ಕೌಂಟಾನ್, ಮಲೇಷ್ಯಾ: ಭಾನುವಾರ ನಡೆದ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 3-2 ಅಂತರದಲ್ಲಿ ಗೆಲುವು ಸಾಧಿಸಿದೆ.
ಭಾರತೀಯ ಯೋಧರಿಗಾಗಿ ಪಾಕಿಸ್ತಾನ ತಂಡದ ವಿರುದ್ಧ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದ ಭಾರತೀಯ ಹಾಕಿ ತಂಡದ ನಾಯಕ ಪಿ.ಆರ್ ಶ್ರೀಜೇಶ್ ಈ ಗೆಲುವಿನ ಮೂಲಕ ತಮ್ಮ ಮಾತು ಪಾಲಿಸಿದ್ದಾರೆ.
ಭಾರತ ತಂಡದ ಪರವಾಗಿ ಪರ್ದೀಪ್ ಮೋರ್, ರೂಪಿಂದರ್ ಪಾಲ್ ಸಿಂಗ್ ಮತ್ತು ರಮಣ್ ದೀಪ್ ಸಿಂಗ್ ಗೋಲು ದಾಖಲಿಸಿದ್ದು, ಪಾಕಿಸ್ತಾನ ತಂಡದಲ್ಲಿ ಮುಹಮ್ಮದ್ ರಿಜ್ವಾನ್, ಮುಹಮ್ಮದ್ ಇರ್ಫಾನ್ ಜ್ಯೂನಿಯರ್ ಗೋಲು ಬಾರಿಸಿದ್ದಾರೆ.
ಪಂದ್ಯದಲ್ಲಿ ಪಾಕಿಸ್ತಾನವನ್ನು ಪರಾಭವಗೊಳಿಸುವ ಮೂಲಕ ನಾವು ಆ ಗೆಲುವನ್ನು ದೇಶದ ಗಡಿ ಕಾಯುವ ಯೋಧರಿಗೆ ಅರ್ಪಿಸುತ್ತೇವೆ ಎಂದು ಪಂದ್ಯಕ್ಕೆ ಮುನ್ನ ಶ್ರೀಜೇಶ್ ಹೇಳಿದ್ದರು. ಇದೀಗ ಪಾಕ್ ವಿರುದ್ಧ ಗೆಲುವು ಸಾಧಿಸಿ ಭಾರತೀಯ ಹಾಕಿ ತಂಡ ವಿಜಯದ ನಗೆ ಬೀರಿದೆ.
ಒಂದು ಹಂತದಲ್ಲಿ ಪಾಕಿಸ್ತಾನ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರೂ, ನಂತರದ ಎರಡೇ ನಿಮಿಷಗಳಲ್ಲಿ 2 ಗೋಲುಗಳನ್ನು ಬಾರಿಸಿ ಭಾರತ ತಂಡ ಗೆಲುವು ತನ್ನದಾಗಿಸಿಕೊಂಡಿತು.