ಶಿರಸಿ: ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ ನದಿ ಕಣಿವೆ ಜಲವಿದ್ಯುತ್ ಯೋಜನೆಗಳ ತಜ್ಞರ ಸಮಿತಿಯ ಸದಸ್ಯರಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಇಲ್ಲಿನ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಆರ್. ವಾಸುದೇವ ಅವರನ್ನು ನೇಮಿಸಲಾಗಿದೆ.
ಹೊಸದಾಗಿ ಪ್ರಾರಂಭಿಸುವ ನದಿ ಕಣಿವೆ ಜಲವಿದ್ಯುತ್ ಯೋಜನೆಗಳ ಸಾಧಕ–ಬಾಧಕಗಳ ಬಗ್ಗೆ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ವರದಿ ನೀಡುವುದು ಸಮಿತಿಯ ಮುಖ್ಯ ಕಾರ್ಯ. ಇದರ ಅವಧಿ 3 ವರ್ಷ. ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಇದೇ ಮೊದಲ ಬಾರಿಗೆ ಈ ಗೌರವ ಸಂದಿದೆ ಎಂದು ಅರಣ್ಯ ಕಾಲೇಜಿನ ಡೀನ್ ಎಚ್. ಬಸಪ್ಪ ತಿಳಿಸಿದ್ದಾರೆ.