ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕ್ಕೊಂದು ನಿಯಮ: ಹೊಸ ಆಯಾಮ

Last Updated 29 ಡಿಸೆಂಬರ್ 2016, 20:06 IST
ಅಕ್ಷರ ಗಾತ್ರ

ನವೆಂಬರ್ 8
ನೋಟು ರದ್ದತಿ ಘೋಷಣೆ

ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆ ತಡೆಗೆ ನವೆಂಬರ್‌ 8 ಮಧ್ಯರಾತ್ರಿಯಿಂದ ₹500 ಮತ್ತು ₹1,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ರದ್ದುಪಡಿಸಿತು. ಇದೇ ಮೊದಲ ಬಾರಿ ಸುದ್ದಿ ವಾಹಿನಿಗಳ ಮೂಲಕ ಅನಿರೀಕ್ಷಿತವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ನಿರ್ಧಾರ ಪ್ರಕಟಿಸಿದರು.

* ರದ್ದಾದ ನೋಟುಗಳನ್ನು  ಬ್ಯಾಂಕ್‌ ಅಥವಾ ಅಂಚೆ ಕಚೇರಿ ಖಾತೆಗೆ ಜಮಾ ಮಾಡಲು  ಡಿಸೆಂಬರ್‌ 30ರವರೆಗೆ ಅವಕಾಶ. ಜಮಾ ಮೊತ್ತಕ್ಕೆ ಮಿತಿ ಇಲ್ಲ.

* ಬ್ಯಾಂಕ್, ಅಂಚೆ ಕಚೇರಿಗಳಲ್ಲಿ  ದಿನಕ್ಕೆ ಗರಿಷ್ಠ ₹ 4,000ವರೆಗೆ ಮಾತ್ರ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.

* ಬ್ಯಾಂಕಿನಿಂದ ದಿನವೊಂದಕ್ಕೆ ಗರಿಷ್ಠ ₹ 10 ಸಾವಿರ, ವಾರಕ್ಕೆ ಗರಿಷ್ಠ ₹ 20 ಸಾವಿರ ಪಡೆಯಬಹುದು.

* ಎಟಿಎಂ ಯಂತ್ರದಿಂದ ದಿನಕ್ಕೆ ಗರಿಷ್ಠ ₹ 2,000 ಮಾತ್ರ ತೆಗೆದುಕೊಳ್ಳಬಹುದು

* ಬ್ಯಾಂಕ್‌ ಸೇವೆಗಳು ಬುಧವಾರ ಸಾರ್ವಜನಿಕರಿಗೆ ಲಭ್ಯ ಇಲ್ಲ

* ಮೊದಲ ಎರಡು ದಿನ ದೇಶದಾದ್ಯಂತ ತೆರೆಯದ ಎಟಿಎಂಗಳು

* ರೈಲ್ವೆ, ವಿಮಾನ, ಸರ್ಕಾರಿ ಬಸ್ ಟಿಕೆಟ್‌ ಬುಕಿಂಗ್‌ಗೆ, ಆಸ್ಪತ್ರೆಗಳಲ್ಲಿ, ಪೆಟ್ರೋಲ್‌ ಬಂಕ್‌ಗಳಲ್ಲಿ ₹ 500, ₹ 1,000 ಮುಖಬೆಲೆಯ ನೋಟುಗಳನ್ನು ನವೆಂಬರ್‌ 11ರ ಮಧ್ಯರಾತ್ರಿವರೆಗೆ ಬಳಸಬಹುದು.

***
ನವೆಂಬರ್ 9

* ಹಳೆಯ  ನೋಟುಗಳನ್ನು ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಇರಿಸುವುದಕ್ಕೆ  ತೆರಿಗೆ ವಿನಾಯ್ತಿ ಇರುವುದಿಲ್ಲ:  ಅರುಣ್‌ ಜೇಟ್ಲಿ

* ಗೃಹಿಣಿಯರು, ರೈತರೂ ಸೇರಿ ದಂತೆ ವಾರ್ಷಿಕ ಆದಾಯವು ತೆರಿಗೆ ವಿನಾಯ್ತಿಗೆ ಒಳಪಟ್ಟವರು ರದ್ದಾದ ನೋಟುಗಳನ್ನು  ₹ 2 ರಿಂದ ₹ 3 ಲಕ್ಷದವರೆಗೆ ಠೇವಣಿ  ಇರಿಸಿದರೆ ಅವ ರನ್ನು ಆದಾಯ ತೆರಿಗೆ ಪರಿಶೀಲನೆಗೆ  ಒಳಪಡಿಸುವುದಿಲ್ಲ: ಜೇಟ್ಲಿ

***
ನವೆಂಬರ್ 10

* ಹಳೆಯ ನೋಟುಗಳನ್ನು ಬಳಸಲು ಕೇಂದ್ರ ಸರ್ಕಾರ 72 ಗಂಟೆ (ನ.14ರ ರಾತ್ರಿ ವರೆಗೆ) ಕಾಲಾವಕಾಶ ವಿಸ್ತರಿಸಿದೆ. ಜತೆಗೆ, ಹಳೆ ನೋಟು ಬಳಕೆ ಮಾಡಬಹುದಾದ ಕ್ಷೇತ್ರಗಳ ಪಟ್ಟಿಯನ್ನು ನೀಡಿತು.  ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿತು.

