ಬೆಂಗಳೂರು: ರಾಜ್ಯದ 122 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 52 ಮತ್ತು ಬಿಜೆಪಿ 38 ಎಪಿಎಂಸಿಗಳಲ್ಲಿ ಬಹುಮತ ಪಡೆದು ಅಧಿಕಾರ ಹಿಡಿದಿವೆ. 16 ಎಪಿಎಂಸಿಗಳು ಜೆಡಿಎಸ್ ಪಾಲಾಗಿದ್ದರೆ, 14 ಎಪಿಎಂಸಿ ಅತಂತ್ರವಾಗಿದ್ದು ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಇನ್ನೂ 30 ಎಪಿಎಂಸಿಗಳ ಅಧಿಕಾರ ಅವಧಿ ಅಂತ್ಯಗೊಳ್ಳದೆ ಇರುವುದರಿಂದ ಚುನಾವಣೆ ನಡೆದಿಲ್ಲ.
ಮಂಡ್ಯ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಜೆಡಿಎಸ್ಗೆ ಸಡ್ಡು ಹೊಡೆದಿರುವ ಶಾಸಕ ಚಲುವರಾಯಸ್ವಾಮಿ ಬೆಂಬಲಿಗರು
ನಾಗಮಂಗಲ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಎಂಇಎಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಇದು ಪಕ್ಷರಹಿತ ಚುನಾವಣೆ ಆಗಿರುವುದರಿಂದ ಅಭ್ಯರ್ಥಿಗಳು ಯಾವುದೇ ಅಧಿಕೃತ ಚಿನ್ಹೆಯಡಿ ಸ್ಪರ್ಧಿಸಲು ಅವಕಾಶವಿಲ್ಲ. ಆದರೂ ಪರೋಕ್ಷವಾಗಿ ರಾಜಕೀಯ ಪಕ್ಷಗಳ ಬೆಂಬಲ ಇದ್ದೇ ಇರುತ್ತದೆ.
ಕಾಂಗ್ರೆಸ್, ಬಿಜೆಪಿ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳಿಗೂ ಈ ಚುನಾವಣೆ ಮಹತ್ವದ್ದಾಗಿತ್ತು. 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಇದು ದಿಕ್ಸೂಚಿ ಆಗಲಿದೆ ಎಂಬ ವ್ಯಾಖ್ಯಾನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರುಮುಕ್ಕಾಲು ವರ್ಷದಲ್ಲಿ ರೂಪಿಸಿ ಜಾರಿಗೆ ತಂದಿರುವ ಜನಪ್ರಿಯ ಯೋಜನೆಗಳಿಗೆ ಸಂದಿರುವ ಫಲ ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಆಡಳಿತ ಪಕ್ಷಕ್ಕೆ ಹೇಳಿಕೊಳ್ಳುವಂಥ ಗೆಲುವಲ್ಲ ಎಂದು ಬಿಜೆಪಿ ವಿಶ್ಲೇಷಿಸಿದೆ.
***
ಎಪಿಎಂಸಿ ಫಲಿತಾಂಶ 2018ರ ವಿಧಾನಸಭೆ ಚುನಾವಣೆಯ ಮುನ್ಸೂಚನೆ ಆಗಿದ್ದು, ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ
-ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ
***
ಚುನಾವಣೆಗೆ ಹಣವಿರಲಿಲ್ಲ. ಆಡಳಿತ ಪಕ್ಷ ಕಾಂಗ್ರೆಸ್ಗೆ ಅದು ಸಾಧ್ಯವಾಗಿದೆ. ಆ ಪಕ್ಷದಲ್ಲಿ ಸಚಿವರಿದ್ದಾರೆ. ಹೀಗಾಗಿ ನಾವು 2ನೇ ಸ್ಥಾನದಲ್ಲಿದ್ದೇವೆ
-ಯಡಿಯೂರಪ್ಪ
ಅಧ್ಯಕ್ಷರು, ಬಿಜೆಪಿ ರಾಜ್ಯ ಘಟಕ