಯಾಲಯಗಳ ಹಿಂದಿನ ಉದ್ದೇಶವಾಗಿತ್ತು. ಅದರಲ್ಲಿ ಅವರು ಹಿಂದೆ ಬೀಳಲಿಲ್ಲ. ಬ್ರಿಟಿಷರು ಈ ದೇಶವನ್ನು ಬಿಟ್ಟರೂ ವಿಧೇಯತೆಯನ್ನು ನಾವು ಬಿಟ್ಟುಕೊಡಲಿಲ್ಲ.

ಅವರು ಹಾಕಿದ ಯಾವುದೇ ಚೌಕಟ್ಟನ್ನು ಮುರಿಯುವುದು ಅಷ್ಟೇನು ಸುಲಭದ ವಿಚಾರವಾಗಿಲ್ಲ. ಇಂದಿಗೂ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣವನ್ನು ಅಧಿಕೃತವಾಗಿ ಇಂಗ್ಲಿಷ್ ಮಾಧ್ಯಮದಲ್ಲೇ ನೀಡ­ಲಾಗುತ್ತಿದೆ. ಕನ್ನಡದಲ್ಲಿ ಓದಲು, ಬರೆಯಲು ಅನುಮತಿಯನ್ನು ನೀಡಲಾಗಿದೆ ಅಷ್ಟೆ. ವಿಪ­ರ್ಯಾಸ­ವೆಂದರೆ ಚರಿತ್ರೆ, ಸಮಾಜ ಶಾಸ್ತ್ರ­ದಂತಹ ವಿಭಾಗಗಳಲ್ಲಿ ನೂರಕ್ಕೆ ತೊಂಬತ್ತು ಮಂದಿ ವಿದ್ಯಾರ್ಥಿಗಳು ಕನ್ನಡದಲ್ಲಿ ಓದಿ ಕನ್ನಡ­ದಲ್ಲೇ ಉತ್ತರಿಸುತ್ತಿರುತ್ತಾರೆ. ಕನ್ನಡದಲ್ಲಿ ಉತ್ತಮ ಪುಸ್ತಕಗಳಿಲ್ಲ ಎಂಬ ಅವರ ದೂರು ನರಳಾಟವಾಗಿ ಸದಾ ಕಾಲಕ್ಕೂ ಕೇಳಿಬರುತ್ತಿದೆ.

ಬ್ರಿಟಿಷರಿಂದ ಪರಿಚಯವಾದ ಸಾಹಿತ್ಯ ಮತ್ತು ಸಮಾಜ ವಿಜ್ಞಾನ ಈ ಹೊತ್ತಿಗೆ ಬೃಹತ್ತಾಗಿ ಬೆಳೆದು ತನ್ನದೇ ಆದ ಸ್ವತಂತ್ರವಾದ ಅಸ್ತಿತ್ವವನ್ನು ಪಡೆದುಕೊಳ್ಳಬೇಕಾಗಿತ್ತು. ಇತ್ತೀ­ಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾನವಿಕ ವಿಷಯಗಳ ಕುರಿತ ಚರ್ಚೆಯೊಂದನ್ನು ಏರ್ಪ­ಡಿಸ­ಲಾಗಿತ್ತು. ಅಲ್ಲಿ ಸೇರಿದ್ದ ವಿದ್ವತ್ ಮಿತ್ರರೆ­ಲ್ಲರಿಗೂ ಸ್ಪಷ್ಟವಾಗಿ ಕಂಡುಬಂದ ಅಂಶವೆಂದರೆ ಪ್ರತಿ ವಿಷಯದ ಹಿನ್ನೆಲೆಯನ್ನು ಹುಡುಕುತ್ತಾ ಹೋದರೆ ಮಾನವಿಕ ವಿಜ್ಞಾನಗಳಲ್ಲಿ ನಾವು ಅಷ್ಟೇನೂ ಬೆಳವಣಿಗೆಯನ್ನು ಸಾಧಿಸಿಲ್ಲ. ಬ್ರಿಟಿಷರು ಹಾಕಿಕೊಟ್ಟ ಜಾಡಿನಲ್ಲೇ ಚಾಚೂ ತಪ್ಪದೆ ಮುಂದುವರಿಯುತ್ತಿದ್ದೇವೆ.

