ಮಂಗಳೂರು: ಎತ್ತಿನಹೊಳೆ ತಿರುವು ಯೋಜನೆಗೆ ಸಂಬಂಧಿಸಿ ಮರ ಕಡಿಯಲು ಅಥವಾ ಇತರ ಯಾವುದೇ ಕಾಮಗಾರಿಗಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಪರವಾನಗಿ ನೀಡಿಲ್ಲ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಅನಿಲ್ ಮಾಧವ ಧವೆ ಹೇಳಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ‘ಪಶ್ಚಿಮ ಘಟ್ಟದ ಜೈವಿಕ ಸೂಕ್ಷ್ಮ ಪ್ರದೇಶಗಳ ಸುಸ್ಥಿರ ನಿರ್ವಹಣೆ ಮತ್ತು ಸಂರಕ್ಷಣೆ ಕುರಿತ ಸಮಾವೇಶದಲ್ಲಿ ಸಮಾರೋಪ ಭಾಷಣ ಮಾಡಿದ ಬಳಿಕ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ರಾಜ್ಯ ಸರ್ಕಾರದ ವತಿಯಿಂದ ಕಾಮಗಾರಿ ನಡೆಯುತ್ತಿರಬಹುದು. ಈ ಯೋಜನೆಯ ವಿಚಾರ ರಾಷ್ಟ್ರೀಯ ಹಸಿರು ಪೀಠದ ಮುಂದಿರುವುದರಿಂದ ಮಧ್ಯಪ್ರವೇಶಿಸಿ ಯಾವುದೇ ಆದೇಶ ನೀಡುವುದು ಸಾಧುವಲ್ಲ. ಆದ್ದರಿಂದ ಹಸಿರು ಪೀಠದ ಆದೇಶಕ್ಕೆ ಕಾಯುತ್ತಿರುವುದಾಗಿ ಹೇಳಿದರು.