ಇಸ್ಲಾಮಾಬಾದ್ : ಲಷ್ಕರ್ -ಇ- ತಯಬಾ ಉಗ್ರರು 2008ರ ಮುಂಬೈ ದಾಳಿಗೆ ಬಳಸಿದ್ದಾರೆ ಎನ್ನಲಾದ ದೋಣಿಯನ್ನು ಪರಿಶೀಲಿಸುವಂತೆ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ನ್ಯಾಯಾಂಗ ಆಯೋಗಕ್ಕೆ ಆದೇಶ ನೀಡಿದೆ.
ಕರಾಚಿಯಲ್ಲಿರುವ ‘ಅಲ್ಫೋಸ್’ ದೋಣಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕಷ್ಟವಾಗಿರುವುದರಿಂದ ನ್ಯಾಯಾಂಗ ಆಯೋಗ ಅಲ್ಲಿಗೆ ತೆರಳಿ ಪರಿಶೀಲಿಸಬೇಕೆಂದು ಪಾಕಿಸ್ತಾನದ ತನಿಖಾ ಸಂಸ್ಥೆಯು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
ಕರಾಚಿಗೆ ತೆರಳಲಿರುವ ಆಯೋಗವು ದೋಣಿ ಪರಿಶೀಲಿಸುವುದರ ಜತೆ ಸಾಕ್ಷಿದಾರ ಮುನೀರ್ ಎಂಬಾತನಿಂದ ಹೇಳಿಕೆ ಪಡೆದುಕೊಳ್ಳಲಿದೆ.
ಮುಂಬೈ ದಾಳಿಯ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಭಾರತ ಪಾಕಿಸ್ತಾನಕ್ಕೆ ಪತ್ರ ಬರೆದ ಬಳಿಕ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ದೋಣಿ ಪರಿಶೀಲನೆಗೆ ಆದೇಶ ನೀಡಿದೆ.