ಕನ್ನಡದಲ್ಲಿ ಅಂದರೆ ಸ್ಥಳೀಯ ಭಾಷೆಯಲ್ಲಿ ನಡೆದಷ್ಟು ಸಂಶೋಧನೆ ಹಾಗೂ ಬರವಣಿಗೆಗಳು ಮಾನವಿಕ ವಿಷಯಗಳಲ್ಲಿ ನಡೆಯಲೇ ಇಲ್ಲ. ಕರ್ನಾಟಕದ ಸಂದರ್ಭದಲ್ಲಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ಕನ್ನಡ ತಮ್ಮ ಭಾಷೆಯೂ ಆಗಿರುವ ಕಾರಣಕ್ಕೆ ಓದು ಆತ್ಮೀಯವಾಗುತ್ತದೆ. ಆದ್ದರಿಂದ ಕನ್ನಡ ವಿಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ನಂತರವೂ ಸಂಶೋಧನೆ ಅಥವಾ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿಕೊ­ಳ್ಳು­ತ್ತಾರೆ. ಅದೇ ಚರಿತ್ರೆ ಅಥವಾ ರಾಜ್ಯಶಾಸ್ತ್ರ­ವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ವಿದ್ಯಾರ್ಥಿಯೊಬ್ಬ ಎಂ.ಎ ಮಾಡಲು ಬಂದರೆ ಮೊದಲಿಗೆ ಎದುರಾಗುವ ಸಮಸ್ಯೆ ಭಾಷಾ ಮಾಧ್ಯಮ.

ಅವನಿಗೆ ಆಪ್ಯಾಯಮಾನವಾದ ಕನ್ನಡದಲ್ಲಿ ಪುಸ್ತಕಗಳ ಕೊರತೆಯಿಂದಾಗಿ ಕೈಗೆ ಎಟುಕಬಹುದಾದ ಕನ್ನಡದ ಕೆಲವೇ ಪುಸ್ತಕ­ಗಳನ್ನು ಆಧರಿಸುತ್ತಾನೆ. ಉತ್ತಮ ಪರಾಮರ್ಶನ ಕೃತಿಗಳು ಇಂಗ್ಲಿಷ್‌ನಲ್ಲಿ ಇರುವ ಕಾರಣಕ್ಕೆ ಅರ್ಧದಷ್ಟು ವಿದ್ಯಾರ್ಥಿಗಳು ಓದುವ ಪ್ರಯತ್ನ­ವನ್ನೂ ಮಾಡದೇ ಉಳಿಯುತ್ತಾರೆ. ಆನಂತರ ಸಂಶೋಧನೆಗೆ ಬಂದಾಗಲೂ ಇಂಗ್ಲಿಷ್‌ನ ಸಮಸ್ಯೆ ಬೆಂಬಿಡದ ಬೇತಾಳವಾಗಿ ಕಾಡುತ್ತದೆ. ಅದರಲ್ಲೂ ಸಂಶೋಧನಾ ಬರವಣಿಗೆ ಇಂಗ್ಲಿಷ್‌­ನಲ್ಲಿ ಮಾಡುವಂತೆ ಒತ್ತಾಯವಿರುತ್ತದೆ. ವಿದ್ಯಾರ್ಥಿಗಳ ಅರ್ಧಭಾಗದ ಶ್ರಮ ತಮ್ಮದಲ್ಲದ ಭಾಷೆಯಲ್ಲಿ ವಿಚಾರವನ್ನು ಆಲೋಚಿಸುವ, ಬರೆಯುವ ಸಾಹಸದಲ್ಲೇ ಕಳೆದು ಹೋಗುತ್ತದೆ. ಈ ಸಮಸ್ಯೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರವಲ್ಲ, ಇಂಗ್ಲಿಷ್ ಮಾಧ್ಯಮದಲ್ಲಿ ಓದಿಬಂದವ­ರನ್ನೂ ಹಿಂಡುತ್ತಿದೆ.

