ಚಿಂತಾಮಣಿ: ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಿಗೆ ವೇತನ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಬುಧವಾರ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರಾಂಶುಪಾಲರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯದಾದ್ಯಂತ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ನವೆಂಬರ್ನಲ್ಲಿ ವೇತನ ಬಿಡುಗಡೆಯಾಗಿದೆ. 2016–17ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ 7 ತಿಂಗಳಾಗಿದೆ. ಈ ಕಾಲೇಜಿನಲ್ಲಿ ಮಾತ್ರ ವೇತನ ನೀಡದೆ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಅತಿಥಿ ಉಪನ್ಯಾಸಕರಿಗೆ ವೇತನ ನೀಡಿ 3 ತಿಂಗಳಾಗಿದೆ. ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಸಂಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಹಾಲು, ನೀರು, ವಿದ್ಯುತ್ ಬಿಲ್ಗಳಿಗೆ ಹಣ ಹೊಂದಿಸಲು ಪರದಾಡಬೇಕಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಬಿಡುಗಡೆಯಾಗಿರುವ ವೇತನವನ್ನು ನೀಡಲು ಮೀನ– ಮೇಷ ಎಣಿಸುತ್ತಿದ್ದಾರೆ ಎಂದು ಮುಖಂಡ ಆರ್.ಮಣಿ ಆರೋಪಿಸಿದರು.
ಸಾಲ–ಸೋಲದಿಂದ ಜೀವನ ಮಾಡಿಕೊಂಡು ಕಾಲೇಜಿಗೆ ಬಂದು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಸರ್ಕಾರ ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ವೇತನ ಸಾಲ ತೀರಿಸಲು ಸಾಲದಾಗಿದೆ. ಸರ್ಕಾರ 3 ತಿಂಗಳಿಗೆ, 6 ತಿಂಗಳಿಗೆ ಒಮ್ಮೆ ವೇತನ ಬಿಡುಗಡೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಬಿಡುಗಡೆಯಾಗಿರುವ ವೇತನ ನೀಡುವಲ್ಲಿ ವಿಳಂಬ ಮಾಡುವುದು ಸರಿಯಲ್ಲ. ಕೂಡಲೆ ವೇತನ ಬಿಡುಗಡೆ ಮಾಡಬೇಕು ಎಂದು ನಾಗೇಶ್ ಒತ್ತಾಯಿಸಿದರು.
ಕಾಲೇಜಿನ ಪ್ರಾಂಶುಪಾಲರು ಮತ್ತು ಸೂಪರಿಟೆಂಡೆಂಟ್ ಅವರನ್ನು ವೇತನದ ಕುರಿತು ವಿಚಾರಿಸಿದರೆ ಹಾರಿಕೆಯ ಉತ್ತರಗಳನ್ನು ನೀಡುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅತಿಥಿ ಉಪನ್ಯಾಸಕರಾದ ಡಿ.ಎನ್.ವೆಂಕಟೇಶ್, ನಂದಿನಿ, ಸತೀಶ್, ಟಿ.ಎಂ.ಆಂಜಿನಪ್ಪ, ಗಂಗಾಧರಬಾಬು, ಹರೀಶ್, ಮಂಜುನಾಥ್, ಮಣಿಕಂಠ, ಸಹನಾ, ಸುರೇಖಾ ಕರಿಬಸಪ್ಪ ಮಠ್, ರೇಣುಕಾ, ಅಕ್ಕಮ್ಮ, ನಂದನ್, ರಮೇಶ, ಕಾವ್ಯ, ಲಾವಣ್ಯ, ಎಸ್.ವೆಂಕಟ ರೆಡ್ಡಿ, ಮಂಜುಳಾ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.