‘ಇದು ನ್ಯಾಯಾಂಗವೇ ಸೃಷ್ಟಿಸಿದ ಅಪಸ್ವರ’ ಎಂಬ ನಾರಾಯಣ ಎ. ಅವರ ಲೇಖನ (ಪ್ರ.ವಾ., ಸೆ. 26) ದೇಶದ ನ್ಯಾಯಾಂಗದಲ್ಲಿನ ಅವ್ಯವಸ್ಥೆಗೆ ಕೈಗನ್ನಡಿಯಂತಿದೆ. ಜನರು ಶಾಸಕಾಂಗ ಹಾಗೂ ಕಾರ್ಯಾಂಗಗಳ ಮೇಲಿನ ವಿಶ್ವಾಸ ಕಳೆದುಕೊಂಡಾಗ, ನ್ಯಾಯಾಂಗ ದಾರಿ ತೋರಿಸಬೇಕೆಂಬ ಸದುದ್ದೇಶದಿಂದ ಈ ಅಂಗಕ್ಕೆ ಸಂವಿಧಾನ ರಕ್ಷಿಸುವ ಮಹತ್ವದ ಹೊಣೆಗಾರಿಕೆ ನೀಡಲಾಗಿದೆ. ಆದರೆ ಅದೇ ಅಂಗದಲ್ಲಿಯೇ ಭ್ರಷ್ಟಾಚಾರ ತುಂಬಿ ಹೋಗಿದೆ. ಇದನ್ನು ಹಲವಾರು ನಿವೃತ್ತ ಮತ್ತು ಹಾಲಿ ನ್ಯಾಯಾಧೀಶರು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.
ಸರ್ಕಾರದ ಹಲವಾರು ನೀತಿ, ನಿರ್ಣಯಗಳ ವಿಚಾರದಲ್ಲಿ ನ್ಯಾಯಾಂಗವು ತನ್ನ ವ್ಯಾಪ್ತಿ ಮೀರಿ ನಡೆದುಕೊಳ್ಳುತ್ತಿರುವುದು ಹಲವಾರು ನಿದರ್ಶನಗಳಿಂದ ಕಂಡು ಬಂದಿದೆ. ಉಳಿದೆರಡು ಅಂಗಗಳು ಭ್ರಷ್ಟಗೊಂಡಾಗ ಅವುಗಳನ್ನು ಶುದ್ಧೀಕರಿಸಿ ಜನರ ನಂಬಿಕೆ ಉಳಿಸಿಕೊಳ್ಳಬೇಕಾದ ಅಂಗವೇ ಜನಸಾಮಾನ್ಯರ ಅವಿಶ್ವಾಸಕ್ಕೆ ಒಳಗಾಗಿರುವುದು ಸ್ವಸ್ಥ ಸಮಾಜವೊಂದರ ಅವನತಿಯ ಮುನ್ಸೂಚನೆಯೇ ಸರಿ.
–ಮಾಳಪ್ಪ ಧರಿಗೊಂಡ, ತೆಲ್ಲೂರು