* ಆಸ್ಪತ್ರೆ, ವಿಮಾನ, ರೈಲು ಮತ್ತು ಸರ್ಕಾರಿ ಬಸ್‌ ಟಿಕೆಟ್‌ ಕಾದಿರಿಸಲು, ಹಾಲಿನ ಬೂತ್‌, ಪೆಟ್ರೋಲ್‌ ಬಂಕ್‌ಗಳಲ್ಲಿಯೂ ಹಳೆ ನೋಟು ಬಳಕೆಗೆ ಅವಕಾಶ ಇದೆ.

*  ಸುಪ್ರೀಂನಲ್ಲಿ ಕೇವಿಯಟ್

* ಜನರ ಹಣ ಸುರಕ್ಷಿತ: ಆರ್‌ಬಿಐ

***
ನವೆಂಬರ್ 11

* ಜನರ ಮೇಲಿನ 'ನಿರ್ದಿಷ್ಟ ದಾಳಿ': ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪ.

* ಇದೊಂದು ಸ್ವಚ್ಛ ಅಭಿಯಾನ: ಪ್ರಧಾನಿ

* ಎಟಿಎಂ ಕಾರ್ಯನಿರ್ವಹಣೆಗೆ 3 ವಾರ: ಜೇಟ್ಲಿ

***
ನವೆಂಬರ್ 12

* ಬ್ಯಾಂಕ್‌ ಖಾತೆಯಿಂದ ಹಣ ಪಡೆದುಕೊಳ್ಳಲು ಮಿತಿಯನ್ನು ವಾರಕ್ಕೆ ₹20,000ದಿಂದ ₹24,000ಕ್ಕೆ ಏರಿಕೆ.

* ಒಂದೇ ದಿನ ₹ 24 ಸಾವಿರ ಪಡೆದುಕೊಳ್ಳಬಹುದು.

* ನಾಲ್ಕು ದಿನಗಳಲ್ಲಿ ಶೇಕಡ 40ರಷ್ಟು ಎಟಿಎಂಗಳಲ್ಲಿ ಮಾತ್ರ ಹಣ ಲಭ್ಯ

* ಕೆಲವೇ ಗಂಟೆಗಳಲ್ಲಿ ಖಾಲಿಯಾದ ಎಟಿಎಂಗಳಲ್ಲಿನ ಇದ್ದ ಹಣ

* ₹ 500 ಮುಖಬೆಲೆಯ ಹೊಸ ನೋಟುಗಳು ದೆಹಲಿ ಮತ್ತು ಮುಂಬೈನಲ್ಲಿ ಮಾತ್ರ ಲಭ್ಯ

* ಬೇಡಿಕೆ ಪೂರೈಸಲು ₹100ರ ಮುಖಬೆಲೆಯ ಗಲೀಜಾದ ನೋಟು ಚಲಾವಣೆಗೆ ಬಿಟ್ಟ ಆರ್‌ಬಿಐ

* ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹ ವಿನಾಯಿತಿ ವಿಸ್ತರಣೆ

* ಇದೊಂದು ಚುನಾವಣಾ ಗಿಮಿಕ್: ಕಾಂಗ್ರೆಸ್‌ ಟೀಕೆ

* ಸೂಕ್ತ ಮುಂದಾಲೋಚನೆ ಇಲ್ಲದೆ ನೋಟು ರದ್ದು ಮಾಡಿದ ಹಣಕಾಸು ಇಲಾಖೆಯ ಕ್ರಮ ಸರಿಯಲ್ಲ:  ಸುಬ್ರಮಣಿಯನ್‌ ಸ್ವಾಮಿ

***
ಉಪ್ಪು: ಚಿಲ್ಲರೆ ಕೊರತೆ ತಂದ ಪಜೀತಿ

ದೇಶದಲ್ಲಿ ಉಪ್ಪಿನ ಕೊರತೆ ಉಂಟಾಗಿದೆ ಎಂಬ ವದಂತಿ ದೇಶದ ಹಲವೆಡೆ ಹರಡಿತ್ತು. ಉಪ್ಪನ್ನು ಖರೀದಿಸಲು ಜನರು ಅಂಗಡಿಗಳಿಗೆ ನುಗ್ಗಿದ್ದರು. ಮುಂಬೈ, ಮೊರದಾಬಾದ್‌ನಲ್ಲಿ ಜನರನ್ನು ನಿಯಂತ್ರಿಸಲು ಲಾಠಿ ಪ್ರಹಾರವೂ ಆಯಿತು. ಕೆ.ಜಿ ಉಪ್ಪನ್ನು ₹ 500ಗೆ ಮಾರಾಟ ಮಾಡಲಾಗುತ್ತಿದೆ ಎಂಬ ವದಂತಿಯೂ ಹರಡಿತ್ತು. ನೋಟು ರದ್ದತಿಯಿಂದ ತಲೆದೋರಿದ್ದ ಚಿಲ್ಲರೆ ಕೊರತೆಯಿಂದ ಈ ಸಮಸ್ಯೆ ತಲೆದೋರಿತ್ತು.

