ಪುಣೆ: ದೇಶದ ಸಂವಿಧಾನವನ್ನು ಬದಲಿಸಲು ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲು ಬಯಸುತ್ತಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ-ಎಸ್ಪಿ) ಅಧ್ಯಕ್ಷ ಶರದ್ ಪವಾರ್ ಭಾನುವಾರ ಆರೋಪಿಸಿದ್ದಾರೆ.
ಪುಣೆಯ ಸಾಸ್ವಢ ತೆಹಸಿಲ್ನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, 'ಈ ಬಾರಿದ ಸಾರ್ವತ್ರಿ ಚುನಾವಣೆ ಹಿಂದಿಗಿಂತಲೂ ಭಿನ್ನವಾಗಿರಲಿದೆ. ಯಾವ ವಿಧಾನದಿಂದ ದೇಶವು ಮುನ್ನಡೆಯಲಿದೆ ಎಂಬುದನ್ನು ನಿರ್ಧರಿಸಲಿದೆ' ಎಂದು ಹೇಳಿದ್ದಾರೆ.
'ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಬಿಜೆಪಿ ಸರ್ವಾಧಿಕಾರದ ಹಾದಿಯಲ್ಲಿ ಹೋಗುತ್ತಿದ್ದು, ಪ್ರಜಾಪ್ರಭುತ್ವದ ನಾಶ ಮಾಡುತ್ತಿದೆ. ಹಾಗಾಗಿ ದೇಶದ ರಕ್ಷಣೆಗಾಗಿ ಬಿಜೆಪಿಯನ್ನು ಸೋಲಿಸಬೇಕಿದೆ' ಎಂದು ಅವರು ಮನವಿ ಮಾಡಿದ್ದಾರೆ.
'ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು ಎಂಬುದು ನಮ್ಮ ಇರಾದೆಯಾಗಿದೆ. ಆದರೆ ದೇಶದ ಸಂವಿಧಾನವನ್ನು ಬದಲಿಸಲು ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲು ಬಯಸುತ್ತಿದೆ' ಎಂದು ಅವರು ಟೀಕಿಸಿದ್ದಾರೆ.