ಮದ್ದೂರು: ಸೈನ್ ಸೆ ಹಿತಾತ್ಸೆರೇ...(ಗುರು ನಮನ), ಡೋಜೋರೇ...(ಶಾಲೆಗೆ ವಂದನೆ), ಮಕ್ಸೋ..(ಕಣ್ಣು ತೆರೆಯುವುದು), ಮಕ್ಸೋ ಮೌತೇ..(ಕಣ್ಣು ತೆರೆದು ವಂದಿಸುವುದು)..
ಈ ಮಾತುಗಳು ತಾಲ್ಲೂಕಿನ 39 ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಬಾಯಲ್ಲಿ ಕೇಳಿ ಬರುತ್ತಿವೆ. ಇದು ಯಾವ ಭಾಷೆ ಎಂದು ಗಾಬರಿಯಾಗಬೇಡಿ. ನಿರಾಯುಧ ಸ್ವಯಂ ರಕ್ಷಣಾ ಕಲೆಯಾದ ಕರಾಟೆ ತಾಲೀಮಿನಲ್ಲಿ ಭಾಗವಹಿಸಿರುವ ವಿದ್ಯಾರ್ಥಿನಿಯರು ಜಪಾನಿ ಭಾಷೆಯಲ್ಲಿ ಹೇಳುತ್ತಿರುವ ಪದಗಳು.
ಪ್ರತಿಕೂಲ ಸನ್ನಿವೇಶದಲ್ಲಿ ಅಗುಂತಕರಿಂದ ಎದುರಾಗುವ ಅಪಾಯ ಸಂದರ್ಭದಲ್ಲಿ ಹೆಣ್ಣುಮಕ್ಕಳು ಧೈರ್ಯದಿಂದ ತಮ್ಮನ್ನು ತಾವು ಸ್ವಯಂ ರಕ್ಷಿಸಿಕೊಳ್ಳಲು ಅನುವಾಗಲೆಂದು ರಾಜ್ಯ ಸರ್ಕಾರವು ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರಾಟೆ ತರಬೇತಿ ನೀಡುತ್ತಿದೆ.
ಕಳೆದ ಒಂದು ತಿಂಗಳಿಂದ ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರಾಟೆ ತರಬೇತಿ ನಿರಂತರ ನಡೆಯುತ್ತಿದ್ದು, ಕರಾಟೆ ತರಬೇತು ದಾರ ಬ್ಲಾಕ್ ಬೆಲ್ಟ್ ಕುಬೇರ್ ನಾರಾಯಣ ಅವರು, ಹೆಣ್ಣುಮಕ್ಕಳಿಗೆ ನಿರಾಯುಧ ಸಮರ ಕಲೆ ಕಲಿಸುತ್ತಿದ್ದಾರೆ.
ಅಪಾಯ ಎದುರಾದಾಗ ರಕ್ಷಣೆಗಾಗಿ ಯಾವ ಪಂಚ್ ಅನ್ನು ಎದುರಾಳಿಗೆ ನೀಡುವ ಮೂಲಕ ಅಪಾಯದಿಂದ ಪಾರಾಗಬೇಕು ಎಂಬುದನ್ನು ಕರಾಟೆಯಲ್ಲಿರುವ ವಿವಿಧ ಪಂಚ್್, ಬ್ಲಾಕ್್, ಕಿಕ್ ಕಲಿಸಿಕೊಡುವ ಮೂಲಕ ತಿಳಿಸಿಕೊಡಲಾಗುತ್ತಿದೆ. ಹೆಣ್ಣುಮಕ್ಕಳು ಕರಾಟೆ ತರಬೇತಿಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು, ಅವರ ಕಣ್ಣುಗಳಲ್ಲಿ ಆತ್ಮಸ್ಥೈರ್ಯದ ಹೊಳಪು ಕಾಣಬಹುದಾಗಿದೆ.
’ತಾಲ್ಲೂಕಿನ 39ಸರ್ಕಾರಿ ಪ್ರೌಢಶಾಲೆ ಗಳಲ್ಲಿ 2776 ವಿದ್ಯಾರ್ಥಿನಿಯರಿಗೆ ಈ ಸಮರ ಕಲೆ ಕಲಿಸಲಾಗುತ್ತಿದೆ. ಒಟ್ಟು 12 ವಿಶೇಷ ಅವಧಿಗಳಲ್ಲಿ ತರಬೇತುದಾರ ಕುಬೇರ ನಾರಾಯಣ ಅವರು ದೈಹಿಕ ಶಿಕ್ಷಣ ಶಿಕ್ಷಕರ ಸಹಯೋಗದೊಂದಿಗೆ ಕರಾಟೆ ತರಬೇತಿ ನೀಡುತ್ತಿದ್ದು, ತಾಲ್ಲೂಕಿನ ಎಲ್ಲಾ ಪ್ರೌಢಶಾಲೆ ಗಳಲ್ಲಿ ಮೊದಲ ಹಂತದ ತರಬೇತಿ ಪೂರ್ಣ ಗೊಂಡಿದೆ. ಕರಾಟೆ ಕಲಿಯುವುದರಿಂದ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎನ್ನು ತ್ತಾರೆ ಶಿಕ್ಷಣಾಧಿಕಾರಿ ಸಿ.ಎಚ್. ಕಾಳೀರಯ್ಯ.
ಶಾಲೆಯಲ್ಲಿ ಕರಾಟೆ ಕಲಿಸಲು ಆರಂಭಿಸಿದಾಗ ನಮಗೆ ಹಿಂಜರಿಕೆ ಮನೋಭಾವವಿತ್ತು. ಇದೀಗ ಕರಾಟೆ ಕಲಿತ ಮೇಲೆ ಯಾವುದೇ ಸಂಕಷ್ಟ ಪರಿಸ್ಥತಿಯಲ್ಲೂ ನಮ್ಮನ್ನು ನಾವು ಸ್ವಯಂ ರಕ್ಷಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಮೂಡಿದೆ ಎಂದು ಎನ್ನುತ್ತಾರೆ ವಿದ್ಯಾರ್ಥಿನಿ ಎ.ಎಸ್.ಸಹನಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.