ಆಯಾ ಭಾಷಾ ಪ್ರಯೋಗಗಳು ಆಯಾ ಸಮಾಜದ ಬದುಕಿನ ಹಿನ್ನೆಲೆಯಲ್ಲಿ ಹುಟ್ಟಿ­ಕೊಂಡಿ­ರುತ್ತವೆ. ಆದ್ದರಿಂದ ನಮ್ಮ ಸಮಾಜದ ವಿಚಾರ­­ವನ್ನು ಮತ್ತೊಬ್ಬರ ನಾಲಗೆಯಲ್ಲಿ ಹೇಳಿಸುವುದು, ಅಥವಾ ನಮ್ಮ ನಾಲಗೆಯನ್ನು ಅವರಂತೆ ತಿರುಚುವುದು ಎರಡೂ ಆಭಾಸವಾಗಿ ಕೇಳುತ್ತದೆ. ಆದರೂ ಅದಕ್ಕೇ ನಮ್ಮನ್ನು  ಒಗ್ಗಿ­ಸುವ ಒಗ್ಗಿಕೊಳ್ಳುವ ಹರಸಾಹಸವನ್ನು ಮಾಡುತ್ತಾ ಬಂದಿದ್ದೇವೆ. ಇಷ್ಟೆಲ್ಲಾ ಮಾಡಿ ನಮ್ಮ ವಿಚಾರವನ್ನು ಇಂಗ್ಲಿಷ್‌ನವರ ಮುಂದಿ­ಟ್ಟಾಗ ಮಾಹಿತಿಯನ್ನು ತೆಗೆದುಕೊಂಡು ಹೋಗಿ­ರುತ್ತೇವೆಯೋ ಹೊರತು ಹೊಸದೊಂದು ಸಿದ್ಧಾಂತವನ್ನೋ ಚಿಂತನೆಯನ್ನೋ ಕಟ್ಟಿಕೊಡಲು ಸೋಲುತ್ತೇವೆ. ಇಷ್ಟಾಗಿಯೂ ಇಂಗ್ಲಿಷ್‌ನಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಈ ಪ್ರೋತ್ಸಾಹ ಅಥವಾ ಒತ್ತಡ ಬೇರೆ ಬೇರೆ ಆಯಾಮಗಳಲ್ಲಿ ನಡೆದಿದೆ.

ಅಧ್ಯಾಪಕನೊಬ್ಬ ಮುಂಬಡ್ತಿ ಪಡೆಯಬೇಕಾದರೆ ತನ್ನ ಸಂಶೋಧನೆ­ಗಳನ್ನು ಮುಂದಿಡಬೇಕಾಗುತ್ತದೆ. ಆ ಸಂಶೋಧನೆ­ಗಳು ಅಂತರರಾಷ್ಟ್ರೀಯ ಪ್ರಕಟಣೆಯಾಗಿದ್ದಲ್ಲಿ ಅತಿಹೆಚ್ಚು ಅಂಕಗಳನ್ನು ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಬರೆದ ಬರಹವನ್ನು ಅಂತರ­ರಾಷ್ಟ್ರೀಯ ಮಟ್ಟದಲ್ಲಿ ಪ್ರಕಟ ಮಾಡಲು ಸಾಧ್ಯ­ವಿಲ್ಲದಿರುವುದರಿಂದ ಮೊದಲ ಹಂತದಲ್ಲಿ ಕನ್ನಡ­ದಲ್ಲಿ ಬರೆಯುವ ವಿದ್ವಾಂಸರಿಗೆ ತಣ್ಣೀರು ಎರಚಿ­ದಂ­ತಾಗುತ್ತದೆ. ಈ ಮಾನದಂಡ ಯಾರದು. ನೀತಿ ನಿಯಮಗಳನ್ನು ರೂಪಿಸಿದ್ದು ಯಾರು?

ಕನ್ನಡ ನಾಡಿನ ದೊಡ್ಡ ಸಂಶೋಧಕರು ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದವರು ಷ.ಷೆಟ್ಟರ್ ಅವರು. ಅವರ ಹಲವು ಮಹತ್ವದ ಸಂಶೋಧನೆಗಳು ‘ಇನ್‌ವೈಟಿಂಗ್‌ ಡೆತ್’, ‘ಪರ್ಸೀವಿಂಗ್ ಡೆತ್’ ಇತ್ಯಾದಿ ಇಂಗ್ಲಿಷ್‌ನಲ್ಲಿ ಪ್ರಕಟಗೊಂಡಿವೆ. ಅಂತರರಾಷ್ಟ್ರೀಯ ಮಟ್ಟದ ವಿದ್ವಾಂಸರ ಮನ್ನಣೆಯನ್ನೂ ಪಡೆದಿವೆ. ಆದರೆ ಅವರೂ ಅಭಿಪ್ರಾಯಪಟ್ಟಂತೆ ಕನ್ನಡದಲ್ಲಿ ಅವರು ಬರೆದ ‘ಷಂಗಂ ತಮಿಳಗಂ’ ಕೃತಿ ಅವರಿಗೆ ತಂದುಕೊಟ್ಟ ಗೌರವವನ್ನು ಇಂಗ್ಲಿಷ್ ಕೃತಿಗಳು ತಂದುಕೊಟ್ಟಿರಲಿಲ್ಲ. ಕನ್ನಡ ಭಾಷೆ ಮತ್ತು ಲಿಪಿಯ ಪ್ರಾಚೀನತೆ ಕುರಿತು ಮಾತನಾಡುವ ಈ ಕೃತಿ ತಮ್ಮ ನೆಲದಲ್ಲೂ ಮತ್ತು ಹೊರಗೂ ಮೆಚ್ಚುಗೆಯನ್ನು ಪಡೆಯಿತು.

