ಶ್ರೀರಂಗಪಟ್ಟಣ: ತಾಲ್ಲೂಕಿನ 5 ಸಾವಿರ ಮನೆಗಳಿಗೆ ಅಯೋಧ್ಯೆಯ ಬಾಲ ರಾಮನ ಮೂರ್ತಿಯ ಭಾವ ಚಿತ್ರಗಳನ್ನು ವಿತರಿಸಲಾಗುವುದು ಎಂದು ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಬಿ. ಶಂಕರಬಾಬು ತಿಳಿಸಿದರು.
ಪಟ್ಟಣ ಸಮೀಪದ ಗಂಜಾಂ ಗ್ರಾಮದ ಐತಿಹಾಸಿಕ ದಾಕ್ಷಾಯಿಣಿ ದೇವಾಲಯದ ಆವರಣದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಯೋಧ್ಯೆಯ ಬಾಲ ರಾಮನ ಭಾವಚಿತ್ರಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗಂಜಾಂನ ದಾಕ್ಷಾಯಿಣಿ ದೇವಾಲಯವನ್ನು ಮಂಡ್ಯ ರಕ್ಷಣಾ ವೇದಿಕೆಯಿಂದ ಜೀರ್ಣೋದ್ಧಾರ ಮಾಡಿದ್ದು, ತಾಲ್ಲೂಕಿನಲ್ಲಿ ಶಿಥಿಲವಾಗಿರುವ ಇತರ ದೇವಾಲಯಗಳಿಗೂ ಹಂತ ಹಂತವಾಗಿ ಕಾಯಕಲ್ಪ ನೀಡಲಾಗುವುದು’ ಎಂದು ಅವರು ಹೇಳಿದರು.
ಹಿಂದೂ ಜಾಗರಣಾ ವೇದಿಕೆ ಮುಖಂಡ ಕೆ. ಚಂದನ್ ಬಾಲ ರಾಮನ ಮೂರ್ತಿಯ ಭಾವಚಿತ್ರಗಳನ್ನು ಬಿಡುಗಡೆ ಮಾಡಿದರು.
ಕೆ. ಚಂದನ್, ಹರ್ಷ, ಬಿ.ಸಿ. ರವಿ, ವಕೀಲ ಜಿ.ಎನ್. ರವೀಶ್ ಅವರನ್ನು ಸನ್ಮಾನಿಸಲಾಯಿತು. ಮಂಡ್ಯ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಬಳ್ಳೇಕೆರೆ ಶ್ರೀಕಾಂತ್, ಜಗದೀಶ್, ಅಂಕಶೆಟ್ಟಿ, ಛಾಯಾದೇವಿ, ಜಿ.ಎಂ. ಕೆಂಪೇಗೌಡ, ವಿರೂಪಾಕ್ಷ, ಕುಮಾರ್, ಶ್ರೀನಿವಾಸ್ ಭಾಗವಹಿಸಿದ್ದರು.