ಉಡುಪಿ: ಇಂದ್ರಾಣಿ ಹೊಳೆಗೆ ತ್ಯಾಜ್ಯ ಸುರಿಯುವುದನ್ನು ನಗರಸಭೆ ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಇಂದ್ರಾಣಿ ತೀರ್ಥ ಮುಕ್ತಿ ಆಂದೋಲನಾ ಸಮಿತಿ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ವಿವಿಧ ಭಾಗಗಳಿಂದ ಹರಿದು ಬರುವ ಪರಿಶುದ್ಧ ನೀರಿನ ಮೂರು ತೊರೆಗಳು ಸೇರಿ ಇಂದ್ರಾಳಿಯ ಬಳಿ ಒಂದಾಗಿ ಹೊಳೆಯಾಗಿ ಹರಿಯುತ್ತದೆ. ಬೀಡಿನಗುಡ್ಡೆ, ಕಲ್ಸಂಕ, ನಿಟ್ಟೂರು, ಕಂಬಳಕಟ್ಟದ ಮಾರ್ಗವಾಗಿ ಕೊಡ ವೂರು ಶ್ರೀಶಂಕರ ದೇವಸ್ಥಾನದ ಹಿಂಭಾ ಗದಿಂದ ಹರಿದು ಸಮುದ್ರ ಸೇರುತ್ತದೆ. ಕೊಡವೂರು ದೇವಸ್ಥಾನದ ಇತಿಹಾಸದ ಲ್ಲಿಯೂ ಇದರ ಬಗ್ಗೆ ದಾಖಲೆ ಇದ್ದು ‘ಇಂದ್ರಾಣಿ ತೀರ್ಥ’ ಎಂದು ಕರೆಯಲಾಗುತ್ತದೆ. ಆ ಪರಿಸರದ ಜನರು ಅದೇ ನೀರನ್ನು ಬಳಸಿಕೊಳ್ಳುತ್ತಿದ್ದರು.
ಆದರೆ ಹೊಳೆಗೆ ತ್ಯಾಜ್ಯ ಸುರಿಯು ವುದು ಹಾಗೂ ಮಲೀನ ನೀರನ್ನು ಬಿಡುತ್ತಿರುವುದರಿಂದ ಹೊಳೆಯ ನೀರು ಬಳಕೆಗೆ ಯೋಗ್ಯವಾಗಿಲ್ಲ. ಅಲ್ಲದೆ, ತ್ಯಾಜ್ಯದ ಪ್ರಮಾಣ ಅಪಾರವಾಗಿರು ವುದರಿಂದ ಗಬ್ಬುವಾಸನೆ ಬೀರುತ್ತಿದ್ದು ಶುದ್ಧ ಗಾಳಿಯೂ ಸಿಗದಂತಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಹೊಳೆ, ನದಿ, ತೋಡುಗಳಿಗೆ ತ್ಯಾಜ್ಯ ಎಸೆಯುವುದು ದಂಡನಾರ್ಹ ಅಪರಾಧವಾಗಿದ್ದರೂ ನಗರಸಭೆ ಮಾತ್ರ ಈ ಬಗ್ಗೆ ಯಾವುದೇ ಕ್ರಮ
ತೆಗೆದುಕೊಳ್ಳುತ್ತಿಲ್ಲ. ಇಂದ್ರಾಣಿ ಹೊಳೆಗೆ ತ್ಯಾಜ್ಯ ಸುರಿಯುವುದನ್ನು ಈ ಕೂಡಲೇ ನಿಲ್ಲಿಸಬೇಕು, ಭವಿಷ್ಯದಲ್ಲಿಯೂ ನೈಸರ್ಗಿಕ ತೊರೆ, ಹೊಳೆಗಳಿಗೆ ತ್ಯಾಜ್ಯ ಎಸೆಯುವುದಿಲ್ಲ ಎಂದು ನಗರಸಭೆ ಪ್ರಮಾಣ ಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇಂದ್ರಾಣಿ ತೀರ್ಥ ಉಳಿವಿಗಾಗಿ ಹೋರಾಟ ಮಾಡುವುದು ಅನಿವಾರ್ಯ ವಾಗಿದೆ. ಈಗ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ನಗರಸಭೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಫೆಬ್ರುವರಿ 20ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾ ಕಾರರು ಎಚ್ಚರಿಕೆ ನೀಡಿದರು.