ಅದಾದ ನಂತರ ಹಲವು ವರ್ಷಗಳ ಅವರ ಸಂಶೋಧನೆಯ ಫಲವಾಗಿ ಮೂಡಿಬಂದ ಬೃಹತ್‌ ಕೃತಿ ಹಳಗನ್ನಡ. ಅದನ್ನು ಇಂಗ್ಲಿಷ್‌ನಲ್ಲಿ ಬರೆಯು­ವುದು ಅವರಿಗೆ ತ್ರಾಸವೇನೂ ಆಗುತ್ತಿರಲಿಲ್ಲ. ಕನ್ನಡದಲ್ಲಿ ಅದರ ಬರವಣಿಗೆ ಸುಲಲಿತವಾಗಿ ಸಾಗಿದೆ. ಕರ್ನಾಟಕ ಚರಿತ್ರೆಗೊಂದು ಹೊಸ ಹೊಳಹು. ಹೀಗೆ ಕರ್ನಾಟಕದಲ್ಲಿ ಬೆರಳೆಣಿಕೆಯ ವಿದ್ವಾಂಸರು ಮಾತ್ರವೇ ಸಮಾಜ ವಿಜ್ಞಾನದಲ್ಲಿ ಮೂಡಿಬಂದಿದ್ದಾರೆ.

ಈವರೆಗಿನ ಸಮಾಜಶಾಸ್ತ್ರ ಸಂಶೋಧನೆ­ಗಳನ್ನು ಗಮನಿಸಿದರೆ ಅವೆಲ್ಲಾ ಫೋರ್ಡ್‌ ಫೌಂಡೇಷನ್‌ ಅಥವಾ ಅಂತಹ ಬೃಹತ್ ಪ್ರಾಯೋಜಕರಿಗಾಗಿ ನಡೆಸಿದ ಸಂಶೋಧನೆ­ಗಳಾಗಿವೆ. ಅಂದರೆ ಈ ಸಂಶೋಧನೆಗಳ ಮೂಲಕ ಸಮಾಜವನ್ನು ನಿರ್ದೇಶಿಸುವ ಪ್ರಯತ್ನ ಈ ಸಂಸ್ಥೆಗಳಿಗಿರುತ್ತದೆಂಬುದನ್ನು ನಿರಾಕರಿಸ­ಲಾಗದು. ನಮ್ಮ ಸಮಾಜದ ಒಳಗೆ ಚಿಟುಕು ಮುಳ್ಳಾಗಿ ಆಡುವ ನೂರಾರು ಯೋಜನೆಗಳನ್ನು ನಾವು ಗುಮಾನಿಯಿಂದ ನೋಡಬೇಕಾಗಿದೆ. ನಾವು ಕಲೆಹಾಕುವ ಮಾಹಿತಿ ಅದು ನಮಗಾಗಿ ಮಾತ್ರವೇ ಆಗಿ ಉಳಿದಿರುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಜಾಗತಿಕ ಮಾರುಕಟ್ಟೆ ಅದರ ಲಾಭ ಪಡೆಯಲು ಕಾಯುತ್ತಿರುತ್ತದೆ ಅಥವಾ ನಮ್ಮನ್ನು ಅವರ ಅಗತ್ಯಗಳಿಗಾಗಿ ಬಳಸಿಕೊಂಡಿ­ರು­ತ್ತದೆ.

