ದಾವೋಸ್ : ‘ನಗದು ರಹಿತ ವಹಿವಾಟಿನಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದ್ದು, ತೆರಿಗೆ ಪಾವತಿ ಹೆಚ್ಚಲು ನೆರವಾಗಲಿದೆ’ ಎಂದು ಪೇಟಿಎಂ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
‘ಎಲ್ಲ ಬಗೆಯ ಹಣಕಾಸು ವಹಿವಾಟು ಡಿಜಿಟಲ್ ರೂಪದಲ್ಲಿ ನಡೆದಲ್ಲಿ ಲಂಚ ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ’ ಎಂದರು. ವಿಶ್ವ ಆರ್ಥಿಕ ವೇದಿಕೆ ಸಮಾವೇಶದಲ್ಲಿ ‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ವಹಿವಾಟು ಮಾದರಿ’ ಕುರಿತು ಮಾತನಾಡಿದರು.
‘ಭಾರತದ 120 ಕೋಟಿ ಜನಸಂಖ್ಯೆಯಲ್ಲಿ ತೆರಿಗೆ ಪಾವತಿಸುವರ ಸಂಖ್ಯೆ ಕೇವಲ 50 ಲಕ್ಷ ಮಾತ್ರ ಇದೆ. ತೆರಿಗೆ ಪಾವತಿಸಲು ಜನರು ಹಿಂದೇಟು ಹಾಕುತ್ತಿದ್ದರು. ಡಿಜಿಟಲ್ ಪಾವತಿ ವ್ಯವಸ್ಥೆ ಬಳಕೆಗೆ ಬಂದ ನಂತರ ಹಣದ ಚಲಾವಣೆ ಮೇಲೆ ನಿಗಾ ಇರಿಸುವುದು ಸುಲಭವಾಗಲಿದೆ. ಜನರ ವರಮಾನದ ಖಚಿತ ಮಾಹಿತಿ ಲಭಿಸಲಿದೆ. ಇದರಿಂದ ಜನರ ಆದಾಯ ಆಧರಿಸಿ ತೆರಿಗೆ ಪಾವತಿಸುವಂತೆ ಸರ್ಕಾರ ಕೇಳಿಕೊಳ್ಳಲಿದೆ ಎಂದರು.