ಒಂದೂರಿನಲ್ಲಿ ಒಬ್ಬ ಅಗಸನಿದ್ದ. ಅವನ ಬಳಿ ನಾಲ್ಕಾರು ಕತ್ತೆಗಳು. ಅವುಗಳ ಕೆಲಸ ಬಹಳ ಕಷ್ಟದ್ದು. ಅವು ಮನೆಗೂ ಸಲ್ಲುವುದಿಲ್ಲ, ಘಾಟಿಗೂ ಸಲ್ಲುವುದಿಲ್ಲ. ಮನೆಯಿಂದ ಬಟ್ಟೆಗಳ ಭಾರವಾದ ಗಂಟುಗಳನ್ನು ಹೊತ್ತುಕೊಂಡು ನದಿ ತೀರಕ್ಕೆ ಹೋಗಬೇಕು. ಮತ್ತೆ ಒಗೆದ ಬಟ್ಟೆಗಳ ಮತ್ತಷ್ಟು ಭಾರವಾದ ಗಂಟುಗಳನ್ನು ಹೊತ್ತುಕೊಂಡು ಮನೆಗೆ ಬರಬೇಕು. ಅವುಗಳಿಗೆ ಬೇರೆ ಜೀವನವೇ ಇಲ್ಲ.
ದಿನದಿನವೂ ಇದೇ ಕೆಲಸ ಮಾಡುತ್ತ ಅವುಗಳಿಗೆ ತಮ್ಮ ಜೀವನದ ಬಗ್ಗೆಯೇ ಬೇಸರ ಬಂದಿತ್ತು. ಆ ಕತ್ತೆಗಳಲ್ಲಿ ಕಿರಿಯ ಕತ್ತೆ ಹೊಡೆಸಿಕೊಂಡಷ್ಟು ಯಾರೂ ಹೊಡೆಸಿಕೊಂಡಿರಲಿಲ್ಲ. ದಿನಾಲು ಅದಕ್ಕೆ ಯಜಮಾನನ ಮೂದಲಿಕೆಯ ಮಾತುಗಳು, ಹೊಡೆತಗಳು ಎಷ್ಟು ಅಭ್ಯಾಸವಾಗಿದ್ದವೆಂದರೆ ಎಂದಾದರೂ ಒಂದು ದಿನ ಅವನು ಹೊಡೆಯದಿದ್ದರೆ ಕತ್ತೆಗೆ ಬೇಜಾರಾಗುತ್ತಿತ್ತು. ಅದರ ಕೆಲಸವೂ ಆ ಮಟ್ಟದ್ದೆ. ಯಾವುದೇ ಆದೇಶವನ್ನು ಸರಿಯಾಗಿ ಪಾಲಿಸುವುದು ಸಾಧ್ಯವಿರಲಿಲ್ಲ ಈ ಕತ್ತೆಗೆ.
ಹಿರಿಯ ಕತ್ತೆಗಳು ಕನಿಕರದಿಂದ ಎಷ್ಟು ತಿಳಿಹೇಳಿದರೂ ಅದಕ್ಕೆ ಅರ್ಥವೇ ಆಗುತ್ತಿರಲಿಲ್ಲ. ಒಂದು ಹಿರಿಯ ಕತ್ತೆ ಅದರ ಜವಾಬ್ದಾರಿ ತೆಗೆದುಕೊಂಡು ದಿನನಿತ್ಯ ಕತ್ತೆಯ ಮೈಮೇಲೆ ಮೂಡಿದ ಬಾರುಕೋಲಿನ ಪೆಟ್ಟುಗಳ ಮೇಲೆ ನಾಲಿಗೆಯಾಡಿಸಿ ಸಮಾಧಾನ ಮಾಡುತ್ತಿತ್ತು. ಕಿರಿಯ ಕತ್ತೆ ಮೌನವಾಗಿ ಅತ್ತಾಗ ಮೈಉಜ್ಜಿ ಸಹಾನುಭೂತಿ ತೋರುತ್ತಿತ್ತು. ಒಂದು ವಾರದಿಂದ ಕಿರಿಯ ಕತ್ತೆಯ ನಡವಳಿಕೆಯಲ್ಲಿ ವಿಚಿತ್ರ ಬದಲಾವಣೆ ಕಾಣತೊಡಗಿತ್ತು. ಈಗ ಅದು ಕುಣಿಯುತ್ತ ನಡೆಯುತ್ತಿದೆ, ಕೆಲಸದಲ್ಲಿ ಉತ್ಸಾಹ ತೋರುತ್ತಿದೆ. ಹೇಳಿದ ಕೆಲಸವನ್ನು ಸರಿಯಾಗಿ ತಿಳಿದುಕೊಂಡು ಸಾಗುತ್ತಿದೆ. ಯಜಮಾನ ಯಾವಾಗಲಾದರೂ ಹೊಡೆದರೂ ಬೇಜಾರುಮಾಡಿಕೊಳ್ಳದೇ ನಗುತ್ತದೆ.