ಭಾರತದ ಸರ್ಕಾರೇತರ ಸಂಸ್ಥೆಗಳಿಗೆ ಹರಿದು ಬರುವ ಹಣದ ಬಗ್ಗೆ ಇಂತಹ ಅನುಮಾನ, ಎಚ್ಚರ ಪ್ರಾಜ್ಞರ ಗಮನಕ್ಕೆ ಬಂದ ವಿಚಾರವೇ ಆಗಿದೆ. ಹಾಗೆಯೇ ಸಂಶೋಧನೆ­ಗಳಿಗೆ ಬರುವ ವಿದೇಶಿ ಹಣದ ಹಿಂದೆ ಖಚಿತ­ವಾದ ಉದ್ದೇಶ­ವಿರುತ್ತದೆ. ಇಂತಹ ಭಯ ಭಾರತಕ್ಕೆ ಮಾತ್ರವಲ್ಲ, ಭಾರತದಂತಹ ದೇಶದ­ವರ­ನ್ನೆಲ್ಲಾ ಆವರಿಸಿದೆ. ಆಫ್ರಿಕದ ಜನತೆ ತಮ್ಮ ಬಗೆಗೆ ಕೀಳಾಗಿ ಕಂಡ ವಿಷಯಗಳನ್ನು ಅವರು ಓದಿ ಬರೆಯುವಾಗ ಅವರ ಕರುಳು ಚುರುಗುಟ್ಟುತ್ತದೆ.

ನಾವು ಬ್ರಿಟಿಷರು ಹಾಕಿಕೊಟ್ಟ ಜಾಡಿನಲ್ಲಿ ಹೋಗುತ್ತಾ ಇಂಗ್ಲಿಷ್ ಹೊರೆಯನ್ನು ಮಾತ್ರ ಹೊತ್ತಿಲ್ಲ, ವಿಚಾರಗಳಿಗೂ ಅವರೇ ಅದಿದೈವ­ವಾಗಿ ಕಾಣುತ್ತಾರೆ. ಯಾವುದನ್ನು ಅವರು ಚರಿತ್ರೆ ಎಂದು ಹೇಳಿಕೊಟ್ಟರೋ, ಅಥವಾ ಅರ್ಥಶಾಸ್ತ್ರವೆಂದು ಕರೆದರೋ, ಸಮಾಜಶಾಸ್ತ್ರ­ವೆಂದು ಬೋಧಿಸಿದರೋ ಚಾಚೂ ತಪ್ಪದೆ ಅದೇ ಬಟ್ಟೆಯಲ್ಲಿ ಸಾಗುತ್ತಿದ್ದೇವೆ. ಇಂಗ್ಲಿಷ್ ಭಾಷೆ­ಯಲ್ಲಿ ಮಾತ್ರವಲ್ಲ, ಇಂಗ್ಲಿಷ್ ಪರಿಭಾಷೆಯಲ್ಲೇ ನಮ್ಮ ಸಮಾಜವನ್ನು ಅರ್ಥೈಸುತ್ತಿದ್ದೇವೆ. ಭಾರತದ ಪ್ರಾಚೀನ ರಾಜರನ್ನು ಕಿಂಗ್ ಎಂತಲೂ ರಾಣಿಯರನ್ನು ಕ್ವೀನ್ ಎಂತಲೂ ಕರೆಯ­ಲಾಗಿದೆ. ಭಾರತದಲ್ಲಿ ರಾಣಿಯರಿಗೆ ಎಷ್ಟು ಮಾತ್ರ ಅಧಕಾರವಿತ್ತೆಂದು ನಮಗೆ ತಿಳಿದೇ ಇದೆ. ಅವಳು ರಾಜನ ಹೆಂಡತಿಯಾಗಿದ್ದಳೇ ಹೊರತು ಅವಳೇ ಆಧಿಕಾರ ನಿರ್ವಹಿಸುವ ಅವಕಾಶ­ವಿರ­ಲಿಲ್ಲ. ಇಂತಹ ಸಾವಿರಾರು ತಪ್ಪು ಗ್ರಹಿಕೆಗಳನ್ನು ಜ್ಞಾನವೆಂದು ಬೋಧಿಸುತ್ತಾ ಬಂದಿದ್ದೇವೆ.

ಭಾರತದಲ್ಲಿಂದು ೫೭೩ ವಿಶ್ವವಿದ್ಯಾಲಯ­ಗಳಿದ್ದೂ, ಸಮಾಜ ವಿಜ್ಞಾನಗಳಲ್ಲಿ ಬರವಣಿಗೆ­ಗಳೇಕೆ ಸೊರಗಿವೆ? ಪ್ರತಿ ವಿಚಾರವನ್ನು ಪಶ್ಚಿಮದ ಆಲೋಚನಾ ಕ್ರಮದಿಂದಲೇ ಆರಂಭಿಸುತ್ತಿ­ದ್ದೇವೆ. ಪೂರ್ವದ ಚಿಂತನೆಗಳು ಏನು ಎಂದು ತಿಳಿಯುವ ಹೊಸದೊಂದು ಕಣ್ಣೋಟವನ್ನೇ ಕಟ್ಟಿ­ಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮದೇ ನೆಲದ ಜನಪದವನ್ನು ಅರಿಯುವಾಗಲೂ ಫೋಕ್ಲೋರ್ ನಲ್ಲಿ ಬಳಸುವ ಮಾದರಿಗಳನ್ನು ಅಳವಡಿಸಿ­ಕೊಳ್ಳುತ್ತೇವೆ.

