ಮೂಡಿಗೆರೆ: ತಾಲ್ಲೂಕಿನೆಲ್ಲೆಡೆ ಎರಡು ದಿನಗಳಿಂದ ಬೀಸುತ್ತಿರುವ ರಭಸವಾದ ಗಾಳಿ ಅಪಾರ ಪ್ರಮಾಣದ ಬೆಳೆಯನ್ನು ನೆಲ ಕಚ್ಚಿಸಿದೆ. ಭಾನುವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿರುವ ಗಾಳಿ ಮಂಗಳವಾರವೂ ಮುಂದುವರೆದಿದ್ದು, ಬಿಳ್ಳೂರು, ಹೊರಟ್ಟಿ, ಕೂಡಳ್ಳಿ, ಸಬ್ಬೇನಹಳ್ಳಿ ಮುಂತಾದ ಪ್ರದೇಶಗಳಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆಯು ಧರೆಗುರುಳಿವೆ. ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಕಟಾವಿವೆ ಬಂದಿದ್ದ ಭತ್ತದ ಪೈರೆಲ್ಲವೂ ನೆಲಕ್ಕುರುಳಿ, ಕೃಷಿಗೆ ಹಿನ್ನೆಡೆ ಉಂಟುಮಾಡಿದೆ. ಕಟಾವಿನ ಕಡೆ ಹಂತದಲ್ಲಿರುವ ಅರೇಬಿಕಾ ಕಾಫಿಯು ಗಾಳಿಗೆ ಸಿಲುಕಿ ಉದುರ ತೊಡಗಿದ್ದು, ಕಾಫಿ ತೋಟಗಳಲ್ಲಿ ಒಣಗಿ ನಿಂತಿರುವ ಮರಗಳು ಬೀಳುವ ಅಪಾಯ ಎದುರಾಗಿದೆ.