***
ನವೆಂಬರ್ 13
‘ಪರಿಣಾಮ ಎದುರಿಸಲು ಸಿದ್ಧ’

ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾವುಕರಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೆಲವೊಂದು ಶಕ್ತಿಗಳು ನನ್ನ ವಿರುದ್ಧವಾಗಿವೆ. ಅವರು ನನ್ನನ್ನು ಬದುಕಲು ಬಿಡುವುದಿಲ್ಲ. 70 ವರ್ಷ ಲೂಟಿ ಮಾಡಿದ್ದು ನಷ್ಟವಾಗಿ ಹೋಗುತ್ತದೆ ಎಂಬ ಕಾರಣದಿಂದ ಅವರು ನನ್ನ ವಿರುದ್ಧ ನಿಲ್ಲುತ್ತಿದ್ದಾರೆ. ಆದರೆ ನಾನು ಎಲ್ಲವನ್ನೂ ಎದುರಿಸಲು ಸಿದ್ಧ ಎಂದಿದ್ದರು.

ಬೆಳಗಾವಿ:  ಕೆಎಲ್‌ಇ ಸಂಸ್ಥೆ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣವನ್ನು ವಾಮಮಾರ್ಗದ ಮೂಲಕ ಸಕ್ರಮ ಮಾಡಲು ಮುಂದಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಡವರು ಹಾಗೂ ಪ್ರಾಮಾಣಿಕವಾಗಿ ದುಡಿದಿರುವ ಜನರಿಗೆ ₹500 ಹಾಗೂ ₹1000 ರೂಪಾಯಿ ನೋಟಿನ ಸಂಪೂರ್ಣ ಮೌಲ್ಯವನ್ನು ಹಿಂದಿರುಗಿಸಲು ಸರ್ಕಾರ ಬದ್ಧವಿದೆ. ಅದಕ್ಕಾಗಿ ಡಿಸೆಂಬರ್ 30ರವರೆಗೆ ತಾಳ್ಮೆಯಿಂದ ಕಾಯಿರಿ ಎಂದರು.

***
ಕಾಸಿಲ್ಲದವರ ಅಪಹಾಸ್ಯ

ನವೆಂಬರ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೊ ಮಾಡಿದ ಭಾಷಣದ ತುಣುಕೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಯಿತು. ಟೋಕಿಯೊದಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಭಾಷಣವಾಗಿತ್ತು ಅದು. ಅದರಲ್ಲಿ ‘ಭಾರತದಲ್ಲಿ ಮನೆಗಳಲ್ಲಿ ಮದುವೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಆದರೇನು ಕೈಯಲ್ಲಿ ಕಾಸಿಲ್ಲ' ಹೀಗೆ ಹೇಳುವಾಗ ಮೋದಿ ನಗುತ್ತಿದ್ದರು. ಜನರ ಕಷ್ಟವನ್ನು ಅಪಹಾಸ್ಯ ಮಾಡಿ ಮಾತನಾಡಿದ ಪ್ರಧಾನಿ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಯಿತು.

ವಿರೋಧ ಪಕ್ಷಗಳ ಒಕ್ಕೂಟ
ನೋಟು ರದ್ದತಿಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ  ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‍ಡಿಎ) ವಿರುದ್ಧದ ಸಮರಕ್ಕೆ ಕೈಜೋಡಿಸಲು ನಿರ್ಧರಿಸಿದರು.

***
ನವೆಂಬರ್ 14

* ವಿವಿಧ ಸೇವೆಗಳನ್ನು ಪಡೆಯಲು ಮತ್ತು ವಿವಿಧ ಶುಲ್ಕಗಳನ್ನು ಪಾತಿ ಮಾಡಲು ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳ ಚಲಾವಣೆಗೆ ನೀಡಿದ್ದ ಗಡವು ನವೆಂಬರ್ 24ರವರೆಗೆ ವಿಸ್ತರಣೆ

* ಎಟಿಎಂನ ಹಣಕಾಸು, ಹಣಕಾಸೇತರ ಸೇವೆಗಳಿಗೆ ಡಿ.30ರವರೆಗೆ ಯಾವುದೇ ಶುಲ್ಕ ವಿಧಿಸದಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

* ಡೆಬಿಡ್‌–ಕ್ರಡಿಟ್‌ ಕಾರ್ಡ್‌ ಕಾರ್ಡ್‌ ವಹಿವಾಟು ಶುಲ್ಕ ವಿನಾಯಿತಿಗೆ ಆರ್‌ಬಿಐ ಸೂಚನೆ

* ವಿಮಾನ ನಿಲ್ದಾಣಗಳಲ್ಲಿ ನವೆಂಬರ್‌ 21ರವರೆಗೆ ಪಾರ್ಕಿಂಗ್‌ ಶುಲ್ಕ ರದ್ದು

* ಚಾಲ್ತಿ ಖಾತೆ ಹೊಂದಿರುವ ಸಣ್ಣ ವ್ಯಾಪಾರಿಗಳು ವಾರಕ್ಕೆ ಗರಿಷ್ಠ ₹ 50 ಸಾವಿರ ಹಣ ಪಡೆಯಬಹುದು.