ನಮ್ಮದೇ ಭಾಷೆಯಲ್ಲ್ಲಿ ನಾವು ಓದಲಾರದ್ದು, ನಮ್ಮದೇ ಆದ ಆಲೋಚನಾ ಕ್ರಮವನ್ನು ಕಂಡುಕೊಳ್ಳಲಾಗದ್ದೂ ಸಹ ನಮ್ಮ ಕೀಳರಿಮೆಗೆ ಕಾರಣವಾಗಿದೆ. ಕನ್ನಡ ಸಾಹಿತ್ಯ­ವನ್ನೇ ಓದುವವರು ನಿಸ್ಸಂಕೋಚವಾಗಿ ಕನ್ನಡದಲ್ಲಿ ಸಂಶೋಧನೆಯನ್ನು ನಡೆಸುವುದ­ರಿಂದ ಅಲ್ಲಿ ಬರವಣಿಗೆಗಳು ನಿರಂತರವಾಗಿವೆ ಮತ್ತು ಸಮಾಜ ವಿಜ್ಞಾನಗಳ ಬರವಣಿಗೆಗಳನ್ನೂ ಮಾಡುತ್ತಾ ಬಂದಿದ್ದಾರೆ.

ಸಮಾಜ ವಿಜ್ಞಾನಗಳ ಸಂಶೋಧನೆಗಳಿರಲಿ ನಾವೆಲ್ಲರೂ ಓದುತ್ತಾ ಬೋಧಿಸುತ್ತಾ ಬಂದ ವಿಷಯಗಳ ಕಡೆಯೂ ಗಮನ ಹರಿಸಬೇಕಾಗಿದೆ. ಖಾಸಗಿ ವಿಶ್ವವಿದ್ಯಾಲಯಗಳು, ವಿದೇಶಿ ವಿದ್ಯಾ­ಲಯ­ಗಳು ಆರಂಭವಾಗಿರುವ ಈ ಕಾಲದಲ್ಲಿ ಬೋಧನಾ ವಿಷಯ ಎಷ್ಟರ ಮಟ್ಟಿಗೆ ನಮ್ಮದಾಗಿ ಉಳಿಯಬಲ್ಲದು ಕಾದು ನೋಡಬೇಕಾಗಿದೆ. ಯೂರೋಪಿನ ಚರಿತ್ರೆಗೆ ಗಮನಕೊಟ್ಟಂತೆ ಏಷ್ಯಾದ ಚರಿತ್ರೆಯನ್ನು ನಾವು ಬೋಧಿಸಲಿಲ್ಲ. ಅಮೆರಿಕದ ಚರಿತ್ರೆಗೆ ಜಾಗ ಕೊಟ್ಟಂತೆ ಆಫ್ರಿಕದ ಚರಿತ್ರೆ ನಮಗೆ ಲಾಭಕರವಾಗಿ ಕಾಣಲಿಲ್ಲ.

ಭವಿಷ್ಯ­ದಲ್ಲಿ ಸಮಾಜ ಅಧ್ಯಯನಗಳೂ ಮಾರು­ಕಟ್ಟೆಯ ಬೇಡಿಕೆಯನ್ನು ಗಮನದಲ್ಲಿ ಇರಿಸಿಕೊಳ್ಳ ಬೇಕಾಗಿ­ರುವುದರಿಂದ ಅದರಲ್ಲೂ ಅಂತರ­ರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಒತ್ತಡವನ್ನು ಹೊರಲೇ ಬೇಕಾಗಿರುವುದರಿಂದ ಭವಿಷ್ಯದ ಬೌದ್ಧಿಕ  ಗುಲಾಮಗಿರಿಯ ಕೊಳ ಹಾಕಿಸಿ­ಕೊಳ್ಳಲೂ ಎಲ್ಲ ರೀತಿಯಲ್ಲೂ ಸಿದ್ಧತೆ ಹದವಾಗಿ ನಡೆದಿದೆ. ಈ ಎಲ್ಲಕ್ಕೂ ಭಾಷಾ ಮಾಧ್ಯಮದ ನಿರ್ಣಯ ಸಹಜವಾಗಿ ಪೂರಕವಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT