ಅರಕಲಗೂಡು: ಆರೋಗ್ಯ ಇಲಾಖೆ, ಸ್ವಚ್ಛತೆ ಭಾರತ್ ಯೋಜನೆ ಅಂಗವಾಗಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ಕುರಿತು ನಡೆದ ‘ಕಾಯಕಲ್ಪ 2017 ಸ್ಪರ್ಧೆ’ಯಲ್ಲಿ ತಾಲ್ಲೂಕಿನ ರಾಮನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾಮಿಗೌಡ ಈ ವಿಷಯ ತಿಳಿಸಿದ್ದು, ‘ಜಿಲ್ಲೆಯ 145 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಪರ್ಧೆಯಲ್ಲಿದ್ದವು. ಪ್ರಥಮ ಬಹುಮಾನ ₹ 2 ಲಕ್ಷ. ಇದನ್ನು ಆಸ್ಪತ್ರ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಈ ಕೇಂದ್ರದ ಸಿಬ್ಬಂದಿಗೂ ವಿಶೇಷ ಕೊಡುಗೆ ದೊರೆಯಲಿದೆ’ ಎಂದರು.
ತಾಲ್ಲೂಕಿನ ದೊಡ್ಡಮಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಮಾಧಾನಕರ ಬಹುಮಾನಕ್ಕೆ ಪಾತ್ರವಾಗಿದೆ. ಮಲ್ಲಿಪಟ್ಟಣ ಹಾಗೂ ಬಸವಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿದ್ದವು ಎಂದು ತಿಳಿಸಿದರು.
‘ಮೂರು ಹಂತದಲ್ಲಿ ಸ್ಪರ್ಧೆ ನಡೆಯಿತು. ಮೊದಲ ಹಂತದಲ್ಲಿ ಸ್ವಚ್ಚತೆ ಆಧರಿಸಿ ಕೇಂದ್ರಗಳನ್ನು ಗುರುತಿಸಿದ್ದು, 2ನೇ ಹಂತದಲ್ಲಿ ಬೇರೆ ತಾಲ್ಲೂಕಿನ ಅಧಿಕಾರಿಗಳು ಪರಿಶೀಲಿಸಿದರು. ಅಂತಿಮ ಹಂತದಲ್ಲಿ ವಿಜೇತ ಕೇಂದ್ರಗಳ ಆಯ್ಕೆ ನಡೆಯಿತು’ ಎಂದರು.