* ರಾಷ್ಟ್ರೀಯ ಹೆದ್ದಾರಿಗಳಲ್ಲಿ ನವೆಂಬರ್ 18ರವರೆಗೆ ಶುಲ್ಕ ವಿನಾಯಿತಿ ಮುಮದುವರಿಕೆ

* ಮದುವೆ ಖರ್ಚಿಗೆ ₹ 2.5 ಲಕ್ಷ ಮಾತ್ರ

***
ನವೆಂಬರ್ 15

* ಒಬ್ಬರೇ ಪದೇ ಪದೇ ನೋಟು ವಿನಿಮಯಕ್ಕಾಗಿ ಬ್ಯಾಂಕ್‌ಗಳಿಗೆ ಬರುವುದನ್ನು  ತಪ್ಪಿಸಲು ಜನರ ಬೆರಳಿಗೆ ಅಳಿಸಲಾಗದ ಶಾಯಿಯಿಂದ ಗುರುತು ಮಾಡಲು ನಿರ್ಧಾರ

***
ನವೆಂಬರ್ 16

* ಪೂರ್ವಸಿದ್ಧತೆ ಇಲ್ಲದ ಕ್ರಮ: ಮೇಲ್ಮನೆಯಲ್ಲಿ ಪ್ರತಿಪಕ್ಷ ತರಾಟೆ

* ಘೋಷಣೆಗೆ ಮೊದಲೇ ಮಾಹಿತಿ ಸೋರಿಕೆ: ರಾಜ್ಯಸಭೆಯಲ್ಲಿ ಆರೋಪ

* ನಗದು ಸಮಸ್ಯೆ ಕನಿಷ್ಠ ಇನ್ನೂ ಒಂದು ತಿಂಗಳು ಮುಂದುವರೆಯಲಿದೆ – ರಾಜನಾಥ್ ಸಿಂಗ್

***
ನವೆಂಬರ್ 17

* ಜನಧನ ಖಾತೆಗೆ ಅಕ್ರಮ ಹಣ ಠೇವಣಿ ತಡೆಗೆ ಕ್ರಮ ಕೈಗೊಳ್ಳಲು ಸೂಚನೆ

* ಮದುವೆ ಖರ್ಚಿಗೆ ನಿಯಮ ಸಡಿಲ. ವಧು, ವಧುವಿನ ಹೆತ್ತವರು ಮತ್ತು ವರ, ವರನ ಹೆತ್ತವರು ಮದುವೆ ಖರ್ಚಿಗಾಗಿ ಗರಿಷ್ಠ ₹2.5 ಲಕ್ಷ ಪಡೆಯಲು ಅವಕಾಶ ಇದೆ. ಹೀಗೆ ಎರಡೂ ಕುಟುಂಬಗಳು ಸೇರಿ ಮದುವೆ ಖರ್ಚಿಗಾಗಿ ಒಟ್ಟು ₹5 ಲಕ್ಷ ಪಡೆಯಬಹುದು.ಒಂದು ಕುಟುಂಬದ ಒಬ್ಬರ ಖಾತೆಯಿಂದ ಮಾತ್ರ ಹಣ ಪಡೆಯಲು ಅವಕಾಶ.

* ಹಳೆಯ ನೋಟು ಬದಲಾಯಿಸುವ ಪ್ರಮಾಣ ₹2,000 ಕ್ಕೆ ಇಳಿಕೆ

* ಕಿಸಾನ್‌ ಕಾರ್ಡ್‌ ಹೊಂದಿರುವವರು ಅಥವಾ ಬೆಳೆ ಸಾಲ ಪಡೆದ ರೈತರು ಬ್ಯಾಂಕ್‌ನಿಂದ ವಾರಕ್ಕೆ ₹25,000 ಪಡೆಯಲು ಅವಕಾಶ. ಚೆಕ್‌ ಅಥವಾ ಆರ್‌ಟಿಜಿಎಸ್‌ ಮೂಲಕ ಖಾತೆಗೆ ಹಣ ಬಂದಿರುವ ರೈತರು ವಾರಕ್ಕೆ ಹೆಚ್ಚುವರಿ ₹ 25,000 ಪಡೆಯಲು ಅವಕಾಶ. ರೈತರು ವಾರಕ್ಕೆ ಗರಿಷ್ಠ ₹50,000 ಪಡೆಯಲು ಸಾಧ್ಯ

