ಎಂ.ಜಿ.ಆರ್. ಮೇಲೆ ಎಂ.ಆರ್. ರಾಧಾ ಗುಂಡೇಟು
ಮದರಾಸು, ಜ. 12– ಖ್ಯಾತ ತಮಿಳು ಚಲನಚಿತ್ರ ನಟ ಎಂ.ಜಿ.ಆರ್. (ಎಂ.ಜಿ. ರಾಮಚಂದ್ರನ್)ರವರ ಮೇಲೆ ತಮಿಳು ಚಿತ್ರರಂಗದ ಇನ್ನೊಬ್ಬ ನಟ ಎಂ.ಆರ್. ರಾಧಾರವರು ಇಂದು ಸಂಜೆ ಗುಂಡು ಹಾರಿಸಿದರು.
ರಾಧಾರವರು ಬಳಿಕ ತಮ್ಮ ಮೇಲೆ ತಾವೇ ಗುಂಡು ಹಾರಿಸಿಕೊಂಡರೆಂದೂ ವರದಿಗಳು ತಿಳಿಸಿವೆ. ಇಬ್ಬರನ್ನೂ ಈಗ ಮದರಾಸಿಗೆ ಕರೆತಂದು ಆಸ್ಪತ್ರೆಗೆ ಸೇರಿಸಲಾಗಿದೆ.
ಎಂ.ಜಿ. ರಾಮಚಂದ್ರನ್ ದ್ರಾವಿಡ ಮುನ್ನೇತ್ರಕಳಗಂ ಬೆಂಬಲಿಗರು, ಆ ಪಕ್ಷದ ಪರವಾಗಿ ಅವರು ಮದರಾಸು ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದವರು.
ತಮಿಳು ಚಿತ್ರಗಳಲ್ಲಿ ಖಳನಾಯಕನ ಪಾತ್ರ ಅಭಿನಯಿಸುವ ಎಂ.ಆರ್. ರಾಧಾರವರು ದ್ರಾವಿಡಕಳಗಂನ (ಈ.ವಿ. ರಾಮಸ್ವಾಮಿ ನಾಯಕರ್ ನಾಯಕತ್ವ) ಮುಖ್ಯ ಬೆಂಬಲಿಗರು. ಬರುವ ಚುನಾವಣೆಯಲ್ಲಿ ದ್ರಾವಿಡಕಳಗಂ, ಕಾಂಗ್ರೆಸ್ಗೆ ಬೆಂಬಲ ನೀಡುವುದಾಗಿ ಪ್ರಕಟಿಸಿದೆ.
ಎಂ.ಜಿ.ಆರ್. ಸುರಕ್ಷಿತ; ರಾಧಾ ಪರಿಸ್ಥಿತಿ ಕಳವಳಕರ
ಮದರಾಸು, ಜ. 12– ಚಿತ್ರನಟ ಎಂ.ಜಿ.ಆರ್. ಮೇಲೆ ಇಂದು ಗುಂಡು ಹಾರಿಸಿ, ತಾವೂ ಗುಂಡಿಕ್ಕಿಕೊಂಡ ಇನ್ನೊಬ್ಬ ಚಿತ್ರನಟ ಎಂ.ಆರ್.ರಾಧಾ ಅವರ ಪರಿಸ್ಥಿತಿ ಕಳವಳಕರವಾಗಿದೆ ಎಂದು ತಿಳಿದುಬಂದಿದೆ. ರಾಯಪೇಟೆ ಆಸ್ಪತ್ರೆಯಿಂದ ನೇರವಾಗಿ ಅವರನ್ನು ಜನರಲ್ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಕೊಠಡಿಗೆ ಕರೆದೊಯ್ಯಲಾಯಿತು.