ಚಿಂತಾಮಣಿ: ಬರಗಾಲ ರೈತರನ್ನು ಒಂದು ಕಡೆ ಹೈರಾಣು ಮಾಡುತ್ತಿದ್ದರೆ ಮತ್ತೊಂದೆಡೆ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದ ಕಾರಣ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿಯ ಟೊಮೆಟೊ ಬೆಳೆಯಲ್ಲಿ ತಾಲ್ಲೂಕಿಗೆ ಅಗ್ರ ಸ್ಥಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆ ಅನಿಶ್ಚಿತವಾಗಿದ್ದು ಒಮ್ಮೆ ಗಗನಕ್ಕೇರಿದರೆ ಇನ್ನೊಮ್ಮೆ ಪಾತಾಳಕ್ಕೆ ಕುಸಿಯುತ್ತದೆ. ಸದ್ಯ ಚಿಂತಾಮಣಿಯಲ್ಲಿ ಟೊಮೆಟೊ ಬೆಲೆ ತೀವ್ರವಾಗಿ ಕುಸಿದಿದ್ದು ರೈತರಿಗೆ ಬರದ ಜೊತೆಗೆ ಮತ್ತೊಂದು ಪೆಟ್ಟು ಬಿದ್ದಿದೆ.
ಇಲ್ಲಿನ ಎಪಿಎಂಸಿಯಲ್ಲಿ ಒಂದು ತಿಂಗಳಿನಿಂದ ಒಂದು ಕೆ.ಜಿ. ಟೊಮೆಟೊ ಬೆಲೆ ₹ 1ಕ್ಕಿಂತಲೂ ಕಡಿಮೆ ಇದೆ. 15 ಕೆ.ಜಿ ಟೊಮೆಟೊ ಬಾಕ್ಸ್ ಬೆಲೆ ₹ 10ರಿಂದ ಪ್ರಾರಂಭವಾಗಿ ₹ 20ಕ್ಕೆ ಕೊನೆ ಯಾಗುತ್ತಿದೆ. ಉತ್ತಮ ದರ್ಜೆಯ ಹಣ್ಣು ಬಾಕ್ಸ್ಗೆ ₹ 25 ರಿಂದ ₹ 30ಕ್ಕೆ ಮಾರಾಟ ವಾಗುತ್ತಿದೆ. ಹಣ್ಣು ಕೇಳುವವ ರಿಲ್ಲದೆ ಮಾರುಕಟ್ಟೆಯಲ್ಲಿ ರಾಶಿ ರಾಶಿ ಗುಡ್ಡೆ ಬಿದ್ದಿವೆ.
ಈ ಬೆಲೆ ಕುಸಿತದ ಲಾಭವನ್ನು ದಳ್ಳಾಳಿ ಮತ್ತು ವ್ಯಾಪಾರಿಗಳು ಪಡೆಯು ತ್ತಿದ್ದಾರೆ. ಗ್ರಾಹಕರು ಎಂದಿನಂತೆ ದುಬಾರಿ ಬೆಲೆಗೆ ಖರೀದಿಸುತ್ತಿದ್ದಾರೆ. ರೈತರಿಂದ ₹ 1ಕ್ಕೆ ಖರೀದಿಸಿದ ಟೊಮೆಟೊವನ್ನು ಚಿಲ್ಲರೆಯಾಗಿ ₹ 10ಕ್ಕೆ ಮಾರಾಟ ಮಾಡುತ್ತಿದ್ದಾರೆ. 3–4 ತಿಂಗಳು ಶ್ರಮಪಟ್ಟ ರೈತರಿಗೆ ದೊರೆಯು ತ್ತಿರುವುದು ನಯಾ ಪೈಸೆ ಮಾತ್ರ.