* ಬೆಳೆ ವಿಮೆ ಕಂತು ಪಾವತಿ ಅವಧಿ 15 ದಿನ ವಿಸ್ತರಣೆ

* ಎಪಿಎಂಸಿಯಲ್ಲಿ ನೋಂದಣಿಯಾಗಿರುವ ವ್ಯಾಪಾರಿಗಳಿಗೆ ವಾರಕ್ಕೆ ಗರಿಷ್ಠ ₹50,000 ಪಡೆಯಲು ಅವಕಾಶ

* ಕೇಂದ್ರ ಸರ್ಕಾರದ ಗೆಜೆಟೆಡ್‌ ಅಲ್ಲದ ಸಿಬ್ಬಂದಿಗೆ ಇದೇ 23 ರೊಳಗೆ ವೇತನ ಮುಂಗಡವಾಗಿ ನಗದು ರೂಪದಲ್ಲಿ ₹10 ಸಾವಿರ ಪಡೆಯುವ ಸೌಲಭ್ಯ

* ಟೋಲ್‌ ಶುಲ್ಕ ರದ್ದತಿ ಇದೇ 24 ರವರೆಗೆ ವಿಸ್ತರಣೆ

* ಉದ್ಯಮಿಗಳ ಸಾಲ ಮನ್ನಾಕ್ಕೆ ಜನರ ಠೇವಣಿ ಹಣ: ಕೇಜ್ರಿವಾಲ್  ಆರೋಪ

***
ನವೆಂಬರ್ 18

ಕೇಂದ್ರಕ್ಕೆ ‘ಸುಪ್ರೀಂ’ ತರಾಟೆ
ಜನರು ತೊಂದರೆಗೆ ಒಳಗಾಗಿದ್ದಾರೆ. ನ್ಯಾಯಾಲಯಗಳಿಗೆ ಹೋಗುವ ಹಕ್ಕು ಅವರಿಗೆ ಇದೆ. ಜನರು ಉದ್ರಿಕ್ತರಾಗಿದ್ದಾರೆ. ಅದು ದಂಗೆಗೂ  ಕಾರಣವಾಗಬಹುದು – ಸುಪ್ರೀಂ ಕೋರ್ಟ್‌

* 700 ಪೆಟ್ರೋಲ್‌ ಬಂಕ್‌ಗಳಲ್ಲಿ ಪಿಒಎಸ್‌ ಯಂತ್ರಗಳಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣ ಪಡೆಯಲು ಅವಕಾಶ

* ಎಸ್‌ಬಿಐ ಪಿಒಎಸ್‌ ಇರುವ ಬಂಕ್‌ಗ ಳಲ್ಲಿ ಮಾತ್ರ ಈ ಸವಲತ್ತು

* 20,000 ಪೆಟ್ರೋಲ್ ಬಂಕ್‌ಗಳಿಗೆ ಈ ಸವಲತ್ತು ವಿಸ್ತರಿಸಲು ಚಿಂತನೆ

* ₹ 50 ಸಾವಿರಕ್ಕಿಂತ ಹೆಚ್ಚು ಹಣ ಜಮೆ ಆಗುವ ಜನಧನ ಖಾತೆಗಳ ಪರಿಶೀಲನೆ

* ₹ 2.5 ಲಕ್ಷಕ್ಕಿಂತ ಹೆಚ್ಚು ಹಣ ಜಮೆ ಆಗುವ ಎಲ್ಲಾ ಉಳಿತಾಯ ಖಾತೆಗಳ ಪರಿಶೀಲನೆ

* ತಮ್ಮ ಖಾತೆಗಳಲ್ಲಿ ಬೇರೆಯವರ ಹಣ ಜಮೆ ಮಾಡಿದರೆ ಶಿಕ್ಷೆ

***
ನವೆಂಬರ್ 19-20

* ನೋಟುಗಳ ಚಲಾವಣೆ ರದ್ದು ಮಾಡಿದ ನಂತರ ಗ್ರಾಮೀಣ ಪ್ರದೇಶಗಳಲ್ಲಿನ ಪರಿ ಸ್ಥಿತಿ ಹೇಗಿದೆ ಎಂಬ ಬಗ್ಗೆ ಪರಿಶೀಲಿಸಲು ಅಧಿಕಾರಿಗಳ ತಂಡ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸೂಚನೆ

* ಹಳೆಯ ನೋಟುಗಳ ರೂಪದಲ್ಲಿದ್ದ ಕಪ್ಪುಹಣವನ್ನು ಬೇರೆ ಯ ವರ ಖಾತೆಗೆ ಜಮಾ ಮಾಡುವುದರ ವಿರುದ್ಧ ಬೇನಾಮಿ ವ್ಯವಹಾರ (ನಿಷೇಧ) ಕಾಯ್ದೆಯ ಅಡಿ ಪ್ರಕರಣ ದಾಖಲಿಸುವುದು–  ಆದಾಯ ತೆರಿಗೆ ಇಲಾಖೆ

