ನವದೆಹಲಿ: ಸಾರ್ವಜನಿಕ ಸಭೆ, ಸಮಾವೇಶಗಳಿಗೆ ಸಂವಿಧಾನದ ಪ್ರತಿಗಳನ್ನು ತೆಗೆದುಕೊಂಡು ಹೋಗಿ ಎಂದು ತಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಕರೆ ನೀಡಿದ್ದಾರೆ.
ರಾಹುಲ್, ಗುಜರಾತ್ನ ಪಠಾಣ್, ಛತ್ತೀಸಗಢದ ಬಿಸಲ್ಪುರದಲ್ಲಿ ಸೋಮವಾರ ನಡೆದ ಸಭೆಗಳಿಗೆ ಹಾಗೂ ಮಧ್ಯಪ್ರದೇಶದ ಭಿಂದ್ನಲ್ಲಿ ಇಂದು (ಮಂಗಳವಾರ) ನಡೆದ ಸಮಾವೇಶಕ್ಕೆ ಸಂವಿಧಾನದ ಪ್ರತಿ ತೆಗೆದುಕೊಂಡು ಹೋಗಿದ್ದರು.
ಸಂವಿಧಾನದ ಪ್ರತಿ ಹಿಡಿದಿರುವ ಚಿತ್ರವನ್ನು ಎಕ್ಸ್/ಟ್ವಿಟರ್ನಲ್ಲಿ ಹಂಚಿಕೊಂಡಿರುವ ಅವರು, 'ನಮ್ಮ ಸಂವಿಧಾನವು ಬಡವರ ಬೆನ್ನೆಲುಬು, ನಿರ್ಗತಿಕರ ಪಾಲಿನ ಗೌರವ, ಪ್ರತಿಯೊಬ್ಬ ನಾಗರಿಕನಿಗೆ ಹೆಮ್ಮೆಯದ್ದಾಗಿದೆ. ಪವಿತ್ರ ಸಂವಿಧಾನದ ಪ್ರತಿಯನ್ನು ನಾಮಪತ್ರ ಸಲ್ಲಿಕೆ, ಸಭೆ–ಸಮಾವೇಶಗಳು ಹಾಗೂ ರ್ಯಾಲಿಗಳಿಗೆ ತೆಗೆದುಕೊಂಡು ಹೋಗಿ ಎಂದು ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳು ಹಾಗೂ ನಾಯಕರಲ್ಲಿ ಮನವಿ ಮಾಡುತ್ತೇನೆ' ಎಂದಿದ್ದಾರೆ.
ಮುಂದುವರಿದು, 'ಕಾಂಗ್ರೆಸ್ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಬಿಜೆಪಿ ಮಾತ್ರವಲ್ಲ ಪ್ರಪಂಚದ ಯಾವುದೇ ಶಕ್ತಿಯು ಭಾರತದ ಸಂವಿಧಾನವನ್ನು ಕಸಿದುಕೊಳ್ಳಲು ಬಿಡುವುದಿಲ್ಲ ಎಂಬುದನ್ನು ಪ್ರತಿ ಹಳ್ಳಿ, ಬೀದಿ ಬೀದಿಯಲ್ಲಿ ಸಾರಬೇಕು' ಎಂದು ಕರೆ ನೀಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರೂ ರಾಹುಲ್ ಗಾಂಧಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
'ರಾಹುಲ್ ಅವರು ಮಧ್ಯಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನದೊಂದಿಗೆ ಪಾಲ್ಗೊಂಡಿದ್ದರು. ಈ ಚುನಾವಣೆಯು ಸಂವಿಧಾನದ ರಕ್ಷಕರು ಹಾಗೂ ನಾಶ ಮಾಡುವವರ ನಡುವಿನದ್ದಾಗಿದೆ. ನಮ್ಮ ಕಾಲಘಟ್ಟದ ಅತಿ ಮುಖ್ಯ ಚುನಾವಣೆ ಇದಾಗಿದೆ' ಎಂದು ಬರೆದುಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 'ಬಿಜೆಪಿಯು ಸಂವಿಧಾನಕ್ಕೆ ತಿದ್ದುಪಡಿ ತರಲು ಹಾಗೂ ಆರ್ಎಸ್ಎಸ್ನ ಸಂಚಿನಂತೆ ಮೀಸಲಾತಿ ರದ್ದುಪಡಿಸುವುದಕ್ಕಾಗಿ 400 ಸ್ಥಾನಗಳನ್ನು ಗೆಲ್ಲಲು ಬಯಸುತ್ತಿದೆ' ಎಂದು ಆರೋಪಿಸಿದೆ.