ಗ್ರಾಮಾಂತರ ಪ್ರದೇಶದಿಂದ ಟ್ರ್ಯಾಕ್ಟರ್ ಮತ್ತು ಟೆಂಪೊಗಳ ಮೂಲಕ ಹಣ್ಣನ್ನು ಮಾರುಕಟ್ಟೆಗೆ ಸರಬರಾಜು ಮಾಡುವರು. ಅದರೆ ಈ ಬಾಡಿಗೆಯೂ ದೊರೆಯುತ್ತಿಲ್ಲ. ಇದರಿಂದ ಬೇಸತ್ತ ಬಹುತೇಕ ರೈತರು ಹಣ್ಣನ್ನು ಕೀಳದೆ ತೋಟಗಳಲ್ಲೇ ಕೊಳೆಯಲು ಬಿಟ್ಟಿದ್ದಾರೆ. ತಾಲ್ಲೂಕಿನಲ್ಲಿ ಯಾವುದೇ ನದಿ ನಾಲೆಗಳಿಲ್ಲದೆ, ಮಳೆಯ ಕೊರತೆ ನಡುವೆಯೂ ರೈತರು ಆಲೂಗಡ್ಡೆ, ಟೊಮೆಟೊ, ಕ್ಯಾರೆಟ್, ಬೀನ್ಸ್ ಮತ್ತಿತರ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.
ವಿದ್ಯುತ್ ಕೊರತೆ, ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಳಿಗೆ ಹೂಡಿದ ಬಂಡವಾಳವನ್ನು ಲೆಕ್ಕ ಹಾಕಿದರೆ ರೈತರ ಸಂಕಷ್ಟದ ಪ್ರಮಾಣ ಜಾಸ್ತಿಯಾಗುತ್ತದೆ. ರೈತರು ಹೆಚ್ಚಾಗಿ ಟೊಮೆಟೋ ಬೆಳೆದಿರುವುದು, ಬಂಪರ್ ಬೆಳೆ ಬಂದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ.
‘ಚಿಂತಾಮಣಿ ಎಪಿಎಂಸಿಯಿಂದ ದೆಹಲಿ, ಗುಜರಾತ್, ಉತ್ತರಪ್ರದೇಶ ಸೇರಿದಂತೆ ದೇಶದ ಹಲವು ಕಡೆಗಳಿಗೆ ಟೊಮೆಟೊ ಪೂರೈಕೆಯಾಗುತ್ತದೆ. ಈಗ ಜ್ಯೂಸ್ಗಾಗಿ ಮಹಾರಾಷ್ಟ್ರಕ್ಕೆ ಮಾತ್ರ ಕಳುಹಿಸುತ್ತಿದ್ದೇವೆ’ ಎಂದು ಕಮೀಷನ್ ಏಜೆಂಟ್ ಶ್ರೀನಿವಾಸ್ ತಿಳಿಸುತ್ತಾರೆ.
ಬೆಲೆ ತೀವ್ರವಾಗಿ ಕುಸಿದಿದ್ದು ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಬೆಂಬಲ ಬೆಲೆ ಘೋಷಿಸಿದರೆ ಪರಿಸ್ಥಿತಿ ಸುಧಾರಿಸಬಹುದು. ಎಚ್.ಡಿ. ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಟೊಮೆಟೊಗೆ ಬೆಂಬಲ ಬೆಲೆ ನೀಡಿದ್ದರು. ಈಗ ಟೊಮೆಟೊಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.
–ಎಂ.ರಾಮಕೃಷ್ಣಪ್ಪ
ಶೇ 10 ಕಮೀಷನ್
ತೋಟಗಳಲ್ಲಿ ಉತ್ತಮವಾದ ಬೆಳೆ ಬಂದಿದೆ. ಆದರೆ ಬೆಲೆ ಇಲ್ಲ. ಹಣ್ಣು ಬಿಡಿಸುವ ಕೂಲಿಯೂ ಲಭ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಶೇ 10 ರಷ್ಟು ಕಮೀಷನ್ ನೀಡಬೇಕು, ಬಾಕ್ಸ್ಗಳನ್ನು ಇಳಿಸಲು ₹ 2, ದೂರಕ್ಕೆ ತಕ್ಕಂತೆ ಬಾಡಿಗೆ ನೀಡಬೇಕು. ಇದೆಲ್ಲ ಲೆಕ್ಕಾಚಾರ ಮಾಡಿದರೆ ಮಾರುಕಟ್ಟೆಗೆ ತಂದು ನಷ್ಟ ಅನುಭವಿಸುವುದಕ್ಕಿಂತ ತೋಟದಲ್ಲಿ ಬಿಡುವುದೇ ಲೇಸು.
–ಮುನಿಯಪ್ಪ, ರೈತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.