ಇದರ ವಿಪರೀತ ನಡವಳಿಕೆಯನ್ನು ನೋಡಿ ಹಿರಿಯ ಕತ್ತೆ ಕೇಳಿತು, ‘ಏನಯ್ಯ ನಿನ್ನಲ್ಲಿ ತಕ್ಷಣದ ಬದಲಾವಣೆ ಬಂದಿದೆ? ನಮ್ಮೆಲ್ಲರಿಗಿಂತ ನಿನ್ನ ಪರಿಸ್ಥಿತಿ ತುಂಬ ಕೆಟ್ಟದ್ದು ಎಂದು ನಾವು ಭಾವಿಸಿದ್ದೆವು. ಆದರೆ, ನಿನ್ನಲ್ಲಿ ಏನೋ ವಿಶೇಷ ಉತ್ಸಾಹ ಬಂದಂತಿದೆ? ಏನು ಕಾರಣ?’ ಅದಕ್ಕೆ ಕಿರಿಯ ಕತ್ತೆ ನಗುತ್ತಲೇ ಉತ್ತರಿಸಿತು, ‘ಹೌದಣ್ಣ, ಎಲ್ಲರಿಗೂ ಒಂದಲ್ಲ ಒಂದು ದಿನ ಒಳ್ಳೆಯ ಕಾಲ ಬರುತ್ತದಂತೆ. ಅದಕ್ಕೇ ನನ್ನಂತಹ ಕತ್ತೆಗೂ ಒಳ್ಳೆಯ ಕಾಲ ಬರುವ ಲಕ್ಷಣಗಳು ಕಾಣುತ್ತಿವೆ.’ ‘ಹೌದೇ? ನಿನಗೆ ಒಳ್ಳೆಯ ಕಾಲ ಬರಲಿದೆಯೇ? ನಿನಗೇ ಅಷ್ಟು ಒಳ್ಳೆಯ ಕಾಲ ಬಂದರೆ ನಮಗೂ ಭಾಗ್ಯ ತೆರೆಯುತ್ತದೆ. ನಿನಗೆ ಯಾರಪ್ಪ ಈ ಶುಭಸಮಾಚಾರ ಕೊಟ್ಟವರು?’ ಎಂದು ಕೇಳಿತು ಹಿರಿಯ ಕತ್ತೆ.
ಯಾಕೋ ಕಿರಿಯ ಕತ್ತೆಗೆ ನಾಚಿಕೆಯಾದಂತೆನಿಸಿತು. ತಲೆ ತಗ್ಗಿಸಿ ನಾಚುತ್ತ ಹೇಳಿತು, ‘ಮೊನ್ನೆ ನಮ್ಮ ಯಜಮಾನ ತನ್ನ ಮಗಳ ಮೇಲೆ ಯಾಕೋ ವಿಪರೀತ ಕೋಪಿಸಿಕೊಂಡಿದ್ದ. ರೇಗುತ್ತಲೇ ಹೇಳಿದ, ನೀನು ಕತ್ತೆಯಂತೆ ಬೆಳೆದು ನಿಂತಿದ್ದೀ, ನಿನ್ನಷ್ಟು ಮೂರ್ಖರು ಇನ್ನಾರೂ ಇರಲಿಕ್ಕಿಲ್ಲ. ನೀನು ಹೀಗೆಯೇ ಮುಂದುವರೆದರೆ ನನ್ನ ಬಳಿ ಇದೆಯಲ್ಲ ಅತಿಮೂರ್ಖ ಕಿರಿಯ ಕತ್ತೆ, ಅದರ ಜೊತೆಗೇ ನಿನ್ನ ಮದುವೆ ಮಾಡಿ ಬಿಡುತ್ತೇನೆ. ಎಂಥ ಒಳ್ಳೆಯ ಹುಡುಗಿ ಆಕೆ. ಒಬ್ಬಳೇ ಮಗಳು ಬೇರೆ. ಆಕೆ ಯನ್ನು ನಾನು ಮದುವೆಯಾದರೆ ಯಜಮಾನನ ಆಸ್ತಿಯೆಲ್ಲ ನನ್ನದೇ ಅಲ್ಲವೇ?’ ಉಳಿದ ಕತ್ತೆಗಳು ಇದರ ಮೂರ್ಖತನಕ್ಕೆ ಮರುಗಿ, ನಕ್ಕು ಮುನ್ನಡೆದವು.
ಯಾರಿಗೆ, ಯಾವಾಗ, ಯಾರಿಂದ, ಹೇಗೆ ಸ್ಫೂರ್ತಿ ದೊರೆತೀತು ಎಂದು ಹೇಳುವುದು ಕಷ್ಟ. ಅಸಾಧ್ಯವಾದ, ಮೂದಲಿಕೆಯ ಮಾತೇ ಮೂರ್ಖ ಕತ್ತೆಗೆ ಸ್ಫೂರ್ತಿಯಾಗುವುದಾದರೆ ಮತ್ತೊಬ್ಬರು ನುಡಿದ ಒಂದು ಮೆಚ್ಚಿಕೆಯ ಮಾತು ಉಳಿದವರಿಗೆ ಸ್ಫೂರ್ತಿಯಾಗ ಬಹುದಲ್ಲವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.