ಹುಬ್ಬಳ್ಳಿ: ಭಾರಿ ಪ್ರಮಾಣದ ನಗದು ಮತ್ತು ಚಿನ್ನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹವಾಲಾ ದಂಧೆಯ ಪ್ರಮುಖ ರೂವಾರಿ ಎನ್ನಲಾದ ಚಳ್ಳಕೆರೆಯ ಕೆ.ಸಿ. ವೀರೇಂದ್ರ ಮತ್ತು ಸಾಗರ್ ಹಣಕಾಸು ಸಂಸ್ಥೆ ಮಾಲೀಕ ಸಮುಂದರ್ ಸಿಂಗ್ ಸೇರಿದಂತೆ ಗೋವಾ ಮೂಲದ ಕ್ಯಾಸಿನೊ ಕ್ಲಬ್ಗಳ ಮಾಲೀಕರನ್ನು ನಗರದಲ್ಲಿ ವಿಚಾರಣೆಗೆ ಒಳಪಡಿಸಿದರು.
ವೀರೇಂದ್ರ ಅವರನ್ನು ಇಲ್ಲಿಗೆ ಕರೆತಂದು ಭಾನುವಾರ ರಾತ್ರಿ ವಿಚಾರಣೆ ನಡೆಸಿದರು. ಹಣ ಬದಲಾವಣೆಗೆ ಯಾರೆಲ್ಲಾ ಸಹಕರಿಸಿದ್ದಾರೆ ಎಂಬ ಮಾಹಿತಿಯನ್ನು ಅವರಿಂದ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಅವರನ್ನು ಹೆಚ್ಚಿನ ವಿಚಾರಣೆ ಸಲುವಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ವೀರೇಂದ್ರ ಜೊತೆ ಗುರುತಿಸಿಕೊಂಡಿರುವ ಸಮುಂದರ್ ಸಿಂಗ್ ಮತ್ತು ಗೋವಾ ಮೂಲದ ಕ್ಯಾಸಿನೊ ಕ್ಲಬ್ಗಳ ಮೂವರು ಮಾಲೀಕರನ್ನೂ
ಸೋಮವಾರ ವಿಚಾರಣೆಗೆ ಒಳಪಡಿಸಲಾಗಿದೆ.
ಇದೇ 9 ಮತ್ತು 10ರಂದು ವೀರೇಂದ್ರ ಮತ್ತು ಸಮುಂದರ್ ಸಿಂಗ್ ಅವರ ಮನೆ ಮತ್ತು ಹಣಕಾಸು ಸಂಸ್ಥೆ, ಜುವೆಲರಿ ಅಂಗಡಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆದಿತ್ತು.