ಇಂಡಿ: ತಾಲ್ಲೂಕಿನ 80 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆಗೆ ₹110 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರದ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಹೇಳಿದರು.
‘ಗ್ರಾಮೀಣ ಭಾಗಕ್ಕೆ ನಿರಂತರ ನೀರು ಒದಗಿಸುವ ಇಂತಹ ಮಹತ್ವಾಕಾಂಕ್ಷೆ ಯೋಜನೆಗೆ ಅನುದಾನ ಒದಗಿಸದ್ದರೂ ಕೆಲಸ ಮಾಡುವವರೇ ಇಲ್ಲ ಏನು ಮಾಡುವುದು’ ಜಿಗಜಿಣಗಿ ಅಸಹಾಯಕತೆ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಕಾರ್ಯಕರ್ತರು ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪಟ್ಟಣದ ರೈಲು ನಿಲ್ದಾಣದ ಬಳಿ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, ಶೀಘ್ರವೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಇಂಡಿ ಮತ್ತು ವಿಜಯಪುರ ತಾಲ್ಲೂಕುಗಳ ಎಲ್ಲ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
‘ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಕಾರ್ಯಕರ್ತರೇ ನನ್ನ ನರ–ನಾಡಿ ಇದ್ದಂತೆ. ಕೇಂದ್ರ ಸರ್ಕಾರ ನೀಡಿರುವ ಈ ಸಚಿವ ಸ್ಥಾನ ಬಳಸಿ ರಾಜ್ಯಕ್ಕೆ ಏನಾದರೂ ಒಳಿತು ಮಾಡಲು ಶ್ರಮಿಸುವೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ಶ್ರೀಶೈಲಗೌಡ ಬಿರಾದಾರ, ಎಸ್.ಎಸ್.ದೇಸಾಯಿ, ದಯಾಸಾಗರ ಪಾಟೀಲ, ರವಿಕಾಂತ ಬಗಲಿ, ಸಿದ್ಧಲಿಂಗ ಹಂಜಗಿ, ವಿಠ್ಠಲ ಕಟಕದೋಂಡ ಮಾತನಾಡಿದರು.
ಶಾಸಕ ಗೋವಿಂದ ಕಾರಜೋಳ, ರವಿ ಬಗಲಿ, ದಯಾಸಾಗರ ಪಾಟೀಲ, ಅನಿಲ ಜಮಾದಾರ, ಪಾಪು ಕಿತ್ತಲಿ, ಶೀಲವಂತ ಉಮರಾಣಿ, ವಿರಾಜ ಪಾಟೀಲ, ಅಪ್ಪುಗೌಡ ಪಾಟೀಲ, ಮಲ್ಲಯ್ಯ ಪತ್ರಿಮಠ, ಬುದ್ದುಗೌಡ ಪಾಟೀಲ, ಮಲ್ಲಿಕಾರ್ಜುನ ಕಿವಡೆ, ಶ್ರೀಮಂತ ಮೊಗಲಾಯಿ, ಹುತ್ತಪ್ಪ ತಳವಾರ, ಶ್ರೀಮಂತ ಬಾರಿಕಾಯಿ, ಲಾಯಪ್ಪ ದೊಡಮನಿ, ರಾಮಸಿಂಗ್ ಕನ್ನೊಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.