ಹುಬ್ಬಳ್ಳಿ: ಪ್ರಾಂತೀಯ ಹಿಂದೂ ಅಧಿವೇಶನ ಇದೇ 21 ಮತ್ತು 22 ರಂದು ಇಲ್ಲಿನ ಗೋಕುಲ ರಸ್ತೆಯ ವಾಸವಿ ಮಹಲ್ನಲ್ಲಿ ನಡೆಯಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕಾರ ಗುರುಪ್ರಸಾದ್ ತಿಳಿಸಿದರು.
ಹಿಂದೂ ಧರ್ಮ ಮತ್ತು ದೇಶದ ಮೇಲೆ ಅನೇಕ ರೀತಿಯಲ್ಲಿ ಆಕ್ರಮಣಗಳು ನಡೆಯುತ್ತಿವೆ. ಭಯೋತ್ಪಾದನಾ ಚಟುವಟಿಕೆಗಳು ದೇಶದ ಭದ್ರತೆಗೆ ಅಪಾಯಕಾರಿಯಾಗಿವೆ. ಲವ್ ಜಿಹಾದ್, ಮತಾಂತರ, ಹಿಂದೂ ಸಂತರ ಅಪಮಾನ, ಹಿಂದೂ ಮುಖಂಡರ ಕೊಲೆ, ಹಿಂದೂ ವಿರೋಧಿ ಕಾಯ್ದೆ ಜಾರಿ, ಗೋಹತ್ಯೆ ಮತ್ತು ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳು ದಾಖಲಾಗುತ್ತಿರುವುದರಿಂದ ಇವುಗಳ ವಿರುದ್ಧ ಸಂಘಟಿತವಾದ ಹೋರಾಟವನ್ನು ರೂಪಿಸಲು ಪ್ರಾಂತೀಯ ಹಿಂದೂ ಅಧಿವೇಶನ ಆಯೋಜಿಸಲಾಗಿದೆ ಎಂದು ಅವರು ಇಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಹಿಂದೂ ರಾಷ್ಟ್ರ ಸ್ಥಾಪನೆ, ರಾಷ್ಟ್ರ ಮತ್ತು ಧರ್ಮದ ಮೇಲೆ ಆಗುತ್ತಿರುವ ಆಕ್ರಮಣಗಳ ವಿಷಯದಲ್ಲಿ ಮಾರ್ಗದರ್ಶನ, ಪರಿಹಾರೋಪಾಯಗಳ ಬಗ್ಗೆ ಚಿಂತನೆ, ಗುಂಪುಚರ್ಚೆ ಮತ್ತು ಮುಂದೆ ಮಾಡಬೇಕಾದ ಕಾರ್ಯಯೊಜನೆಗಳ ರೂಪುರೇಷೆಯನ್ನು ಅಧಿವೇಶನದಲ್ಲಿ ನಿರ್ಣಯಿಸಲಾಗುವುದು ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಧಾರವಾಡ ಜಿಲ್ಲಾ ಸಮನ್ವಯಕರರಾದ ವೆಂಕಟರಮಣ ನಾಯ್ಕ, ವಿದ್ಯಾ ನಾಯ್ಕ ಮತ್ತು ಗಿರೀಶ ಅಗಡಿ ಇದ್ದರು.