***
ನವೆಂಬರ್ 21

* ಬಿತ್ತನೆ ಬೀಜ ಖರೀದಿಗೆ ಹಳೆ ನೋಟು

* ನೋಟು ರದ್ದತಿ ಕಾನೂನು ಉಲ್ಲಂಘನೆ ಕ್ರಮ: ಕಾಂಗ್ರೆಸ್

***
ನವೆಂಬರ್ 22-23

* ಪೇಟಿಎಂನಂತಹ ಮೊಬೈಲ್‌ ವಾಲೆಟ್‌ ಸೇವೆಗಳ ಮೂಲಕ ತಿಂಗಳ ಗರಿಷ್ಠ ವಹಿವಾಟಿನ ಮೊತ್ತ ₹10 ಸಾವಿರದಿಂದ ₹20 ಸಾವಿರಕ್ಕೆ ಏರಿಕೆ

* ಮದುವೆಯಲ್ಲಿ  ₹10 ಸಾವಿರಕ್ಕಿಂತ ದೊಡ್ಡ ಮೊತ್ತದ ಖರ್ಚಿನ ಬಗ್ಗೆ ಮಾತ್ರ ಮಾಹಿತಿ ನೀಡಿದರೆ ಸಾಕು–ಆರ್‌ಬಿಐ

* ರೈತರಿಗೆ ₹21 ಸಾವಿರ ಕೋಟಿ ಪೂರೈಕೆಗೆ ಸೂಚನೆ

***
ನವೆಂಬರ್ 24-25

* ರದ್ದಾದ ನೋಟುಗಳ ವಿನಿಮಯಕ್ಕೆ ವಿದಾಯ

* ಬಿಲ್‌ ಪಾವತಿಗೆ ಹಳೆಯ ₹500 ರ ನೋಟು ಬಳಕೆ ಅವಧಿ ಡಿ. 15ರವರೆಗೆ ವಿಸ್ತರಣೆ

* ಸಂಘಟಿತ ಲೂಟಿ, ಕಾನೂನಾತ್ಮಕ ಸುಲಿಗೆ: ಮನಮೋಹನ್ ಸಿಂಗ್‌

* ಅಕ್ರಮ ಹಣ ಸಕ್ರಮಕ್ಕೆ ಅವಕಾಶ

* ಭಾರಿ ತೆರಿಗೆ, ದಂಡ ವಿಧಿಸಲು ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ

* ಪೇಟಿಎಂ: ಆ್ಯಪ್‌ ತಾತ್ಕಾಲಿಕ ಸ್ಥಗಿತ

* ಕಪ್ಪು ಹಣ ಪರಿವರ್ತನೆಗೆ ವಿಪಕ್ಷಗಳಿಗೆ ಸಮಯ ಸಿಗಲಿಲ್ಲ, ಅದಕ್ಕೇ ಅಸಮಾಧಾನ: ಪ್ರಧಾನಿ

***
ನವೆಂಬರ್ 27-28

*  ‘ಆಕ್ರೋಶ ದಿನ’; ನೋಟು ರದ್ದು ವಿರುದ್ಧ ವಿಪಕ್ಷಗಳಿಂದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ, ಬಿಜೆಪಿಯಿಂದ ಸಂಭ್ರಮ ದಿನ 

* ಬಂದ್‌ ಇಲ್ಲ, ಪ್ರತಿಭಟನೆ ಮಾತ್ರ: ಕಾಂಗ್ರೆಸ್‌

* ಬಡವರು ಹೊಂದಿರುವ ‘ಜನಧನ’ ಬ್ಯಾಂಕ್‌ ಖಾತೆ ಗಳಲ್ಲಿ ಕಪ್ಪುಹಣ ಜಮಾ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕಠಿಣ ‘ಬೇನಾಮಿ’ ವಹಿವಾಟು ಕಾನೂನು ರೂಪಿಸಲಾಗುವುದು– ಪ್ರಧಾನಿ

* ಸಂಕಷ್ಟ ಪರಿಹಾರಕ್ಕೆ ಕ್ರಮ: ಉರ್ಜಿತ್‌. ನೋಟು ರದ್ದತಿ ಕ್ರಮದ ನಂತರ ಮೊದಲ ಬಾರಿ ಮಾತನಾಡಿದ ಆರ್‌ಬಿಐ ಗವರ್ನರ್

* ವಿಮೆ  ಕಂತು ತುಂಬಲು ಹೆಚ್ಚುವರಿ 30 ದಿನ.

