ವಿಜಯಪುರ: ‘ಶಿವಮೊಗ್ಗದಲ್ಲಿ ತಾಯಿ ಹೃದಯದ ಪೂಜ್ಯ ತಂದೆಯವರು ಇದ್ದಾರೆ, ತಾಯಿ ಹೃದಯದ ಪೂಜ್ಯ ತಂದೆಯವರ ಸಣ್ಣ ಮಗ ರಾಜ್ಯಾಧ್ಯಕ್ಷರಿದ್ಧಾರೆ, ತಾಯಿ ಹೃದಯದ ಪೂಜ್ಯ ತಂದೆಯವರ ಹಿರಿಯ ಮಗ ಇದ್ದಾರೆ. ಅವರೇ ಮೂರು ಜನ ದೊಡ್ಡ ದೊಡ್ಡ ನಾಯಕರಿರುವಾಗ ಅಲ್ಲಿ ನನ್ನದೇನು ಕೆಲಸ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ಯತ್ನಾಳ ಶಿವಮೊಗ್ಗದಲ್ಲಿ ಪ್ರಚಾರ ಮಾಡುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದರು.
‘ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ರಹಸ್ಯಗಳನ್ನು ಬಿಚ್ಚಿಡುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ, ಎಲ್ಲರದ್ದೂ ರಹಸ್ಯ ಇದ್ದೇ ಇರುತ್ತದೆ. ಅಂಥ ಹಲ್ಕಾ ಮಾತಾಡುವವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು