ಕಾಸರಗೋಡು: ಚಿತ್ತಾರಿಕಲ್ಲ್ ಇರುವತ್ತಿಯಂಜ್ ಎಂಬಲ್ಲಿ ವ್ಯಕ್ತಿಯೊಬ್ಬರ ಬಾವಿಯೊಂದರಲ್ಲಿ ಮಾನವ ಅಸ್ತಿಪಂಜರ ಪತ್ತೆಯಾಗಿದೆ.
ಪ್ಯಾಂಟ್ ಮತ್ತು ಶರ್ಟ್ನ ತುಣುಕುಗಳು ಪತ್ತೆಯಾಗಿರುವುದರಿಂದ ಇದು ಪುರುಷನ ಅಸ್ತಿಪಂಜರ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಬಾವಿಯ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಇದು 2022 ನವೆಂಬರ್ನಿಂದ ಕಾಣೆಯಾಗಿರುವ ಸ್ಥಳೀಯ ಚಿತ್ರಾಡಿ ನಿವಾಸಿ ಕುರ್ಯನ್ ಎಂಬುವರದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ತಿಪಂಜರವನ್ನು ಮೇಲೆತ್ತಿ ಹೆಚ್ಚಿನ ತಪಾಸಣೆಗಾಗಿ ಕಣ್ಣೂರು ಸರ್ಕಾರಿ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ.
ಕುಸಿದು ಬಿದ್ದು ಮೃತ್ಯು
ಕಾಸರಗೋಡು: ಪುಲ್ಲೂರು ಮಧುರಕ್ಕಾಡ್ ನಿವಾಸಿ, ಕೃಷಿ ಇಲಾಖೆ ಸಿಬ್ಬಂದಿ, ಕೆ.ವಿ.ಮಣಿಮೋಹನ್ (51) ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರು ಮಲಪ್ಪುರಂ ಮಕ್ಕರಪರಂಬ ಕೃಷಿಭವನದ ಕೃಷಿ ಅಧಿಕಾರಿಯಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.
ಆತ್ಮಹತ್ಯೆ
ಕಾಸರಗೋಡು: ಕೊಡಕ್ಕಾಟ್ ಓಲಾಟ್ ನಿವಾಸಿ ವಿ.ನಿಷಿನ್ (45) ಎಂಬುವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸ್ಥಳೀಯ ನಿವಾಸಿ ನಾರಾಯಣನ್ ಎಂಬುವರ ಪುತ್ರ. ಚೀಮೇನಿ ಪೊಲೀಸರು ಮಹಜರು ನಡೆಸಿದರು.
ಇಬ್ಬರ ಬಂಧನ
ಕಾಸರಗೋಡು: ಉಪ್ಪಳದ ಪೊಸೋಟು ಬಡಾಜೆಯ ಅಬ್ದುಲ್ ಕರೀಂ ಮಾಲೀಕತ್ವದ ಅಂಗಡಿಗೆ ಕನ್ನ ಹಾಕಿದ ಆರೋಪಿಗಳಾದ ಚಿಕ್ಕಮಗಳೂರು ನಿವಾಸಿ ಅಶೋಕ (33), ಸೇಲಂ ಕಲ್ಲಕುರುಚ್ಚಿ ನಿವಾಸಿ ಹರಿಶ್ಚಂದ್ರ (37) ಎಂಬುವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. 2 ದಿನಗಳ ಹಿಂದೆ ಕಳವು ನಡೆದಿತ್ತು.
ಗಾಂಜಾ ಸಹಿತ ಬಂಧನ
ಕಾಸರಗೋಡು: ನಗರದಲ್ಲಿ ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ 27 ಗ್ರಾಂ ಗಾಂಜಾ ಸಹಿತ ಕುಂಟಡ್ಕ ಅಕ್ಕರ ನಿವಾಸಿ ಪಿ.ಉಣ್ಣಿಕೃಷ್ಣನ್ (25) ಎಂಬಾತನನ್ನು ಅಬಕಾರಿ ದಳ ಬಂಧಿಸಿದೆ.
ಲಾರಿಯಿಂದ ಸಾಮಗ್ರಿ ಕಳವು
ಕಾಸರಗೋಡು: ಕುಂಬಳೆ ಪೇಟೆಯಲ್ಲಿ ನಿಲ್ಲಿಸಿದ್ದ ಲಾರಿಯಿಂದ ₹ 1.25 ಲಕ್ಷ ಮೌಲ್ಯದ ಸಾಮಗ್ರಿ ಕಳವಾಗಿದೆ.
2 ಬ್ಯಾಟರಿ, 350 ಲೀ ಡೀಸೆಲ್, 2 ಟಾರ್ಪಾಲ್ ಸಹಿತ ಬೆಲೆಬಾಳುವ ಸಾಮಗ್ರಿ ಕಳವಾಗಿದೆ. ಲಾರಿ ಚಾಲಕ, ಕಣ್ಣೂರು ಕೂತ್ತುಪರಂಬ ನಿವಾಸಿ ಸಂದೀಪ್ ಅವರ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.