* ಕಾಳಧನಕ್ಕೆ ಗರಿಷ್ಠ ಶೇ 85 ತೆರಿಗೆ

***
ನವೆಂಬರ್ 29-30

* ಕಪ್ಪುಹಣ ಸಕ್ರಮಕ್ಕೆ ಅವಕಾಶ: ಮಸೂದೆಗೆ ಒಪ್ಪಿಗೆ

*  ಪ್ರಧಾನಿ ಬೆಂಬಲಕ್ಕೆ ಶೇ 90ರಷ್ಟು ಜನ: ಮೋದಿ ಆ್ಯಪ್‌  ಸಮೀಕ್ಷೆಯ ಲ್ಲಿ ಬಹಿರಂಗ

***
ಡಿಸೆಂಬರ್ ತಿಂಗಳ ಬೆಳವಣಿಗೆ
* ಭಾರತೀಯರಿಗಿದು ಕೊನೆಯ ಸರತಿ ಸಾಲು: ಪ್ರಧಾನಿ ಭರವಸೆ

* ಪೆಟ್ರೋಲ್ ಬಂಕ್‌ಗಳಲ್ಲಿ ನಗದುರಹಿತ ವ್ಯವಸ್ಥೆ ಜಾರಿಗೆ ಕ್ರಮ, ಡೆಬಿಟ್‌, ಕ್ರೆಡಿಟ್ ಕಾರ್ಡ್‌ಗಳು, ಇ–ವಾಲೆಟ್‌ ಬಳಕೆಗೆ ಅವಕಾಶ ನೀಡುವಂತೆ ಸೂಚನೆ

* ರಷ್ಯಾ ರಾಜತಾಂತ್ರಿಕರಿಗೂ ತಟ್ಟಿದ ನೋಟು ರದ್ದು ಪರಿಣಾಮ. ಪ್ರತೀಕಾರದ ಕ್ರಮ: ರಷ್ಯಾ ಎಚ್ಚರಿಕೆ

* ಆತುರದ ನಿರ್ಣಯವಲ್ಲ, ನಗದು ಸಂಗ್ರಹ ಬೇಡ: ಜನರಿಗೆ ಆರ್‌ಬಿಐ ಗವರ್ನರ್ ಉರ್ಜಿತ್‌ ಪಟೇಲ್‌ ಮನವಿ

* ಕಾರ್ಡ್‌ ಬಳಸಿದರೆ ರಿಯಾಯಿತಿ

* 10 ಸಾವಿರ ಜನಸಂಖ್ಯೆ ಇರುವ ಗ್ರಾಮಗಳಿಗೆ ತಲಾ ಎರಡು ಸ್ವೈಪಿಂಗ್‌ ಯಂತ್ರ

* ಜನರಿಗೆ ಹಣವೇಕೆ ಸಿಗುತ್ತಿಲ್ಲ: ನೋಟು ರದ್ದತಿ ಅರ್ಜಿಗಳ ವಿಚಾರಣೆಯಲ್ಲಿ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

* ಗ್ರಾಹಕರು ಹಳೆ ಮತ್ತು ಹೊಸ ನೋಟುಗಳಲ್ಲಿ ಮಾಡಿರುವ ಠೇವಣಿಯ ಮೊತ್ತದ ನಿಖರ ಲೆಕ್ಕ ಇಡುವಂತೆ ಮತ್ತು ಅದನ್ನು ಗ್ರಾಹಕರ ಗಮನಕ್ಕೆ ತರುವಂತೆ ಎಲ್ಲ ಬ್ಯಾಂಕುಗಳ ಶಾಖೆಗಳಿಗೆ ಕೇಂದ್ರ ಸೂಚನೆ.

* ಹಳೆ ನೋಟುಗಳ ಮಾನ್ಯತೆ ರದ್ದತಿ: ಆರ್‌ಬಿಐ ಕಾಯ್ದೆಗೆ ತಿದ್ದುಪಡಿ

* ಡಿಜಿಟಲ್ ಪಾವತಿಗೆ ಬಹುಮಾನ

* ನಗದುರಹಿತ ವಹಿವಾಟಿಗೆ ₹1 ಕೋಟಿ ಇನಾಮು: ಯೋಜನೆ ಘೋಷಣೆ

* ರದ್ದುಗೊಳಿಸಿದಷ್ಟೇ ಮೌಲ್ಯದ ಹೊಸ ನೋಟುಗಳು ಬರದು: ಅರುಣ್ ಜೇಟ್ಲಿ

* ಉದ್ಯಮಿಗಳಿಗೆ ಜನರ ಠೇವಣಿ ಹಣ: ರಾಹುಲ್‌ ಆರೋಪ

* ₹5,000ಕ್ಕಿಂತ ಹೆಚ್ಚು ಜಮೆ ಒಮ್ಮೆ ಮಾತ್ರ; ಆರ್‌ಬಿಐ ಕ್ರಮಕ್ಕೆ ದೇಶದಾದ್ಯಂತ ಟೀಕೆ

* ಜಮೆಗೆ ವಿವರಣೆ ಬೇಡ ಆರ್‌ಬಿಐ

* ಠೇವಣಿ ನಿರ್ಬಂಧಕ್ಕೆ ದೇಶದಾದ್ಯಂತ ಟೀಕೆ: ನಿರ್ಧಾರ ಬದಲಿಸಿದ ಆರ್‌ಬಿಐ

* ಡಿಜಿಟಲ್ ಪಾವತಿಗೆ ಆಧಾರ್ ಆಧರಿತ ಆ್ಯಪ್‌: ಕೇಂದ್ರ ಸರ್ಕಾರ

ಹಳೆ ನೋಟಿಗೆ ದಂಡ: ಮಾನ್ಯತೆ ಕಳೆದುಕೊಂಡಿ ರುವ ಹಳೆಯ ₹ 500 ಹಾಗೂ ₹ 1,000 ಮುಖಬೆಲೆಯ ನೋಟುಗಳನ್ನು ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಇಟ್ಟುಕೊಳ್ಳುವವರಿಗೆ ದಂಡ ವಿಧಿಸಲು ಅವಕಾಶ ನೀಡುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ  ಅನುಮೋದನೆ.

***
92 ಜನರು ಬಲಿ...

ನೋಟು ರದ್ದತಿ ಕ್ರಮಕ್ಕೆ ಸಂಬಂಧಿಸಿದಂತೆ ಡಿ. 9ರವರೆಗೆ 92 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನೋಟು ಬದಲಾವಣೆ, ಹಣ ಪಡೆಯಲು ಬ್ಯಾಂಕ್‌ ಮತ್ತು ಎಟಿಎಂಗಳಲ್ಲಿ ಸರತಿಯಲ್ಲಿ ನಿಂತಿದ್ದಾಗ ಹಲವರು ಮೃತಪಟ್ಟಿದ್ದಾರೆ.  ಜತೆಗೆ ಮದುವೆಗೆ ಹಣ ಪಡೆಯಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡವರು ಹಾಗೂ ಆಘಾತದಿಂದ ಮೃತಪಟ್ಟವರ ಸಂಖ್ಯೆಯೂ ಇದರಲ್ಲಿ ಸೇರಿದೆ.

***
ಕಡಿಮೆ ಕೆಲಸ ನಡೆದ ಅಧಿವೇಶನ

ನೋಟು ರದ್ದತಿ ಕ್ರಮ ಕುರಿತು ಪ್ರತಿಪಕ್ಷಗಳು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಗದ್ದಲ ನಡೆಸಿದ್ದರಿಂದ ಈ ಬಾರಿಯ  ಚಳಿಗಾಲದ ಸಂಸತ್‌ ಅಧಿವೇಶನ ಕಳೆದ 15 ವರ್ಷದಲ್ಲೇ ಅತ್ಯಂತ ಕಡಿಮೆ ಕೆಲಸ ನಡೆದ ಅಧಿವೇಶನ ಎಂಬ ಹಣೆಪಟ್ಟಿಗೆ ಒಳಗಾಯಿತು.

***
ಬೆಂಬಲ ನೀಡಿ, ತಿರುಗಿಬಿದ್ದ ಪ್ರತಿಪಕ್ಷಗಳು

ನೋಟು ರದ್ದತಿ ಕ್ರಮ ಕುರಿತು ಕಾಂಗ್ರೆಸ್‌ ಸೇರಿದಂತೆ ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದವು. ಎಎಪಿ ಮತ್ತು ಟಿಎಂಸಿ ಮಾತ್ರ ಆರಂಭದಿಂದಲೇ ವಿರೋಧ ವ್ಯಕ್ತಪಡಿಸಿದ್ದವು. ಆದರೆ ನಂತರದ ದಿನಗಳಲ್ಲಿ ನಗದು ಕೊರತೆ ತಲೆದೋರುತ್ತಿದ್ದಂತೆ ಹಾಗೂ ುದ್ಯಮಿಗಳ ವಸೂಲಾಗದ ಸಾಲವನ್ನು ಸರ್ಕಾರ ಭಾಗಶಃ ಮನ್ನಾ ಮಾಡುತ್ತಿದ್ದಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ತಿರುಗಿಬಿದ್ದವು. ಸರ್ಕಾರ ಮತು ವಿಪಕ್ಷಗಳು ಪರಸ್ಪರ ಟೀಕೆಗಳಲ್ಲಿ ತೊಡಗಿದವು. ಚಳಿಗಾಲದ ಅಧಿವೇಶನದಲ್ಲಿ ಕಲಾಪ ನಡೆಯದಿರಲೂ ಇದು ಕಾರಣವಾಯಿತು.

* ವಿರೋಧ ಪಕ್ಷಗಳಲ್ಲಿ  ಮೂಡಿದ ಬಿರುಕು. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಾಯಕರಿಂದ ಪ್ರದಾನಿ ಮೋದಿ ಭೇಟಿ.  ಈ ಬೆಳವಣಿಗೆ ಬಗ್ಗೆ ಇತರ ವಿರೋಧ ಪಕ್ಷಗಳಿಂದ ಅಸಮಾಧಾನ. ರಾಷ್ಟ್ರಪತಿ ಭೇಟಿಯಿಂದ ದೂರ ಉಳಿದ ಇತರ ಪ್ರತಿಪಕ್ಷಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT